Advertisement

ಮಲಪ್ರಭಾಕ್ಕೆ ಹೆಚ್ಚಿದ ನೀರು: ಬಾಗಲಕೋಟೆ ಜಿಲ್ಲೆಯ 34 ಹಳ್ಳಿಗಳಿಗೆ ಪ್ರವಾಹ ಭೀತಿ!

02:43 PM Aug 16, 2020 | keerthan |

ಬಾಗಲಕೋಟೆ: ಮಲಪ್ರಭಾ ನದಿಗೆ ನವಿಲು ತೀರ್ಥ ಡ್ಯಾಂನಿಂದ ಹೆಚ್ಚಿನ ನೀರು ಬಿಡಲಾಗುತ್ತಿದ್ದು, ಜಿಲ್ಲೆಯ ಬಾದಾಮಿ, ಗುಳೇದ ಗುಡ್ಡ ತಾಲೂಕಿನ ಸುಮಾರು 34 ಹಳ್ಳಿಗಳಲ್ಲಿ ಪ್ರವಾಹ ಭೀತಿ ಉಂಟಾಗಿದೆ.

Advertisement

ಮಲ್ರಪಭಾ ನದಿಗೆ ಶನಿವಾರ ಸಂಜೆ 10 ಸಾವಿರ ಕ್ಯೂಸೆಕ್ ನೀರು ಬಿಟ್ಟಿದ್ದರೆ, ರವಿವಾರ ಮಧ್ಯಾಹ್ನ 1ಕ್ಕೆ 15 ಸಾವಿರ ಕ್ಯೂಸೆಕ್ ನೀರು ಬಿಡಲಾಗಿದೆ. ಶನಿವಾರ ಸಂಜೆ ಬಿಟ್ಟ ನೀರು, ರವಿವಾರ ಜಿಲ್ಲೆಗೆ ಪ್ರವೇಶಿಸಿದ್ದು, ನದಿ ಪಾತ್ರದ ಗ್ರಾಮಗಳಲ್ಲಿ ಬಾದಾಮಿ ಮತ್ತು ಗುಳೇದಗುಡ್ಡ ತಾಲೂಕು ಆಡಳಿತದಿಂದ ಡಂಗುರ ಸಾರಿ, ಕಟ್ಟೆಚ್ಚರ ವಹಿಸಲಾಗಿದೆ.

ಕಳೆದ ವರ್ಷ ಮಲಪ್ರಭಾ ನದಿಗೆ ಅಪಾರ ಪ್ರಮಾಣದ ನೀರು ಬಂದಿದ್ದರಿಂದ ಸುಮಾರು 43 ಹಳ್ಳಿಗಳು ನೀರಿನಲ್ಲಿ ಮುಳುಗಿದ್ದವು. ಇದರಿಂದ ಲಕ್ಷಾಂತರ ಜನರು ತೀವ್ರ ಸಂಕಷ್ಟ ಎದುರಿಸಿದ್ದರು. ಈ ಭೀಕರ ಪ್ರವಾಹ ಮರೆಯುವ ಮುನ್ನವೇ, ಶನಿವಾರದಿಂದ ನದಿಗೆ ಹರಿದು ಬರುವ ನೀರಿನ ಪ್ರಮಾಣ ಹೆಚ್ಚಳವಾಗಿದೆ. ಹೀಗಾಗಿ ನದಿ ಪಾತ್ರದ ಜನರು ಭೀತಿಯಲ್ಲೇ ಬದುಕುವ ಅನಿವಾರ್ಯತೆ ಎದುರಾಗಿದೆ.

ಅಧಿಕಾರಿಗಳು ಭೇಟಿ

Advertisement

ಮಲಪ್ರಭಾ ನದಿಗೆ ಹೆಚ್ಚಿನ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಬಾಗಲಕೋಟೆ ಉಪ ವಿಭಾಗಾಧಿಕಾರಿ ಎಂ. ಗಂಗಪ್ಪ, ಬಾದಾಮಿ ತಹಶಿಲ್ದಾರ ಸುಹಾಸ ಇಂಗಳೆ ಮುಂತಾದ ಅಧಿಕಾರಿಗಳು ನದಿ ಪಾತ್ರದ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಾಮದುರ್ಗ ತಾಲೂಕಿನ ಕಳಸ ಬಳಿ ಮಲಪ್ರಭಾ ನದಿ ಜಿಲ್ಲೆ ಪ್ರವೇಸಿಸುತ್ತಿದ್ದು, ಅಲ್ಲಿಂದ ಕೂಡಲಸಂಗಮ ಬಳಿ ಕೃಷ್ಣಾ ನದಿಯೊಂದಿಗೆ ವಿಲೀನಗೊಳ್ಳುವ ಮಧ್ಯೆ ಒಟ್ಟು 23 ಬ್ಯಾರೇಜ್‌ಗಳಿವೆ.

ಎಲ್ಲ ಬ್ಯಾರೇಜ್‌ಗಳ ಗೇಟ್ ತೆಗೆಯಲಾಗಿದ್ದು, ಅಪಾರ ಪ್ರಮಾಣದ ಮುಳ್ಳು ಕಂಠಿ ಹರಿದು ಬಂದು, ಬ್ಯಾರೇಜ್ ಗೇಟ್‌ನಡಿ ನೀರು ಹರಿದು ಹೋಗಲು ತೊಡಕಾಗಿತ್ತು. ಬಾದಾಮಿ ತಾಲೂಕು ಆಡಳಿತದಿಂದ ಎಲ್ಲ ಬ್ಯಾರೇಜ್ ಗೇಟ್‌ನಲ್ಲಿ ಸುಲುಕಿದ್ದ ಮುಳ್ಳು ಕಂಠಿ ತೆರವುಗೊಳಿಸಿ, ನೀರು ಸರಾಗವಾಗಿ ಹರಿದುಹೋಗುವಂತೆ ಮಾಡಲಾಗಿದೆ.

ಮೂರು ನದಿಯಲ್ಲೂ ಭೀತಿ: ಕಳೆದೊಂದು ವಾರದಿಂದ ತಗ್ಗಿದ್ದ ಪ್ರವಾಹ ಭೀತಿ, ರವಿವಾರ ಮತ್ತೆ ಎದುರಾಗಿದೆ. ಜಿಲ್ಲೆಯ ಕೃಷ್ಣಾ ನದಿಗೆ 1.50 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಇದು 2.15 ಲಕ್ಷ ದಾಟಿದರೆ ಕೆಲವು ಹಳ್ಳಿಗಳಿಗೆ ಪ್ರವಾಹ ಭೀತಿ ಶುರುವಾಗಲಿದೆ. ಸದ್ಯ ನದಿ ಪಾತ್ರದ ಭೂಮಿಗೆ ನೀರು ನುಗ್ಗಿದ್ದು, ಬೆಳೆಗಳು ನೀರಿನಲ್ಲಿ ನಿಂತಿವೆ.

ಇನ್ನು ಘಟಪ್ರಭಾ ನದಿಗೆ ಹಿಡಕಲ್ ಜಲಾಶಯದಿಂದ 13,626 ಕ್ಯೂಸೆಕ್, ಧೂಪದಾಳ ಜಲಾಶಯದಿಂದ 18,470 ಕ್ಯೂಸೆಕ್ ಸೇರಿ ಒಟ್ಟು 32,096 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಘಟಪ್ರಭಾ ನದಿಗೆ 45 ಸಾವಿರ ಕ್ಯೂಸೆಕ್ ನೀರು ಹರಿದು ಬರಲು ಆರಂಭಿಸಿದರೆ, ಈ ನದಿಯಲ್ಲೂ ಪ್ರವಾಹ ಉಂಟಾಗಲಿದೆ.

ಮಲ್ರಪಭಾ ನದಿಗೆ ರವಿವಾರ ಮಧ್ಯಾಹ್ನ 15 ಸಾವಿರ ಕ್ಯೂಸೆಕ್ ನೀರು ಹರಿಬಿಟ್ಟಿದ್ದು, ಅದು ಸೋಮವಾರದ ಹೊತ್ತಿಗೆ ಜಿಲ್ಲೆ ಪ್ರವೇಶಿಸಲಿದೆ. ಸಧ್ಯಕ್ಕೆ ಈ ನೀರು ನದಿ ಮಟ್ಟದಲ್ಲಿ ಮಾತ್ರ ಹರಿಯಲಿದ್ದು, ಪ್ರವಾಹ ಉಂಟಾಗುವುದಿಲ್ಲ. ಈ ನದಿಗೆ 18 ರಿಂದ 20 ಸಾವಿರ ಕ್ಯೂಸೆಕ್ ನೀರು ಹರಿದರೆ 43 ಹಳ್ಳಿಗಳು ಪ್ರವಾಹಕ್ಕೆ ಒಳಗಾಗಲಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next