Advertisement
ವಿಶ್ವವಿದ್ಯಾಲಯಗಳಲ್ಲಿ ವಿಶೇಷ ಉಪನ್ಯಾಸಕ್ಕಾಗಿ ಕಳೆದ ಮೂರು ವಾರ ಅಯ್ದು ರಾಷ್ಟ್ರಗಳಲ್ಲಿ ಪ್ರವಾಸದಲ್ಲಿ¨ªೆ. ಥಾಯ್ಲೆಂಡಿನ ರಾಜಧಾನಿ ಬ್ಯಾಂಕಾಕಿನ ಸಭಾಂಗಣದಲ್ಲಿ ಸೆಪ್ಟಂಬರ್ 23ರಂದು ನನ್ನ ಉಪನ್ಯಾಸ. ನೀರಜ್ ಎಂಬುವರು ನನ್ನ ಬಳಿ ಬಂದು ವೀರೇಂದ್ರ ಹೆಗ್ಗಡೆಯವರು ಭಾರತದ ರಾಷ್ಟ್ರಪತಿಯಾಗುವರೆಂದು ನಿರೀಕ್ಷೆಯಿತ್ತು ಎಂದಾಗ ಏಕಕಾಲದಲ್ಲಿ ಆಶ್ಚರ್ಯ, ಆನಂದ. ಇದು ಈ ಬಾರಿಯ ಸಂಚಾರದಲ್ಲಿ ಸಂತೋಷ ಉಕ್ಕಿಸಿ ಪುಳಕಗೊಳಿಸಿದ ಮೊದಲ ಅನುಭವ. ಅಕ್ಟೋಬರ್ ಏಳನೆಯ ದಿನಾಂಕ ಸಂಜೆ ಜಪಾನ್ ದೇಶದ ರಾಜಧಾನಿ ಟೋಕಿಯೋ ಮಹಾನಗರದಲ್ಲಿ ನನ್ನ 82ನೆಯ ವರ್ಷದ ವರ್ಧಂತಿ ಆಚರಣೆಯಿತ್ತು. ವಿಶಾಲ್ ಶ್ರೀಮಾಲಿ ಮೊದಲಾದವರು- “”ವೀರೇಂದ್ರ ಹೆಗ್ಗಡೆಯವರು ರಾಷ್ಟ್ರಪತಿಯಾಗುವ ಸೂಚನೆಯಿತ್ತಂತೆ ಹೌದೆ?” ಎಂದು ಕೇಳಿದರು. ಮತ್ತೆ ಪರಮಾಶ್ಚರ್ಯ, ಪರಮಾನಂದ ! ಕರ್ನಾಟಕದ ಸುಪುತ್ರನ ಹೆಸರು ವಿದೇಶಗಳಲ್ಲಿ ಗೌರವ ಗಳಿಸಿರುವುದನ್ನು ತಿಳಿದು ಹೆಮ್ಮೆ ಪಟ್ಟೆ. ಶಿಷ್ಯರತ್ನನ ಕೀರ್ತಿಲತೆ ದೇಶ-ವಿದೇಶಗಳಲ್ಲಿ ಹಬ್ಬಿರುವುದನ್ನು ಕಣ್ಣಾರೆ ಕಾಣುವ, ಕಿವಿಯಾರೆ ಕೇಳುವ ಅಪೂರ್ವ ಅನುಭವ ನನಗಾಯಿತು. ದೇವತೆಗಳೂ ಬಯಸುವಂಥ ಈ ಯಶಸ್ಸು ಇರುಳು ಕಳೆದು ಬೆಳಗಾಗುವಷ್ಟರಲ್ಲಿ ಸಲೀಸಾಗಿ ಬಂದುದಲ್ಲ. ಇದು ದಣಿವರಿಯದ ನಿರಂತರ ಶ್ರದ್ಧೆ , ಶ್ರಮ ಮತ್ತು ಸಾಧನೆ ಹಾಗೂ ಧೀಶಕ್ತಿಯಿಂದ ಗಳಿಸಿದ್ದು.
Related Articles
Advertisement
ನಮ್ಮದು ಬಹುಸಂಸ್ಕೃತಿಯ ನಾಡು ಎಂಬ ಅರಿವಿನಿಂದ ಸಮನ್ವಯದ ಹರಿಕಾರರಾಗಿ ನೂರಾರು ಕಾರ್ಯಕ್ರಮಗಳನ್ನು ಹಮ್ಮಿದರು. ಧಾರ್ಮಿಕ ಸಾಮರಸ್ಯವನ್ನು ಕಾಪಾಡುವುದರ ಜತೆಜತೆಯÇÉೇ ಭಾಷಾಸೌಹಾರ್ದವನ್ನೂ ಪೋಷಿಸಿದರು. ಮನೆ ಮಾತು ತುಳು, ದೇಶಭಾಷೆ ಕನ್ನಡ – ಇವೆರಡನ್ನೂ ಸಮನಾಗಿ ಪುರಸ್ಕರಿಸಿದರು. ಪ್ರತಿವರ್ಷ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವರು, ವಿಶ್ವತುಳು ಸಮ್ಮೇಳನವನ್ನೂ ನಡೆಸುವರು. ಆದರ್ಶಗಳನ್ನು ಬಿತ್ತುತ್ತ, ಮಾದರಿಗಳನ್ನು ನಿರ್ಮಿಸುತ್ತ ಅವರು ನಡೆದದ್ದೇ ಹೆ¨ªಾರಿಯಾಯಿತು. ತಾಯಿತಂದೆಯ ಬಳುವಳಿಯಾಗಿ ಬಂದ ಧಾರ್ಮಿಕತೆಗೆ ಆಮ್ಲಜನಕ ತುಂಬಿದರು. ಲಕ್ಷ್ಮಣ, ಭರತ, ಶತ್ರುಘ್ನರಂಥ ಸುರೇಂದ್ರ- ಹಷೇìಂದ್ರ-ರಾಜೇಂದ್ರ ತಮ್ಮಂದಿರು ಇರುವ ಅವಿಭಕ್ತ ಕುಟುಂಬದ ಮಹಿಮೆ ತೋರಿದರು. ಪತಿಗೆ ತಕ್ಕ ಸತಿ ಸೌಭಾಗ್ಯವತಿ ಹೇಮಾವತಿ. ನಾಡು ಕೊಂಡಾಡುವಂತೆ ಸ್ತ್ರೀಶಕ್ತಿಯ ಆವಿಷ್ಕಾರಕ್ಕೆ ಗಟ್ಟಿ ತಳಪಾಯ ಕಟ್ಟಿದ ಹಿರಿಮೆಯ ಹೂವನ್ನು ಮುಡಿದವರು.
ಮಹಿಳೆಯರು ಬೆವರು ಸುರಿಸಿ ಗಳಿಸಿದ ಹಣವನ್ನು ಹೇಗೆ ಪುನರುತ್ಪಾದಕ ಯೋಜನೆಗಳಲ್ಲಿ ತೊಡಗಿಸಿ ಸ್ವಾವಲಂಬಿಗಳಾಗಬಹುದೆಂಬುದನ್ನು ತಿಳಿಸಿ ಸಬಲೆಯರನ್ನಾಗಿಸಿದವರು ಹೇಮಾವತಿ ಹೆಗ್ಗಡೆಯವರು.
ಈ ಬಗೆಯಲ್ಲಿ ಹೆಗ್ಗಡೆಯವರ ಅಪಾರ ಸಿದ್ಧಿಸಾಧನೆಗಳು ನಾಡಿನ ಉದ್ದಗಲಗಳಲ್ಲಿ ಅನುರಣಿಸುತ್ತಿವೆ. ಅವರ ಕೊರಳಲ್ಲಿ ಪ್ರಶಸ್ತಿಗಳ ಮಣಿಮಾಲೆ, ಎದೆಯಲ್ಲಿ ಕರ್ನಾಟಕರತ್ನ ಪ್ರಶಸ್ತಿ ಕೌಸ್ತುಭ! ಹಂಪಿಯ ಕನ್ನಡ ವಿಶ್ವವಿದ್ಯಾಲಯ ನೀಡಿದ ನಾಡೋಜ ಡಾಕ್ಟರೇಟ್, ಭಾರತ ಸರ್ಕಾರವಿತ್ತ ಪದ್ಮಭೂಷಣ, ಈಟಿವಿಯವರು ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಿ ನೀಡಿದ ವಾಟಿಕಾ ಪ್ರಶಸ್ತಿ, ವಿದೇಶದ ವಿಶ್ವವಿದ್ಯಾಸಂಸ್ಥೆಗಳಿತ್ತ ಗೌರವ ಡಾಕ್ಟರೇಟ…- ಮೊದಲಾದುವು ಲೋಕಮನ್ನಣೆಯ ದಾಖಲೆಗಳು.
ಧರ್ಮಾಧಿಕಾರಿಯಾಗಿ ಪಟ್ಟಾಭಿಷಿಕ್ತರಾಗಿ ಅರ್ಧಶತಮಾನ ಪೂರೈಸಿ ಎಲ್ಲರ ಕಣ್ಮಣಿಯಾಗಿ ಶೋಭಿಸುತ್ತಿರುವ ಈ ಶುಭಾವಸರದಲ್ಲಿ ವೀರೇಂದ್ರ ಹೆಗ್ಗಡೆಯವರನ್ನು ಹೃತೂ³ರ್ವಕವಾಗಿ ಅಭಿನಂದಿಸೋಣ. ಆಯುರಾರೋಗ್ಯಭಾಗ್ಯದಿಂದ ನಲಿಯುತ್ತಿರಲೆಂದು ಹಾರೈಸೋಣ. ಸಾಲು ಸಾಲು ಹೊಚ್ಚಹೊಸ ಸಾಧನೆಗಳ ಸರದಾರನಿಗೆ ಸಾವಿರ ಸಲಾಂ !
– ನಾಡೋಜ ಹಂ. ಪ. ನಾಗರಾಜಯ್ಯ