ಲಕ್ನೋ : ಇಸ್ಲಾಂ ಧರ್ಮಗ್ರಂಥ ಕುರಾನ್ನಿಂದ ವಿವಾದಿತ 26 ಪದ್ಯಗಳನ್ನು ಕೈಬಿಡಬೇಕು ಎಂದು ಒತ್ತಾಯಿಸಿ, ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ಉ.ಪ್ರ. ಶಿಯಾ ಸೆಂಟ್ರಲ್ ವಕ್ಫ್ ಬೋರ್ಡ್ನ ಮಾಜಿ ಅಧ್ಯಕ್ಷ ವಾಸೀಮ್ ರಿಜ್ವಿ ಭಾರೀ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಹೇಳಿಕೆಗೆ ಕೆರಳಿರುವ ವಕೀಲ ಅಮಿರುಲ್ ಹಸನ್ ಝೈದಿ ಎಂಬಾತ, “ರಿಜ್ವಿಯ ಶಿರಚ್ಛೇದ ಮಾಡಿದವರಿಗೆ 11 ಲಕ್ಷ ರೂ. ಇನಾಮು’ ಘೋಷಿಸಿದ್ದಾರೆ. ವಕೀಲನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಇನ್ನೊಂದೆಡೆ, ಶಿಯಾ ಮುಸ್ಲಿಂ ಯುವಕರು ಕೂಡ ರಿಜ್ವಿ ಹೇಳಿಕೆ ಖಂಡಿಸಿದ್ದು, “ಶಿಯಾ ಮುಸ್ಲಿಂ ಸ್ಮಶಾನದಲ್ಲಿ ಗೋರಿಯಾಗಲು ರಿಜ್ವಿಗೆ ಅರ್ಹತೆಯೇ ಇಲ್ಲ. ಕುರಾನ್ ವಿರುದ್ಧದ ಹೇಳಿಕೆ ಬಳಿಕ ರಿಜ್ವಿ ಮುಸ್ಲಿಮರನ್ನು ಅಗಲಿದ್ದಾರೆ’ ಎಂದು ಆರೋಪಿಸಿದ್ದಾರೆ. ದೆಹಲಿಯ ಜಾಮಾ ಮಸೀದಿ ರಿಜ್ವಿ ವಿರುದ್ಧ ಮಾ.19ರಂದು ಬೃಹತ್ ಪ್ರತಿಭಟನಾ ರ್ಯಾಲಿ ಹಮ್ಮಿಕೊಂಡಿದೆ.
ಇದನ್ನೂ ಓದಿ :ರಮೇಶ್ ಜಾರಕಿಹೊಳಿ ಪ್ರಕರಣಕ್ಕೆ ಹೊಸ ತಿರುವು : ಯುವತಿಯ ಅಪಹರಣವಾಗಿದೆ ಎಂದು ಪೋಷಕರ ದೂರು
ಬಿಜೆಪಿಯೂ ಗರಂ!: “ಯಾವುದೇ ಧರ್ಮದ ಗ್ರಂಥಕ್ಕೆ ಅಪಮಾನ ಎಸಗುವ ಹೇಳಿಕೆಯನ್ನು ಬಿಜೆಪಿ ಬೆಂಬಲಿಸುವುದಿಲ್ಲ. ಇದು ನಿಜಕ್ಕೂ ಖಂಡನೀಯ’ ಎಂದು ಬಿಜೆಪಿಯ ಹಿರಿಯ ಮುಸ್ಲಿಂ ಮುಖಂಡ ಸೈಯದ್ ಶಹನವಾಜ್ ಹುಸೇನ್ ಸ್ಪಷ್ಟಪಡಿಸಿದ್ದಾರೆ.
ರಿಜ್ವಿ ವಾದವೇನು?
“ಕುರಾನ್ನಲ್ಲಿನ 26 ಪದ್ಯಗಳು ಹಿಂಸಾತ್ಮಕ ಪ್ರಚೋದನೆ ಹೊಂದಿವೆ. ಇದು ಮೂಲ ಕುರಾನ್ನ ಭಾಗವೇ ಅಲ್ಲ. ಪ್ರವಾದಿ ಮೊಹಮ್ಮದ್ ಮರಣ ಬಳಿಕ ಇವನ್ನು ಸೇರಿಸಲಾಗಿದೆ’ ಎನ್ನುವುದು ರಿಜ್ವಿ ವಾದ.