Advertisement

ಉದ್ದಿಮೆ ಆರಂಭಿಸಲು ಆರ್ಥಿಕ ನೆರವು

03:02 PM Nov 07, 2022 | Team Udayavani |

ಮೈಸೂರು: ಸ್ವಂತ ಉದ್ಯಮ ಆರಂಭಿಸುವ ಅಭಿಲಾಷೆ ಹೊಂದಿರುವವರಿಗೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉತ್ತೇಜನ ನೀಡು ತ್ತಿದ್ದು, ಅಗತ್ಯ ತರಬೇತಿಯೊಂದಿಗೆ ಉದ್ದಿಮೆ ಆರಂಭಿಸಲು ಬೇಕಾದ ಆರ್ಥಿಕ ನೆರವನ್ನೂ ನೀಡುತ್ತಿದೆ.

Advertisement

ಕೇಂದ್ರ, ರಾಜ್ಯ ಸರ್ಕಾರದ ಸಹಯೋಗದಲ್ಲಿ ಪಶು ಪಾಲನಾ ಉದ್ಯಮಶೀಲತಾ ಅಭಿವೃದ್ಧಿ ಕಾರ್ಯ ಕ್ರಮಗಳಿಗೆ ಆರ್ಥಿಕ ನೆರವು ನೀಡಲಾಗುತ್ತಿದ್ದು, ದಸರಾ ವಸ್ತುಪ್ರದರ್ಶನ ಆವರಣದಲ್ಲಿ ತೆರೆದಿರುವ ಪಶುಪಾಲನಾ ಇಲಾಖೆಯ ಮಳಿಗೆಯಲ್ಲಿ ತರಬೇತಿ ನೀಡಲಾಗುತ್ತಿದೆ. ಪ್ರತಿದಿನ ಮಳಿಗೆಗೆ ಭೇಟಿ ನೀಡುವ ಉದ್ಯಮ ಆಕಾಂಕ್ಷಿಗಳಿಗೆ ಅರ್ಥಗಂಟೆ ತರಬೇತಿ ನೀಡುವುದರ ಜತೆಗೆ, ಅಗತ್ಯ ಮಾಹಿತಿಗಳನ್ನು ಒದಗಿಸಲಾಗುತ್ತಿದೆ. ಮಳಿಗೆ ತೆರೆದಾಗಿನಿಂದ ದಿನನಿತ್ಯ ನೂರಾರು ಮಂದಿ ಭೇಟಿ ನೀಡುತ್ತಿದ್ದು, ಉದ್ಯಮದಲ್ಲಿ ಆಸಕ್ತಿ ಇರುವವರು ಯೋಜನೆಗಳ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

ಯಾವ್ಯಾವ ಯೋಜನೆ?: ಪಶು ಸಂಗೋಪನೆ ಮೂಲಭೂತ ಸೌಲಭ್ಯಗಳ ಅಭಿವೃದ್ಧಿ ನಿಧಿ, ರಾಷ್ಟ್ರೀಯ ಜಾನುವಾರು ಮಿಷನ್‌ ಯೋಜನೆ, ಪ್ರಧಾನಮಂತ್ರಿಗಳ ಅತಿ ಸಣ್ಣ ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆ ಯೋಜನೆಯಡಿ ಆರ್ಥಿಕ ನೆರವು ನೀಡಲಾಗುತ್ತಿದೆ. ಹಾಲಿನ ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನಾ ಘಟಕ ಸ್ಥಾಪನೆ, ಪಾಸ್ಪೇಟ್‌ ಅಮೃದ್ಧ ಸಾವಯವ ಗೊಬ್ಬರ ಉತ್ಪಾದನೆ, ಜೈವಿಕ ಸಂಕುಚಿತ ಸಾರಜನಕ ಅನಿಲ ಉತ್ಪಾದನೆ ಘಟಕ, ಹಸುವಿನ ಸಗಣಿ ಮತ್ತು ಮೂತ್ರಗಳ ಶೇಖರಣೆ ಮತ್ತು ಮೌಲ್ಯವರ್ಧನ ಘಟಕ ಸ್ಥಾಪನೆಗೆ ಯೋಜನಾ ಮೊತ್ತದ ಶೇ.90ರಷ್ಟು ಸಾಲವನ್ನು ಶೇ.3ರ ಬಡ್ಡಿ ದರದಲ್ಲಿ ಪಡೆಯಬಹುದಾಗಿದೆ.

ಆರ್ಥಿಕ ನೆರವು: ಕೇಂದ್ರ ಸರ್ಕಾರ ಸಂಘಟಿತ ವಲಯದಲ್ಲಿನ ರೈತರು, ಉದ್ಯಮಿಗಳನ್ನು ಸಂಘಟಿತ ವಲಯಕ್ಕೆ ಕರೆದೊಯ್ಯುವ ನಿಟ್ಟಿನಲ್ಲಿ ಅವರ ಉದ್ದಿಮೆ ಗಳನ್ನು ಲಾಭದಾಯಕವನ್ನಾಗಿಸಲು ಜಾನುವಾರು ಉತ್ಪನ್ನ ಹೆಚ್ಚಿಸುವುದು, ಉತ್ತಮ ಗುಣಮಟ್ಟದ, ಮೌಲ್ಯವರ್ಧಿತ ಜಾನುವಾರುಗಳ ಉತ್ಪನ್ನಗಳನ್ನು ಒದಗಿಸಿ ಯುವಜನತೆಗೆ ಉದ್ಯೋಗ ಸೃಷ್ಟಿಸುವುದು ಹಾಗೂ ರೈತರ ಆದಾಯ ದ್ವಿಗುಣಗೊಳಿಸಲು ಹಲವು ಯೋಜನೆಗಳಿಗೆ ಆರ್ಥಿಕ ನೆರವು ನೀಡುತ್ತಿದೆ. ರಾಷ್ಟ್ರೀಯ ಜಾನುವಾರು ಮಿಷನ್‌ ಯೋಜನೆಯ ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮದಡಿ ಗ್ರಾಮೀಣ ಕೋಳಿ ಸಾಕಾಣಿಕೆ, ಕುರಿ-ಮೇಕೆ ತಳಿ ಸಂವರ್ಧನಾ ಘಟಕ, ಹಂದಿ ತಳಿ ಸಂವರ್ಧನಾ ಘಟಕ, ರಸಮೇವು ಉತ್ಪಾದನಾ ಘಟಕ ನಿರ್ಮಾಣಕ್ಕೆ ಶೇ.50ರಷ್ಟು ಸಹಾಯಧನ ನೀಡಲಾಗುತ್ತದೆ.

ಸಲ್ಲಿಸಬೇಕಾದ ದಾಖಲಾತಿಗಳೇನು?: ಎಲ್ಲಾ ಯೋಜನೆಗಳಿಗೂ ಯೋಜನಾ ವರದಿ, ಭೂ ದಾಖಲೆಗಳು, ಘಟಕ ಸ್ಥಾಪಿಸಲು ಉದ್ದೇಶಿಸಿ ರುವ ಸ್ಥಳದ ಜಿಪಿಎಸ್‌ ಫೋಟೋ, ಪಾನ್‌ಕಾರ್ಡ್‌, ಆಧಾರ್‌ಕಾರ್ಡ್‌, ಚುನಾವಣಾ ಗುರುತಿನ ಚೀಟಿ, 3 ವರ್ಷಗಳ ಆದಾಯ ತೆರಿಗೆ ಪಾವತಿಸಿರುವ ವರದಿ, 6 ತಿಂಗಳ ಬ್ಯಾಂಕ್‌ ವಹಿವಾಟು, ರದ್ದುಪಡಿಸಿದ ಬ್ಯಾಂಕ್‌ ಚೆಕ್‌, ಪಾಸ್‌ಪೋರ್ಟ್‌ ಅಳತೆಯ ಫೋಟೋ, ವಿದ್ಯಾರ್ಹತೆಯ ಪ್ರಮಾಣ ಪತ್ರ, ತರಬೇತಿ ಪ್ರಮಾಣ ಪತ್ರ, ಅನುಭವ ಹೊಂದಿರುವ ಪ್ರಮಾಣಪತ್ರ ಸಲ್ಲಿಸಬೇಕು.

Advertisement

ಪಶುಪಾಲನಾ ಉದ್ಯಮ ಶೀಲತೆ ಯೋಜನೆಯಡಿ ಉದ್ದಿಮೆ ಆರಂಭಿಸುವವರಿಗೆ ವಸ್ತುಪ್ರದರ್ಶನ ಆವರಣದಲ್ಲಿರುವ ಇಲಾಖೆಯ ಮಳಿಗೆಯಲ್ಲಿ ತರಬೇತಿ ನೀಡಲಾಗುತ್ತಿದೆ. ಸಬ್ಸಿಡಿಯೊಂದಿಗೆ ಬ್ಯಾಂಕ್‌ ಸಾಲವನ್ನೂ ಕೊಡಿಸಲಾಗುತ್ತದೆ. ಯುವಕರು, ಸ್ವಂತ ಉದ್ದಿಮೆ ಆರಂಭಿಸಲು ಆಸಕ್ತಿ ಇರುವವರು ಇದರ ಸದುಪಯೋಗ ಪಡೆದುಕೊಳ್ಳಬಹುದು. ● ಡಾ.ಷಡಕ್ಷರಮೂರ್ತಿ, ಉಪ ನಿರ್ದೇಶಕ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ

-ಸತೀಶ್‌ ದೇಪುರ

Advertisement

Udayavani is now on Telegram. Click here to join our channel and stay updated with the latest news.

Next