ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 55 ಕಾಲುಸಂಕಗಳು ಅಪಾಯಕರ ಸ್ಥಿತಿಯಲ್ಲಿವೆ, ಕಾಲು ಸಂಕಗಳನ್ನು ಒಟ್ಟು 3,136 ವಿದ್ಯಾರ್ಥಿಗಳು ಉಪಯೋಗಿಸುತ್ತಿದ್ದಾರೆ.
ಕಳೆದ ಆಗಸ್ಟ್ನಲ್ಲಿ ಭಾರೀ ಮಳೆಯ ಸಂದರ್ಭ ಬೈಂದೂರಿನ ಬೀಜಮಕ್ಕಿಯಲ್ಲಿ ವಿದ್ಯಾರ್ಥಿನಿ ಸನ್ನಿಧಿ ಕಾಲುಸಂಕದಿಂದ ಜಾರಿಬಿದ್ದು ಮೃತಪಟ್ಟ ಹಿನ್ನೆಲೆಯಲ್ಲಿ ಸರಕಾರ ವಿವಿಧ ಜಿಲ್ಲೆಗಳಲ್ಲಿರುವ ಕಾಲುಸಂಕಗಳನ್ನು ಪಟ್ಟಿ ಮಾಡುವಂತೆ ಶಿಕ್ಷಣ ಇಲಾಖೆ ಹಾಗೂ ತಾ.ಪಂ. ಮುಖ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿತ್ತು.
ಎರಡು ತಿಂಗಳುಗಳಲ್ಲಿ ಸಮೀಕ್ಷೆಯನ್ನು ಪೂರ್ಣ ಗೊಳಿಸಲಾಗಿದೆ. ತಿಂಗಳ ಹಿಂದೆಯೇ ಸಮೀಕ್ಷೆ ನಡೆಸಲಾಗಿದ್ದರೂ ಮಾಹಿತಿ ಸರಿ ಇಲ್ಲ ಎಂಬ ಕಾರಣಕ್ಕೆ ಮರು ಸಮೀಕ್ಷೆ ನಡೆಸಲಾಗಿತ್ತು.
ಈ ಕುರಿತು ಉದಯವಾಣಿಗೆ ಲಭ್ಯ ಮಾಹಿತಿಯಂತೆ ಜಿಲ್ಲೆಯಲ್ಲಿ ಒಟ್ಟು 338 ಕಾಲು ಸಂಕಗಳಿವೆ.
Related Articles
ಇದರಲ್ಲಿ 227ರಷ್ಟು ಮರದ ಸಂಕಗಳು. 111 ಇತರ ಸಂಕಗಳು. ಹಿಡಿದುಕೊಳ್ಳಲು ಆಧಾರ ಇರುವಂತಹ ಕಾಲುಸಂಕಗಳು 290. ಆಧಾರ ಇಲ್ಲದವು 48 ಇವೆ. 283 ಸಂಕಗಳು ಸದೃಢವಾಗಿದ್ದರೆ 55 ಸದೃಢವಲ್ಲ.
ಪುತ್ತೂರಿನಲ್ಲಿ ಅತ್ಯಧಿಕ
ಜಿಲ್ಲೆಯಲ್ಲಿ ಕಾಲಸಂಕಗಳು ಅತ್ಯಧಿಕ ಇರುವುದು ಪುತ್ತೂರು ತಾಲೂಕಿನಲ್ಲಿ, 2ನೇ ಸ್ಥಾನದಲ್ಲಿ ಬೆಳ್ತಂಗಡಿ ಇದೆ. ಅಚ್ಚರಿ ಎಂದರೆ ಪುತ್ತೂರು ತಾಲೂಕಿನಲ್ಲಿ ಇರುವ ಎಲ್ಲ 156 ಕಾಲುಸಂಕಗಳೂ ಮರದ್ದೇ ಆಗಿವೆ ಎನ್ನುತ್ತದೆ ಸಮೀಕ್ಷೆ. ಈ ಸಂಕಗಳನ್ನು 2,182 ವಿದ್ಯಾರ್ಥಿಗಳು ಬಳಸುತ್ತಾರೆ.
ಬೆಳ್ತಂಗಡಿ ತಾಲೂಕಿನಲ್ಲಿ 43 ಮರದ ಹಾಗೂ 45 ಇತರ ಕಾಲುಸಂಕಗಳಿವೆ. ಆಧಾರ ಇಲ್ಲದ ಕಾಲು ಸಂಕಗಳು 37. ಕನಿಷ್ಠ ಕಾಲುಸಂಕ ಇರುವುದು ಮಂಗ ಳೂರು ನಗರ ಉತ್ತರದಲ್ಲಿ. ಇಲ್ಲಿ ಕೇವಲ 2 ಮರದ ಹಾಗೂ ಒಂದು ಕಾಂಕ್ರೀಟ್ ಕಾಲುಸಂಕ ಇದೆ.
ಬಹುತೇಕ ಮರದ ಕಾಲುಸಂಕಗಳನ್ನು ಸ್ಥಳೀ ಯರೇ ನಿರ್ಮಿಸಿರುತ್ತಾರೆ, ಅನೇಕ ಕಾಂಕ್ರೀಟ್ ಕಾಲು ಸಂಕಗಳನ್ನು 5 ವರ್ಷ ಹಿಂದೆ ಲೋಕೋಪಯೋಗಿ ಇಲಾಖೆ ವತಿಯಿಂದ ನಿರ್ಮಿಸಲಾಗಿತ್ತು.
ಹಿಂದಿನ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಈ ಮಾಹಿತಿ ಸಂಗ್ರಹಕ್ಕೆ ಸೂಚಿಸಿದ್ದರು. ಪ್ರಸ್ತುತ ಜಿ.ಪಂ. ನಿಂದ ಮುಂದಿನ ಮಳೆಗಾಲದೊಳಗೆ ಅಪಾಯ ಕಾರಿ ಕಾಲುಸಂಕ ಸುಧಾರಣೆ ಬಗ್ಗೆ ವರದಿ ಕೇಳಲಾಗಿದೆ.
ಗ್ರಾಮಬಂಧು ಯೋಜನೆ
ಇಷ್ಟೇ ಅಲ್ಲದೆ ಲೋಕೋಪಯೋಗಿ ಇಲಾಖೆ ಮುಖಾಂತರ ಯಾವೆಲ್ಲ ಕಡೆಗಳಲ್ಲಿ ಕಾಲುಸಂಕ ಇಲ್ಲವೋ ಅಲ್ಲಿ ಸಂಕ ನಿರ್ಮಾಣವನ್ನು “ಗ್ರಾಮಬಂಧು’ ಯೋಜನೆಯಡಿ ಕೈಗೆತ್ತಿ ಕೊಳ್ಳಲಾಗಿದೆ. 33.65 ಕೋಟಿ ರೂ. ಮೊತ್ತದ ಈ ಯೋಜನೆ ಯಡಿ 234 ಕಾಲುಸಂಕ ಆಯ್ಕೆ ಮಾಡಿಕೊಳ್ಳಲಾಗಿದೆ. 60 ಪೂರ್ಣಗೊಂಡಿದ್ದರೆ 167 ಪ್ರಗತಿಯಲ್ಲಿವೆ. ಇನ್ನೂ 7 ವಿವಿಧ ಹಂತಗಳಲ್ಲಿವೆ ಎಂದು ದ.ಕ. ಜಿಲ್ಲಾ ಲೋಕೋಪಯೋಗಿ ಕಾರ್ಯಪಾಲಕ ಎಂಜಿನಿಯರ್ ಯಶವಂತ್ ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲೆಷ್ಟು?
ಉಡುಪಿ ಜಿಲ್ಲೆಯಲ್ಲಿ ಕಾಲುಸಂಕ ಆವಶ್ಯಕತೆ ಹಿನ್ನೆಲೆಯಲ್ಲಿ ಗ್ರಾ.ಪಂ.ಗಳಲ್ಲಿ ವಿಶೇಷ ಗ್ರಾಮ ಸಭೆ ನಡೆಸಿ ಶಿಫಾರಸು ಪಡೆಯಲಾಗಿತ್ತು. ಮನ ರೇಗಾ ಯೋಜನೆಯೊಳಗೆ ಕಾಲುಸಂಕಗಳ ಕ್ರಿಯಾ ಯೋಜನೆಯನ್ನೂ ಸೇರಿಸಿ ಅನುಮೋದನೆ ಪಡೆಯ ಲಾಗಿದೆ. ಕೆಲಸ ಶೀಘ್ರ ಆರಂಭವಾಗಲಿದೆ ಎಂದು ಉಡುಪಿ ಜಿ.ಪಂ. ಸಿಇಒ ಪ್ರಸನ್ನ ಹೇಳಿದ್ದಾರೆ.
ಜಿಲ್ಲೆಯಲ್ಲಿನ ಕಾಲುಸಂಕಗಳ ಪಟ್ಟಿ ಮಾಡಲಾಗಿದೆ. ಇದರಲ್ಲಿ ಒಂದಷ್ಟು ಅಪಾಯಕಾರಿ ಕಾಲುಸಂಕ ಗಳೂ ಇವೆ. ಅವುಗಳಿಗೆ ಪರ್ಯಾಯ ವೇನು ಎಂಬ ಬಗ್ಗೆ ವರದಿ ಕೇಳಲಾಗಿದೆ, ಮುಂದಿನ ಮಳೆಗಾಲದೊಳಗೆ ಕ್ರಮ ಕೈಗೊಳ್ಳು ವಂತೆ ಎಂಜಿನಿಯರಿಂಗ್ ವಿಭಾಗಕ್ಕೆ ಸೂಚಿಸಲಾಗಿದೆ.
-ಡಾ| ಕುಮಾರ್, ಸಿಇಒ, ದ.ಕ. ಜಿ.ಪಂ.
-ವೇಣುವಿನೋದ್ ಕೆ.ಎಸ್.