Advertisement

ವೈದ್ಯಕೀಯ ಶಿಕ್ಷಣಕ್ಕಾಗಿ ವಿದೇಶಕ್ಕೆ: ಕಣ್ಣು ತೆರೆಸಲಿ ಅಂಕಿಅಂಶ

06:00 AM Dec 22, 2018 | |

ದಶಕಗಳಿಂದ ವಿದೇಶಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು, ಮ್ಯಾನೇಜ್‌ಮೆಂಟ್‌, ಇಂಜಿನಿಯರಿಂಗ್‌, ವಿಜ್ಞಾನದಂಥ ವಿಭಾಗದ ಆಕಾಂಕ್ಷಿಗಳಿದ್ದರು. ಆದರೆ ಈಗ ಈ ಟ್ರೆಂಡ್‌ ಹಠಾತ್ತನೆ ಬದಲಾಗಿದೆ. ಈಗ ವಿದೇಶಗಳಿಂದ ಮೆಡಿಕಲ್‌ ಡಿಗ್ರಿ ಪಡೆಯಲು ಪ್ರಯತ್ನಿಸುತ್ತಿರುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಕೇವಲ ಒಂದೇ ವರ್ಷದಲ್ಲಿ 74 ಪ್ರತಿಶತ ಏರಿಕೆಯಾಗಿದೆ. ನಿಜಕ್ಕೂ ಇದು ಕಳವಳ ಮೂಡಿಸಬೇಕಾದ ಸಂಗತಿಯೇ ಸರಿ. 

Advertisement

ವಿದೇಶಿ ಮೆಡಿಕಲ್‌ ಕಾಲೇಜುಗಳಲ್ಲಿ ವ್ಯಾಸಂಗ ಮಾಡಲು ಬಯಸುವವರು ಕಡ್ಡಾಯವಾಗಿ ಮೆಡಿಕಲ್‌ ಕೌನ್ಸಿಲ್‌ ಆಫ್ ಇಂಡಿಯಾ(ಎಂಸಿಐ)ದಿಂದ ಅರ್ಹತಾ ಪ್ರಮಾಣ ಪತ್ರ ಪಡೆಯಬೇಕಾಗುತ್ತದೆ. 2016-2017ರಲ್ಲಿ ಮೆಡಿಕಲ್‌ ಕೌನ್ಸಿಲ್‌ ಆಫ್ ಇಂಡಿಯಾ 8,737 ಸರ್ಟಿಫಿಕೇಟುಗಳನ್ನು ಕೊಟ್ಟಿದ್ದರೆ, 2017-2018ರಲ್ಲಿ ಈ ಪ್ರಮಾಣ 14,118ಕ್ಕೆ ತಲುಪಿದೆ! ಎಂಸಿಐ ಮಾಹಿತಿ ಹಕ್ಕಿನಡಿ ಬಂದ ಪ್ರಶ್ನೆಗೆ ಉತ್ತರವಾಗಿ ಈ ಅಂಕಿಸಂಖ್ಯೆಗಳನ್ನು ಎದುರಿಟ್ಟಿದೆ. ವಿಶೇಷಜ್ಞರ ಪ್ರಕಾರ, ಭಾರತದಲ್ಲಿ ಮೆಡಿಕಲ್‌ ಶಿûಣಾಕಾಂಕ್ಷಿಗಳಿಗೆ ಹೋಲಿಸಿದರೆ ಕಾಲೇಜುಗಳ ಸಂಖ್ಯೆ ಕಡಿಮೆ ಇರುವುದು ಈ ಬೆಳವಣಿಗೆಗೆ ಕಾರಣ.   ಭಾರತದಲ್ಲಿ ಮೆಡಿಕಲ್‌ ಕಾಲೇಜುಗಳಲ್ಲಿ ಪ್ರವೇಶ ಸಿಗದೇ ಇದ್ದಾಗ ಅನಿವಾರ್ಯತೆಯಿಂದ ವಿದೇಶಗಳತ್ತ ಈ ವಿದ್ಯಾರ್ಥಿಗಳು ಮುಖ ಮಾಡಬೇಕಾಗುತ್ತಿದೆ. ದೇಶದಲ್ಲಿ ಪ್ರತಿ ವರ್ಷ ಅಜಮಾಸು 12 ಲಕ್ಷ ಅಭ್ಯರ್ಥಿಗಳು ಮೆಡಿಕಲ್‌ ಶಿಕ್ಷಣಕ್ಕಾಗಿ ನೀಟ್‌ ಪರೀಕ್ಷೆಗಳನ್ನು ಎದುರಿಸುತ್ತಾರೆ. 4-6 ಲಕ್ಷ ವಿದ್ಯಾರ್ಥಿಗಳು ಪಾಸ್‌ ಆಗುತ್ತಾರೆ. ಇವರಲ್ಲಿ 68 ಸಾವಿರ ಮಂದಿಗೆ ಎಂಬಿಬಿಎಸ್‌ಗೆ ಪ್ರವೇಶ ಸಿಗುತ್ತದೆ. ಉಳಿದವರು ಹೋಮಿಯೋಪಥಿ, ಆಯುರ್ವೇದ ಇತ್ಯಾದಿ ಆಯ್ಕೆ ಮಾಡಿಕೊಳ್ಳುತ್ತಾರೆ. ಆಯ್ಕೆಯಾಗದವರು(ಹೊರಗೆ ಓದುವ ಆರ್ಥಿಕ ಕ್ಷಮೆತೆಯಿರುವವರು) ಅನ್ಯ ರಾಷ್ಟ್ರಗಳತ್ತ ಮುಖ ಮಾಡುತ್ತಿದ್ದಾರೆ. ಆದರೆ, ಅಲ್ಲಿ ವೈದ್ಯಕೀಯ ಪದವಿ ಪಡೆದಾಕ್ಷಣ ಅವರ ಹಾದಿಯೇನೂ ಸುಗಮವಾಗುವುದಿಲ್ಲ. ವಾಪಸ್‌ ಬಂದ ಮೇಲೆ ಅವರು ಫಾರಿನ್‌ ಮೆಡಿಕಲ್‌ ಗ್ರಾಜುಯೇಟ್ಸ್‌ ಪರೀಕ್ಷೆಗಳನ್ನು ಎದುರಿಸಲೇಬೇಕಾಗುತ್ತದೆ.    

ಈ ಸ್ಕ್ರೀನಿಂಗ್‌ ಪರೀಕ್ಷೆಯನ್ನು ಮೆಡಿಕಲ್‌ ಕೌನ್ಸಿಲ್‌ ಆಫ್ ಇಂಡಿಯಾ ವರ್ಷದಲ್ಲಿ ಎರಡು ಬಾರಿ ನಡೆಸುತ್ತದೆ. ಈ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದುವವರ ಸಂಖ್ಯೆ ಒಂದು ಕಾಲಕ್ಕೆ 50 ಪ್ರತಿಶತ ತಲುಪುತ್ತಿತ್ತು. ಈಗ 10-20 ಪ್ರತಿಶತ ತಲುಪುವುದೇ ದೊಡ್ಡ ಮಾತು ಎಂಬಂತಾಗಿದೆ. ಇನ್ನು ಮುಂದಿನ ವರ್ಷದಿಂದ ವಿದೇಶಗಳಲ್ಲಿ ವ್ಯಾಸಂಗ ಮಾಡಲು ಮನಸ್ಸು ಮಾಡಿರುವ ವಿದ್ಯಾರ್ಥಿಗಳಿಗೆ ಮುಂದಿನ ಮತ್ತೂಂದು ಸವಾಲು ಎದುರಾಗಲಿದೆ. ಅವರು ನೀಟ್‌ ಪರೀಕ್ಷೆಯಲ್ಲಿ ಸಫ‌ಲರಾಗಲೇಬೇಕು. ಆಗ ಮಾತ್ರ ಅವರಿಗೆ ಅರ್ಹತಾ ಪ್ರಮಾಣಪತ್ರ ದೊರೆಯಲಿದೆ. 

ಕಳೆದ ವರ್ಷ ಕೇಂದ್ರ ಆರೋಗ್ಯ ಸಚಿವಾಲಯದಿಂದ ಅನುಮೋದನೆ ಸಿಕ್ಕ ನಂತರವೇ ಮೆಡಿಕಲ್‌ ಕೌನ್ಸಿಲ್‌ ಆಫ್ ಇಂಡಿಯಾ ಈ ಆದೇಶವನ್ನು ಜಾರಿಗೊಳಿಸಿದೆ. ಈ ಆದೇಶವನ್ನು ಪ್ರಶ್ನಿಸಿ ಕೆಲವರು ದೆಹಲಿ ಹೈಕೋರ್ಟ್‌ನ ಮೆಟ್ಟಿಲನ್ನೂ ಏರಿದ್ದರು. ಆದರೆ ನ್ಯಾಯಾಲಯ ಎಂಸಿಐ ಆದೇಶವನ್ನೇ ಎತ್ತಿಹಿಡಿಯಿತು. ಹೀಗಾಗಿ, ಮುಂದಿನ ವರ್ಷದಿಂದ ವಿದೇಶಗಳಿಗೆ ಮೆಡಿಕಲ್‌ ವ್ಯಾಸಂಗಕ್ಕಾಗಿ ಹೋಗುವ ವಿದ್ಯಾರ್ಥಿಗಳ ಸಂಖ್ಯೆ ತಗ್ಗಬಹುದೆನಿಸುತ್ತದೆ. ಆದರೆ, ಇದರಿಂದ ದೇಶದಲ್ಲಿನ ಡಾಕ್ಟರ್‌ಗಳ ಅಭಾವವೇನೂ ಹಠಾತ್ತನೆ ಕಡಿಮೆಯಾಗುವುದಿಲ್ಲ. 

ಇಂದು ದೇಶದಲ್ಲಿ 15,97 ಜನಕ್ಕೆ ಒಬ್ಬ ಡಾಕ್ಟರ್‌ ಇದ್ದಾನೆ. ವಿಶ್ವ ಆರೋಗ್ಯ ಸಂಸ್ಥೆ ಪ್ರತಿ ಸಾವಿರ ಜನರಿಗೆ ಒಬ್ಬ ಡಾಕ್ಟರ್‌ ಇರಬೇಕು ಎಂದು ಹೇಳುತ್ತದೆ. ಇದರರ್ಥ, ದೇಶಕ್ಕೆ ಇನ್ನೂ  4 ದಶಲಕ್ಷ ಡಾಕ್ಟರ್‌ಗಳ ಅವಶ್ಯಕತೆಯಂತೂ ಇದೆ. ಇದಕ್ಕಾಗಿ ದೇಶದಲ್ಲಿ ಮೆಡಿಕಲ್‌ ಕಾಲೇಜುಗಳ ಸಂಖ್ಯೆಯನ್ನು ಹೆಚ್ಚಿಸುವ ಅಗತ್ಯವಿದೆ.  ಆದರೆ ವೈದ್ಯರ ಸಂಖ್ಯೆ ಹೆಚ್ಚು ಇದ್ದಾಕ್ಷಣ ದೇಶ ಆರೋಗ್ಯವಂತವಾಗುತ್ತದೆ ಎನ್ನುವಂತಿಲ್ಲ. ಸರ್ಕಾರಿ ಆಸ್ಪತ್ರೆಗಳ ದುಸ್ಥಿತಿಯನ್ನು ಸರಿಪಡಿಸದೆ, ಕಾಲೇಜುಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸದೇ, ಗುಣಮಟ್ಟದ ಶಿಕ್ಷಣವನ್ನು ಪೂರೈಸದೇ, ಮೆಡಿಕಲ್‌ ಶಿಕ್ಷಣ ನೀತಿ-ನಿಯಮಗಳಲ್ಲಿ ಗುಣಾತ್ಮಕ ಬದಲಾವಣೆ ಮಾಡದೇ ಇದ್ದರೆ..ಗಮನಾರ್ಹ ಬದಲಾವಣೆಯೇನೂ ಆಗದು. 

Advertisement
Advertisement

Udayavani is now on Telegram. Click here to join our channel and stay updated with the latest news.

Next