ತಿ.ನರಸೀಪುರ: ಕಬ್ಬಿನ ಬೆಲೆ ದರ ನಿಗದಿ, ಕಟಾವು ವೆಚ್ಚ ಕಡಿಮೆ ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ಕಬ್ಬು ಬೆಳೆಗಾರರ ಸಂಘದ ಮುಖಂಡರು ಹಾಗೂ ಕಾರ್ಯಕರ್ತರು ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವ ರಾಜು, ನಂಜನಗೂಡಿನ ಬಣ್ಣಾರಿ ಅಮ್ಮನ್ ಹಾಗೂಕುಂತೂರು ಸಕ್ಕರೆ ಕಾರ್ಖಾನೆ ಯವರು ಕಬ್ಬು ಪೂರೈಸಿದ ರೈತರಿಗೆ ಕಳೆದ ವರ್ಷದ ಬೆಲೆಗಿಂತ ಪ್ರತಿ ಟನ್ಗೆ 350 ರಿಂದ 450 ರೂ.ಗಳನ್ನು ಕಡಿಮೆ ನೀಡುತ್ತಿದ್ದಾರೆ.
ಕೇಳಿದರೆ ಇಲ್ಲಸಲ್ಲದ ಕಾರಣ ಹೇಳಿ ಕಳೆದ ವರ್ಷಕ್ಕಿಂತ ಕಬ್ಬು ಕಟಾವು ಕೂಲಿ ಹಾಗೂ ಸಾಗಾಣಿಕಾ ವೆಚ್ಚವನ್ನು ಯಾರ ಗಮನಕ್ಕೂ ತಾರದೇ ರೈತರಿಂದ ಹೆಚ್ಚುವರಿ ಹಣ ಕಡಿತ ಮಾಡಿ ರೈತರನ್ನು ಶೋಷಿಸಲಾಗುತ್ತಿದೆ ಎಂದು ದೂರಿದರು.
ಅವೈಜ್ಞಾನಿಕ ಬೆಳೆ ವಿಮಾ ಯೋಜನೆಯಿಂದ ರೈತರಿಗೆ ಯಾವುದೇ ಪ್ರಯೋಜನ ವಿಲ್ಲ. ಒಂದು ಜಿಲ್ಲೆ ಒಂದು ಬೆಳೆ ಎಂಬ ನೀತಿ ಜಾರಿ ಮಾಡಿ ರೈತರಿಗೆ ಬೆಳೆ ವಿಮಾ ಪರಿಹಾರ ಸಿಗದಂತಾಗಿದೆ.
ಆದ್ದರಿಂದ ರೈತರ ಜಮೀನಿನ ಆಯಾ ವರ್ಷದ ಎಲ್ಲಾ ಬೆಳೆಯ ಮೇಲೆ ಬಿಮಾ ಫಸಲ್ ವಿಮಾ ಯೋಜನೆ ಜಾರಿಯಾಗಬೇಕು ಎಂದು ಆಗ್ರಹಿಸಿದರಲ್ಲದೇ ನಮ್ಮ ಬೇಡಿಕೆಗಳನ್ನು ಒಂದು ವಾರದೊಳಗೆ ಈಡೇರಿಸದಿದ್ದಲ್ಲಿ ವಾರದ ರಸ್ತೆ ತಡೆ ಚಳುವಳಿ ನಡೆಸುವ ಎಚ್ಚರಿಕೆ ನೀಡಿದರು.
ಬಳಿಕ ತಹಶೀಲ್ದಾರ್ ಸಿ. ಜಿ. ಗೀತಾ ಅವರಿಗೆ ಮನವಿ ಸಲ್ಲಿಸಲಾಯಿತು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಗಸೂರು ಶಂಕರ್ ಹಾಗೂ ತಾಲ್ಲೂಕು ಅಧ್ಯಕ್ಷ ಕುರುಬೂರು ಸಿದ್ದೇಶ್, ಕಾರ್ಯ ದರ್ಶಿ ಪ್ರಸಾದ್ ನಾಯಕ್, ಬನ್ನಹಳ್ಳಿಹುಂಡಿ ಡಿ ರಾಜೇಂದ್ರ, ಬೆನಕನಹಳ್ಳಿ ಪರಶಿವಮೂರ್ತಿ, ಹಾಡ್ಯ ರವಿ, ವಾಚ್ ಕುರ್ಮಾ, ತರಕಾರಿ ಲಿಂಗರಾಜು, ರಾಜಶೇಖರ್ಶಿವಕುಮಾರ್, ಯೋಗೇಶ್, ಶಾಂತರಾಜು, ಬಸವರಾಜು, ಕುಳ್ಳೇಗೌಡ, ಶಿವಾಜಿ,ನಂಜುಂಡಸ್ವಾಮಿ, ಮಂಜು, ಪುಟ್ಟಸ್ವಾಮಿ ಶಂಭು ರವೀಶ್, ರೂಪೇಶ್ ಇದ್ದರು.