Advertisement

ರೈತರ ಹಾಲಿನ ಖರೀದಿ ದರ 2 ರೂ. ಇಳಿಕೆ

05:36 PM Nov 11, 2021 | Team Udayavani |

ಮಂಡ್ಯ: ಮನ್‌ಮುಲ್‌ ಹಾಲು ಉತ್ಪಾದಕ ರೈತರಿಂದ ಖರೀದಿಸುವ ಹಾಲಿನ ದರ ನ.11ರಿಂದ ಜಾರಿಗೆ ಬರುವಂತೆ ದರವನ್ನು 2 ರೂ. ಪರಿಷ್ಕರಿಸಿ ಆದೇಶ ಹೊರಡಿಸಿದೆ. ಅಲ್ಲದೆ, ಮುಂದಿನ ಆದೇಶದವರೆಗೂ ಈ ದರ ಜಾರಿಯಲ್ಲಿರಲಿದೆ ಎಂದು ತಿಳಿಸಿದೆ.

Advertisement

ಪ್ರಸ್ತುತ ರೈತರಿಂದ ಖರೀದಿಸುವ ಕನಿಷ್ಠ ಜಿಡ್ಡಿನಾಂಶ ಶೇ.3.5ರಷ್ಟು ಹಾಗೂ ಜಿಡ್ಡೇತರ ಘನಾಂಶ ಶೇ.8.50 ಅಂಶವುಳ್ಳ ಪ್ರತಿ ಲೀಟರ್‌ ಹಾಲಿಗೆ 26.90 ರೂ. ನೀಡಲಾಗುತ್ತಿತ್ತು. ಅದರಲ್ಲಿ 2 ರೂ. ಕಡಿತಗೊಳಿಸಿದ್ದು, 24.90 ರೂ. ಇಳಿಕೆಯಾಗಿದೆ. ಸಂಘದ ಉತ್ಪಾದಕರಿಗೆ ಕನಿಷ್ಠ ಜಿಡ್ಡಿನಾಂಶವಿರುವ ಪ್ರತಿ ಲೀಟರ್‌ಗೆ 26 ರೂ. ನೀಡಲಾಗುತ್ತಿತ್ತು. ಅದರಲ್ಲಿ 2 ರೂ. ಕಡಿತಗೊಳಿಸಿ 24 ರೂ.ಗೆ ಇಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.

ದಾಸ್ತಾನು: ಮಂಡ್ಯ ಜಿಲ್ಲಾ ಹಾಲು ಒಕ್ಕೂಟದಲ್ಲಿ ಪ್ರತಿದಿನ ಹಾಲಿನ ಶೇಖರಣೆ ಹೆಚ್ಚಾಗಿದೆ. ಅಲ್ಲದೆ, ಬೇಡಿಕೆಗಳಿಗನುಗುಣವಾಗಿ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಪೂರೈಸಲಾಗುತ್ತಿದೆ. ಆದರೆ ಹೆಚ್ಚುವರಿ ಹಾಲನ್ನು ಹಾಲಿನ ಪುಡಿ ಹಾಗೂ ಬೆಣ್ಣೆಯಾಗಿ ಪರಿವರ್ತಿಸಿ ದಾಸ್ತಾನಿಡಲಾಗುತ್ತಿದೆ. ಸೆಪ್ಟೆಂಬರ್‌ನಿಂದ ಪ್ರತಿದಿನ 8.91 ಲಕ್ಷ ಲೀ.ಸಂಗ್ರಹವಾಗುತ್ತಿದೆ. ಅದರಲ್ಲಿ 2.93 ಲಕ್ಷ ಲೀ.ಹಾಲು, 48 ಸಾವಿರ ಲೀ.ಮೊಸರು, 3738 ಲೀ.ಹಾಲಿನ ಉತ್ಪನ್ನ, 49 ಸಾವಿರ ಲೀ.ಹಾಲನ್ನು ಯುಎಚ್‌ಟಿ ತಯಾರಿಸಲು ಬಳಸಲಾಗುತ್ತಿದೆ.

ಇದನ್ನೂ ಓದಿ:- ತುಳುನಾಡಿನ SUPERSTAR ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ಜೊತೆ …

ಉಳಿದ 1.40 ಲಕ್ಷ ಲೀ. ಹಾಲನ್ನು ಅಂತರ್‌ ರಾಜ್ಯ ಡೇರಿ ಹಾಗೂ ಹೊರ ರಾಜ್ಯಗಳಿಗೆ ಮಾರಾಟ ಸೇರಿದಂತೆ ಒಟ್ಟು ಸರಾಸರಿ 3.38 ಲಕ್ಷ ಲೀ.ಹಾಲನ್ನು ಪರಿವರ್ತನೆ ಮಾಡಲಾಗುತ್ತಿದೆ.

Advertisement

15 ಮೆಟ್ರಿಕ್‌ ಟನ್‌ ತುಪ್ಪ ದಾಸ್ತಾನು: ನಿರೀಕ್ಷಿತ ಮಟ್ಟಕ್ಕಿಂತ ಹೆಚ್ಚುವರಿ ಹಾಲು ಸಂಗ್ರಹಣೆ ಯಾಗುತ್ತಿರುವುದರಿಂದ ಒಕ್ಕೂಟದಲ್ಲಿ 3,662 ಮೆಟ್ರಿಕ್‌ ಟನ್‌ ಕೆನೆರಹಿತ ಹಾಲಿನಪುಡಿ, 1,913 ಮೆಟ್ರಿಕ್‌ ಟನ್‌ ಬೆಣ್ಣೆ, 316 ಮೆಟ್ರಿಕ್‌ ಟನ್‌ ಕೆನೆಭರಿತ ಹಾಲಿನಪುಡಿ, 15 ಮೆಟ್ರಿಕ್‌ ಟನ್‌ ತುಪ್ಪ ದಾಸ್ತಾನಿದೆ. ಪ್ರಸ್ತುತ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ಹಸಿರು ಮೇವು ಹೆಚ್ಚಾಗಲಿದೆ. ಇದರಿಂದ ಹಾಲಿನ ಸಂಗ್ರಹಣೆ ಮುಂದಿನ ದಿನಗಳಲ್ಲಿ 10 ಲಕ್ಷ ಲೀ.ಪ್ರತಿದಿನ ಸಂಗ್ರಹವಾಗುವ ನಿರೀಕ್ಷೆ ಇದೆ.

ಕೊರೊನಾ ಸೋಂಕಿನ ಪರಿಣಾಮ ಲಾಕ್‌ಡೌನ್‌ ಆಗಿದ್ದರಿಂದ ಸಭೆ, ಸಮಾರಂಭಗಳು ನಡೆಯದ ಪರಿಣಾಮ ಹಾಲು ಹಾಗೂ ಹಾಲಿನ ಉತ್ಪನ್ನಗಳಿಗೆ ಸೂಕ್ತ ಬೆಲೆ ಹಾಗೂ ಬೇಡಿಕೆ ಕುಸಿತವಾಗಿರುವುದರಿಂದ ಸೆಪ್ಟೆಂಬರ್‌ ತಿಂಗಳಿಗೆ ಸುಮಾರು 33.12 ಕೋಟಿ ರೂ. ಒಕ್ಕೂಟಕ್ಕೆ ನಷ್ಟವಾಗಿದೆ. ಆದ್ದರಿಂದ ಒಕ್ಕೂಟ ಹಾಗೂ ಸಂಘಗಳ ಹಿತದೃಷ್ಟಿಯಿಂದ ಹಾಗೂ ಆರ್ಥಿಕ ಪರಿಸ್ಥಿತಿಯನ್ನು ಸಮತೋಲನದಲ್ಲಿಡಲು ನ.11ರ ಬೆಳಗ್ಗೆಯಿಂದ ಖರೀದಿ ದರ 2 ರೂ. ಕಡಿಮೆ ಮಾಡಿ ದರ ಪರಿಷ್ಕರಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.

‌“ಪ್ರತಿದಿನ ಹಾಲಿನ ಸಂಗ್ರಹಣೆ ಹಾಗೂ ಹಾಲಿನ ಉತ್ಪನ್ನಗಳ ಸಂಗ್ರಹ ಹೆಚ್ಚಾಗಿರುವುದರಿಂದ ಖರೀದಿ ದರ 2 ರೂ. ಕಡಿತಗೊಳಿಸಲಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಹಾಲು ಉತ್ಪಾದಕರ ಒಕ್ಕೂಟಗಳಲ್ಲೂ ದರ ಕಡಿಮೆ ಮಾಡಲಾಗಿದೆ. ಅದರಂತೆ ನಮ್ಮ ಒಕ್ಕೂಟದಲ್ಲೂ ಕಡಿಮೆ ಮಾಡಲಾಗಿದೆ.” – ಬಿ.ಆರ್‌.ರಾಮಚಂದ್ರು, ಅಧ್ಯಕ್ಷರು, ಮನ್‌ಮುಲ್‌.

Advertisement

Udayavani is now on Telegram. Click here to join our channel and stay updated with the latest news.

Next