Advertisement

“ಉತ್ತರ’ದಲ್ಲಿ ಪ್ರವಾಹ ಪ್ರಯಾಸ  : ಇದುವರೆಗೆ 52 ಮಂದಿ ಸಾವು, ಐವರು ಕಣ್ಮರೆ

08:26 PM Oct 20, 2021 | Team Udayavani |

ನವದೆಹಲಿ: ಕೇರಳವಾಯ್ತು, ಈಗ ಉತ್ತರ ಭಾರತದಲ್ಲಿ ವರುಣನ ರುದ್ರ ನರ್ತನ ಮುಂದುವರಿದಿದೆ. ಅದರಲ್ಲೂ ಉತ್ತರಾಖಂಡದಲ್ಲಿ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆ ಬಿಡುವನ್ನೇ ನೀಡುತ್ತಿಲ್ಲ. ಅಲ್ಲಲ್ಲಿ ಸಂಭವಿಸಿದ ಭೂಕುಸಿತಗಳು ಮತ್ತು ಪ್ರವಾಹದಿಂದಾಗಿ ಇದುವರೆಗೆ 52 ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ ಐವರು ನಾಪತ್ತೆಯಾಗಿದ್ದಾರೆ ಎಂದು ಸ್ವತಃ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಮಿ ಹೇಳಿದ್ದಾರೆ.

Advertisement

ರಾಜ್ಯದಲ್ಲಿ ಮಳೆಯಿಂದಾಗಿ ಭಾರೀ ಹಾನಿಗೆ ತುತ್ತಾಗಿರುವ ಕುಮೋನ್‌ ಪ್ರವೇಶಕ್ಕೆ ಭೇಟಿ ನೀಡಿದ ಸಿಎಂ ಧಮಿ, ಪರಿಸ್ಥಿತಿ ಅವಲೋಕಿಸಿದರು. ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಭಾರೀ ಪ್ರಮಾಣದ ಹಾನಿಯಾಗಿದೆ ಎಂದು ಹೇಳಿದರು. ಪರಿಸ್ಥಿತಿಗೆ ತಹಬದಿಗೆ ಬರಲು ಇನ್ನೂ ಸಾಕಷ್ಟು ಸಮಯ ಬೇಕು ಎಂದು ಹೇಳಿದ ಅವರು, ತತ್‌ಕ್ಷಣದ ಪರಿಹಾರವಾಗಿ ಎಲ್ಲ ಜಿಲ್ಲಾಧಿಕಾರಿಗಳಿಗೆ ತಲಾ 10 ಕೋಟಿ ರೂ. ಬಿಡುಗಡೆ ಮಾಡಿದರು. ಅಲ್ಲದೆ, ಮಳೆಯಿಂದ ಸಾವನ್ನಪ್ಪಿರುವವರ ಕುಟುಂಬಗಳಿಗೆ ತಲಾ 4 ಲಕ್ಷ ರೂ.ಗಳನ್ನು ಪರಿಹಾರವಾಗಿ ಘೋಷಿಸಿದರು.

ಹವಾಮಾನ ಇಲಾಖೆ ಪ್ರಕಾರ, ಬುಧವಾರದಿಂದಲೇ ಉತ್ತರಾಖಂಡದಲ್ಲಿ ಮಳೆ ಕಡಿಮೆಯಾಗುವ ಸಾಧ್ಯತೆ ಇದೆ. ಈ ವಾರದ ಉಳಿದ ದಿನಗಳಲ್ಲಿ ಒಣ ಹವೆ ಮುಂದುವರಿಯಲಿದೆ ಎಂದಿದೆ. ಆದರೆ, ಈ ಹಿಂದಿನ ನಾಲ್ಕು ದಿನಗಳಲ್ಲಿ ಸುರಿದಿರುವ ಮಳೆ ದಾಖಲೆ ನಿರ್ಮಿಸಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದರಿಂದಾಗಿಯೇ ಭೂಕುಸಿತ ಮತ್ತು ಪ್ರವಾಹದ ಸ್ಥಿತಿ ತಲೆದೋರಿದೆ ಎಂದಿದ್ದಾರೆ.

ಇದನ್ನೂ ಓದಿ :ಕ್ಯಾಶ್‌ಲೆಸ್‌ ವ್ಯವಹಾರದತ್ತ ಕೊಂಕಣ ರೈಲ್ವೇ : ಎಸ್ ಬಿಐನೊಂದಿಗೆ ಕೊಂಕಣ ರೈಲ್ವೇ ಒಪ್ಪಂದ

ಸದ್ಯ ಸೇನೆ, ರಾಷ್ಟ್ರೀಯ ವಿಪತ್ತು ಸ್ಪಂದನಾ ಪ್ರಾಧಿಕಾರ(ಎನ್‌ಡಿಆರ್‌ಎಫ್) ಮತ್ತು ಸ್ಥಳೀಯ ಆಡಳಿತಗಳು ಸೇರಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ಎನ್‌ಡಿಆರ್‌ಎಫ್ 1,300 ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಿದೆ. ಈ ಪ್ರದೇಶದಲ್ಲಿ 15ರಿಂದ 17 ರಕ್ಷಣಾ ಕಾರ್ಯಾಚರಣೆ ತಂಡಗಳು ಕಾರ್ಯ ನಿರ್ವಹಿಸುತ್ತಿವೆ.

Advertisement

ಈ ಮಧ್ಯೆ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಸಿಕ್ಕಿಂ ಹಾಗೂ ಅಸ್ಸಾಂನಲ್ಲೂ ಭಾರೀ ಮಳೆಯಾಗುತ್ತಿದೆ. ಇಲ್ಲೂ ಅಲ್ಲಲ್ಲಿ ಭೂಕುಸಿತದಂಥ ಘಟನೆಗಳು ಸಂಭವಿಸಿವೆ.

ಹಿ. ಪ್ರದೇಶದ 11 ಮಂದಿ ಕಾಣೆ

ಹಿಮಾಚಲ ಪ್ರದೇಶದ ಎಂಟು ಮಂದಿ ಚಾರಣಿಗರು ಮತ್ತು ಮೂವರು ಅಡುಗೆ ಸಿಬ್ಬಂದಿ ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಚಿತುRಲ್‌ನಲ್ಲಿ ನಾಪತ್ತೆಯಾಗಿದ್ದಾರೆ.  ಅ.11ರಂದು ಇವರು ಚಿತುRಲ್‌ ಬಿಟ್ಟಿದ್ದು, ಅ.19ರಂದು ಹರ್ಶಿಲ್‌ಗೆ ತಲುಪಬೇಕಿತ್ತು. ಆದರೆ, ಇದುವರೆಗೆ ಇವರ ಬಗ್ಗೆ ಯಾವುದೇ ಮಾಹಿತಿ ಪತ್ತೆಯಾಗಿಲ್ಲ.

ನೈನಿತಾಲ್‌ನಲ್ಲಿ ಪರಿಸ್ಥಿತಿ ತಹಬದಿಗೆ

ಮಳೆಯಿಂದ ಜರ್ಜರಿತವಾಗಿದ್ದ ನೈನಿತಾಲ್‌ ಬುಧವಾರ ಸಹಜ ಸ್ಥಿತಿಗೆ ಮರಳಿದೆ. ಇಲ್ಲಿ ಸಿಲುಕಿದ್ದ ಪ್ರವಾಸಿಗರು ನಿರಾಳವಾಗಿದ್ದು, ಹೋಟೆಲ್‌ಗಳಿಂದ ಹೊರಗೆ ಬಂದಿದ್ದಾರೆ. ಈ ಮಧ್ಯೆ ಚಮೋಲಿ ಜಿಲ್ಲೆಯ ಡುಂಗ್ರಿ ಎಂಬ ಗ್ರಾಮದಲ್ಲಿ ಭೂಕುಸಿತದಿಂದಾಗಿ ಇಬ್ಬರು ಕಾಣೆಯಾಗಿದ್ದಾರೆ ಎಂದು ಸ್ಥಳೀಯ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

ಸಹಜ ಸ್ಥಿತಿಗೆ ಚಾರ್‌ಧಾಮ್‌ ಯಾತ್ರೆ

ಭಾರೀ ಮಳೆಯಿಂದಾಗಿ ಚಾರ್‌ಧಾಮ್‌ ಯಾತ್ರೆಗೆ ಅಡ್ಡಿಯುಂಟಾಗಿದ್ದು, ಈಗ ಸಹಜ ಸ್ಥಿತಿಗೆ ಮರಳುತ್ತಿದೆ ಎಂದು ಮುಖ್ಯಮಂತ್ರಿ ಧಮಿ ಹೇಳಿದ್ದಾರೆ. ಮಳೆಯ ಕಾರಣದಿಂದಾಗಿ ಕಳೆದ ನಾಲ್ಕು ದಿನಗಳಿಂದಲೂ ಚಾರ್‌ಧಾಮ್‌ ಯಾತ್ರೆಯನ್ನು ಸ್ಥಗಿತ ಮಾಡಲಾಗಿತ್ತು. ಈಗ ಪ್ರವಾಹದಿಂದ ಸಿಲುಕಿದ್ದ ಪ್ರವಾಸಿಗರನ್ನು ಸುರಕ್ಷಿತ ಸ್ಥಳಗಳಿಗೆ ಕರೆತರಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ : ಅಮರೀಂದರ್ ಸಿಂಗ್ ಬಿಜೆಪಿಯೊಂದಿಗೆ ಸೇರಿ ಕಾಗೆ ತಿನ್ನಲಿ : ಕಾಂಗ್ರೆಸ್ ಆಕ್ರೋಶ 

ರಾಣಿಖೇತ್‌-ಅಲ್ಮೋರಾ ಮಾರ್ಗ ಬಂದ್‌ ತುರ್ತುಬಳಕೆಗಷ್ಟೇ ತೈಲ ಮಾರಾಟ

ಇನ್ನು ಇಲ್ಲಿನ ರಾಣಿಖೇತ್‌ ಮತ್ತು ಅಲ್ಮೋರಾ ಮಾರ್ಗ ಬಂದ್‌ ಆಗಿದ್ದು, ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಸದ್ಯ ಇಲ್ಲಿರುವ ಪೆಟ್ರೋಲ್‌ ಬಂಕ್‌ಗಳಲ್ಲಿ ತುರ್ತು ಬಳಕೆಗಷ್ಟೇ ತೈಲವನ್ನು ನೀಡಲಾಗುತ್ತಿದೆ. ವಿದ್ಯುತ್‌ ಪೂರೈಕೆಯೂ ಸರಿಯಾಗಿ ಆಗುತ್ತಿಲ್ಲ. ಹಲವಾರು ಪ್ರದೇಶಗಳಲ್ಲಿ ಸ್ಥಿರ ದೂರವಾಣಿ ಮತ್ತು ಮೊಬೈಲ್‌ ಸಂಪರ್ಕವೂ ಕಡಿತಗೊಂಡಿದೆ.

ನೇಪಾಳದಲ್ಲೂ 21 ಸಾವು

ಅತ್ತ ನೇಪಾಳದಲ್ಲೂ ಭಾರೀ ಮಳೆಯಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ 21 ಮಂದಿ ಸಾವನ್ನಪ್ಪಿದ್ದಾರೆ. ಭೂಕುಸಿತ ಮತ್ತು ಪ್ರವಾಹದಿಂದಾಗಿ ಈ ಪ್ರಮಾಣದ ಸಾವು ನೋವುಗಳಾಗಿವೆ. ಇದೇ ವೇಳೆ ಇನ್ನೂ 24ಕ್ಕೂ ಹೆಚ್ಚು ಮಂದಿ ಪತ್ತೆಯಾಗಿಲ್ಲ. ಅಲ್ಲದೆ, ನೂರಾರು ಮಂದಿ ಮಳೆ ಸಂಬಂಧಿತ ಘಟನೆಗಳಿಂದಾಗಿ ನಿರಾಶ್ರಿತರಾಗಿದ್ದಾರೆ.

ನಿದ್ದೆಯಲ್ಲೇ ನನ್ನ ಸ್ನೇಹಿತರೆಲ್ಲರೂ ಮೃತರಾಗಿಬಿಟ್ಟರು!

ಉತ್ತರಾಖಂಡದಲ್ಲಿ ಮಳೆಯಿಂದಾಗಿ 52 ಮಂದಿ ಸಾವನ್ನಪ್ಪಿದ್ದಾರೆ. ನೈನಿತಾಲ್‌ವೊಂದರಲ್ಲೇ 18ಕ್ಕೂ ಹೆಚ್ಚು ಮಂದಿ ಪ್ರಾಣ ಬಿಟ್ಟಿದ್ದಾರೆ. ನೈನಿತಾಲ್‌ ಬಳಿ ಇರುವ ಮುಕ್ತೇಶ್ವರ ಎಂಬಲ್ಲಿ ಟೆಂಟ್‌ವೊಂದರಲ್ಲಿ ವಾಸ ಮಾಡುತ್ತಿದ್ದ ಕಾಶಿರಾಮ್‌ ಎಂಬುವರು ತಮ್ಮ ಜತೆಗಾರರು ನಿದ್ರಿಸುವಾಗಲೇ ಪ್ರಾಣ ಬಿಟ್ಟ ಬಗೆಗೆ ವಿವರಿಸಿದ್ದಾರೆ. ಇವರೆಲ್ಲರೂ ಕಟ್ಟಡ ಕಾರ್ಮಿಕರಾಗಿದ್ದು, ಮನೆಯೊಂದರ ಸನಿಹದಲ್ಲೇ ಟೆಂಟ್‌ ಹಾಕಿಕೊಂಡು ವಾಸಿಸುತ್ತಿದ್ದರು. ಆದರೆ, ಮಂಗಳವಾರ ಸುರಿದ ಮಳೆ ಇವರ ಬದುಕನ್ನೇ ನಾಶ ಮಾಡಿಬಿಟ್ಟಿತು. ಮಳೆಯಿಂದಾಗಿ ಮನೆಯ ಗೋಡೆ ಇವರಿದ್ದ ಟೆಂಟ್‌ ಮೇಲೆಯೇ ಬಿದ್ದಿದೆ. ಕಾಶಿರಾಮ್‌ ಒಬ್ಬರನ್ನು ಬಿಟ್ಟು ಉಳಿದವರೆಲ್ಲರೂ ಸಾವನ್ನಪ್ಪಿದ್ದಾರೆ. ಸದ್ಯ ಇಲ್ಲಿ ಎಷ್ಟು ಮಂದಿ ಇದ್ದರು ಎಂಬುದು ಗೊತ್ತಾಗಿಲ್ಲ. ಇದುವರೆಗೆ ಐವರ ಮೃತದೇಹಗಳನ್ನು ಹೊರತೆಗೆಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next