Advertisement

ರಾಜ್ಯದಲ್ಲಿ ಹೊಸದಾಗಿ ಐದು ಉಗ್ರ ನಿಗ್ರಹ ಘಟಕ

12:00 AM Feb 16, 2019 | Team Udayavani |

ಬೆಂಗಳೂರು: ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಮೇಲೆ ಐಸಿಸ್‌ ಹಾಗೂ ಇತರೆ ಉಗ್ರ ಸಂಘಟನೆಗಳು ಕಣ್ಣಿಟ್ಟಿವೆ ಎಂಬ ಸ್ಫೋಟಕ ಮಾಹಿತಿಗಳ ಬೆನ್ನಲ್ಲೇ ರಾಜ್ಯ ಪೊಲೀಸ್‌ ಇಲಾಖೆ ಭಯೋತ್ಪಾದನಾ ಚಟುವಟಿಕೆಗಳು, ಶಂಕಿತ ಉಗ್ರರ ಚಲನವಲನಗಳ ಮೇಲೆ ತೀವ್ರ ನಿಗಾ ವಹಿಸಲು ಹೊಸದಾಗಿ ಐದು ಉಗ್ರ ನಿಗ್ರಹ ಘಟಕ (ಎಟಿಎಸ್‌)ಗಳನ್ನು ಸ್ಥಾಪಿಸಲು ನಿರ್ಧರಿಸಿದೆ.

Advertisement

ಬೆಂಗಳೂರು, ಮಂಗಳೂರು, ಮೈಸೂರು, ಹುಬ್ಬಳ್ಳಿ -ಧಾರವಾಡ, ಬೆಳಗಾವಿ ಪೊಲೀಸ್‌ ಆಯುಕ್ತರ ವಲಯಗಳ ಕೇಂದ್ರ ಅಪರಾಧ ವಿಭಾಗ (ಸಿಸಿಬಿ)ಗಳಲ್ಲಿ ಪ್ರತ್ಯೇಕವಾಗಿ ಎಟಿಎಸ್‌ ಘಟಕಗಳು ತಿಂಗಳಾಂತ್ಯಕ್ಕೆ ಅಸ್ತಿತ್ವಕ್ಕೆ ಬರಲಿವೆ ಎಂದು ವಿಶ್ವಸನೀಯ ಮೂಲಗಳು “ಉದಯವಾಣಿ’ಗೆ ತಿಳಿಸಿವೆ. ಉಗ್ರ ಚಟುವಟಿಕೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಲು ರಾಜ್ಯ ಆಂತರಿಕ ಭದ್ರತಾ ದಳಕ್ಕೆ (ಐಎಸ್‌ಡಿ) ಸಾಥ್‌ ನೀಡಲಿವೆ.

ಎಟಿಎಸ್‌ ಘಟಕಗಳನ್ನು ಸ್ಥಾಪಿಸಲು ಶೀಘ್ರವೇ ಅಗತ್ಯ ಕ್ರಮಗಳನ್ನು ವಹಿಸುವಂತೆ ರಾಜ್ಯ ಪೊಲೀಸ್‌ ಇಲಾಖೆ ಫೆ.7ರಂದು ಆಯಾ ವಲಯ ಪೊಲೀಸ್‌ ಕಮಿಷನರ್‌ಗಳಿಗೆ ಸುತ್ತೋಲೆ ಹೊರಡಿಸಿದೆ. ಈಗಾಗಲೇ ಬೆಂಗಳೂರು ಸಿಸಿಬಿ ವಿಭಾಗದಲ್ಲಿ ಎಟಿಎಸ್‌ ಕಾರ್ಯ ನಿರ್ವಹಿಸುತ್ತಿದೆ. ಎಸಿಪಿ ನೇತೃತ್ವದಲ್ಲಿ ಎಟಿಎಸ್‌ ಕಾರ್ಯ ನಿರ್ವಹಿಸಲಿದ್ದು, ಈ ತಂಡ ಸಂಪೂರ್ಣವಾಗಿ ಉಗ್ರ ಚಟುವಟಿಕೆಗಳ ಮೇಲೆಯೇ ನಿಗಾವಹಿಸಲಿದೆ. ಜತೆಗೆ, ಗುಪ್ತಚರ ಇಲಾಖೆಗೂ ಕಾಲಕಾಲಕ್ಕೆ ನಿಖರ ಮಾಹಿತಿ ಲಭ್ಯವಾಗಲಿದೆ. ಈ ಉದ್ದೇಶದಿಂದ ಎಟಿಎಸ್‌ ಸ್ಥಾಪನೆಯ ನಿರ್ಣಯ ಕೈಗೊಳ್ಳಲಾಗಿದೆ. ಮುಂಬೈ ಮತ್ತು ಪುಣೆ ಎಟಿಎಸ್‌ ಮಾದರಿಯಲ್ಲಿ ಇನ್ನು ಉಗ್ರ ನಿಗ್ರಹ ದಳಗಳನ್ನು ಬಲಪಡಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.

ರಾಜ್ಯ ಎಚ್ಚೆತ್ತುಕೊಳ್ಳಲು ಕಾರಣ ಏನು?: ಕಳೆದ ಮೂರು ವರ್ಷಗಳ ಅವಧಿಯಲ್ಲಿ ಎನ್‌ಐಎ ಅಧಿಕಾರಿಗಳು ಬೆಂಗಳೂರು ಚರ್ಚ್‌ಸ್ಟ್ರೀಟ್‌ ಬಾಂಬ್‌ ಸ್ಫೋಟ ಪ್ರಕರಣದ ಆರೋಪಿ ಆಲಂ ಜೆಬ್‌ ಆಫ್ರಿದಿ, ಐಸಿಸ್‌ ಶಂಕಿತ ಉಗ್ರರು, ಜೆಎಂಬಿ ಉಗ್ರ ಕೌಸರ್‌ನನ್ನು ಬಂಧಿಸಿದ್ದಾರೆ. ಇತ್ತೀಚೆಗಷ್ಟೇ ಕರ್ನಾಟಕದ ಹಲವು ಯುವಕರು ಉಗ್ರ ಸಂಘಟನೆ ಸೇರಿರುವ ಬಗ್ಗೆಯೂ ಎನ್‌ಐಎ ತಿಳಿಸಿತ್ತು. ಹಲವು ಉಗ್ರರು ರಾಜ್ಯವನ್ನು ಅಡಗುತಾಣವನ್ನಾಗಿ ಮಾಡಿಕೊಂಡ ವಿಚಾರ ಇಲಾಖೆಯ ನಿದ್ದೆಗೆಡಿಸಿತ್ತು. ಜತೆಗೆ, ರಾಜಧಾನಿ ಬೆಂಗಳೂರು ಹಾಗೂ ಹೊರವಲಯದ ಪ್ರದೇಶಗಳು ಉಗ್ರರ ಸ್ಲಿàಪರ್‌ ಸೆಲ್‌ಗ‌ಳಾಗುತ್ತಿವೆ ಎಂಬ ಬಲವಾದ ಆರೋಪಗಳು ಕೇಳಿ ಬಂದಿದ್ದವು.

ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಪೊಲೀಸ್‌ ಇಲಾಖೆ, ಜೆಎಂಬಿ ಉಗ್ರ ಕೌಸರ್‌ ಬಂಧನದ ಬಳಿಕ ಕೇರಳ, ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳ ಡಿಜಿಗಳ ಜತೆ ಸಭೆ ನಡೆಸಿ ದಕ್ಷಿಣ ಭಾರತದಲ್ಲಿ ಉಗ್ರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸುದೀರ್ಘ‌ ಚರ್ಚೆ ನಡೆಸಿತ್ತು. ಈ ಚರ್ಚೆಯ ಭಾಗವಾಗಿ ರಾಜ್ಯದಲ್ಲಿ ಎಲ್ಲ ಕಮಿಷನರೇಟ್‌ ವ್ಯಾಪ್ತಿಗಳಲ್ಲಿಯೂ ಎಟಿಎಸ್‌ ಘಟಕಗಳನ್ನು ಸ್ಥಾಪಿಸುವ ಸಂಬಂಧ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement

ರಾಜ್ಯದಲ್ಲಿ ಕಟ್ಟೆಚ್ಚರ 

ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ  ಮೊಹಮದ್‌ ಸಂಘಟನೆ ನಡೆಸಿದ ಭೀಕರ ಉಗ್ರ ಕೃತ್ಯದ
ಬೆನ್ನಲ್ಲೇ ರಾಜ್ಯ ಪೊಲೀಸ್‌ ಇಲಾಖೆಯೂ ಎಚ್ಚೆತ್ತುಕೊಂಡಿದೆ. ಕೇಂದ್ರ ಗೃಹ ಸಚಿವಾಲಯದಿಂದ ಎಲ್ಲಾ ರಾಜ್ಯಗಳಿಗೂ ಕಟ್ಟೆಚ್ಚರ ಸಂದೇಶ ರವಾನೆ ಕಳುಹಿಸಿದ್ದು, ರಾಜ್ಯದಲ್ಲೂ ಆಯಕಟ್ಟಿನ ಪ್ರದೇಶಗಳಲ್ಲಿ
ಹದ್ದಿನ ಕಣ್ಣಿಡಲಾಗಿದೆ.

ರಾಜ್ಯದಲ್ಲಿ ಯಾವುದೇ ರೀತಿಯ ಉಗ್ರ ಚಟುವಟಿಕೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಬೇಕು,
ಯಾವೆಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದರ ಬಗ್ಗೆ ಶುಕ್ರವಾರ ಹಿರಿಯ ಪೊಲೀಸ್‌ ಅಧಿಕಾರಿಗಳ ಸಭೆ ನಡೆದಿದೆ. ರಾಜ್ಯದಲ್ಲಿ ಈಗಾಗಲೇ ಸಾಕಷ್ಟು ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಯಾವುದೇ ರೀತಿಯ ಶಂಕೆಯೂ ಇಲ್ಲ. ಆದರೂ, ಮತ್ತಷ್ಟು ಪರಿಣಾಮಕಾರಿಯಾಗಿ ಯಾವ ಕ್ರಮಗಳನ್ನು ಅನುಸರಿಸಬಹುದು ಎಂಬುದರ ಬಗ್ಗೆ ಸಭೆ ನಡೆಸಲಾಗಿದೆ ಎಂದು ಹೆಸರು ಹೇಳಲು ಇಚ್ಚಿಸಿದ ಅಧಿಕಾರಿಯೊಬ್ಬರು ತಿಳಿಸಿದರು. ಬೆಂಗಳೂರು, ಹುಬ್ಬಳ್ಳಿ, ಮಂಗಳೂರು, ಮೈಸೂರು ಸೇರಿದಂತೆ ಪ್ರಮುಖ ನಗರಗಳು, ರಾಜ್ಯದ ಎಲ್ಲಾ ವಿಮಾನ ನಿಲ್ದಾಣಗಳು ಮತ್ತು ಇತರ ಸೂಕ್ಷ್ಮ ಪ್ರದೇಶಗಳಲ್ಲಿ ಎಚ್ಚರಿಕೆ ವಹಿಸಲು ಪೊಲೀಸ್‌ ಇಲಾಖೆ ಸೂಚಿಸಿದೆ.

ಮಂಜುನಾಥ ಲಗುಮೇನಹಳ್ಳಿ 

Advertisement

Udayavani is now on Telegram. Click here to join our channel and stay updated with the latest news.

Next