Advertisement

ಬೇಗ ಬಂದ್ ಆದ ಹೊಟೇಲು: ಊಟ ಸಿಕ್ಕಿಲ್ಲವೆಂದು ರೈತರಿಂದ ರಾತ್ರೋರಾತ್ರಿ ಪ್ರತಿಭಟನೆ

11:35 PM Jan 20, 2022 | Team Udayavani |

ಹುಬ್ಬಳ್ಳಿ: ಪೊಲೀಸರು ಬೇಗನೆ ಹೊಟೇಲುಗಳನ್ನು ಬಂದ್ ಮಾಡಿಸಿದ್ದರಿಂದ ಊಟ ಸಿಕ್ಕಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿ ನೂರಾರು ರೈತರು ಇಲ್ಲಿನ ಎಪಿಎಂಸಿ ಎದುರು ಹು-ಧಾ ಮುಖ್ಯ ರಸ್ತೆ ಹಾಗೂ ಬಿಆರ್ ಟಿಎಸ್ ರಸ್ತೆ ಬಂದ್ ಮಾಡಿ ಗುರುವಾರ ರಾತ್ರಿ ಪ್ರತಿಭಟಿಸಿದರು.

Advertisement

ಮೆಣಸಿನಕಾಯಿ ಮಾರಾಟಕ್ಕೆ ಧಾರವಾಡ ಸೇರಿದಂತೆ ಗದಗ, ಬಾಗಲಕೋಟೆ ಜಿಲ್ಲೆ ಹಾಗೂ ಬೇರೆ ಬೇರೆ ಊರುಗಳಿಂದ ರೈತರು ಬಂದಿದ್ದರು. ಮೆಣಸಿನಕಾಯಿ ತೂಕ ಆಗಿಲ್ಲ. ಪೊಲೀಸರು ಬೇಗನೇ ಎಲ್ಲ ಹೋಟೆಲ್ ಗಳನ್ನು ಬಂದ್ ಮಾಡಿಸಿದ್ದಾರೆ. ಹೀಗಾಗಿ ಇಲ್ಲಿಯೇ ವಾಸ್ತವ್ಯ ಮಾಡಿರುವ ನಮಗೆ ರಾತ್ರಿ ಊಟ ಸಿಗುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿ ರಸ್ತೆ ತಡೆನಡೆಸಿ ಪ್ರತಿಭಟನೆ ನಡೆಸಿದರು.

ಸ್ಥಳಕ್ಕೆ ಎಸಿಪಿ ವಿನೋದ ಮುಕ್ತೇದಾರ ಹಾಗೂ ಎಪಿಎಂಸಿ-ನವನಗರ ಠಾಣೆ ಇನ್ಸಪೆಕ್ಟರ್ ಮತ್ತು ಸಿಬ್ಬಂದಿ ತೆರಳಿ, ಪತ್ರಿಭಟನಾನಿರತ ರೈತರ ಮನವೊಲಿಸಿ ಪ್ರತಿಭಟನೆ ಹಿಂಪಡೆಯುವಂತೆ ಮಾಡಿದರು. ಅವರಿಗೆ ಎಪಿಎಂಸಿ ಯಲ್ಲಿಯೇ ಊಟದ ವ್ಯವಸ್ಥೆ ಮಾಡಿಸಿದರು.

ಗುರುವಾರ ಒಂದೇದಿನ ಇಲ್ಲಿನ ಎಪಿಎಂಸಿಗೆ 42ಸಾವಿರ ಚೀಲ ಮೆಣಸಿನಕಾಯಿ ಆವಕವಾಗಿದೆ. ಬೆಳಗ್ಗೆ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ರೈತರು ಮೆಣಸಿನಕಾಯಿ ತಂದಿದ್ದರಿಂದ ವ್ಯಾಪಾರಸ್ಥರು ಇಳಿಸಿಕೊಳ್ಳಲು ಸ್ಥಳವಿಲ್ಲವೆಂದು ನಿರಾಕರಿಸಿದ್ದರು. ಆಗಲೂ ರೈತರು ಎಪಿಎಂಸಿ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದರು. ಪೊಲೀಸರು ಸ್ಥಳಕ್ಕೆ ಆಗಮಿಸಿ ವ್ಯಾಪಾರಸ್ಥರ ಮನವೊಲಿಸಿ ರೈತರು ತಂದಿದ್ದ ಮೆಣಸಿನಕಾಯಿ ಇಳಿಸಿಕೊಳ್ಳುವ ವ್ಯವಸ್ಥೆ ಮಾಡಿಸಿದ್ದರು. ಆದರೆ ರಾತ್ರಿ ನಮಗೆ ಊಟ ಸಿಕ್ಕಿಲ್ಲವೆಂದು ರೈತರು ರಸ್ತೆ ತಡೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಿಂದಾಗಿ ಎರಡು ಬದಿಯ ಮಾರ್ಗದಲ್ಲಿ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು.

Advertisement
Advertisement

Udayavani is now on Telegram. Click here to join our channel and stay updated with the latest news.

Next