Advertisement

ಮುಂಗಾರು ಬಿತ್ತನೆಗೆ ಮುಂದಾದ ನೇಗಿಲಯೋಗಿ

02:57 PM May 25, 2022 | Team Udayavani |

ಜೇಂದ್ರಗಡ: ಮಳೆಯ ಆರ್ಭಟದಿಂದ ಅತ್ಯುತ್ಸಾಹದಲ್ಲಿರುವ ತಾಲೂಕಿನ ರೈತರು, ಇದೀಗ ಮತ್ತೂಂದು ಮುಂಗಾರು ಹಂಗಾಮಿಗೆ ಸಿದ್ಧರಾಗಿದ್ದಾರೆ. ಅನ್ನದಾತರು ನೇಗಿಲು ಹೊತ್ತು ಹೊಲಗಳತ್ತ ಮುಖ ಮಾಡಿದ್ದಾರೆ.

Advertisement

ಕಳೆದ ವರ್ಷ ಸಮರ್ಪಕವಾಗಿ ಮಳೆಯಾದರೂ ಬಿತ್ತಿದ ಬೆಳೆಗೆ ಸೂಕ್ತ ಬೆಲೆ ಸಿಗದೇ ಸಂಕಷ್ಟ ಅನುಭವಿಸಿದ ನೋವಿನಿಂದ ರೈತರು ಇನ್ನೂ ಹೊರಬಂದಿಲ್ಲ. ಮುಂಗಾರು ಮಳೆ ಇನ್ನೂ ಆರಂಭವಾಗದಿದ್ದರೂ ಮುಂಗಾರು ಪೂರ್ವ ಮಳೆ ರೈತರಿಗೆ ಒಂದಿಷ್ಟು ಹರ್ಷ ತಂದಿದೆ. ಇತ್ತೀಚೆಗೆ ವಾಡಿಕೆಗಿಂತ ಹೆಚ್ಚು ಮಳೆ ಸುರಿದ ಪರಿಣಾಮ ರೈತರು ಚಕ್ಕಡಿ, ಜೋಡೆತ್ತಿನೊಂದಿಗೆ ರಂಟೆ, ಕುಂಟಿ, ನೇಗಿಲು ಸಹಿತ ಹೊಲ ಹರಗಿ ಹದಗೊಳಿಸಿ ಬಿತ್ತನೆ ಮಾಡುತ್ತಿದ್ದಾರೆ.

ಹವಾಮಾನ ಕಳೆದ ಬಾರಿ ಕೃಷಿ ಇಲಾಖೆಯ ಲೆಕ್ಕಾಚಾರ ತಲೆಕೆಳಗಾಗುವಂತೆ ಮಾಡಿದೆ. ಆದರೆ, ಪ್ರಸಕ್ತ ಸಾಲಿನ ಮುಂಗಾರು ಹಂಗಾಮು ಮಳೆ ಉತ್ತಮವಾಗಲಿದೆ ಎನ್ನುವ ಹವಾಮಾನ ಇಲಾಖೆಯ ಮುನ್ಸೂಚನೆ ಕೃಷಿ ಚಟುವಟಿಕೆ ಚುರುಕುಗೊಳ್ಳಲು ಪುಷ್ಠಿ ನೀಡಿದೆ. ಕೃಷಿ ಇಲಾಖೆ ಮಾಹಿತಿ ಪ್ರಕಾರ ತಾಲೂಕಿನಲ್ಲಿ ಉತ್ತಮ ಮಳೆಯಾದರೆ ಮುಂಗಾರು ಹಂಗಾಮಿನಲ್ಲಿ ಅಂದಾಜು 32 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ವಿವಿಧ ಬೆಳೆ ಬೆಳೆಯಲಾಗುತ್ತದೆ.

ಎತ್ತುಗಳಿಗೆ ಭಾರೀ ಬೇಡಿಕೆ: ಇನ್ನೊಂದೆಡೆ ಪ್ರಸ್ತುತ ಮಳೆ ಆರಂಭವಾಗಿದ್ದರಿಂದ ಹೊಲ ಹದಗೊಳಿಸಿ ರೈತರು ಬಿತ್ತನೆ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಇನ್ನು ರೈತರ ಒಡನಾಡಿ ಎತ್ತುಗಳಿಗೆ ಭಾರೀ ಬೇಡಿಕೆ ಬಂದಿದೆ. ಸಂತೆಯಲ್ಲಿ ಸೀಮೆ ಎತ್ತು ಮತ್ತು ಜವಾರಿ ಎತ್ತುಗಳು 70 ಸಾವಿರದಿಂದ 80 ಸಾವಿರ ರೂ. ವರೆಗೂ ಮಾರಾಟವಾದವು. ಟ್ರ್ಯಾಕ್ಟರ್ ಇನ್ನಿತರ ಯಂತ್ರಗಳನ್ನು ಅವಲಂಬಿಸಿದ ಕೃಷಿ ವಲಯದಲ್ಲಿ ಬಿತ್ತನೆ ಮತ್ತಿತರ ಕೃಷಿ ಚಟುವಟಿಕೆಗೆ ಎತ್ತುಗಳು ತೀರಾ ಅವಶ್ಯಕ. ಹೀಗಾಗಿ, ಬೆಲೆ ಲೆಕ್ಕಿಸದೇ ರೈತರು ಎತ್ತುಗಳನ್ನು ಖರೀದಿ ಮಾಡುತ್ತಿದ್ದ ದೃಶ್ಯ ಪಟ್ಟಣದ ಮಾರುಕಟ್ಟೆಯಲ್ಲಿ ಕಂಡು ಬಂದಿತು.

ಹೊಲ ಹಸಿ ಆಗ್ಯಾವ್ರಿ. ಹೀಂಗಾಗಿ ಬಿತ್ತನೆ ಕೆಲಸ ಚಾಲೂ ಮಾಡಾಕ ಬೀಜ ತಂದ ಇಟ್ಟಿವ್ರಿ. ಕಳೆದ ವರ್ಷ ಮಳಿ ಆದ್ರೂ ಬೆಳೆದ ಬೆಳೆಗೆ ಬೆಲೆ ಇಲ್ದಂಗಾಗಿ ಕಷ್ಟ ಅನುಭವಿಸಿವ್ರಿ. ಈ ವರ್ಷವಾದರೂ ಉತ್ತಮ ಮಳೆ ಬರಬಹುದೆಂಬ ನಿರೀಕ್ಷೆ ಇಟ್ಕೊಂಡೇವ್ರಿ ಎನ್ನುವ ರೈತರ ಮುಖದಲ್ಲಿ ಮಳೆಯ ಅನಿಶ್ಚಿತತೆಯ ಆತಂಕ ಕಂಡುಬರುತ್ತದೆ.

Advertisement

ಗಜೇಂದ್ರಗಡ, ಗೋಗೇರಿ, ಗೌಡಗೇರಿ, ಕುಂಟೋಜಿ, ಮ್ಯಾಕಲಝರಿ, ಮಾಟರಂಗಿ, ರಾಮಾಪುರ, ಪುರ್ತಗೇರಿ, ಚಿಲ್‌ಝರಿ, ಕಾಲಕಾಲೇಶ್ವರ, ಕೊಡಗಾನೂರ, ವೀರಾಪುರ, ಬೈರಾಪುರ, ಜಿಗೇರಿ, ರಾಜೂರ, ದಿಂಡೂರ, ಲಕ್ಕಲಕಟ್ಟಿ, ಮುಶಿಗೇರಿ, ಕಲ್ಲಿಗನೂರ ಗ್ರಾಮಗಳಲ್ಲಿ ರೈತರು ತಮ್ಮ ಹೊಲದಲ್ಲಿ ಬಿತ್ತನೆಗೆ ಮುಂದಾಗಿದ್ದಾರೆ.

ವಾಣಿಜ್ಯ ಬೆಳೆಗಳಾದ ಹೆಸರು, ಗೋವಿನ ಜೋಳ, ಸಜ್ಜೆ, ಹೈಬ್ರೀಡ್ ಜೋಳ, ಗುರೆಳ್ಳು, ಯಳ್ಳು, ತೊಗರಿ ಇತ್ಯಾದಿ ಬೆಳೆಗಳ ಬಿತ್ತನೆಯಲ್ಲಿ ತಲ್ಲೀನರಾಗಿದ್ದಾರೆ. ಜೂನ್‌ ತಿಂಗಳಲ್ಲಿ ಮುಂಗಾರು ರಾಜ್ಯಕ್ಕೆ ಕಾಲಿಡಲಿದೆ. ಜೊತೆಗೆ ಈ ಬಾರಿ ಉತ್ತಮ ಮಳೆಯಾಗಲಿದೆ ಎಂಬ ಹವಾಮಾನ ಇಲಾಖೆಯ ಮಾಹಿತಿ ರೈತ ವಲಯದಲ್ಲಿ ಸಂತಸಕ್ಕೆ ಕಾರಣವಾಗಿದೆ. ಆದರೆ, ಮುಂಗಾರು ಆರಂಭಕ್ಕೆ ಇನ್ನೂ ಕೆಲವೇ ದಿನಗಳು ಬಾಕಿ ಇರುವಾಗ ವಾಡಿಕೆಗಿಂತ 136 ಮಿಮೀ ಮಳೆ ಸುರಿದಿರುವುದು ಕೃಷಿ ಚುಟುವಟಿಕೆ ಚುರುಕುಗೊಳ್ಳಲು ಸಹಕಾರಿಯಾಗಿದೆ.

ಈ ಬಾರಿ ಮುಂಗಾರು ಆರಂಭಕ್ಕೂ ಮುನ್ನವೇ ಮಳೆರಾಯ ಕೃಪೆ ತೋರಿದ್ದಾನೆ. ಇದರಿಂದ ಹೊಲ ಹಸಿಯಾಗಿವೆ. ಹೀಗಾಗಿ, ಹೊಲ ಹದಗೊಳಿಸಿ ಬಿತ್ತನೆ ಕಾರ್ಯ ಆರಂಭಿಸಿದ್ದೇವೆ. ಮಳೆರಾಯ ಕೈಹಿಡಿದರೆ ಮಾತ್ರ ರೈತರು ಬದುಕೋಕೆ ಸಾಧ್ಯ.  -ಕಳಕಪ್ಪ ಮೇಟಿ, ರೈತ

ಪ್ರಸಕ್ತ ಮುಂಗಾರು ಪ್ರವೇಶಕ್ಕೂ ಮುನ್ನ ತಾಲೂಕಿನಲ್ಲಿ ವಾಡಿಕೆ ಮಳೆ 64 ಮಿಮೀ ಇದೆ. ಆದರೆ, ಇತ್ತೀಚೆಗೆ 136 ಮಿಮೀ ಮಳೆ ಸುರಿದಿದ್ದು, ಮುಂಗಾರು ಬಿತ್ತನೆಗೆ ರೈತರು ಉತ್ಸುಕರಾಗಿದ್ದಾರೆ. ಹೀಗಾಗಿ, ಬೀಜ ವಿತರಣೆ ಮಾಡಲಾಗುತ್ತಿದೆ. ಯಾವುದೇ ಕೊರತೆಯಾಗದಂತೆ ಬೀಜ ವಿತರಿಸಲಾಗಿದೆ.  -ರವೀಂದ್ರ ಪಾಟೀಲ, ತಾಲೂಕು ಸಹಾಯಕ ಕೃಷಿ ನಿರ್ದೇಶಕರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next