Advertisement

ರೈತರನ್ನು ಬಂಡವಾಳ ಮಾಡಿಕೊಳ್ಳುವ ಹುನ್ನಾರ

06:46 AM Dec 30, 2018 | |

ಬೆಂಗಳೂರು: “ಸಾಲಮನ್ನಾ ನೆಪದಲ್ಲಿ ರಾಜಕಾರಣಿಗಳು ರೈತರನ್ನು “ಕ್ಯಾಪಿಟಲ್‌’ (ಬಂಡವಾಳ) ಮಾಡಿಕೊಳ್ಳಲು ಹೊರಟಿದ್ದು, ಈ ಆಮಿಷಕ್ಕೆ ಯಾರೂ ಮಾರುಹೋಗಬಾರದು’ ಎಂದು ಲೇಖಕಿ ಡಾ.ವೀಣಾ ಬನ್ನಂಜೆ ತಿಳಿಸಿದರು. ಅರಮನೆ ಮೈದಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ “ಹವ್ಯಕ ಕೃಷಿರತ್ನ’ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

Advertisement

“ಜಾತಿ, ಉದ್ಯಮಗಳಿಗೆ ಆಮಿಷವೊಡ್ಡಿ ನಮ್ಮನ್ನು ಈಗಾಗಲೇ ಬಳಸಿಕೊಂಡಾಗಿದೆ. ಆದರೆ, ಕೃಷಿಕರು ಮಾತ್ರ ರಾಜಕಾರಣಿಗಳ ಕೈಗೆ ಸಿಕ್ಕಿಲ್ಲ. ಈಗ ಸಾಲಮನ್ನಾ ಮೂಲಕ ರೈತರನ್ನೂ ಬಂಡವಾಳವನ್ನಾಗಿ ಬಳಸಿಕೊಳ್ಳಲು ಹೊರಟಿದ್ದಾರೆ. ಇದಕ್ಕೆ ರೈತರು ಮಾರುಹೋಗಬಾರದು. ಅಷ್ಟಕ್ಕೂ ನಮ್ಮ ಸಾಲ ತೀರಿಸಲು ಅವರ್ಯಾರು? ನಾವು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಕೊಡಿ ಸ್ವಾಮಿ ಸಾಕು’ ಎಂದು ಒತ್ತಾಯಿಸಿದರು.

ಸಾಫ್ಟ್ವೇರ್‌ ಉದ್ಯೋಗಿಗಳು ಬಕೆಟ್‌ ಹಿಡಿದುಕೊಂಡು ಕಂಪನಿಯ ಬಾಸ್‌ಗಳ ಹಿಂದೆ ಓಡಾಡುತ್ತಿದ್ದಾರೆ. ತಲೆಬಾಗಿಸಿದರೆ, ಅವರೆಲ್ಲಾ ತಮ್ಮ ಬಾಸ್‌ನ ಶೂ ಹಾಕಿದ ಕಾಲುಗಳನ್ನು ನೋಡಬೇಕು. ತಲೆ ಎತ್ತಿದರೆ, ಬಾಸ್‌ನ ಗಿಂಜುವ ಮುಖ ಕಾಣುತ್ತದೆ. ಇವೆರಡೂ ಬಿಟ್ಟರೆ, ಸಾಫ್ಟ್ವೇರ್‌ ಉದ್ಯೋಗಿಗಳಿಗೆ ಬೇರೆ ಗತಿ ಇಲ್ಲ. ಆದರೆ, ಕೃಷಿಕರು ತಲೆ ಕೆಳಗೆ ಮಾಡಿದರೆ, ಭೂತಾಯಿ ಮತ್ತು ತಲೆಯೆತ್ತಿದರೆ ಸೂರ್ಯ-ಚಂದ್ರರನ್ನು ಕಾಣುತ್ತಾರೆ.

ಹೀಗಿರುವಾಗ, ನಮ್ಮ ಮುಂದೆ ಯಾರು ದೊರೆ? ನಮಗೆ ನಾವೇ ದೊರೆ ಎಂದ ವೀಣಾ ಅವರು, ಕೃಷಿ ಎನ್ನುವುದು ಖುಷಿ ಮತ್ತು ಋಷಿಯ ಸಂಗಮ ಎಂದು ಅಭಿಪ್ರಾಯಪಟ್ಟರು. ವಕೀಲ ಕೆ. ದಿವಾಕರ್‌ ಮಾತನಾಡಿ, ಬಹುತೇಕ ಹವ್ಯಕರು ಅಡಕೆ ಬೆಳೆ ಅವಲಂಬಿಸಿದ್ದಾರೆ. ಆದರೆ, ನಿಷೇಧದ ಗುಮ್ಮದಿಂದ ನಿತ್ಯ ಆತಂಕದಲ್ಲಿ ಬದುಕುವಂತಾಗಿದೆ. ಇದಕ್ಕೆ ಸರ್ಕಾರ ಶಾಶ್ವರ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದರು. 

ಅಡಿಕೆಯು ಆರೋಗ್ಯಕ್ಕೆ ಹಾನಿಕಾರಕ ಅಲ್ಲ ಎಂಬುದನ್ನು ಸಾಬೀತುಪಡಿಸುವಲ್ಲಿ ಸರ್ಕಾರ ಮತ್ತು ವಿಜ್ಞಾನಿಗಳು ವಿಫ‌ಲರಾಗಿದ್ದಾರೆ. ಇದರಿಂದ ಅಡಕೆ ನಿಷೇಧದ ಗುಮ್ಮ ಕಾಡುತ್ತಲೇ ಇದೆ. ಇದನ್ನು ಪರಿಹರಿಸಬೇಕು. ಅಲ್ಲದೆ, ಗ್ರಾಮೀಣ ಭಾಗದಲ್ಲಿರುವ ಹವ್ಯಕ ಯುವಕರಿಗೆ ಹೆಣ್ಣು ಕೊಡಲು ಸಮಾಜದಲ್ಲಿ ಹಿಂದೇಟು ಹಾಕುವ ಪ್ರವೃತ್ತಿ ಹೆಚ್ಚಾಗುತ್ತಿದೆ.

Advertisement

ನಗರದ ಆಕರ್ಷಣೆ ಇದಕ್ಕೆ ಕಾರಣವಾಗಿದ್ದು, ಗ್ರಾಮೀಣ ಪ್ರದೇಶದ ಯುವಕರ ಬದುಕು ಆಕರ್ಷಣೀಯಗೊಳಿಸುವ ನಿಟ್ಟಿನಲ್ಲಿ ಸಮಾಜ ಚಿಂತನೆ ನಡೆಸಬೇಕು. ಅದೇ ರೀತಿ, ಮಠ-ಮಾನ್ಯಗಳ ಮೇಲೆ ಆಪಾದನೆಗಳು ಕೇಳಿಬಂದಾಗ, ಅದರ ಬಗ್ಗೆ ಕೋರ್ಟ್‌ನಲ್ಲಿ ತೀರ್ಪು ಕೊಟ್ಟಾಗಿದೆ. ಆದಾಗ್ಯೂ ಅಲ್ಲಲ್ಲಿ ಒಡಕು ದನಿಗಳು ಕೇಳಿಬರುತ್ತವೆ. ಅದಕ್ಕೆ ಸಮಾಜ ಉತ್ತರ ಕೊಡಬೇಕಾಗುತ್ತದೆ ಎಂದರು.

ಕ್ಯಾಂಪ್ಕೋ ಉಪಾಧ್ಯಕ್ಷ ಕೊಂಕೋಡಿ ಪದ್ಮನಾಭ ಮಾತನಾಡಿ, 2019ರ ಲೋಕಸಭಾ ಚುನಾವಣೆಯು ಒಂದು ಧರ್ಮಯುದ್ಧ. ಅದರಲ್ಲಿ ನಾವು ರಾಮನ ಕಡೆ ನಿಲ್ಲಬೇಕು. ಕೃಷಿಕರು, ಉದ್ಯಮಿಗಳೆಲ್ಲರೂ ಸೇರಿ ಭಾರತವನ್ನು ಮತ್ತೆ ಪರಮವೈಭವದ ಸ್ಥಿತಿಗೆ ಕೊಂಡೊಯ್ಯಬೇಕಿದೆ ಎಂದು ಹೇಳಿದರು. ಪರಿಸರವಾದಿ ಡಾ.ಯಲ್ಲಪ್ಪ ರೆಡ್ಡಿ ದಿಕ್ಸೂಚಿ ಭಾಷಣ ಮಾಡಿದರು. ಇದೇ ವೇಳೆ ಮಹಾಸಭಾದ ಅಮೃತ ಮಹೋತ್ಸವದ ಪ್ರಯುಕ್ತ 75 ಕೃಷಿ ಸಾಧಕರಿಗೆ “ಹವ್ಯಕ ಕೃಷಿರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next