Advertisement

ಇಂದಿರಾ ಕ್ಯಾಂಟೀನ್‌ನಲ್ಲಿ ಮೊದಲ ದಿನ ರಾತ್ರಿ ಊಟ ಉಚಿತ

11:15 AM Aug 15, 2017 | Team Udayavani |

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ “ಇಂದಿರಾ ಕ್ಯಾಂಟೀನ್‌’ ಯೋಜನೆಗೆ ಆ.16ರಂದು ಚಾಲನೆ ದೊರೆಯಲಿದ್ದು, ಮೊದಲ ದಿನ ಎಲ್ಲ ಕ್ಯಾಂಟೀನ್‌ಗಳಲ್ಲಿ ರಾತ್ರಿ ಊಟವನ್ನು ಉಚಿತವಾಗಿ ನೀಡಲಾಗುತ್ತಿದೆ. ಕ್ಯಾಂಟೀನ್‌ಗೆ ಚಾಲನೆ ನೀಡಲಿರುವ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ಗಾಂಧಿ ಸಹ ಅಲ್ಲೇ ಆಹಾರ ಸೇವಿಸಲಿದ್ದಾರೆ.

Advertisement

ಕ್ಯಾಂಟೀನ್‌ನಲ್ಲಿ ಪೂರೈಕೆ ಮಾಡುವ ಆಹಾರದ ಗುಣಮಟ್ಟ ಪರೀಕ್ಷಿಸಲು ರಾಹುಲ್‌ಗಾಂಧಿಯವರು ಅಂದು ಅಲ್ಲೇ ಆಹಾರ ಸೇವನೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮೊದಲ ದಿನ ಎಲ್ಲ ಕ್ಯಾಂಟೀನ್‌ಗಳಲ್ಲಿ ಉಚಿತವಾಗಿ ಊಟ ವಿತರಣೆ ಮಾಡುವಂತೆ ಮುಖ್ಯಮಂತ್ರಿಗಳು ಪಾಲಿಕೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕ್ಯಾಂಟೀನ್‌ಗಳ ಚಾಲನೆ ಹಾಗೂ ಅಲಂಕಾರಗೊಳಿಸಲು ಬಿಬಿಎಂಪಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಜಯನಗರ ವಾರ್ಡ್‌ನ ಕನಕನಪಾಳ್ಯದಲ್ಲಿ ನಿರ್ಮಿಸಲಾಗಿರುವ ಕ್ಯಾಂಟೀನ್‌ ಉದ್ಘಾಟಿಸುವ ಮೂಲಕ ಇಂದಿರಾ ಕ್ಯಾಂಟೀನ್‌ ಯೋಜನೆಗೆ ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರು ಸಾಂಕೇತಿಕವಾಗಿ ಚಾಲನೆ ನೀಡಲಿದ್ದಾರೆ. ಆನಂತರದಲ್ಲಿ ಎಲ್ಲ 101 ಕ್ಯಾಂಟೀನ್‌ಗಳು ಆರಂಭವಾಗಲಿದ್ದು, ಪ್ರತಿ ಕ್ಯಾಂಟೀನ್‌ನಲ್ಲಿ ತಲಾ 500 ಮಂದಿಗೆ ರಾತ್ರಿಯ ಊಟವನ್ನು ಉಚಿತವಾಗಿ ವಿತರಿಸಲಾಗುತ್ತದೆ. ಇದರೊಂದಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸುಮಾರು 5 ಸಾವಿರ ಮಂದಿಗೂ ಇದೇ ವೇಳೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. 

ಬಿಬಿಎಂಪಿ ವ್ಯಾಪ್ತಿಯ 105 ಕಡೆಗಳಲ್ಲಿ ಕ್ಯಾಂಟೀನ್‌ ಕಾಮಗಾರಿಗಳ ಪೈಕಿ ಈಗಾಗಲೇ 95ಕ್ಕೂ ಹೆಚ್ಚು ಕಡೆಗಳಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು, ಉಳಿದ ಕಡೆಗಳಲ್ಲಿ ಸಿವಿಲ್‌ ಕಾಮಗಾರಿಗಳು ಬಾಕಿ ಉಳಿದಿವೆ. ಮಂಗಳವಾರ (ಆ.15) ಸಂಜೆ ವೇಳೆಗೆ ಬಿಬಿಎಂಪಿಗೆ ಎಲ್ಲ ಕ್ಯಾಂಟೀನ್‌ಗಳು ಹಸ್ತಾಂತರವಾಗಲಿದ್ದು, ಊಟ ವಿತರಣೆಗೆ ಅಗತ್ಯ ಸಿದ್ಧತೆಗಳನ್ನು ಆಹಾರ ಪೂರೈಕೆ ಗುತ್ತಿಗೆ ಪಡೆದ ಸಂಸ್ಥೆಗಳು ಮಾಡಿಕೊಳ್ಳಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಟಾಪ್‌ 10 ಕ್ಯಾಂಟೀನ್‌ಗಳಿಗೆ ಪ್ರಶಸ್ತಿ
ವಿವಿಧ ವಾರ್ಡ್‌ಗಳಲ್ಲಿ ನಿರ್ಮಿಸುತ್ತಿರುವ ಇಂದಿರಾ ಕ್ಯಾಂಟೀನ್‌ಗಳಲ್ಲಿ ಅತ್ಯುತ್ತಮವಾದ 10 ಕ್ಯಾಂಟೀನ್‌ಗಳಿಗೆ ಪ್ರಶಸ್ತಿ ನೀಡಲು ಪಾಲಿಕೆಯ ಹಿರಿಯ ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಕ್ಯಾಂಟೀನ್‌ ನಿರ್ಮಾಣಕ್ಕೆ ಸ್ಥಳ ಆಯ್ಕೆ, ಶೀಘ್ರ ಕಾಮಗಾರಿಗಳ ಪೂರ್ಣ, ಕ್ಯಾಂಟೀನ್‌ ಸುಂದರೀಕರಣ ಹಾಗೂ ಜನರಿಗೆ ಉಪಯೋಗವಾಗುತ್ತಿದೆಯೇ ಎಂಬ ಅಂಶಗಳನ್ನು ಆಧರಿಸಿ 10 ಕ್ಯಾಂಟೀನ್‌ಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

Advertisement

ಪ್ರಚಾರಕ್ಕಾಗಿ ಎಲ್‌ಇಡಿ ಟಿವಿ
ನಗರದಲ್ಲಿ ನಿರ್ಮಾಣವಾಗುತ್ತಿರುವ ಪ್ರತಿಯೊಂದು ಕ್ಯಾಂಟೀನ್‌ನಲ್ಲಿ ಎಲ್‌ಇಡಿ ಟಿವಿ ಅಳವಡಿಸಿಲು ಬಿಬಿಎಂಪಿ ಮುಂದಾಗಿದೆ. ಆ ಮೂಲಕ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ವತಿಯಿಂದ ಸಾರ್ವಜನಿಕರಿಗಾಗಿ ರೂಪಿಸಲಾಗಿರುವ ಯೋಜನೆಗಳ ಕುರಿತು ಮಾಹಿತಿ ನೀಡಲಾಗುತ್ತದೆ. ಇದರೊಂದಿಗೆ ಸರ್ಕಾರದ ನಾಲ್ಕು ವರ್ಷಗಳ ಸಾಧನೆಯ ಕುರಿತ ಮಾಹಿತಿಯನ್ನು ಜನರಿಗೆ ತಲುಪಿಸುವುದು ಇದರ ಉದ್ದೇಶವಾಗಿದೆ. 

ಅಡುಗೆ ಮನೆಗಳ ಪುನರ್‌ ವಿಂಗಡಣೆ
ಪಾಲಿಕೆಯ ವ್ಯಾಪ್ತಿಯಲ್ಲಿ ನಿರ್ಮಿಸಲಾಗುತ್ತಿರುವ 198 ಇಂದಿರಾ ಕ್ಯಾಂಟೀನ್‌ಗಳಿಗೆ ಆಹಾರ ಸರಬರಾಜು ಮಾಡಲು 27 ಕ್ಯಾಂಟೀನ್‌ ನಿರ್ಮಿಸಲು ಉದ್ದೇಶಿಸಲಾಗಿದೆ. ಆದರೆ, ಸದ್ಯ ನಿರ್ಮಿಸಲು ಉದ್ದೇಶಿಸಿರುವ ಸ್ಥಳಗಳು ಅವೈಜ್ಞಾನಿಕವಾಗಿರುವ ಹಿನ್ನೆಲೆಯಲ್ಲಿ ಅಡುಗೆ ಮನೆಗಳನ್ನು ಪುನರ್‌ ವಿಂಗಡಣೆ ಮಾಡಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ. ನಗರದಲ್ಲಿರುವ ಎಲ್ಲ ಕ್ಯಾಂಟೀನ್‌ಗಳಿಗೆ ಶೀಘ್ರ ಆಹಾರ ಪೂರೈಕೆಗೆ ಅನುಕೂಲವಾಗುವಂತಹ ಸ್ಥಳಗಳಲ್ಲಿ ಅಡುಗೆ ಮನೆಗಳನ್ನು ನಿರ್ಮಿಸುವಂತೆ ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 

ಆಯುಕ್ತರ ನೈಟ್‌ ರೌಂಡ್ಸ್‌
ಆಗಸ್ಟ್‌ 16ರೊಳಗೆ 101 ಕ್ಯಾಂಟೀನ್‌ಗಳ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಬೇಕಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರು ನಿತ್ಯ ಒಂದೊಂದು ವಲಯದಲ್ಲಿ ನಿರ್ಮಾಣವಾಗುತ್ತಿರುವ ಕ್ಯಾಂಟೀನ್‌ಗಳನ್ನು ರಾತ್ರಿ ವೇಳೆ ಪರಿಶೀಲನೆ ನಡೆಸುತ್ತಿದ್ದಾರೆ. ಭಾನುವಾರ ರಾತ್ರಿ ಅವರು ರಾಜರಾಜೇಶ್ವರಿ ನಗರ ವಲಯದಲ್ಲಿ ನಿರ್ಮಾಣವಾಗುತ್ತಿರುವ ಕ್ಯಾಂಟೀನ್‌ಗಳನ್ನು ಪರಿಶೀಲಿಸಿ, ಆ.15ರೊಳಗೆ ಕಾಮಗಾರಿ ಮುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಈಗಾಗಲೇ 95ಕ್ಕೂ ಹೆಚ್ಚು ಕ್ಯಾಂಟೀನ್‌ಗಳ ಕಾಮಗಾರಿ ಪೂರ್ಣಗೊಂಡಿದ್ದು, ಉಳಿದ ಕ್ಯಾಂಟೀನ್‌ಗಳ ಕಾಮಗಾರಿ ಮಂಗಳವಾರ ಸಂಜೆ ವೇಳೆ ಪೂರ್ಣಗೊಳ್ಳಲಿದೆ. ಕಾಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲು ರಾತ್ರಿ ವೇಳೆ ಪರಿಶೀಲನೆ ನಡೆಸಲಾಗುತ್ತಿದೆ. ಇದರೊಂದಿಗೆ ಆ.16ರಂದು ಇಂದಿರಾ ಕ್ಯಾಂಟೀನ್‌ಗೆ ಚಾಲನೆ ದೊರೆಲಿದ್ದು, ರಾತ್ರಿ ಎಲ್ಲ 101 ಕ್ಯಾಂಟೀನ್‌ಗಳಲ್ಲಿ ಉಚಿತ ಊಟ ನೀಡಲಾಗುವುದು.
-ಎನ್‌.ಮಂಜುನಾಥ ಪ್ರಸಾದ್‌, ಬಿಬಿಎಂಪಿ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next