ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರ ಈ ವರ್ಷದ ಮೊದಲ ಮನ್ ಕಿ ಬಾತ್ನಲ್ಲಿ ಕರ್ನಾಟಕದ ಸಾಧ ಕರು ಮುಕ್ತಕಂಠದ ಶ್ಲಾಘನೆಗೆ ಒಳಗಾದರು.
ಅನುಭವ ಮಂಟಪ, ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಪದ್ಮಶ್ರೀ ಗೌರವಕ್ಕೆ ಪಾತ್ರರಾದ ಚಿಕ್ಕಬಳ್ಳಾಪುರದ ತಮಟೆ ಕಲಾವಿದ ಮುನಿವೆಂಕಟಪ್ಪ, ಬೀದರ್ನ ಹುಲೂÕರು ಮಹಿಳಾ ಸಿರಿಧಾನ್ಯ ಉತ್ಪಾದಕ ಕಂಪೆನಿ, ಕಲಬುರಗಿಯಲ್ಲಿರುವ ಆಳಂದ ಭೂತಾಯಿ ಮಿಲೆಟ್ಸ್ ಫಾರ್ಮರ್ಸ್ ಪ್ರೊಡ್ನೂಸರ್ಸ್ ಕಂಪೆನಿಯ ಬಗ್ಗೆ ಪ್ರಧಾನಿ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.
2023ನೇ ಸಾಲಿನ ಪದ್ಮ ಪ್ರಶಸ್ತಿ ಪುರಸ್ಕೃತರಲ್ಲಿ ಹೆಚ್ಚಿನವರು ಬುಡಕಟ್ಟು ಸಮುದಾಯಗಳಿಗೆ ಸೇರಿದವರು ಅಥವಾ ಅವರ ಜತೆಗೆ ಒಡನಾಟ ಹೊಂದಿರುವವರು. ಜತೆಗೆ ದೇಶವೇ ಮೊದಲು ಎಂಬ ಧ್ಯೇಯವನ್ನು ಪಾಲಿಸಿಕೊಂಡು ಬರುತ್ತಿರುವವರಾಗಿದ್ದಾರೆ. ಅವರು ಯಾವುದೇ ಗೌರವವನ್ನು ಬಯಸದೆ ಕೆಲಸ ಮಾಡುತ್ತಿದ್ದಾರೆ. ಅಂಥವರಲ್ಲಿ ಚಿಕ್ಕಬಳ್ಳಾಪುರದ ತಮಟೆ ಕಲಾವಿದ ಮುನಿ ವೆಂಕಟಪ್ಪ ಒಬ್ಬರು. ಅವರರಂತೆ ತೆರೆಮರೆಯಲ್ಲಿ ಸಾಧನೆ ಮಾಡಿದವರಿಗೆ ಅರ್ಹವಾಗಿಯೇ ಪದ್ಮ ಗೌರವ ಘೋಷಿಸಲಾಗಿದೆ. ಇಂತಹ ಸಾಧಕರ ಜೀವನ- ಸಾಧನೆಯನ್ನು ದೇಶವಾಸಿಗಳು ಓದಿ ತಿಳಿದುಕೊಳ್ಳಬೇಕು. ಬುಡಕಟ್ಟು ಜನರ ಜೀವನವು ನಗರವಾಸಿಗಳ ಜೀವನಕ್ಕಿಂತ ಭಿನ್ನವಾಗಿದೆ. ಅವರು ಸವಾಲುಗಳನ್ನು ಹೊಂದಿದ್ದರೂ ತಮ್ಮ ಸಂಪ್ರದಾಯಗಳನ್ನು ಉಳಿಸಿಕೊಂಡಿವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಜಗತ್ತಿನಲ್ಲಿಯೇ ಅತ್ಯುತ್ತಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿರುವ ದೇಶ ನಮ್ಮದು ಎಂದು ಹೇಳಿದ ಪ್ರಧಾನಿ, ಇದಕ್ಕೆ ಕರ್ನಾಟಕದ ಅನುಭಟ ಮಂಟಪ ಪ್ರೇರಣೆಯಾಗಿದೆ ಎಂದರು.
Related Articles
ಐಐಎಸ್ಸಿಗೆ ಮೆಚ್ಚುಗೆ
ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಬಗ್ಗೆ ಪ್ರಧಾನಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. 2022ರಲ್ಲಿ ಅತೀ ಹೆಚ್ಚು, 145 ಪೇಟೆಂಟ್ಗಳನ್ನು ತನ್ನದಾಗಿಸಿಕೊಂಡ ಹೆಗ್ಗಳಿಕೆ ಐಐಎಸ್ಸಿಯದು. ಇದು ಪ್ರತೀ ಐದು ದಿನಗಳಿಗೆ ಎರಡು ಪೇಟೆಂಟ್ ಹೊಂದುವುದಕ್ಕೆ ಸಮಾನ. ಈ ಸಾಧನೆ ದೇಶವಾಸಿಗಳಿಗೆ ಹೆಮ್ಮೆಯ ವಿಚಾರ ಎಂದು ಮೋದಿ ಹೇಳಿದರು.
ಬೀದರ್ ಬಗ್ಗೆ ಪ್ರಸ್ತಾವ
ಸಿರಿಧಾನ್ಯಗಳ ಕ್ಷೇತ್ರದಲ್ಲಿ ಬೀದರ್ ಜಿಲ್ಲೆಯ ಹುಲೂÕರ್ ಮಿಲೆಟ್ಸ್ ಪ್ರೊಡ್ನೂಸರ್ ಕಂಪೆನಿ ಮಾಡಿರುವ ಸಾಧನೆಯ ಬಗ್ಗೆ ಮೋದಿ ಪ್ರಸ್ತಾವಿಸಿದ್ದಾರೆ. ಈ ಸಂಸ್ಥೆಯ ಮೂಲಕ ಹಲವಾರು ಮಂದಿ ಮಹಿಳೆಯರು ಸಿರಿಧಾನ್ಯವನ್ನು ಬೆಳೆಯುತ್ತಿದ್ದಾರೆ. ಅದರ ಮೂಲಕ ಸಿರಿಧಾನ್ಯಗಳ ಹಿಟ್ಟನ್ನೂ ತಯಾರಿಸುತ್ತಿದ್ದಾರೆ. ಈ ಸಂಸ್ಥೆಯ ಮೂಲಕ ಅವರು ತಮ್ಮ ಜೀವನವನ್ನು ಕಂಡುಕೊಂಡಿದ್ದಾರೆ ಎಂದರು.
ಕಲಬುರಗಿಯಲ್ಲಿಯೇ ಇರುವ ಅಳಂದ ಭೂತಾಯಿ ಮಿಲೆಟ್ಸ್ ಫಾರ್ಮರ್ಸ್ ಪ್ರೊಡ್ನೂಸರ್ಸ್ ಕಂಪೆನಿ ಕಳೆದ ವರ್ಷ ಭಾರತದ ಸಿರಿಧಾನ್ಯಗಳ ಸಂಶೋಧನ ಮಂಡಳಿಯ ವ್ಯಾಪ್ತಿಯಲ್ಲಿ ಕೆಲಸ ಮಾಡಲು ಆರಂಭಿಸಿದೆ ಎಂದು ಪ್ರಧಾನಿ ಹೇಳಿದ್ದಾರೆ.