Advertisement

ಪ್ರಸಾದದಲ್ಲಿ ವಿಷ ಅಕ್ಷಮ್ಯ ಕೃತ್ಯ 

06:00 AM Dec 17, 2018 | |

ಚಾಮರಾಜನಗರ ಜಿಲ್ಲೆಯ ಸುಳುವಾಡಿಯ ಮಾರಮ್ಮ ದೇಗುಲದಲ್ಲಿ ವಿಷ ಮಿಶ್ರಿತ ಪ್ರಸಾದ ತಿಂದು 13 ಸಾವಿಗೀಡಾಗಿರುವುದು ಬಹಳ ದುಃಖದ ಘಟನೆ. ಪ್ರಸಾದ ಹೇಗೆ ವಿಷಪೂರಿತವಾಯಿತು ಎನ್ನುವುದು ಇನ್ನೂ ಸ್ಪಷ್ಟವಾ ಗಿಲ್ಲ. ಆದರೆ ಬಹುತೇಕ ಯಾರೋ ವಿಷ ಬೆರೆಸಿರುವ ಸಾಧ್ಯತೆ ಇದೆ ಎಂದು ಹೇಳ ಲಾಗುತ್ತದೆ. ಇದು ನಿಜವೇ ಆಗಿದ್ದರೆ ಅಕ್ಷಮ್ಯ. ಇದನ್ನು ಘೋರ ನರ ಹತ್ಯೆ ಎಂದೇ ಪರಿಗಣಿಸಬೇಕಾಗುತ್ತದೆ. ಯಾರಧ್ದೋ ದ್ವೇಷ ಅಥವಾ ಪ್ರತಿ ಷ್ಠೆಯ ಮೇಲಾಟಕ್ಕೆ ಅಮಾಯಕ ಭಕ್ತರನ್ನು ಬಲಿಕೊಡುವುದು ಅತ್ಯಂತ ಅಮಾನ  ವೀಯ ಕೃತ್ಯ. ಇವರನ್ನು ಮನುಷ್ಯರು ಎಂದು ಕರೆಯಲು ಸಾಧ್ಯವಿಲ್ಲ. ಇವರು ಮನುಷ್ಯರ ಮಾತ್ರವಲ್ಲ ಮನುಷ್ಯತ್ವದ ಕೊಲೆಗಾರರು ಎನ್ನಬೇಕಾಗುತ್ತದೆ. 

Advertisement

ಧಾರ್ಮಿಕ ಸ್ಥಳಗಳಲ್ಲಿ ದುರಂತಗಳು ಸಂಭವಿಸುವುದು ನಮ್ಮ ದೇಶದಲ್ಲಿ ಹೊಸತೇನಲ್ಲ. ಬಹುತೇಕ ದುರಂತಗಳಿಗೆ ನಮ್ಮ ದೋಷಪೂರಿತ ವ್ಯವಸ್ಥೆಯೇ ಕಾರಣವಾಗಿರುತ್ತದೆ. ದೇವಸ್ಥಾನ ಅಥವಾ ಇನ್ಯಾವುದೇ ಧಾರ್ಮಿಕ ಕೇಂದ್ರಗಳಿಗೆ ಜನರು ಬರುವುದು ಆ ಸ್ಥಳದ ಮೇಲಿರುವ ನಂಬಿಕೆಯಿಂದ. ಇಂಥ ಸ್ಥಳಗಳಲ್ಲಿ ಯಾರಧ್ದೋ ನಿರ್ಲಕ್ಷ್ಯ ಅಥವಾ ಸಂಚಿನಿಂದ ದುರಂತ ಸಂಭವಿಸಿ ಪ್ರಾಣಹರಣವಾದರೆ ಅದರಿಂದ ಜನರ ನಂಬಿಕೆಗೆ ಕೊಡಲಿಯೇಟು ಬೀಳುತ್ತದೆ.
 
ಕಳೆದ ಕೆಲ ಸಮಯದಿಂದೀಚೆಗೆ ಕರ್ನಾಟಕದಲ್ಲಿ ಸರಣಿಯಂತೆ ದುರಂತಗಳು ಸಂಭವಿಸಿ ಸಾವುನೋವುಗಳಾಗುತ್ತಿವೆ. ಮೂರು ವಾರಗಳ ಹಿಂದೆಯೆಷ್ಟೇ ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಬಸ್‌ ನಾಲೆಗೆ ಉರುಳಿ 30 ಮಂದಿ ಅಸುನೀಗಿದ್ದಾರೆ. ರವಿವಾರ ಸಕ್ಕರೆ ಕಾರ್ಖಾನೆಯೊಂದರಲ್ಲಿ ಸ್ಫೋಟ ಸಂಭವಿಸಿ ಆರು ಮಂದಿ ಮೃತಪಟ್ಟಿದ್ದಾರೆ. ಇಂಥ ದುರಂತಗಳು ಸಂಭವಿಸಿದಾಗ ರಾಜಕಾರಣಿಗಳ ದಂಡೇ ಸ್ಥಳಕ್ಕೆ ಮತ್ತು ಆಸ್ಪತ್ರೆಗಳಿಗೆ ಭೇಟಿ ನೀಡುತ್ತದೆ. ತಪ್ಪಿತಸ್ಥರನ್ನು ಶಿಕ್ಷಿಸುವ ಕುರಿತು ಮಾತನಾಡುತ್ತಾರೆ. ಪರಿಹಾರ ಧನ ಘೋಷಣೆಯಾಗುತ್ತದೆ. ಮಾಧ್ಯಮಗಳಲ್ಲಿ ಬಿರುಸಿನ ಚರ್ಚೆಯಾಗುತ್ತದೆ. ಎಲ್ಲಾ ನಾಲ್ಕೈದು ದಿನ ಮಾತ್ರ.ಕ್ರಮೇಣ ಜನರು ದುರಂತವನ್ನು ಮರೆಯುತ್ತಾರೆ. ಇನ್ನೊಂದು ದುರಂತ ಸಂಭವಿಸಿದಾಗಲಷ್ಟೇ ಜನರಿಗೆ ಮಾತ್ರವಲ್ಲ ನಮ್ಮನ್ನಾಳುವವರಿಗೆ ಕೂಡಾ ಅದರ ನೆನಪಾಗುತ್ತದೆ. ಇದು ಲಾಗಾಯ್ತಿನಿಂದ ನಡೆದುಕೊಂಡು ಬಂದಿರುವ ರೀತಿ. 

ಸಾರ್ವಜನಿಕ ನೆನಪು ಅಲ್ಪಾಯು ಎನ್ನುವುದು ನಮ್ಮನ್ನಾಳುವವರಿಗೆ ಗೊತ್ತಿರುತ್ತದೆ. ಹೀಗಾಗಿ ವಿಷಾದ ವ್ಯಕ್ತಪಡಿಸುವುದು, ಕಣ್ಣೀರು ಸುರಿಸುವುದು ಇವೆಲ್ಲ ನಾಲ್ಕು ದಿನಗಳ ಸಿನಿಕ ವರ್ತನೆಯಂತೆ ಕಾಣಿಸುತ್ತದೆ. ಯಾರಿಗೂ ಸಮಸ್ಯೆಯ ಮೂಲಕ್ಕಿಳಿದು ಪರಿಹಾರ ಕಂಡುಕೊಳ್ಳಬೇಕೆಂದು ಅನ್ನಿಸುವುದಿಲ್ಲ.ರಾಜಕೀಯ ನಾಯಕರು ಪರಿಹಾರ ಘೋಷಿಸಿದಲ್ಲಿಗೆ ನಮ್ಮ ಜವಾಬ್ದಾರಿ ಮುಗಿಯಿತು ಎಂದುಕೊಳ್ಳುತ್ತಾರೆ.ಇದು ನಿಜವಾದ ದುರಂತ.
 
ದಸರಾ ಹಬ್ಬದ ಸಂದರ್ಭದಲ್ಲಿ ಪಂಜಾಬಿನಲ್ಲಿ ಸಂಭವಿಸಿದ ದುರಂತವಾಗಲಿ, ಎರಡು ವರ್ಷದ ಹಿಂದೆ ಕೇರಳದ ಕೊಲ್ಲಂ ಜಿಲ್ಲೆಯ ದೇವಸ್ಥಾನದ ಉತ್ಸವವೊಂದರಲ್ಲಿ ಸಂಭವಿಸಿದ ಪಟಾಕಿ ದುರಂತವಾಗಲಿ ನಮಗೆ ಯಾವುದೇ ಪಾಠ ಕಲಿಸಿಲ್ಲ ಎನ್ನುವುದು ಪದೇ ಪದೇ ಸಾಬೀತಾಗುತ್ತಿ ರುತ್ತದೆ. ಅಪಾರ ಸಂಖ್ಯೆಯ ಜನರು ಸೇರುವ ಧಾರ್ಮಿಕ ಸ್ಥಳಗಳಲ್ಲಿ ಜನದಟ್ಟಣೆ ನಿಭಾಯಿಸುವ ನಮ್ಮ ವ್ಯವಸ್ಥೆಯೇ ಸಮರ್ಪಕವಾಗಿಲ್ಲ ಎನ್ನುವುದಕ್ಕೆ ದೇಶದಲ್ಲಿ ಸಂಭವಿಸಿರುವ ಅನೇಕ ಕಾಲು¤ಳಿತಗಳೇ ಸಾಕ್ಷಿ. 

ದೇಗುಲಗಳು ಸೇರಿದಂತೆ ಧಾರ್ಮಿಕ ಸ್ಥಳಗಳು ಧಾರಾಳ ವರಮಾನ ತಂದು ಕೊಡುವ ಸ್ಥಳಗಳು. ಹೀಗಾಗಿ ದೇವಸ್ಥಾನಗಳ ಆಡಳಿತ ನೋಡಿ ಕೊಳ್ಳಲು ಭಾರೀ ಪೈಪೋಟಿ ಇರುತ್ತದೆ. ಪ್ರಸ್ತುತ ಸುಳುವಾಡಿಯ ದೇಗುಲ ದಲ್ಲಿ ಸಂಭವಿಸಿದ ದುರಂತಕ್ಕೆ ದೇಗುಲದ ಆಡಳಿತವನ್ನು ನೋಡಿಕೊಳ್ಳುವ ವಿಚಾರವಾಗಿ ಎರಡು ತಂಡಗಳ ನಡುವೆ ಇದ್ದ ವಿವಾದವೇ ಕಾರಣ ಎನ್ನುವುದು ಮೇಲ್ನೋಟಕ್ಕೆ ಕಂಡು ಬಂದಿರುವ ಕಾರಣ. ಮುಜರಾಯಿ ಇಲಾಖೆಯ ವಶದಲ್ಲಿರುವ ದೇವಸ್ಥಾನಗಳಲ್ಲಿ ಈ ಸಮಸ್ಯೆ ಇಲ್ಲದಿದ್ದರೂ, ಇತರ ದೇವಸ್ಥಾನಗಳಲ್ಲಿ ಆಡಳಿತ ನೋಡಿಕೊಳ್ಳುವ ವಿಚಾರವೇ ಮಾರಾಮಾ ರಿಗೆ ಕಾರಣವಾದ, ಕೋರ್ಟುಕಚೇರಿಯೇರಿದ ಪ್ರಕರಣಗಳು ಅನೇಕ ಇವೆ. 

ಸುಳುವಾಡಿ ಪ್ರಕರಣದಲ್ಲಿ ಅಸ್ವಸ್ಥರಿಗೆ ಚಿಕಿತ್ಸೆ ನೀಡುವಲ್ಲಿ ಸರಕಾರ ತೋರಿಸಿದ ಪ್ರತಿಸ್ಪಂದನ ತ್ರಿಪ್ತಿಕರವಾಗಿದೆ. ಆದರೆ ಇದೇ ವಿಚಾರವನ್ನು ಘಟನೆಯ ತನಿಖೆಗೆ ಸಂಬಂಧಿಸಿದಂತೆ ಹೇಳಲು ಸಾಧ್ಯವಾಗುವುದಿಲ್ಲ. ಘಟನೆ ಸಂಭವಿಸಿ ಮೂರು ದಿನವಾಗಿದ್ದರೂ ಇನ್ನೂ ಪ್ರಸಾದವಾಗಲು ಕಾರಣ ಏನು ಮತ್ತು ಯಾರು ಮಾಡಿದ್ದು ಎನ್ನುವುದನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಅಲ್ಲದೆ ಪ್ರಸಾದದಲ್ಲಿ ಯಾವ ವಿಷ ಬೆರಿತಿತ್ತು ಎನ್ನುವುದು ಕೂಡಾ ತಿಳಿದು ಬಂದಿಲ್ಲ. ಇದನ್ನು ಪರೀಕ್ಷಿಸುವ ಪ್ರಯೋಗಾಲಯ ನಮ್ಮಲ್ಲಿಲ್ಲ.ಅದಕ್ಕಾಗಿ ಹೈದರಾಬಾದ್‌ಗೆ ಹೋಗಬೇಕು. ಇವೆಲ್ಲ ವ್ಯವಸ್ಥೆಯ ಲೋಪದೋಷಗಳು. ಏನೇ ಆದರೂ ಇಂಥ ದುಷ್ಕೃತ್ಯಗಳು ಮರುಕಳಿಸದಂತೆ ನೋಡಿಕೊಳ್ಳಬೇಕಾದದ್ದು ಆಡಳಿತದ ಮಾತ್ರವಲ್ಲದೆ ಜಾಗೃತ ಸಮಾಜದ ಕರ್ತವ್ಯವೂ ಹೌದು. 

Advertisement
Advertisement

Udayavani is now on Telegram. Click here to join our channel and stay updated with the latest news.

Next