Advertisement

ತಿರಂಗಾ ಕಾಶ್ಮೀರ

12:37 PM Aug 15, 2019 | mahesh |

ನವದೆಹಲಿ/ಜಮ್ಮು: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಹಿಂಪಡೆದ ನಂತರ ಎದುರಾಗುತ್ತಿರುವ ಸ್ವಾತಂತ್ರ್ಯೋತ್ಸವವನ್ನು ಎಂದಿಗಿಂತ ಅದ್ಧೂರಿಯಾಗಿ ಆಚರಿಸಲು ಸರ್ಕಾರ ನಿರ್ಧರಿಸಿದೆ. ಜತೆಗೆ, ಅಂದು ಶ್ರೀನಗರದ ಲಾಲ್ಚೌಕ್‌ನಲ್ಲಿ ತ್ರಿವರ್ಣ ಧ್ವಜ ರಾರಾಜಿಸುವ ಸಾಧ್ಯತೆ ಇದೆ.

Advertisement

ಸಂವಿಧಾನದ 370ನೇ ವಿಧಿಯನ್ವಯ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಹಿಂಪಡೆಯುವಂಥ ಐತಿಹಾಸಿಕ ನಿರ್ಧಾರ ಕೈಗೊಂಡ ಬಳಿಕ, ಕೇಂದ್ರ ಸರ್ಕಾರ ಈಗ ಕಣಿವೆ ರಾಜ್ಯದಲ್ಲಿ ಅದ್ಧೂರಿಯಾಗಿ ಸ್ವಾತಂತ್ರ್ಯ ದಿನವನ್ನು ಆಚರಿಸಲು ಸಿದ್ಧತೆ ನಡೆಸಿದೆ. ಅಷ್ಟೇ ಅಲ್ಲ, ಅಂದು ಶ್ರೀನಗರದ ಲಾಲ್ಚೌಕ್‌ನಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಆಗಸ್ಟ್‌ 15ರಂದು ಶ್ರೀನಗರಕ್ಕೆ ಭೇಟಿ ನೀಡಲಿರುವುದು, ಈ ಸುದ್ದಿಗೆ ಮತ್ತಷ್ಟು ಪುಷ್ಟಿ ನೀಡಿದೆ.

ಇದರೊಂದಿಗೆ ಇದೇ ಮೊದಲ ಬಾರಿಗೆ ಕಾಶ್ಮೀರದಲ್ಲಿ ತ್ರಿವರ್ಣ ಧ್ವಜ ಮಾತ್ರ ಹಾರುವ ಮೂಲಕ ಭಾರತ ತನ್ನ ಸಾರ್ವಭೌಮತೆ ಮೆರೆಯಲಿದೆ. ಇದುವರೆಗೆ ಭಾರತೀಯ ಧ್ವಜದ ಜತೆ ಅಲ್ಲಿನ ರಾಜ್ಯ ಪತಾಕೆಯೂ ಹಾರುತಿತ್ತು.

ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ ಅನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಕೇಂದ್ರ ಸರ್ಕಾರವು ಘೋಷಿಸಿದ ಬಳಿಕ ಮೊದಲ ಬಾರಿಗೆ ಸಚಿವ ಅಮಿತ್‌ ಶಾ ಅವರು ಕಣಿವೆ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. 15ರಂದು ಶ್ರೀನಗರ, 16 ಮತ್ತು 17ರಂದು ಲಡಾಖ್‌ಗೆ ಅವರು ಪ್ರಯಾಣ ಬೆಳೆಸಲಿದ್ದಾರೆ. ಶ್ರೀನಗರದ ಪ್ರಮುಖ ವಾಣಿಜ್ಯ ಕೇಂದ್ರವೆನಿಸಿರುವ ಲಾಲ್ಚೌಕ್‌ನಲ್ಲಿ ಅಮಿತ್‌ ಶಾ ಅವರೇನಾದರೂ ತ್ರಿವರ್ಣ ಧ್ವಜ ಹಾರಿಸಿದ್ದೇ ಆದಲ್ಲಿ, ಅದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮತ್ತೂಂದು ಐತಿಹಾಸಿಕ ಹೆಜ್ಜೆ ಎಂಬ ಹೆಗ್ಗಳಿಕೆ ಪಡೆಯಲಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಈದ್‌-ಉಲ್-ಅದ್‌ಹಾ ಹಬ್ಬವನ್ನು ಶಾಂತಿಯುತವಾಗಿ ನೆರವೇರಿಸುವ ಕೇಂದ್ರ ಸರ್ಕಾರದ ಉದ್ದೇಶ ಯಶಸ್ವಿಯಾದ ಹಿನ್ನೆಲೆಯಲ್ಲಿ, ಸರ್ಕಾರವು ಈಗ ಸ್ವಾತಂತ್ರ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಸಿದ್ಧತೆ ಶುರುಮಾಡಿದೆ. ಇದಕ್ಕಾಗಿಯೇ ಕಣಿವೆ ರಾಜ್ಯಾದ್ಯಂತ ಈಗಾಗಲೇ ಭದ್ರತಾ ಪಡೆಗಳ ಪಥಸಂಚಲನ ಆರಂಭವಾಗಿದೆ. ಶ್ರೀನಗರದ ಶೇರ್‌-ಐ-ಕಾಶ್ಮೀರ್‌ ಸ್ಟೇಡಿಯಂನಲ್ಲಿ ಮಂಗಳವಾರವೂ ಪಥಸಂಚಲನ ಅಭ್ಯಾಸ ನಡೆದಿದೆ.

Advertisement

1992ರ ಜನವರಿ 26ರಂದು ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳ ದಾಳಿ ಬೆದರಿಕೆಯ ನಡುವೆಯೂ ಅಂದಿನ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರೆಸ್ಸೆಸ್‌)ದ ಪ್ರಚಾರಕರಾಗಿದ್ದ ನರೇಂದ್ರ ಮೋದಿ ಅವರು, ಆಗಿನ ಬಿಜೆಪಿ ಅಧ್ಯಕ್ಷ ಮುರಳಿ ಮನೋಹರ ಜೋಷಿ ಅವರೊಂದಿಗೆ ಸೇರಿ ಶ್ರೀನಗರದ ಲಾಲ್ಚೌಕ್‌ನಲ್ಲಿ ಧ್ವಜಾರೋಹಣ ಮಾಡುವ ಮೂಲಕ ಎಲ್ಲರ ಅಚ್ಚರಿಗೆ ಕಾರಣವಾಗಿದ್ದರು. 1948ರಲ್ಲಿ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಇದೇ ಲಾಲ್ಚೌಕ್‌ನಲ್ಲಿ ತ್ರಿವರ್ಣ ಧ್ವಜ ಹಾರಿಸಿದ್ದರು.

ಅಕ್ಟೋಬರ್‌ನಲ್ಲಿ ಹೂಡಿಕೆದಾರರ ಸಮ್ಮೇಳನ: ಕಣಿವೆ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಅಕ್ಟೋಬರ್‌ 12-14ರ ವರೆಗೆ ಹೂಡಿಕೆದಾರರ ಸಮ್ಮೇಳನ ಆಯೋಜಿಸಲು ನಿರ್ಧರಿಸಲಾಗಿದೆ. ಭಾರತೀಯ ಕೈಗಾರಿಕಾ ಒಕ್ಕೂಟ ಸಮ್ಮೇಳನಕ್ಕೆ ಪ್ರಧಾನ ಪಾಲುದಾರನಾಗಲಿದೆ. ಈ ಕಾರ್ಯಕ್ರಮ ರಾಜ್ಯದಲ್ಲಿ ಯಾವ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಬಹುದು ಎನ್ನುವುದರ ಬಗ್ಗೆ ದಿಕ್ಸೂಚಿ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.

ಸ್ವಾತಂತ್ರ್ಯ ದಿನದ ಬಳಿಕ ನಿರ್ಬಂಧ ತೆರವು?
ಆಗಸ್ಟ್‌ 15ರ ಸ್ವಾತಂತ್ರ್ಯ ದಿನದಂದು ಭದ್ರತಾ ಪಡೆಗಳು ಸಮವಸ್ತ್ರಸಹಿತ ಪಥಸಂಚಲನ ನಡೆಸಲಿದ್ದು, ಅದಾದ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿನ ನಿರ್ಬಂಧಗಳನ್ನು ತೆರವು ಮಾಡಲಾಗುವುದು ಎಂದು ನಾನು ನಂಬಿದ್ದೇನೆ ಎಂದು ರಾಜ್ಯದ ಪ್ರಧಾನ ಕಾರ್ಯದರ್ಶಿ ರೋಹಿತ್‌ ಕನ್ಸಾಲ್ ಹೇಳಿದ್ದಾರೆ. ಮಂಗಳವಾರ ಶ್ರೀನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಶ್ಮೀರದ ಹಲವು ಭಾಗಗಳಲ್ಲಿ ನಿಷೇಧಾಜ್ಞೆ ಸಡಿಲಿಸಲಾಗಿದೆ. ಜಮ್ಮು ಪ್ರದೇಶವು ಬಹುತೇಕ ಎಲ್ಲ ನಿರ್ಬಂಧಗಳಿಂದಲೂ ಮುಕ್ತವಾಗಿದೆ. ಕಾಶ್ಮೀರದ ಕೆಲವು ಕಡೆ ಮಾತ್ರ ನಿರ್ಬಂಧ ಮುಂದುವರಿದಿದೆ. ಜಮ್ಮು-ಕಾಶ್ಮೀರ ಮತ್ತು ಲಡಾಖ್‌ನ ವಿವಿಧ ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಪಥಸಂಚಲನದ ಅಭ್ಯಾಸವು ಪೂರ್ಣಗೊಂಡೊಡನೆ, ಮತ್ತಷ್ಟು ನಿರ್ಬಂಧಗಳನ್ನು ತೆರವು ಮಾಡಲಾಗುತ್ತದೆ ಎಂದಿದ್ದಾರೆ.

ನಿರ್ಬಂಧ ತೆರವಿಗೆ ಸುಪ್ರೀಂ ನಕಾರ
ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡಿದ ನಂತರದಲ್ಲಿ ಕಣಿವೆ ರಾಜ್ಯದಲ್ಲಿ ಹೇರಿರುವ ನಿರ್ಬಂಧಗಳಿಗೆ ಸಂಬಂಧಿಸಿ ತತ್‌ಕ್ಷಣಕ್ಕೆ ಯಾವುದೇ ಆದೇಶ ಹೊರಡಿಸಲು ಸುಪ್ರೀಂ ನಿರಾಕರಿಸಿದೆ. ಕಣಿವೆ ರಾಜ್ಯದ ಸದ್ಯದ ಸ್ಥಿತಿ ಅತ್ಯಂತ ಸೂಕ್ಷ್ಮವಾಗಿದ್ದು, ಅದು ಸಹಜ ಸ್ಥಿತಿಗೆ ಬರುವವರೆಗೆ ನಾವು ಸರ್ಕಾರಕ್ಕೆ ಸಾಕಷ್ಟು ಕಾಲಾವಕಾಶ ನೀಡಬೇಕಾಗುತ್ತದೆ. ಹಾಗಾಗಿ, ಸದ್ಯಕ್ಕೆ ಯಾವ ಆದೇಶವನ್ನೂ ನೀಡುವುದಿಲ್ಲ ಎಂದು ನ್ಯಾ. ಅರುಣ್‌ ಮಿಶ್ರಾ ನೇತೃತ್ವದ ಮೂವರು ನ್ಯಾಯಮೂರ್ತಿಗಳಿದ್ದ ನ್ಯಾಯಪೀಠ ಹೇಳಿದೆ. ಕೋರ್ಟ್‌ನ ಈ ನಿರ್ಧಾರವು ಕೇಂದ್ರ ಸರ್ಕಾರಕ್ಕೆ ನಿರಾಳ ಭಾವ ಮೂಡಿಸಿದೆ. ಕೇಂದ್ರ ಸರ್ಕಾರವು ಹೇರಿರುವ ನಿರ್ಬಂಧಗಳನ್ನು ಪ್ರಶ್ನಿಸಿ ಕಾಂಗ್ರೆಸ್‌ ಕಾರ್ಯಕರ್ತ ತೆಹ್ಸೀನ್‌ ಪೂನಾವಾಲಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮಂಗಳವಾರ ನಡೆಸಿದ ನ್ಯಾಯಪೀಠ, ಜಮ್ಮು-ಕಾಶ್ಮೀರದಲ್ಲಿ ಸಹಜ ವಾತಾವರಣ ಸೃಷ್ಟಿಯಾಗುವವರೆಗೆ ನಾವು ಕಾಯುತ್ತೇವೆ ಎಂದಿದ್ದು, 2 ವಾರಗಳ ಬಳಿಕ ವಿಚಾರಣೆ ನಡೆಸುವುದಾಗಿ ಹೇಳಿದೆ.
ಕೇಂದ್ರದ ವಾದವೇನು?: ಕೇಂದ್ರ ಸರ್ಕಾರದ ಪರ ಮಂಡಿಸಿದ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್, 2016ರ ಜುಲೈನಲ್ಲಿ ಉಗ್ರ ಬುರ್ಹಾನ್‌ ವಾನಿ ಹತ್ಯೆಯ ಬಳಿಕ ಉಂಟಾದ ಪರಿಸ್ಥಿತಿಯನ್ನು ಸುಪ್ರೀಂ ಕೋರ್ಟ್‌ನ ಗಮನಕ್ಕೆ ತಂದು, ‘ಅಂದು ರಾಜ್ಯದಲ್ಲಿ ಸಹಜತೆ ಮರುಕಳಿಸಲು ಮೂರು ತಿಂಗಳುಗಳೇ ಬೇಕಾದವು. ಅಲ್ಲದೆ, ಆಗ ಹಿಂಸಾಚಾರದಿಂದ 47 ಮಂದಿ ಮೃತಪಟ್ಟಿದ್ದರು. ಆದರೆ, ಈಗ ಯಾವೊಬ್ಬರೂ ಜೀವ ಕಳೆದುಕೊಂಡಿಲ್ಲ. ಜಮ್ಮು-ಕಾಶ್ಮೀರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ನೋಡಿಕೊಳ್ಳಬೇಕಾದ್ದು ನಮ್ಮ ಕರ್ತವ್ಯ’ ಎಂದರು. ಅಲ್ಲದೆ, 1990ರಿಂದ ರಾಜ್ಯದಲ್ಲಿ ಉಗ್ರರ ದಾಳಿಗೆ 44 ಸಾವಿರ ಮಂದಿ ಬಲಿಯಾಗಿದ್ದಾರೆ. ಪ್ರತ್ಯೇಕತಾವಾದಿಗಳಿಗೆ ಗಡಿಯಾಚೆಗಿನ ವ್ಯಕ್ತಿಗಳು ಮಾರ್ಗದರ್ಶನ ಹಾಗೂ ಸೂಚನೆಗಳನ್ನು ನೀಡುತ್ತಾರೆ. ಪ್ರಸ್ತುತ ಸಂದರ್ಭದಲ್ಲಿ, ಕಣಿವೆ ರಾಜ್ಯ ಸಹಜ ಸ್ಥಿತಿಗೆ ಬರಲು ಇನ್ನೂ ಸ್ವಲ್ಪ ಸಮಯ ಬೇಕಾಗುತ್ತದೆ. ಅಲ್ಲಿ ಯಾವುದೇ ಮಾನವ ಹಕ್ಕುಗಳ ಉಲ್ಲಂಘನೆ ಆಗದಂತೆ ನೋಡಿಕೊಳ್ಳುತ್ತಿದ್ದೇವೆ ಎಂದೂ ಹೇಳಿದರು.

ವಕೀಲ ಗುರುಸ್ವಾಮಿ ವಿರುದ್ಧ ಕಿಡಿ: ಈ ವೇಳೆ ಅರ್ಜಿದಾರರ ಪರ ವಕೀಲೆ ಡಾ.ಮೇನಕಾ ಗುರು ಸ್ವಾಮಿ, ‘ಎಲ್ಲ ರೀತಿಯ ಸಂವಹನವನ್ನು ಕಡಿತಗೊ ಳಿಸಿರುವ ಕಾರಣ, ಜನರಿಗೆ ಪರಸ್ಪರ ಮಾತನಾಡಿ ಕೊಳ್ಳಲೂ ಅವಕಾಶವಿರದಂಥ ಸ್ಥಿತಿ ಉಂಟಾಗಿದೆ’ ಎಂದು ತಿಳಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ರಾತ್ರಿ ಬೆಳಗಾಗುವುದರೊಳಗೆ ಏನನ್ನೂ ಮಾಡಲು ಸಾಧ್ಯವಿಲ್ಲ. ಸ್ವಲ್ಪ ಸಮಯ ಕಾಯೋಣ. ಯಾವುದೇ ಜೀವ ಹಾನಿ ಆಗದಂತೆ ನೋಡಿಕೊಳ್ಳುವುದು ಸದ್ಯದ ಅಗತ್ಯ ಎಂದಿತು.

ಮತ್ತೆ ಆಕ್ಷೇಪ ವ್ಯಕ್ತಪಡಿಸಿದ ಗುರುಸ್ವಾಮಿ ಅವರು, ‘ಅಲ್ಲಿ ನಿಯೋಜಿಸಲ್ಪಟ್ಟ ಯೋಧರಿಗೆ ಕೂಡ ನಿರ್ಬಂಧ ಹೇರಲಾಗಿದೆ. ಅವರಿಗೂ ಕುಟುಂಬ ಸದಸ್ಯರ ಜತೆ ಮಾತುಕತೆ ನಡೆಸಲು ಅವಕಾಶ ಸಿಗುತ್ತಿಲ್ಲ ಎಂದರು. ಈ ಹೇಳಿಕೆಗೆ ಕೆಂಡವಾದ ನ್ಯಾಯಪೀಠ, ‘ಯೋಧರ ಪರವಾಗಿ ನೀವು ವಾದ ಮಂಡಿಸುತ್ತಿರುವುದೇಕೆ? ಯೋಧರು ಯಾವತ್ತೂ ಶಿಸ್ತು ಕಾಪಾಡಿಕೊಳ್ಳಬೇಕು. ಅವರಿಗೇನಾದರೂ ಸಮಸ್ಯೆಯಿದ್ದರೆ ಅವರೇ ನಮ್ಮ ಮುಂದೆ ಬರುತ್ತಾರೆ. ಅವರ ವಿಷಯಕ್ಕೆ ನೀವೇಕೆ ಮೂಗು ತೂರಿಸುತ್ತಿದ್ದೀರಿ’ ಎಂದು ಖಾರವಾಗಿ ಪ್ರಶ್ನಿಸಿತು.

ಕೊನೆಗೆ, ‘ಸದ್ಯಕ್ಕೆ ನಾವು ಯಾವುದೇ ಆದೇಶ ಹೊರಡಿಸುವುದಿಲ್ಲ. ಈಗಿನ ಸನ್ನಿವೇಶ ಹೇಗಿದೆಯೆಂದರೆ, ಅಲ್ಲಿ ಏನು ನಡೆಯುತ್ತಿದೆ ಎಂಬುದು ಯಾರಿಗೂ ಗೊತ್ತಾಗುತ್ತಿಲ್ಲ. ಸಹಜತೆ ಮರಳಲು ಸ್ವಲ್ಪ ಕಾಲಾವಕಾಶ ನೀಡಬೇಕಾಗುತ್ತದೆ. ಸರ್ಕಾರವು ಪ್ರತಿ ದಿನವೂ ಪರಿಸ್ಥಿತಿ ಪರಿಶೀಲಿಸುತ್ತಿದೆ. ನಾಳೆ ಅಲ್ಲಿ ಏನಾದರೂ ಅಹಿತಕರ ಘಟನೆ ನಡೆದರೆ, ಸರ್ಕಾರವೇ ಹೊಣೆ ಹೊರಬೇಕಾಗುತ್ತ ದಲ್ಲವೇ? ಜನರ ಸ್ವಾತಂತ್ರ್ಯದ ಹಕ್ಕಿನ ವಿಚಾರದಲ್ಲಿ ನಾವು ನಿಮ್ಮೊಂದಿಗಿದ್ದೇವೆ. ಆದರೆ, ನಮಗೆ ಅಲ್ಲಿನ ನೈಜ ಚಿತ್ರಣ ಸಿಗಬೇಕು. 2 ವಾರಗಳ ಬಳಿಕ ವಿಚಾರಣೆ ಮುಂದೂಡುತ್ತಿದ್ದೇವೆ’ ಎಂದು ನ್ಯಾಯಪೀಠ ಹೇಳಿತು.

ಶ್ರೀನಗರದಲ್ಲಿ ತ್ರಿವರ್ಣ ಧ್ವಜ ಹಾರಿಸುವುದು ಅತ್ಯಂತ ಸೂಕ್ಷ್ಮ ವಿಚಾರ. ಅದು ಅಲ್ಲಿರುವ ಕಾಶ್ಮೀರಿಗರನ್ನು ಪ್ರಚೋದನೆ ಮಾಡುವ ಸಾಧ್ಯತೆಯಿದೆ. ಅಮಿತ್‌ ಶಾ ಅವರಿಗೆ ಎಲ್ಲವನ್ನೂ ಈಗಲೇ ಮಾಡಬೇಕೆಂಬ ಆತುರ ಏಕೆ?
•ಮಜೀದ್‌ ಮೆಮನ್‌, ಎನ್‌ಸಿಪಿ ನಾಯಕ
Advertisement

Udayavani is now on Telegram. Click here to join our channel and stay updated with the latest news.

Next