ಹಾವೇರಿ: ಮೂಲನಕ್ಷೆಯಲ್ಲಿರುವ ಜಮೀನು ಬಿಟ್ಟು ಬೇರೆ ಜಮೀನಿನಲ್ಲಿ ತುಂಗಾ ಮೇಲ್ದಂಡೆ ಯೋಜನೆಯ ಕಾಲುವೆ ಕಾಮಗಾರಿ ಮಾಡುತ್ತಿದ್ದಾರೆಂದು ಆಕ್ಷೇಪಿಸಿ ರೈತರಿಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬುಧವಾರ ಕಳ್ಳಿಹಾಳ ಹಾಗೂ ನಗರದ ಜಿಲ್ಲಾಸ್ಪತ್ರೆ ಬಳಿ ನಡೆಯಿತು.
ಕಾಲುವೆ ನಿರ್ಮಾಣಕ್ಕಾಗಿ ಅಧಿಕಾರಿಗಳು ಬುಧವಾರ ಜೆಸಿಬಿ ಯಂತ್ರದೊಂದಿಗೆ ಪೊಲೀಸ್ ಭದ್ರತೆಯಲ್ಲಿ ಕಳ್ಳಿಹಾಳ ಗ್ರಾಮಕ್ಕೆ ಆಗಮಿಸಿದ್ದರು.
ಕಾಮಗಾರಿ ಸ್ಥಳದಲ್ಲಿ ಜಮಾಯಿಸಿದ ರೈತರು, ಮೂಲನಕ್ಷೆ ಬಿಟ್ಟು ಬೇರೆ ಜಮೀನಿನಲ್ಲಿ ಕಾಲುವೆ ನಿರ್ಮಿಸುತ್ತಿದ್ದೀರಿ ಎಂದು ಕಾಮಗಾರಿಗೆ ತಡೆಯೊಡ್ಡಿದರು. ಈ ವೇಳೆ ರೈತರನ್ನು ಪೊಲೀಸರು ನಿಯಂತ್ರಿಸಲು ಮುಂದಾದಾಗ ಅಜ್ಜಪ್ಪ ಗೊಣ್ಣೆಪ್ಪನವರ ಎಂಬ ರೈತ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ. ಕೂಡಲೇ ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ರೈತ ವಿಷ ಸೇವಿಸಿದ ಸುದ್ದಿ ಹರಡುತ್ತಿದ್ದಂತೆ ಕಳ್ಳಿಹಾಳ, ತೋಟದಯಲ್ಲಾಪುರ ಗ್ರಾಮದ ನೂರಾರು ರೈತರು ಜಿಲ್ಲಾಸ್ಪತ್ರೆ ಎದುರು ಧಾವಿಸಿದರು.
ಈ ವೇಳೆ ಪೊಲೀಸರೊಂದಿಗೆ ವಾಗ್ವಾದ ನಡೆದು, ವಾತಾವರಣ ಪ್ರಕ್ಷುಬಟಛಿಗೊಂಡಿತು. ಆಗ ರೈತ ಪುಟ್ಟಪ್ಪ ಎಂಬಾತ ವಿಷ ಕುಡಿಯಲು ಮುಂದಾದಾಗ ಪೊಲೀಸರು ಬಾಟಲಿ ಕಿತ್ತುಕೊಂಡು ಅನಾಹುತ ತಡೆದರು. ಘಟನೆ ಬಳಿಕ ಇತ್ತ ಕಳ್ಳಿಹಾಳದಲ್ಲಿ ಕಾಮಗಾರಿ ನಡೆಸಲು ಬಂದಿದ್ದ ಅಧಿಕಾರಿಗಳು ವಾಪಸ್ಸಾದರು.