Advertisement

Film Release: ಸೆ.13ರಂದು ರಾಜ್ಯಾದ್ಯಂತ “ಕಲ್ಜಿಗ’ ಕನ್ನಡ ಚಲನಚಿತ್ರ ತೆರೆಗೆ

12:27 AM Sep 12, 2024 | Team Udayavani |

ಮಂಗಳೂರು: ಹಿಮಾನಿ ಫಿಲಂಸ್‌ ಬ್ಯಾನರ್‌ನಡಿಯಲ್ಲಿ ನಿರ್ಮಾಣಗೊಂಡಿರುವ “ಕಲ್ಜಿಗ’ ಕನ್ನಡ ಚಲನಚಿತ್ರ ಸೆ. 13ರಂದು ರಾಜ್ಯಾದ್ಯಂತ ತೆರೆಕಾಣಲಿದೆ.
ಶೀರ್ಷಿಕೆಯಲ್ಲೇ ಕೌತುಕ ಬೆರೆತ ಸೆಳೆತವೊಂದನ್ನು ಬಚ್ಚಿಟ್ಟುಕೊಂಡಂತಿರುವ ಈ ಚಿತ್ರದ ಟ್ರೇಲರ್‌ ಭಾರತ್‌ ಮಾಲ್‌ನ ಭಾರತ್‌ ಸಿನಿಮಾಸ್‌ ನಲ್ಲಿ ಅನಾವರಣಗೊಂಡಿದೆ. ಚಿತ್ರದ ಟ್ರೈಲರ್‌ ಎ2 ಫಿಲ್ಮ್ ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಿ ಜನರಿಂದ ಅದ್ಭುತ ಪ್ರತಿಕ್ರಿಯೆ ದೊರಕಿದೆ ಎಂದು ನಿರ್ದೇಶಕ ಸುಮನ್‌ ಸುವರ್ಣ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ಶರತ್‌ ಕುಮಾರ್‌ ಎ.ಕೆ. ಈ ಚಿತ್ರದ ನಿರ್ಮಾಪಕರಾಗಿದ್ದಾರೆ. ಕಲ್ಜಿಗದ ಕಥೆ ಚಿತ್ರಕಥೆ ಸಂಭಾಷಣೆಯನ್ನು ನಿರ್ದೇಶಕರೇ ಬರೆದಿದ್ದು, ಹಂಸಲೇಖ ಅವರು ಸಂಗೀತ ನಿರ್ದೇಶನ ನೀಡಿದ್ದಾರೆ. ನಟ ಅರ್ಜುನ್‌ ಕಾಪಿಕಾಡ್‌ ನಾಯಕನಾಗಿ ಹಾಗೂ ಸುಶ್ಮಿತಾ ಭಟ್‌ ನಾಯಕಿಯಾಗಿ ನಟಿಸಿದ್ದಾರೆ. ನಟರಾದ ಗೋಪಿನಾಥ್‌ ಭಟ್‌, ಜ್ಯೋತಿಷ್‌ ಶೆಟ್ಟಿ, ಮಾನಸಿ ಸುಧೀರ್‌, ವಿಜಯ್‌ ಶೋಭರಾಜ್‌ ಪಾವೂರ್‌, ಶ್ಲಾಘಾ ಸಾಲಿಗ್ರಾಮ ಮುಖ್ಯ ಭೂಮಿಕೆಯಲ್ಲಿದ್ದಾರೆ. ಪ್ರಸಾದ್‌ ಕೆ. ಶೆಟ್ಟಿ ಹಿನ್ನೆಲೆ ಸಂಗೀತ ನೀಡಿದ್ದಾರೆ ಎಂದರು.

ಮಂಗಳೂರು, ಉಡುಪಿ ಸುತ್ತಮುತ್ತಲ ಪ್ರದೇಶಗಳಲ್ಲಿ ಕಲ್ಜಿಗ ಚಿತ್ರೀಕರಣ ನಡೆಸಲಾಗಿದೆ. ಸೆ. 13ರಂದು ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು, ಮೈಸೂರು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಮಡಿಕೇರಿ, ಹುಬ್ಬಳ್ಳಿ, ಧಾರವಾಡ, ದಾವಣಗೆರೆ, ಮುಂಬಯಿ ಹಾಗೂ ಗಲ್ಫ್ ದೇಶಗಳಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಿದರು.

ಈಗಾಗಲೇ ಕಲ್ಜಿಗ ಚಿತ್ರದ ಟ್ರೈಲರನ್ನು ಯೂಟ್ಯೂಬ್‌ನಲ್ಲಿ ಒಟ್ಟು 14 ಲಕ್ಷಕ್ಕಿಂತಲೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಮಂಗಳೂರು ಕನ್ನಡ ಭಾಷಾ ಶೈಲಿಯಲ್ಲಿ ಚಿತ್ರ ತಯಾರಾಗಿದೆ. ಧರ್ಮದ ದಾರಿಯಲ್ಲಿ ಅಧರ್ಮದ ನೆರಳು ಬಿದ್ದ ಬಳಿಕ ಘಟಿಸುವ ರೋಚಕ ಕಥನ ಕಲ್ಜಿಗದಲ್ಲಿದೆ. ಸಚಿನ್‌ ಶೆಟ್ಟಿ ಛಾಯಾಗ್ರಹಣ, ಯಶ್ವಿ‌ನ್‌ ಕೆ. ಶೆಟ್ಟಿಗಾರ್‌ ಸಂಕಲನ ಈ ಚಿತ್ರಕ್ಕಿದೆ. ಕಾಂತಾರ ಖ್ಯಾತಿಯ ಸನಿಲ್‌ ಗುರು ಕ್ರಿಯೇಟಿವ್‌ ಹೆಡ್‌ ಆಗಿದ್ದಾರೆ. ಕಾರ್ಯಕಾರಿ ನಿರ್ಮಾಪಕರಾಗಿ ರಾಧಾಕೃಷ್ಣ ಮಾಣಿಲ, ಪ್ರೊಡಕ್ಷನ್‌ ಮ್ಯಾನೇಜರ್‌ ಆಗಿ ಸಂದೀಪ್‌ ಶೆಟ್ಟಿ ಇದ್ದಾರೆ ಎಂದರು.

ಗಿರ್ಗಿಟ್‌, ಸರ್ಕಸ್‌, ಗಮ್ಜಾಲ್‌ ಮುಂತಾದ ಚಿತ್ರಗಳಲ್ಲಿ ನಿರ್ದೇಶನ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದ ಸುಮನ್‌ ಸುವರ್ಣ “ಕಲ್ಜಿಗ’ದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಅರ್ಜುನ್‌ ಕಾಪಿಕಾಡ್‌, ಸುಶ್ಮಿತಾ ಭಟ್‌, ಶರತ್‌ ಕುಮಾರ್‌ ಎ.ಕೆ. ಮತ್ತು ಯಶ್ವಿ‌ನ್‌ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next