Advertisement

ಕಾಡಿಗೆ ಬೆಂಕಿ ಬಿದ್ದರೆ ನಂದಿಸಲು ಸೊಪ್ಪು-ಸದೆಯೇ ಗತಿ!

03:50 AM Feb 20, 2017 | Harsha Rao |

ಬೆಂಗಳೂರು: ನಮ್ಮ ಸಹೋ ದ್ಯೋಗಿ ಕಾಡ್ಗಿಚ್ಚು ನಂದಿಸಲು ಹೋಗಿ ಕಾಡಲ್ಲೇ ಸುಟ್ಟು ಕರಕಲಾಗಿ ಹೋಗಿದ್ದಾರೆ. ಆದರೆ, ನಮ್ಮವರು ಮಾತ್ರ ಇನ್ನೂ ಬಂಡೀಪುರ ಅಭಯಾರಣ್ಯದಲ್ಲಿ  “ಸೊಪ್ಪು-ಸೌದೆ’ ಹಿಡಿದು ಬೆಂಕಿ ನಂದಿಸುವುದರಲ್ಲೇ ಇದ್ದಾರೆ..!

Advertisement

ಇದು ಬಂಡೀಪುರ ಅಭಯಾರಣ್ಯದಲ್ಲಿ ಶನಿವಾರ ಕಾಡ್ಗಿಚ್ಚು ನಂದಿಸಲು ಹೋಗಿ ಬೆಂಕಿ ಕೆನ್ನಾಲೆಗೆ ತನ್ನ ಸ್ನೇಹಿತ ಸಿಬಂದಿಯನ್ನು ಕಳೆದುಕೊಂಡು, ಆ ಅನಾಹುತದಿಂದ ಪವಾಡ ಸದೃಶವಾಗಿ ಪಾರಾಗಿ ಬಂದಿರುವ ಅರಣ್ಯ ಇಲಾಖೆ ನೌಕರೊಬ್ಬರು ಹೇಳಿದ ಅಸಹಾಯ ಕತೆಯ ಮಾತು.

ಆದರೆ, ನಿಜಾರ್ಥದಲ್ಲಿ ಇದು ತನ್ನ ಸಹೋದ್ಯೋಗಿಯನ್ನು ಕಳೆದುಕೊಂಡ ಒಬ್ಬ ಸಿಬಂದಿಯ ನೋವಲ್ಲ; ಬದಲಾಗಿ, ರಾಜ್ಯದಲ್ಲಿ ಲಕ್ಷಾಂತರ ಹೆಕ್ಟೇರ್‌ ವಿಸ್ತೀರ್ಣದ ಕಾಡು ರಕ್ಷಣೆಯಲ್ಲಿ ಹಗಲು – ರಾತ್ರಿ ಪ್ರಾಣದ ಹಂಗು ತೊರೆದು ಕೆಳ ಹಂತದಲ್ಲಿ ದುಡಿಯು ತ್ತಿರುವ ಪ್ರತಿಯೊಬ್ಬ ಅರಣ್ಯ ಸಿಬಂದಿಯ ಅರಣ್ಯರೋದನವಿದು! ಅದಕ್ಕೆ ಬಂಡೀಪುರ ಅಭಯಾರಣ್ಯದಲ್ಲಿ ಶನಿವಾರ ನಡೆದಿರುವ ದುರ್ಘ‌ಟನೆ ತಾಜಾ ಉದಾಹರಣೆ.

ಬೇಸಗೆ ಶುರುವಾಯಿತೆಂದರೆ, ಕಾಡ್ಗಿಚ್ಚು ಸರ್ವೆಸಾಮಾನ್ಯ. ಆದರೆ, ಇಂತಹ ಕಾಡ್ಗಿಚ್ಚು ನಿಯಂತ್ರಿಸುವುದಕ್ಕೆ ಅರಣ್ಯ ಇಲಾಖೆ ಮಾತ್ರ ಯಾವುದೇ ಸಿದ್ಧತೆ ಮಾಡಿಕೊಂಡಿಲ್ಲ ಎಂಬು ದಕ್ಕೆ ಈ ಧುರ್ಘ‌ಟನೆಯೇ ಸಾಕ್ಷಿ. ಉರಿ ಬಿಸಿಲಿನಲ್ಲಿ ಎಲ್ಲೇ ಕಾಡ್ಗಿಚ್ಚು ಹಬ್ಬುತ್ತಿರಲಿ, ಆ ಅರಣ್ಯ ವ್ಯಾಪ್ತಿಯಲ್ಲಿರುವ ಅರಣ್ಯ ವೀಕ್ಷಕರು ಅಥವಾ ಅರಣ್ಯ ರಕ್ಷಕರು ಬರಿಗೈಯಲ್ಲಿ ಅಲ್ಲಿಗೆ ಧಾವಿಸಬೇಕು. ನಿಯಂತ್ರಣವಿಲ್ಲದೆ ದಟ್ಟವಾಗಿ ಹಬ್ಬುತ್ತಿರುವ ಕಾಡ್ಗಿಚ್ಚನ್ನು ಬರೀ ಸೊಪ್ಪು-ಸೌದೆ ಹಿಡಿದುಕೊಂಡು ನಂದಿಸುವುದಕ್ಕೆ ಸೈನಿಕ ನಂತೆ ಹೋರಾಡಬೇಕು. ದುರಂತ ಅಂದರೆ, ಆ ಬೆಂಕಿಯಿಂದ ಕಾಡು ರಕ್ಷಿಸಲು ಧಾವಿಸಿ ಬರುವ ಈ ಅರಣ್ಯ ಸಿಬಂದಿ ಬಳಿ ಯಾವುದೇ ಅತ್ಯಾಧುನಿಕ ಸಲಕರಣೆಗಳಿಲ್ಲ. ಇಂಥ ಪರಿಸ್ಥಿತಿಯಲ್ಲಿ ಕಾಡನ್ನು ರಕ್ಷಿಸುವ ಬದಲು, ಆ ಬೆಂಕಿಯಿಂದ ತಮ್ಮನ್ನು ತಾವು ರಕ್ಷಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿ ಹೊರ ಬರುವುದು ಹೇಗೆ ಎಂಬ ಆತಂಕದಲ್ಲಿ ಇರು ತ್ತಾರೆ. ಈ ಕಾರಣದಿಂದಲೇ ಬಂಡೀಪುರ ಅಭ ಯಾರಣ್ಯದಲ್ಲಿ ಕಾಡ್ಗಿಚ್ಚಿಗೆ ಅಮಾಯಕ ಜೀವವೊಂದು  ಬಲಿಯಾಗಿದ್ದು, ಇತರ ನಾಲ್ವರು ಅರಣ್ಯ ಸಿಬಂದಿ ಬೆಂಕಿಯಲ್ಲಿ ಸುಟ್ಟು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.

ಕನಿಷ್ಠ ಗ್ಲೌಸ್‌ ಕೂಡ ಇಲ್ಲ: ಬಂಡೀಪುರದಲ್ಲಿ ನಡೆದ ಈ ದುರ್ಘ‌ಟನೆಯ ಬಳಿಕ ಅರಣ್ಯ ಇಲಾಖೆಯಲ್ಲಿ ಕೆಳ ಹಂತದಲ್ಲಿ ಕೆಲಸ ಮಾಡುತ್ತಿರುವ ಅರಣ್ಯ ರಕ್ಷಕರು, ವೀಕ್ಷಕರು ತಮ್ಮ ನೋವು ತೋಡಿಕೊಂಡಿದ್ದಾರೆ. “ಉದಯವಾಣಿ’ಯೊಂದಿಗೆ ಮಾತನಾಡಿದ ಹೆಸರು ಹೇಳಲಿಚ್ಛಿಸದ ಸಿಬಂದಿಯೊಬ್ಬರು, “ನಮ್ಮಲ್ಲಿ ದೇಶ ರಕ್ಷಣೆ ಮಾಡುವ ಸೈನಿಕರ ಬಳಿ ಅತ್ಯಾಧುನಿಕ ಶಸ್ರಾಸ್ತ್ರಗಳಿರುತ್ತವೆ. ಪೊಲೀಸರಿಗೆ ಬಂದೂಕು, ವಾಹನ ಸಹಿತ ಎಲ್ಲ ಅತ್ಯಾಧುನಿಕ ಉಪಕರಣಗಳನ್ನು ನೀಡಲಾಗಿದೆ. ಆದರೆ, ನಾವು ಮಾತ್ರ ಈ ಶತಮಾನದಲ್ಲಿಯೂ ಕತ್ತಿ-ದೊಣ್ಣೆ ಹಿಡಿದುಕೊಂಡೇ ಕಾಡುಗಳ್ಳರಿಂದ ಅರಣ್ಯ ರಕ್ಷಿಸಬೇಕು. ಕಾಡ್ಗಿಚ್ಚು ಹಬ್ಬಿದರೆ, ಸೊಪ್ಪು-ಸೌದೆಯಿಂದಲೇ ಬೆಂಕಿ ನಂದಿಸಬೇಕು. ಬೆಂಕಿ ನಂದಿಸಲು ಹೋಗುವ ನಮಗೆ ಕೈಗೆ ಕನಿಷ್ಠ  ಗ್ಲೌಸ್‌ ಅಥವಾ ಅಪಾಯದಿಂದ ಪಾರಾಗುವುದಕ್ಕೆ ಸಂಪರ್ಕಿಸುವುದಕ್ಕೆ ವಾಕಿ-ಟಾಕಿ ವ್ಯವಸ್ಥೆಯೂ ಇಲ್ಲ. ದಿನದ 24 ಗಂಟೆಗಳೂ ಸುಸಜ್ಜಿತ ಸಲಕರಣೆಗಳಿಲ್ಲದೆ ಭಯದ ವಾತಾವರಣದಲ್ಲೇ ಕಾಡಿನಲ್ಲಿ ಅಪಾಯದ ನೆರಳಲ್ಲಿ ಕೆಲಸ ಮಾಡುತ್ತಿದ್ದೇವೆ’ ಎಂದು ತಮ್ಮ ನೋವು ತೋಡಿಕೊಂಡಿದ್ದಾರೆ.

Advertisement

ಶೋಕಾಸ್‌ ನೋಟಿಸ್‌ ಭೀತಿ: ಸಾಮಾನ್ಯವಾಗಿ ನಮ್ಮಲ್ಲಿ ಪ್ರತಿ 32 ಚದರ ಕಿ.ಮೀ. ದೂರದ ಕಾಡಿನ ವ್ಯಾಪ್ತಿಗೆ ಒಂದು ಬೀಟ್‌ ಮಾಡಿ ಒಬ್ಬರು ಅರಣ್ಯ ರಕ್ಷಕರನ್ನು ನಿಯೋಜಿಸುತ್ತಾರೆ. ಅವರ ಕೈಕೆಳಗೆ ಒಬ್ಬರು ಅಥವಾ ಇಬ್ಬರು ಅರಣ್ಯ ವೀಕ್ಷಕರು ಇದ್ದು, ತಮ್ಮ ವ್ಯಾಪ್ತಿಗೆ ಸೇರಿದ ಅರಣ್ಯದಲ್ಲಿ ಸಸಿ ನೆಡುವುದರಿಂದ ಹಿಡಿದು ಬೆಂಕಿ ನಂದಿಸುವ ತನಕ ಎಲ್ಲ ರೀತಿಯ ಕೆಲಸ ಮಾಡಬೇಕು. ಆದರೆ, ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುವುದಕ್ಕೆ ವಾಹನದ ವ್ಯವಸ್ಥೆಯೂ ಇರುವುದಿಲ್ಲ. ಇಡೀ ಅರಣ್ಯ ವಲಯಕ್ಕೆ ಒಂದು ಜೀಪ್‌ ಸೌಲಭ್ಯವಿದ್ದು, ಅಧಿಕಾರಿಯಿಂದ ಹಿಡಿದು ಎಲ್ಲರೂ ಅದನ್ನೇ ಅವಲಂಬಿಸಬೇಕು. ವಿದೇಶಗಳಲ್ಲಿ ಕಾಡ್ಗಿಚ್ಚು ನಂದಿಸುವುದಕ್ಕೆ ಹೆಲಿಕಾಪ್ಟರ್‌ ವ್ಯವಸ್ಥೆಯಿದೆ. ಆದರೆ, ನಮ್ಮಲ್ಲಿ ಯಾವುದೇ ರೀತಿಯ ಅಗ್ನಿಶಾಮಕ ವಾಹನಗಳ ಸೇವೆಯೂ ಇಲ್ಲ. ಇಂಥ ಸನ್ನಿವೇಶದಲ್ಲಿ ಸೊಪ್ಪು-ಸೌದೆಯಿಂದ ಕಾಡ್ಗಿಚ್ಚು ನಂದಿಸಬೇಕು ಅಂದರೆ ಹೇಗೆ ಸಾಧ್ಯ? ಒಂದುವೇಳೆ, ಕಾಡ್ಗಿಚ್ಚು ನಂದಿಸಲು ವಿಫ‌ಲವಾದರೆ, ಮೇಲಧಿಕಾರಿಗಳು ಶೋಕಾಸ್‌ ನೋಟಿಸ್‌ ಕೊಟ್ಟು ನೌಕರಿಗೆ ಅಡ್ಡಿಪಡಿಸುತ್ತಾರೆ. ಈಗಲಾದರೂ ಸರಕಾರ ಎಚ್ಚೆತ್ತುಕೊಂಡು, ಕಾಡ್ಗಿಚ್ಚು ನಂದಿಸುವುದಕ್ಕೆ ಅರಣ್ಯ ಇಲಾಖೆಗೆ ಅತ್ಯಾಧುನಿಕ ಸಲಕರಣೆಗಳನ್ನು ಒದಗಿಸಬೇಕೆಂಬುದು ಅವರ ಮನವಿ.

ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಕಾಡ್ಗಿಚ್ಚು ಕಾಣಿಸಿದ್ದು, ಅರಣ್ಯ ಸಿಬಂದಿಗೆ ಬೆಂಕಿ ನಿಯಂತ್ರಿಸುವುದು ದೊಡ್ಡ ತಲೆನೋವಾಗಿದೆ. ಸರಕಾರದಿಂದ ಇಲಾಖೆಗೆ ಸಾಕಷ್ಟು ಅನುದಾನ ಬರುತ್ತಿದೆ. ಆದರೆ ಅರಣ್ಯ ರಕ್ಷಣೆಗೆ ಯಾವುದೇ ಸೌಲಭ್ಯ ಇಲ್ಲ. ಬಹಳಷ್ಟು ಕಡೆ  ಕಾಡು ಒಣಗಿ ನಿಂತಿದೆ. ಹೀಗಿರುವಾಗ, ಕಾಡಿಗೆ ಬೆಂಕಿ ಹೊತ್ತಿಕೊಂಡರೆ, ಅದನ್ನು ನಂದಿಸಲು ಹೋಗುವವರನ್ನೇ ಬಲಿ ಪಡೆವ ಅಪಾಯ ಇದೆ.

-ದಿನೇಶ್‌ ಹೊಳ್ಳ, ಪರಿಸರವಾದಿ

–  ಸುರೇಶ್‌ ಪುದುವೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next