Advertisement

ರಾಣಿಪುರಂ ನಿಸರ್ಗಧಾಮದಲ್ಲಿ ಚಾರಣಿಗರಿಗೆ ಆಹಾರ ಸೌಲಭ್ಯ

12:23 AM May 08, 2019 | Team Udayavani |

ಕಾಸರಗೋಡು: ಜಿಲ್ಲೆಯ ಪ್ರವಾಸಿ ಕೇಂದ್ರವಾಗಿ, ಪ್ರಾಕೃತಿಕ ಸೌಂದರ್ಯದಿಂದ ಚಾರಣಿಗರ ಸ್ವರ್ಗ ಎನಿಸಿಕೊಂಡಿರುವ ರಾಣಿಪುರಂ ನಿಸರ್ಗಧಾಮದಲ್ಲಿ ಶೀತಲ ಪಾನೀಯ ಮತ್ತು ಆಹಾರವನ್ನು ಬೆಲೆ ತೆತ್ತು ಖರೀದಿಸುವ ಸೌಕರ್ಯ ಕಲ್ಪಿಸಲು ಅರಣ್ಯ ಇಲಾಖೆಯ ದಕ್ಷಿಣ ವಲಯ ವೃತ್ತ ಮುಖ್ಯ ಕನ್ಸರ್ವೇಟರ್‌ ಕೆ.ಕಾರ್ತಿಕೇಯನ್‌ ಅರಣ್ಯ ಸಂರಕ್ಷಣೆ ಸಮಿತಿಗೆ ನಿರ್ದೇಶಿಸಿದೆ. ಟಿಕೆಟ್‌ ಕೌಂಟರ್‌ನಲ್ಲಿ ಅರಣ್ಯ ಇಲಾಖೆಯ ಆಹಾರ ಕೇಂದ್ರವನ್ನು ಆರಂಭಿಸಲಿದೆ.

Advertisement

ಪ್ರಸ್ತುತ ರಾಣಿಪುರಂನಲ್ಲಿ ಚಾರಣಿಗರಿಗೆ ಮತ್ತು ಪ್ರವಾಸಿಗರಿಗೆ ಕುಡಿಯುವ ನೀರು ಮತ್ತು ಆಹಾರ ಸಾಮಗ್ರಿಗಳು ಲಭಿಸುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿ¤ತ್ತು. ಸುಮಾರು ಎರಡೂವರೆ ಕಿಲೋ ಮೀಟರ್‌ ಎತ್ತರಕ್ಕೆ ನಡೆದು ಹೋದಲ್ಲಿ ಮಾತ್ರವೇ ಶಿಖರವನ್ನು ತಲುಪಬಹುದು. ಈ ಶಿಖೀರದಿಂದ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುವುದೆಂದರೆ ಹೊಸ ಅನುಭವವನ್ನೇ ಕಟ್ಟಿಕೊಡುತ್ತದೆ.

ದಿನಗಳ ಹಿಂದೆ ರಾಣಿಪುರಂ ಶಿಖರವನ್ನೇರಿದ ಯುವಕನೋರ್ವ ಬಿಸಿಲಿನ ಬೇಗೆಯಿಂದ ಕುಸಿದು ಬಿದ್ದಿದ್ದರು. ಈ ಹಿನ್ನೆಲೆಯಲ್ಲಿ ಇಲ್ಲಿ ನೀರಿನ ಮತ್ತು ಆಹಾರದ ಸೌಕರ್ಯ ಕಲ್ಪಿಸಲು ಉದ್ದೇಶಿಸಲಾಗಿದೆ.

ಇಕೋ ಟೂರಿಸಂ ನಿರ್ವಹಣೆಯ ಬಗ್ಗೆ ಅವಲೋಕಿಸಲು ಮತ್ತು ಅಲ್ಲಿ ಲಭ್ಯವಿರುವ ಸೌಕರ್ಯಗಳ ಬಗ್ಗೆ ತಿಳಿದುಕೊಳ್ಳಲು ಅರಣ್ಯ ಇಲಾಖೆಯ ಚೀಫ್‌ ಕನ್ಸರ್ವೇಟರ್‌ ರಾಣಿಪುರಂ ಸಂದರ್ಶಿಸಿದ್ದರು. ರಾಣಿಪುರಂ ನಿಸರ್ಗಧಾಮದಲ್ಲಿರುವ ಪ್ರಾಣಿ, ಪಕ್ಷಿಗಳ ಹಾಗೂ ವಿವಿಧ ಜಾತಿಯ ಮರಗಳ ಬಗ್ಗೆ ಮಾಹಿತಿ ನೀಡಲು ಗೈಡ್‌ ನೇಮಿಸುವ ಬಗ್ಗೆ ಪರಿಗಣನೆಯಲ್ಲಿದೆ.

ಕಾಸರಗೋಡು ವಿಭಾಗಿಯ ಅರಣ್ಯಾಧಿಕಾರಿ ಪಿ.ಕೆ.ಅನೂಪ್‌, ಕಾಂಞಂಗಾಡ್‌ ರೇಂಜ್‌ ಆಫೀಸರ್‌ ಸುಧೀರ್‌ ನೇರೋತ್‌, ಸೆಕ್ಷನ್‌ ಫಾರೆಸ್ಟ್‌ ಆಫೀಸರ್‌ಗಳಾದ ಟಿ.ಪ್ರಭಾಕರನ್‌, ಬಿ.ಎಸ್‌. ವಿನೋದ್‌ ಕುಮಾರ್‌, ಅರಣ್ಯ ಸಂರಕ್ಷಣೆ ಸಮಿತಿ ಅಧ್ಯಕ್ಷ ಎಸ್‌.ಮಾಧವನ್‌ ಮೊದಲಾದವರು ಚೀಫ್‌ ಕನ್ಸರ್ವೇಟರ್‌ ಅವರ ಜತೆಯಲ್ಲಿದ್ದರು.

Advertisement

ಅರಣ್ಯ ಸಂರಕ್ಷಣ ಸಮಿತಿ ನಿರ್ದೇಶಿಸಿರುವ ಅಭಿವೃದ್ಧಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಅರಣ್ಯ ಇಲಾಖೆ ಮೀನಮೇಷ ಎಣಿಸುತ್ತಿದೆ. ರಾಣಿಪುರಂ ಪ್ರವಾಸಿ ಕೇಂದ್ರಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳ ಕಂಡಿದೆ. ಪ್ರವೇಶ ಶುಲ್ಕದ ಮೂಲಕ ತಿಂಗಳೊಂದರಲ್ಲಿ ಒಂದು ಲಕ್ಷ ರೂಪಾಯಿಗಳಿಗಿಂತಲೂ ಅಧಿಕ ವರಮಾನ ಗಿಟ್ಟಿಸುತ್ತಿರುವ ರಾಣಿಪುರಂನ ಅಭಿವೃದ್ಧಿ ಸೌಕರ್ಯಗಳನ್ನು ಕೊಡಮಾಡುವುದರಲ್ಲಿ ಸ್ಥಳೀಯ ಪನತ್ತಡಿ ಗ್ರಾಮ ಪಂಚಾಯತ್‌ ಜನ ಪ್ರತಿನಿಧಿಗಳಾಗಲಿ, ಅರಣ್ಯ ಇಲಾಖೆ ಅಧಿಕೃತರಾಗಲಿ ಮುತುವರ್ಜಿ ವಹಿಸುತ್ತಿಲ್ಲ. ಮೂಲಭೂತ ಸೌಕರ್ಯಗಳನ್ನು ಕೊಡಮಾಡುವುದರಲ್ಲಿ ವಿಫಲವಾಗಿರುವ ಅರಣ್ಯ ಇಲಾಖೆ ವಿರುದ್ಧ ಹಲವು ಮಂದಿ ಚಾರಣಿಗರು ದೂರು ನೀಡಿದ್ದಾರೆ.

ಪ್ರವಾಸಿಗರ ಸಹಿತ ಚಾರಣಿಗರ ಸುರಕ್ಷೆ ಹಾಗೂ ವಿಶ್ರಮಿಸಲು ಅಗತ್ಯವಾದ ವಿಶ್ರಾಂತಿಧಾಮದ ನಿರ್ಮಾಣದಲ್ಲಿಯೂ ಅಧಿಕೃತರು ಅಸಡ್ಡೆ ವಹಿಸಿದ್ದಾರೆ.
ಪ್ರವಾಸಿ ಯಾತ್ರಿಕರ ರಕ್ಷಣೆಗಾಗಿ ಮಣಿಮಲೆಗೆ ಸುಲಭವಾಗಿ ನಡೆದುಕೊಂಡು ಸಾಗಲು ಸಹಕಾರಿಯಾಗುತ್ತಿದ್ದ ರಕ್ಷಣಾ ಕೈ ಬೇಲಿಯು ಮುರಿದು ಬಿದ್ದು ವರ್ಷಗಳಾಗಿದ್ದರೂ ರಿಪೇರಿಯಾಗಿಲ್ಲ. ಸುರಕ್ಷಿತ ಸಂಚಾರಕ್ಕೆ ಸಹಕಾರಿಯಾಗುವ ಕೈ ಬೇಲಿಯ ನಿರ್ಮಾಣಕ್ಕೆ ಸಿಬಂದಿಯ ಅನಾಸ್ಥೆಯೇ ಕಾರಣ ಎನ್ನುತ್ತಾರೆ ಕಾಂಞಂಗಾಡಿನ ಚಾರಣಿಗರಾದ ಅಪ್ಪು ಕುಟ್ಟನ್‌ ಅವರು.

ಬೆಟ್ಟ ಏರುವ ಚಾರಣಿಗರಿಗೆ ಅತ್ಯವಶ್ಯವಾದ ತಾತ್ಕಾಲಿಕ ವಿಶ್ರಮ ಕೇಂದ್ರ, ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸುವ ಯೋಜನೆ ಅನುಷ್ಠಾನಗೊಂಡಿಲ್ಲ. ರಾಣಿಪುರಂ ನಿಸರ್ಗಧಾಮಕ್ಕೆ ತೆರಳುವ ಪ್ರವೇಶ ದ್ವಾರದ ಸಮೀಪ ಟಿಕೆಟ್‌ ಕೌಂಟರ್‌, ಸಂಚಾರಿಗಳಿಗೆ ಶೌಚಾಲಯದ ವ್ಯವಸ್ಥೆಗಳಿದ್ದರೂ, ವಿಶ್ರಾಂತಿ ಪಡೆಯಲು ವ್ಯವಸ್ಥೆಯಿಲ್ಲ.

ಮಣಿಮಲದ ಎತ್ತರ ಪ್ರದೇಶದಲ್ಲಿ ಪೂರ್ಣ ಸುರಕ್ಷೆಯನ್ನು ಕಲ್ಪಿಸಿ ಸಂಚಾರಿಗಳಿಗೆ ಸೂರ್ಯಾಸ್ತವನ್ನು ವೀಕ್ಷಿಸಲು (ಒಂದನೇ ಪುಟದಿಂದ)
ಅಗತ್ಯವಾದ ಸೌಕರ್ಯಗಳು ಪೂರ್ಣಗೊಂಡಿಲ್ಲ. ಇಕೋ ಟೂರಿಸಂ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆರಂಭಿಸಲುದ್ದೇಶಿಸಿದ್ದ ಇಕೋ ಶಾಪ್‌ ಕಾರ್ಯಾರಂಭವಾಗಿಲ್ಲ. ಫನೀìಚರ್‌ ಮಾರಾಟ ಕೇಂದ್ರವನ್ನು ಸ್ಥಾಪಿಸುವ ಉದ್ದೇಶ ಮೂಲೆಗುಂಪಾಗಿದೆ.

ಯೋಜನೆ ಅನುಷ್ಠಾನಕ್ಕೆ ಅಗತ್ಯವಾದ ಧನಸಹಾಯ ಸಿಗದೆ ಇರುವುದು ಇಕೋ ಶಾಪ್‌ ಸಹಿತ ಫನೀìಚರ್‌ ಮಳಿಗೆ ತೆರೆಯದೆ ಇರಲು ಮೂಲ ಕಾರಣ. ಮಾತ್ರವಲ್ಲದೆ ಚಾರಣಿಗರು ಸಮೀಪದಲ್ಲಿರುವ ಖಾಸಗಿ ಗೂಡಂಗಡಿಯನ್ನು ಆಹಾರವಸ್ತು ಕೊಳ್ಳಲು, ಸೇವಿಸಲು ಅವಲಂಬಿಸಿದ್ದಾರೆ. ಇಕೋ ಶಾಪ್‌ ತೆರೆಯಲು ಅನುಮತಿ ದೊರೆತಲ್ಲಿ ಕರಕುಶಲ ವಸ್ತುಗಳ ಮಾರಾಟ ಸಹಿತ ನ್ಯಾಯೋಚಿತ ಬೆಲೆಗೆ ಲಘು ಉಪಹಾರ ವ್ಯವಸ್ಥೆಯನ್ನು ಆರಂಭಿಸಲು ಸಾಧ್ಯವಿದೆ ಎನ್ನುತ್ತಾರೆ ಸ್ಥಳೀಯರು. ಅರಣ್ಯ ಇಲಾಖೆ ಮೂಲಕ ವಾಹನ ಪಾರ್ಕಿಂಗ್‌ಗೆ ಉತ್ತಮ ವ್ಯವಸ್ಥೆ ಕಲ್ಪಿಸಿದರೆ ಹೆಚ್ಚಿನ ವರಮಾನವು ರಾಣಿಪುರಂಗೆ ಲಭಿಸಲಿದೆ ಎಂದು ಹೇಳುತ್ತಾರೆ ಸಮಿತಿ ಸದಸ್ಯರು.

ವನ ಸಂರಕ್ಷಣ ಸಮಿತಿ ಮೂಲಕ ರಾಣಿಪುರಂ ಅಭಿವೃದ್ಧಿ ನಿಟ್ಟಿನಲ್ಲಿ ಯೋಜನೆಗಳ ರೂಪುರೇಖೆ ಸಿದ್ದœ ಪಡಿಸಿ ಅರಣ್ಯ ಇಲಾಖೆಗೆ ವರ್ಷಗಳ ಹಿಂದೆಯೇ ಸಮರ್ಪಿಸಿದ್ದರೂ, ಸೂಕ್ತ ರೀತಿಯಲ್ಲಿ ಯೋಜನೆ ಸಾಕಾರಗೊಳಿಸುವತ್ತ ಇಲಾಖೆ ಗಮನ ನೀಡದಿರುವುದು ರಾಣಿಪುರಂ ಅಭಿವೃದ್ಧಿಗೆ ಮುಳುವಾಗಿದೆ.

ಮೂಲಸೌಕರ್ಯಗಳಿಲ್ಲ
ಪ್ರವಾಸಿಗರ ಪ್ರಮುಖ ಪ್ರವಾಸ ಕೇಂದ್ರವಾಗಿರುವ ರಾಣಿಪುರಂನಲ್ಲಿ ಮೂಲಸೌಕರ್ಯಗಳಿಲ್ಲ. ಚಾರಣಿಗರ ಅಗತ್ಯಗಳನ್ನು ಪೂರೈಸುವ ಯೋಜನೆಗಳಿದ್ದರೂ ಅನುಷ್ಠಾನಗೊಳ್ಳದೆ ಉಳಿದಿದೆ. ಕಾಸರಗೋಡಿನ ಊಟಿ ಎಂದೇ ಹೆಸರುವಾಸಿಯಾಗಿರುವ ರಾಣಿಪುರಂಗೆ ಅತೀ ಹೆಚ್ಚು ಸಂಖ್ಯೆಯಲ್ಲಿ ಪ್ರವಾಸಿಗರು, ಚಾರಣಿಗರು ಬರುತ್ತಿದ್ದರೂ ಅರಣ್ಯ ಇಲಾಖೆ ಮೂಲ ಆವಶ್ಯಕತೆಗಳನ್ನು ಪೂರೈಸುವಲ್ಲಿ ಸೋತಿದೆ.

Advertisement

Udayavani is now on Telegram. Click here to join our channel and stay updated with the latest news.

Next