Advertisement

ಎಫ್ಐಆರ್‌,ಬಂಧನ, ತನಿಖೆ: ದಂಗೆಕೋರರ ವಿರುದ್ಧ ಬಿಗಿ ಕ್ರಮ ; ರಾಂಚಿಯಲ್ಲಿ 25 ಎಫ್ಐಆರ್‌

01:10 AM Jun 13, 2022 | Team Udayavani |

ಹೊಸದಿಲ್ಲಿ: ಪ್ರವಾದಿ ಮೊಹಮ್ಮದ್‌ ಅವರ ನಿಂದನೆ ವಿರುದ್ಧ ದೇಶದ ಹಲವು ನಗರಗಳಲ್ಲಿ ಪ್ರತಿಭಟನೆ ಬಳಿಕ ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ. ವಿಶೇಷವಾಗಿ ಝಾರ್ಖಂಡ್‌ನ‌ ರಾಂಚಿ ಯಲ್ಲಿ ಹಿಂಸಾತ್ಮಕ ಘಟನೆಗಳಿಗೆ ಸಂಬಂಧಿಸಿದಂತೆ 25 ಎಫ್ಐಆರ್‌ಗಳನ್ನು ದಾಖಲಿಸಲಾಗಿದೆ. ಅದರಲ್ಲಿ 22 ಮಂದಿಯನ್ನು ಪ್ರಮುಖವಾಗಿ ಹೆಸರಿಸಲಾಗಿದೆ. ಜತೆಗೆ ಉತ್ತರ ಭಾರತದ ಹಲವು ನಗರಗಳಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಅಹಿತಕರ ಘಟನೆಗಳ ಬಳಿಕ ರಾಂಚಿಯಲ್ಲಿ ಇಂಟರ್‌ನೆಟ್‌ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದ್ದುದನ್ನು ಪುನಃ ಸ್ಥಾಪಿಸಲಾಗಿದೆ. ಪರಿಸ್ಥಿತಿಯ ಮೇಲೆ ನಿಗಾ ಇರಿಸಲಾಗಿದೆ. 3,500ಕ್ಕೂ ಹೆಚ್ಚು ಮಂದಿ ಪೊಲೀಸ್‌, ಕ್ಷಿಪ್ರ ಕಾರ್ಯಾಚರಣೆ ಪಡೆ, ವಿಶೇಷ ಕಾರ್ಯಪಡೆ, ಉಗ್ರ ನಿಗ್ರಹ ದಳದ ಅಧಿಕಾರಿಗಳು ಮತ್ತು ಸಿಬಂದಿ ಪರಿಸ್ಥಿತಿ   ಯನ್ನು ನಿಯಂತ್ರಿಸುವಲ್ಲಿ ಶ್ರಮ ವಹಿಸಿದ್ದಾರೆ ಎಂದು ರಾಂಚಿ ಪೊಲೀಸ್‌ ವರಿಷ್ಠಾಧಿಕಾರಿ ಸುರೇಂದ್ರ ಕುಮಾರ್‌ ಝಾ ಹೇಳಿದ್ದಾರೆ. ಬಿಗು ಪರಿಸ್ಥಿತಿ ಹಿನ್ನೆಲೆಯಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದೆ ಎಂದೂ ಅವರು ಹೇಳಿದ್ದಾರೆ.

Advertisement

ಪ್ರತಿಭಟನೆಯಲ್ಲಿ ಇರಲಿಲ್ಲ: ಪೊಲೀಸರ ಗುಂಡೇಟಿಗೆ ಬಲಿಯಾದ ಶಕೀಬ್‌ ಅನ್ಸಾರಿ ಪ್ರತಿಭಟನೆಯಲ್ಲಿ ಭಾಗಿಯಾಗಿರಲಿಲ್ಲ. ಅವರು ಕೆಲಸದ ಮೇಲೆ ರಾಂಚಿಗೆ ತೆರಳಿದ್ದಾಗ ಅನಪೇಕ್ಷಿತ ಘಟನೆ ನಡೆದಿದೆ ಎಂದು ಅವರ ಸಹೋದರ ಶಾಹಿಲ್‌ ತಿಳಿಸಿದ್ದಾರೆ.

ಸುವೇಂದು ಅಧಿಕಾರಿಗೆ ತಡೆ: ಪಶ್ಚಿಮ ಬಂಗಾಲದಲ್ಲಿ ಗಲಭೆ ಸಂಭವಿಸಿದ ಹೌರಾಕ್ಕೆ ತೆರಳಲು ಮುಂದಾಗಿದ್ದ ವಿಪಕ್ಷ ನಾಯಕ ಸುವೇಂದು ಅಧಿಕಾರಿ ಅವರನ್ನು ಪೊಲೀಸರು ತಡೆದಿದ್ದಾರೆ. ಅವರನ್ನು ಪೂರ್ವ ಮಿಡ್ನಾಪುರದ ತಮುÉಕ್‌ನಲ್ಲಿ ಪೊಲೀಸರು ತಡೆದಿದ್ದಾರೆ. ಆದರೆ ಅವರ ಜತೆಗೆ ಪಶ್ಚಿಮ ಬಂಗಾಲದ ಬಿಜೆಪಿ ಘಟಕದ ನಾಯಕರು ಯಾರೂ ಇರಲಿಲ್ಲ. ಆದರೆ, ಸುವೇಂದು ಪ್ರತಿ ಕ್ರಿಯೆ ನೀಡಿ ತಮಗೆ ಅಲ್ಲಿಗೆ ಭೇಟಿ ನೀಡುವ ಇರಾದೆ ಇಲ್ಲವೆಂದಿದ್ದಾರೆ. ಜತೆಗೆ ಪೊಲೀಸ್‌ ಅಧಿಕಾರಿಗಳ ಜತೆಗೆ ವಾಗ್ವಾದವನ್ನೂ ನಡೆಸಿದ್ದಾರೆ. ಸೆಕ್ಷನ್‌ 144 ಜಾರಿಯಲ್ಲಿದ್ದ ಕಾರಣ ಹೌರಾಕ್ಕೆ ತೆರ  ಳಲು ತಡೆಯೊಡ್ಡಿದ್ದಾಗಿ ಪೊಲೀಸರು ಹೇಳಿದ್ದಾರೆ. ಹಿಂಸಾ ಘಟನೆಗಳಿಗೆ ಸಂಬಂಧಿಸಿ ದಂತೆ 100ಕ್ಕೂ ಅಧಿಕ ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ ಮತ್ತು ಕೇಸು ದಾಖಲಿಸಿದ್ದಾರೆ.

ಅಸ್ಸಾಂ ಟಿವಿಯಲ್ಲಿ ಪಾಕ್‌ ಧ್ವಜ: ಅಸ್ಸಾಂ ಕಚಾರ್‌ ಮತ್ತು ಕರೀಂಗಂಜ್‌ ಜಿಲ್ಲೆಗಳಲ್ಲಿ ಎಲ್ಲ ರೀತಿಯ ಪ್ರತಿಭಟನೆಗಳು ಮತ್ತು ರ್ಯಾಲಿಗಳನ್ನು ನಿಷೇಧಿಸಿ ಜಿಲ್ಲಾಡಳಿತಗಳು ಆದೇಶ ಹೊರಡಿಸಿವೆ ಮತ್ತು ಸೆಕ್ಷನ್‌ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿ  ಸಿವೆ. ಸಮಾಜ ವಿರೋಧಿ ಶಕ್ತಿಗಳು ಅಶಾಂತಿ ಸೃಷ್ಟಿ  ಸುವ ಸಾಧ್ಯತೆ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳ  ಲಾಗಿದೆ ಎಂದು 2 ಜಿಲ್ಲಾಡಳಿತಗಳು ಹೇಳಿವೆ. ಇನ್ನೊಂದೆಡೆ ಅಸ್ಸಾಂನ ಜನಪ್ರಿಯ ಆನ್‌ಲೈನ್‌ ಸುದ್ದಿ ವಾಹಿನಿ ಯಲ್ಲಿ ಪಾಕಿಸ್ಥಾನದ ಧ್ವಜವೊಂದು ಕಾರ್ಯಕ್ರಮದ ನಡುವೆ ಮೂಡಿ ಬಂದಿದೆ. ಪಾಕಿ ಸ್ಥಾನ ಮೂಲದ ರೆವೊಲ್ಯೂಷನ್‌ ಪಾಕ್‌ ಎಂಬ ಸಂಘಟನೆಗೆ ಇದಕ್ಕೆ ಕಾರಣ ಎಂದು ಆರೋಪಿಸಲಾಗಿದೆ.

ನಾವು ಆಪತ್ತಿನಲ್ಲಿ: ನವೀನ್‌ ಕುಮಾರ್‌ ಜಿಂದಾಲ್‌
ವಿವಾದಿತ ಹೇಳಿಕೆ ನೀಡಿದ್ದಕ್ಕಾಗಿ ಬಿಜೆಪಿಯಿಂದ ಉಚ್ಚಾಟಿತರಾಗಿರುವ ನವೀನ್‌ ಕುಮಾರ್‌ ಜಿಂದಾಲ್‌, ತಮ್ಮ ಕುಟುಂಬ ಆಪತ್ತಿನಲ್ಲಿರುವುದಾಗಿ ಹೇಳಿಕೊಂಡಿದ್ದಾರೆ. ನನ್ನ ಕುಟುಂಬಕ್ಕೆ ಬೆದರಿಕೆ ಕರೆ ಬರುತ್ತಿದೆ. ನನ್ನ ಕುಟುಂಬದ ಸದಸ್ಯರ ಮೇಲೆ ಹಲ್ಲೆ ನಡೆಯುವ ಆತಂಕ ಇದೆ ಎಂದು ಟ್ವೀಟ್‌ ಮಾಡಿದ್ದಾರೆ. ಬೆದರಿಕೆ ಕರೆಗಳ ಸ್ಕ್ರೀನ್‌ಶಾಟ್‌ನೂ° ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. “ದಯವಿಟ್ಟು ಯಾರೂ ನನ್ನ ವೈಯಕ್ತಿಕ ಮಾಹಿತಿಯನ್ನು ಸಾಮಾಜಿಕವಾಗಿ ಹಂಚಬೇಡಿ. ನಾವು ಕೇಳಿಕೊಂಡರೂ ಕೆಲವರು ನನ್ನ ಮನೆಯ ವಿಳಾಸವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿದ್ದಾರೆ. ಇದರಿಂದಾಗಿ ನಮ್ಮ ಕುಟುಂಬ ಆಪತ್ತಿನಲ್ಲಿದೆ’ ಎಂದು ಅವರು ತಿಳಿಸಿದ್ದಾರೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಿ ಎಂದು ದಿಲ್ಲಿ ಪೊಲೀಸರಿಗೆ ಮನವಿಯನ್ನೂ ಮಾಡಿದ್ದಾರೆ.

Advertisement

ಭಾರತದ ಆಂತರಿಕ ವಿಚಾರ: ಬಾಂಗ್ಲಾದೇಶ
“ಭಾರತದಲ್ಲಿ ಸದ್ಯ ನಡೆಯುತ್ತಿರುವುದು ಅಲ್ಲಿನ ಆಂತರಿಕ ವಿಚಾರ. ಈ ಬಗ್ಗೆ ನಾವೇಕೆ ತನಿಖೆ ನಡೆಸಿ, ಪ್ರಚೋದನೆ ನೀಡಬೇಕು?’ ಹೀಗೆಂದು ಪ್ರಶ್ನೆ ಮಾಡಿದ್ದು ಬಾಂಗ್ಲಾದೇಶ ವಾರ್ತಾ ಸಚಿವ ಹಸನ್‌ ಮಹಮೂದ್‌. ಢಾಕಾದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ನಡೆಯುತ್ತಿರುವ ಬೆಳವಣಿಗೆ ನಮ್ಮ ದೇಶದ ಹೊರಗಿನ ವಿಚಾರ. ಅದಕ್ಕೆ ನಮ್ಮ ಸರಕಾರ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಬೇಕಾದ ಅಗತ್ಯವಿಲ್ಲ’ ಎಂದು ಹೇಳಿದ್ದಾರೆ. ಪ್ರವಾದಿ ಮೊಹಮ್ಮದ್‌ ವಿರುದ್ಧ ನಿಂದನೆ ನಡೆಸಲಾಗಿದೆ. ಅದಕ್ಕೆ ಇಸ್ಲಾಮಿಕ್‌ ರಾಷ್ಟ್ರಗಳ ಒಕ್ಕೂಟ ಖಂಡನೆ ವ್ಯಕ್ತಪಡಿಸಿದರೂ ಬಾಂಗ್ಲಾದೇಶವೇಕೆ ಮೌನ ವಹಿಸಿದೆ ಎಂಬ ಪ್ರಶ್ನೆಗೆ ಅವರು ಈ ಉತ್ತರ ನೀಡಿದ್ದಾರೆ. ಅವಮಾನದ ಘಟನೆ ಬಗ್ಗೆ ನಾವು ಖಂಡನೆ ಮಾಡುತ್ತೇವೆ. ಆದರೆ ಭಾರತದಲ್ಲಿನ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ಇಲ್ಲವೆಂದರು.

ನೆದರ್ಲೆಂಡ್‌ ಸಂಸದರಿಗೆ ಬೆದರಿಕೆ
ಬಿಜೆಪಿಯ ಉಚ್ಚಾಟಿತ ನಾಯಕಿ ನೂಪುರ್‌ ಶರ್ಮಾಗೆ ಬೆಂಬಲ ನೀಡಿ ಹೇಳಿಕೆ ನೀಡಿದ್ದ ನೆದರ್ಲೆಂಡ್‌ ಸಂಸದ ಗ್ರೀಟ್‌ ವೈಲ್ಡರ್ಸ್‌ಗೆ ಬೆದರಿಕೆ ಕರೆಗಳು ಬರಲಾರಂಭಿಸಿವೆ. ಈ ಬಗ್ಗೆ ಅವರು ಟ್ವೀಟ್‌ ಮಾಡಿದ್ದು, “ನೂಪುರ್‌ ಶರ್ಮಾ ಅವರಿಗೆ ಬೆಂಬಲ ನೀಡಿ ಮಾತನಾಡಿದ್ದಕ್ಕೆ ಬೆದರಿಕೆ ಕರೆಗಳು ಬರುತ್ತಿವೆ. ಇದರಿಂದಾಗಿ ಎದೆಗುಂದಿಲ್ಲ. ನೂಪುರ್‌ ಅವರಿಗೆ ಮತ್ತಷ್ಟು ಬೆಂಬಲ ನೀಡಲು ಧೈರ್ಯ ನೀಡಿದಂತಾಗಿದೆ’ ಎಂದು ಬರೆದುಕೊಂಡಿದ್ದಾರೆ. ಜತೆಗೆ ಕರೆಗಳ ಸ್ಕ್ರೀನ್‌ ಶಾಟ್‌ಗಳನ್ನೂ ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next