Advertisement

ಕಲಬುರಗಿಯಲ್ಲಿ ಮತ್ತೆ ಗುಂಡಿನ ಸದ್ದು

06:00 AM Dec 16, 2017 | Team Udayavani |

ಕಲಬುರಗಿ: ನಗರದಲ್ಲಿ ಮತ್ತೆ ಗುಂಡಿನ ಸದ್ದು ಮೊಳಗಿದೆ. ದರೋಡೆ, ಕೊಲೆ ಸೇರಿ ಇತರ ಅಪರಾಧಗಳಲ್ಲಿ ಭಾಗಿಯಾಗಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಕುಖ್ಯಾತ ರೌಡಿ ಯಶ್ವಂತರಾಯ ಶ್ರೀಪತಿ ಸುಲ್ತಾನಪುರನನ್ನು ಬಂಧಿಸಲು ಪೊಲೀಸರು ಗುಂಡು ಹಾರಿಸಿದ್ದಾರೆ. ಈತನ ಪ್ರತಿ ದಾಳಿಗೆ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ. ಮೂವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ರೌಡಿ ಯಶ್ವಂತರಾಯ, ಜಿಲ್ಲೆಯ ಕಮಲಾಪುರ ಮೂಲಕ ತಾಜಸುಲ್ತಾನಪುರಕ್ಕೆ ಬರುತ್ತಿದ್ದಾನೆ ಎನ್ನುವ ಖಚಿತ ಮಾಹಿತಿ ಅರಿತು ಕಮಲಾಪುರದಲ್ಲಿ ರಸ್ತೆಗೆ ಬ್ಯಾರಿಕೇಡ್‌ಗಳನ್ನು ಹಾಕಲಾಗಿತ್ತು. ಆದರೆ ಬ್ಯಾರಿಕೇಡ್‌ಗಳಿಗೆ ಡಿಕ್ಕಿ ಹೊಡೆದು ಆತ ಮುಂದೆ ಬಂದಿದ್ದ. ತದನಂತರ ತಾವರಗೇರಾ ಕ್ರಾಸ್‌ ಬಳಿ ಪೊಲೀಸರು ಅಡ್ಡಗಟ್ಟಿ ವಾಹನ ತಡೆಯಲು ಯತ್ನಿಸಿದಾಗ ಪೊಲೀಸರ ಮೇಲೆಯೇ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದ. ಪೇದೆಗಳಾದ ಕುಶನ್‌ ಹಾಗೂ ಕುಪೇಂದ್ರ ಎನ್ನುವವರು ಈ ವೇಳೆ ಗಾಯಗೊಂಡಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮೀಣ ಪಿಎಸ್‌ಐ ಚಂದ್ರಶೇಖರ ತಿಗಡಿ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ. ತಿಗಡಿ ಅವರು ಹಾರಿಸಿದ ಗುಂಡು ಯಶ್ವಂತರಾಯ ಎಡಕಾಲಿಗೆ ತಗುಲಿದೆ. ಗುಂಡು ತಗುಲಿದ ತಕ್ಷಣ ಸ್ಥಳದಲ್ಲಿಯೇ ಆತ ಕುಸಿದು ಬಿದ್ದಿದ್ದು, ವಶಕ್ಕೆ ಪಡೆಯಲಾಗಿದೆ. ಕಲಬುರಗಿ ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಪೊಲೀಸರ ಹಾಗೂ ರೌಡಿಗಳ ನಡುವೆ ನಡೆದ 8ನೇ ಗುಂಡಿನ ದಾಳಿ ಪ್ರಕರಣ ಇದಾಗಿದೆ.

ರೌಡಿ ಯಶ್ವಂತರಾಯ ಅಕ್ಟೋಬರ್‌ 7ರಂದು ನಗರದ ತಾಜಸುಲ್ತಾನಪುರದ ವಿದ್ಯುತ್‌ ಗುತ್ತಿಗೆದಾರ ಮೋನಪ್ಪ ಸುತ್ತಾರ ಎನ್ನುವವರನ್ನು ಅಪಹರಿಸಿ 6 ಲಕ್ಷ ರೂ. ಪಡೆದಿದ್ದಲ್ಲದೇ ಮೋನಪ್ಪನನ್ನು ಗುಂಡು ಹಾರಿಸಿ ಹತ್ಯೆ ಮಾಡಿದ್ದ. ಅದಲ್ಲದೇ ಹಲವಾರು ದರೋಡೆ, ಡಕಾಯಿತಿ, ನಾಡಪಿಸ್ತೂಲು ಮಾರಾಟ ಸೇರಿದಂತೆ ಇತರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಕಳೆದ ಹಲವಾರು ದಿನಗಳಿಂದ ಯಶ್ವಂತರಾಯನ ಬಂಧನಕ್ಕೆ ಜಾಲ ಬೀಸಲಾಗಿತ್ತು. ಈಶಾನ್ಯ ವಲಯ ಐಜಿಪಿ ಅಲೋಕ ಕುಮಾರ್‌ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಸ್ಪತ್ರೆಗೂ ಭೇಟಿ ನೀಡಿ ಗಾಯಗೊಂಡ ಪೇದೆಗಳ ಆರೋಗ್ಯ ವಿಚಾರಿಸಿದ್ದಾರೆ. ಎಸ್ಪಿ ಶಶಿಕುಮಾರ ಸೇರಿದಂತೆ ಹಿರಿಯ ಅಧಿಕಾರಿಗಳು ಜತೆಗಿದ್ದರು. ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next