Advertisement

ಪಂಚ ಚುನಾವಣೆಗೆ ಕಣ ಬಿರುಸು

11:43 PM Jan 20, 2022 | Team Udayavani |

ಐದು ರಾಜ್ಯಗಳ ಚುನಾವಣೆಗಾಗಿನ ಸಿದ್ಧತೆ ಗುರುವಾರ ಅಕ್ಷರಶಃ ರಂಗೇರಿದೆ. ಮುಲಾಯಂ ಕುಟುಂಬದ ಮತ್ತೂಬ್ಬ ಸದಸ್ಯ ಬಿಜೆಪಿ ಸೇರಿದ್ದಾರೆ. ಉ.ಪ್ರ.ಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ 2ನೇ ಪಟ್ಟಿಯನ್ನೂ ಬಿಡುಗಡೆ ಮಾಡಿದೆ. ಉತ್ತರಾಖಂಡ, ಗೋವಾಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ.

Advertisement

ಮುಲಾಯಂ ಸಿಂಗ್‌ ಕುಟುಂಬಕ್ಕೆ ಮತ್ತೂಂದು ಆಘಾತ :

ಹೊಸದಿಲ್ಲಿ/ಲಕ್ನೋ: ಉ.ಪ್ರ.ದಲ್ಲಿ ಸಮಾಜವಾದಿ ಪಕ್ಷಕ್ಕೆ ಗುರುವಾರ ಮತ್ತೂಂದು ಆಘಾತ ಉಂಟಾಗಿದೆ. ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್‌ ಯಾದವ್‌ ಅವರ ಭಾವ ಮತ್ತು ಮಾಜಿ ಶಾಸಕ ಪ್ರಮೋದ್‌ ಗುಪ್ತಾ ಲಕ್ನೋದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿ­ದ್ದಾರೆ. ಬುಧವಾರವಷ್ಟೇ ಮುಲಾಯಂ ಅವರ ಸೊಸೆ ಅಪರ್ಣಾ ಯಾದವ್‌ ಅವರು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಇದರ ಜತೆಗೆ ರಾಜ್ಯದಲ್ಲಿ ಕಾಂಗ್ರೆಸ್‌ನ “ಲಡ್ಕೀ  ಹೂಂ; ಲಡ್‌ಸಕ್ತೀ ಹೂಂ’ ಅಭಿಯಾನದ ರೂವಾರಿ ಪ್ರಿಯಾಂಕಾ ಮೌರ್ಯ ಕೂಡ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.  ಇದರ ಜತೆಗೆ ರಾಯ್‌ಬರೇಲಿಯ ಕಾಂಗ್ರೆಸ್‌ ಶಾಸಕಿ ಅದಿತಿ ಸಿಂಗ್‌ ಅವರು ಬಿಜೆಪಿಗೆ ಸೇರಿದ ಎರಡು ತಿಂಗಳ ಬಳಿಕ ಅಧಿಕೃತವಾಗಿ ಪಕ್ಷಕ್ಕೆ ವಿದಾಯ ಹೇಳಿದ್ದಾರೆ.

ಬಿಜೆಪಿ ಸೇರ್ಪಡೆ ಬಳಿಕ ಮಾತನಾಡಿದ ಪ್ರಮೋದ್‌ ಗುಪ್ತಾ ಮುಲಾಯಂ ಅವರನ್ನು ಭೇಟಿಯಾಗಲು ಯಾರಿಗೂ ಅವಕಾಶ ನೀಡಲಾಗುತ್ತಿಲ್ಲ ಎಂದು ದೂರಿದ್ದಾರೆ.

ಕಾಂಗ್ರೆಸ್‌ 2ನೇ ಪಟ್ಟಿ: ಫೆ.10ರಂದು ನಡೆಯಲಿರುವ ಮೊದಲ ಹಂತದ ಚುನಾವಣೆಗಾಗಿ 41 ಮಂದಿಯ 2ನೇ ಪಟ್ಟಿ ಬಿಡುಗಡೆ ಮಾಡಿದೆ. ಅದರಲ್ಲಿ 16 ಮಂದಿ ಮಹಿಳೆಯರಿಗೆ ಅವಕಾಶ ಕೊಡಲಾಗಿದೆ.

Advertisement

ಯೋಗಿ ವಿರುದ್ಧ ಚಂದ್ರ: ಗೋರಖ್‌ಪುರ ನಗರ ಕ್ಷೇತ್ರದಿಂದ  ಸ್ಪರ್ಧಿಸಲಿರುವ ಉ.ಪ್ರ.ಸಿಎಂ ಯೋಗಿ ಆದಿತ್ಯನಾಥ್‌ ವಿರುದ್ಧ ಭೀಮ್‌ ಆರ್ಮಿ ನಾಯಕ ಚಂದ್ರಶೇಖರ ಆಜಾದ್‌ ಸ್ಪರ್ಧಿಸಲಿದ್ದಾರೆ. ಈ ಬಗ್ಗೆ ಅವರು ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಇದೇ ವೇಳೆ, ಸಮಾಜವಾದಿ ಪಕ್ಷದ ವತಿಯಿಂದ ಮುಖ್ಯಮಂತ್ರಿ ವಿರುದ್ಧ ಬ್ರಾಹ್ಮಣ ಸಮುದಾಯದ ನಾಯಕನನ್ನು ಕಣಕ್ಕೆ ಇಳಿಸುವ ಸಾಧ್ಯತೆಗಳಿವೆ.

ಪರ್ರಿಕರ್‌ ಪುತ್ರಗಿಲ್ಲ ಬಿಜೆಪಿ ಟಿಕೆಟ್‌ :

ಗೋವಾ ಚುನಾವಣೆಗಾಗಿ ಬಿಜೆಪಿ 34 ಮಂದಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಮಾಜಿ ಸಿಎಂ ದಿ| ಮನೋಹರ ಪರ್ರಿಕರ್‌ ಪುತ್ರ ಉತ್ಪಲ್‌ ಪರ್ರಿಕರ್‌ಗೆ ಟಿಕೆಟ್‌ ನೀಡಲಾಗಿಲ್ಲ. ಪಣಜಿ ಕ್ಷೇತ್ರದಿಂದ ಅಟಾನ್ಸಿಯೋ ಬಾಬುಶ್‌ ಮಾನ್ಸೆರೆಟ್ಟೆ ಅವರಿಗೆ ಟಿಕೆಟ್‌ ನೀಡಲಾಗಿದೆ. ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಸಾಂಕೆಲಿಂನಿಂದ ಸ್ಪರ್ಧಿಸಲಿ­ದ್ದಾರೆ. ಟಿಕೆಟ್‌ ನಿರಾಕರಿಸಿದ್ದರಿಂದ ಕ್ರುದ್ಧರಾಗಿರುವ ಉತ್ಪಲ್‌ ಅವರನ್ನು ಸಮಾಧಾನಪಡಿಸಲು ಬಿಜೆಪಿ ಮುಖಂಡರು ಮುಂದಾಗಿ­ದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಉತ್ಪಲ್‌ ಶೀಘ್ರದಲ್ಲಿಯೇ ತಮ್ಮ ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದಾರೆ. ಮನೋಹರ್‌ ಪರ್ರಿಕರ್‌ ಪುತ್ರನಿಗೆ ಟಿಕೆಟ್‌ ನಿರಾಕರಿಸಿದ ಬಗ್ಗೆ  ಆಪ್‌ ಸಂಚಾಲಕ ಅರವಿಂದ ಕೇಜ್ರಿವಾಲ್‌ ಟೀಕಿಸಿದ್ದಾರೆ. ಬಿಜೆಪಿ ತನ್ನ ಅಗತ್ಯ ಪೂರೈಸುವ ವರೆಗೆ ಮುಖಂಡರಿಗೆ ಮನ್ನಣೆ ನೀಡುತ್ತದೆ. ಅನಂತರ ನಿರ್ಲಕ್ಷಿಸುತ್ತದೆ. ಉತ್ಪಲ್‌ ಮನಸ್ಸು ಮಾಡಿದರೆ ಆಪ್‌ನಿಂದ ಸ್ಪರ್ಧಿಸಬಹುದು ಎಂದಿದ್ದಾರೆ. ಅವರ ಆಹ್ವಾನಕ್ಕೆ ಸಿಎಂ ಪ್ರಮೋದ್‌ ಸಾವಂತ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಹತ್ತು ಶಾಸಕರಿಗಿಲ್ಲ ಟಿಕೆಟ್‌ :

ಉತ್ತರಾಖಂಡದಲ್ಲಿ 59 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಖತಿಮಾ ಕ್ಷೇತ್ರದಿಂದಲೇ ಸ್ಪರ್ಧಿಸಲಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಮಾಜಿ ಸಿಎಂ ಬಿ.ಸಿ.ಖಂಡೂರಿ ಪುತ್ರಿ ಸೇರಿದಂತೆ ಹತ್ತು ಮಂದಿ ಹಾಲಿ ಶಾಸಕರಿಗೆ ಟಿಕೆಟ್‌ ನಿರಾಕರಿಸಲಾಗಿದೆ. ಪಟ್ಟಿಯಲ್ಲಿ 15 ಮಂದಿ ಬ್ರಾಹ್ಮಣ ಸಮುದಾ­ಯ­­ದವರಿಗೆ, ವ್ಯಾಪಾರಿ ಸಮುದಾಯದ ಮೂವರಿಗೆ ಟಿಕೆಟ್‌ ನೀಡಲಾಗಿದೆ. ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಪಟ್ಟಿಯಲ್ಲಿ ಆರು ಮಂದಿ ಮಹಿಳೆಯರು, 13 ಮಂದಿ ಎಸ್‌ಸಿ ಸಮುದಾಯಕ್ಕೆ ಸೇರಿದವರು ಸೇರಿದ್ದಾರೆ ಎಂದರು. ಪಕ್ಷದಿಂದ ಉಚ್ಚಾಟನೆಗೊಂಡ ಮಾಜಿ ಸಚಿವ ಹರಕ್‌ ಸಿಂಗ್‌ ರಾವತ್‌ ಸ್ಪರ್ಧಿಸಿರುವ ಕೋಟದ್ವಾರ್‌ ಕ್ಷೇತ್ರಕ್ಕೆ ಸದ್ಯಕ್ಕೆ ಯಾರನ್ನೂ ಹೆಸರಿಸಲಾಗಿಲ್ಲ.

ಧುರಿಯಿಂದ ಭಗವಂತ್‌:

ಪಂಜಾಬ್‌ನಲ್ಲಿ ಆಮ್‌ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್‌ ಸಿಂಗ್‌ ಮಾನ್‌ ಧುರಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಪಕ್ಷದ ನಾಯಕ ರಾಘವ್‌ ಛಡ್ಡಾ ಈ ಮಾಹಿತಿ ನೀಡಿದ್ದಾರೆ. ಧುರಿ ಕ್ಷೇತ್ರವನ್ನು  ಸದ್ಯ ಕಾಂಗ್ರೆಸ್‌ನ ದಲ್ವೀರ್‌ ಸಿಂಗ್‌ ಗೋಲ್ಡಿ ಪ್ರತಿನಿಧಿಸುತ್ತಿದ್ದಾರೆ. ಪಕ್ಷದ ಆಯ್ಕೆಯ ಬಗ್ಗೆ ಭಗವಂತ್‌ ಸಿಂಗ್‌ ಮಾನ್‌ ಫೇಸ್‌ಬುಕ್‌ ಮೂಲಕ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಬಿಎಸ್‌ಪಿ ಕೂಡ 14 ಮಂದಿಯ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಕರ್ಹಾಲ್‌ನಿಂದ ಅಖೀಲೇಶ್‌ ಸ್ಪರ್ಧೆ? :

ಸಮಾಜವಾದಿ ಪಕ್ಷದ ಪ್ರಭಾವ ಹೆಚ್ಚಾಗಿರುವ ಮೈನ್‌ಪುರಿ ಜಿಲ್ಲೆಯ ಕರ್ಹಾಲ್‌ನಿಂದ ಅಖೀಲೇಶ್‌ ಕಣಕ್ಕೆ ಇಳಿಯುವ ಸಾಧ್ಯತೆ­ಗಳಿವೆ. ಏಕೆಂದರೆ ಮೈನ್‌ಪುರಿ ಜಿಲ್ಲೆ ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್‌ ಯಾದವ್‌ ಅವರ ರಾಜಕೀಯ ಕಾರ್ಯಕ್ಷೇತ್ರವಾಗಿದ್ದ ಜಿಲ್ಲೆ. 1993ರಿಂದ ಮೈನ್‌ಪುರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಐದೂ ವಿಧಾನಸಭೆ ಕ್ಷೇತ್ರಗಳಲ್ಲಿ ಅಖೀಲೇಶ್‌ ಯಾದವ್‌ ಅವರ ಪಕ್ಷದ ಅಭ್ಯರ್ಥಿಗಳೇ ಗೆದ್ದು ಬರುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next