Advertisement

ಸಹಕಾರ ಕ್ಷೇತ್ರದಿಂದ ರೈತರ ಬದುಕು ಹಸನು

09:54 PM Jan 11, 2020 | Lakshmi GovindaRaj |

ಮಾಲೂರು: ಕೋಲಾರ ಮತ್ತು ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಮತ್ತು ಡಿಸಿಸಿ ಬ್ಯಾಂಕ್‌ ಒಟ್ಟಿಗೆ ತನ್ನ ಕಾರ್ಯಕ್ರಮ ರೂಪಿಸಿದಲ್ಲಿ ಎರಡೂ ಜಿಲ್ಲೆಯ ರೈತರು ಮತ್ತು ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿಸಲು ಸಾಧ್ಯ ಎಂದು ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.

Advertisement

ಪಟ್ಟಣದ ಡಿಸಿಸಿ ಬ್ಯಾಂಕ್‌ ಆವರಣದಲ್ಲಿ ತಾಲೂಕಿನ ದೊಡ್ಡಶಿವಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ವ್ಯಾಪ್ತಿಯಲ್ಲಿನ ಮಹಿಳಾ ಸ್ವಹಾಯ ಸಂಘಗಳಿಗೆ 3.07 ಕೋಟಿ ರೂ.ಸಾಲ ವಿತರಿಸಿ ಮಾತನಾಡಿದ ಅವರು, ಎರಡೂ ಜಿಲ್ಲೆಯ ರೈತರ ಜೀವಾಳವಾಗಿರುವ ಹೈನುಗಾರಿಕೆ ಮತ್ತಷ್ಟು ಉತ್ತಮ ಪಡಿಸಿ ರೈತರ ಬದುಕು ಹಸನಾಗಿಸುವ ಜೊತೆಗೆ ರೈತರ ಮಹಿಳೆಯರು ಸ್ವಾವಲಂಬಿಗಳಾಗಿ ಬದಕಲು ಹಾಲು ಒಕ್ಕೂಟ ಮತ್ತು ಡಿಸಿಸಿ ಭ್ಯಾಂಕ್‌ ಒಟ್ಟಿಗೆ ಕೆಲಸಮಾಡಬೇಕಾಗಿದೆ ಎಂದರು.

ಶಾಸಕ ಕೆ.ವೈ.ನಂಜೇಗೌಡ ಕೋಚಿಮಲ್‌ ಅಧ್ಯಕ್ಷ ಆಗಿರುವುದರಿಂದ ಹೈನುಗಾರಿಗೆಯ ಪ್ರಗತಿಗಾಗಿ ಡಿಸಿಸಿ ಬ್ಯಾಂಕಿನ ಪ್ರಗತಿಯೊಂದಿಗೆ ಕೈ ಜೋಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ಕೋಚಿಮಲ್‌ ಅಧ್ಯಕ್ಷರೊಂದಿಗೆ ಚರ್ಚಿಸಿದ್ದು ಸೂಕ್ತವಾಗಿ ಸ್ಪಂದಿಸುತ್ತಿದ್ದಾರೆ ಎಂದರು.

ಎರಡೂ ಜಿಲ್ಲೆಗಳ ಹಾಲು ಉತ್ಪಾದಕರಿಗೆ ಪ್ರತಿ ತಿಂಗಳು ಎಲ್ಲಾ ಮೂಲಗಳಿಂದ ಕನಿಷ್ಠ 100 ಕೋಟಿ ರೂ. ಆರ್ಥಿಕ ವಹಿವಾಟು ನಡೆಯುತ್ತಿದ್ದು, ಸಾಲ ಪಡೆದ ರೈತರು ಮತ್ತು ಮಹಿಳಾ ಸಂಘಗಳ ಸದಸ್ಯರು ತಮ್ಮ ಉಳಿತಾಯದ ಹಣವನ್ನು ಡಿಸಿಸಿ ಬ್ಯಾಂಕ್‌ಗಳಲ್ಲಿಯೇ ಠೇವಣಿ ಇಡುವಂತೆ ಮಾಡಬೇಕಾಗಿದೆ ಎಂದರು.

ಮಹಿಳಾ ವಿಮಾ ಯೋಜನೆ ಅನುಷ್ಠಾನ: ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಅಕಾಲಿಕವಾಗಿ ಮೃತರಾದಲ್ಲಿ ಸಾಲದ ಹಣದ ಪಾವತಿಯ ಉದ್ದೇಶದಿಂದ ಪ್ರತಿ ಸದಸ್ಯರಿಂದಲೂ 500 ರೂ. ವಿಮಾಕಂತು ಪಡೆದು ಗುಂಪು ವಿಮೆ ಮಾಡಿಸಲಾಗುತ್ತಿದೆ. ಇದರಿಂದ ಅಕಾಲಿಕವಾಗಿ ಸಂಘದ ಸದಸ್ಯರು ಮೃತರಾದಲ್ಲಿ ಮೃತರ ಪಾಲಿನ ಸಾಲವನ್ನು ವಿಮಾ ಕಂಪನಿಯು ನೀಡಲಿದೆ ಎಂದರು.

Advertisement

ಶಾಸಕ ಹಾಗೂ ಕೋಚಿಮಲ್‌ನ ಅಧ್ಯಕ್ಷ ಕೆ.ವೈ.ನಂಜೇಗೌಡ ಮಾತನಾಡಿ, ಮುಂದಿನ ದಿನಗಳಲ್ಲಿ ಕೋಚಿಮಲ್‌ ವ್ಯಾಪ್ತಿಯ ಎಲ್ಲಾ ಹಾಲು ಉತ್ಪಾದಕ ಸಹಕಾರ ಸಂಘಗಳು ಮತ್ತು ಮಹಿಳಾ ಸ್ವಸಹಾಯ ಸಂಘಗಳು ಡಿಸಿಸಿ ಬ್ಯಾಂಕಿನಲ್ಲಿ ಠೇವಣಿ ಇಡುವಂತಾಗಬೇಕಾಗಿದೆ. ಮಹಿಳೆಯರು ತಮ್ಮ ಉಳಿತಾಯ ಖಾತೆಗಳನ್ನು ಡಿಸಿಸಿ ಬ್ಯಾಂಕಿನಲ್ಲಿ ತೆರೆಯಬೇಕು. ತಾಲೂಕಿನ 160 ಹಾಲು ಉತ್ಪಾದಕರ ಸಹಕಾರ ಖಾತೆಗಳು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಖಾತೆಗಳನ್ನು ಡಿಸಿಸಿ ಬ್ಯಾಂಕಿನಲ್ಲಿ ಆರಂಭಿಸುವುದಾಗಿ ತಿಳಿಸಿದರು.

ಡಿಸಿಸಿ ಬ್ಯಾಂಕಿನ ನಿರ್ದೇಶಕ ಕೆ.ಎಚ್‌.ಚನ್ನರಾಯಪ್ಪ, ದೊಡ್ಡಶಿವಾರ ಕೃಷಿ ಪತ್ತಿನ ಸಹಕಾರಸಂಘದ ಅಧ್ಯಕ್ಷ ಗೋವರ್ದನ ರೆಡ್ಡಿ, ಶಿವಾರಪಟ್ಟಣದ ಗ್ರಾಪಂ ಅಧ್ಯಕ್ಷೆ ಪರ್ವೀನ್‌ತಾಜ್‌, ವೆಂಕಟಗಿರಿಯಪ್ಪ, ಗೋಪಿನಾಥ್‌, ಮುನಿನಾರಾಯಣಪ್ಪ, ವೆಂಕಟಪ್ಪ, ಕೃಷ್ಣಪ್ಪ, ಶ್ರೀನಿವಾಸ್‌, ಟಿಎಪಿಸಿಎಂಎಸ್‌ನ ಅಧ್ಯಕ್ಷ ಶ್ರೀನಿವಾಸ್‌, ಬೈಯಣ್ಣ, ಡಿಸಿಸಿ ಬ್ಯಾಂಕಿನ ಮೇಲ್ವಿಚಾರಕ ಕೃಷ್ಣಪ್ಪ, ಮುಖ್ಯ ಕಾರ್ಯನಿರ್ವಹಕಾ ಸುಧಾಕರ್‌, ತಿರುಮೇಗೌಡ ಮತ್ತಿತರರು ಇದ್ದರು.

ಗೃಹೋಪಯೋಗಿ ವಸ್ತುಗಳು ಸುಲಭ ಕಂತಲ್ಲಿ ನೇರ ಮಾರಾಟ: ಮಹಿಳೆಯರ ಅನುಕೂಲಕ್ಕಾಗಿ ಗೃಪಯೋಗಿ ವಸ್ತುಗಳನ್ನು ಡಿಸಿಸಿ ಬ್ಯಾಂಕ್‌ ಸಹಯೋಗದಲ್ಲಿಯೇ ಮಾರಾಟ ಮಾಡುವ ಯೋಜನೆ ರೂಪಿಸಲಾಗಿದೆ. ತಮಗೆ ಬೇಕಾಗಿರುವ ಯಾವುದೇ ವಸ್ತುವನ್ನು ಖರೀದಿ ಮಾಡಿದರೂ ಮಾರುಕಟ್ಟೆಯ ಬೆಲೆಗಿಂತ ಕಡಿಮೆ ದರದಲ್ಲಿ ನೀಡುವುದರ ಜೊತೆಗೆ ಖರೀದಿ ಮಾಡಿರುವ ವಸ್ತುವನ್ನು ತಮ್ಮ ಮನೆ ಬಾಗಿಲಿಗೆ ತಲುಪಿಸುವ ಕೆಲಸವಾಗಲಿದೆ.

ಖರೀದಿ ಮಾಡಿದ ವಸ್ತುವಿನ ಹಣವನ್ನು ಒಂದೇ ಬಾರಿ ಕಟ್ಟಬೇಕಾಗಿಲ್ಲ. ಸುಲಭ ಕಂತುಗಳಲ್ಲಿ ಬಡ್ಡಿರಹಿತವಾಗಿ ಪಾವತಿಸುವ ಯೋಜನೆಯ ರೂಪಿಸಲಾಗಿದೆ ಎಂದು ಬ್ಯಾಲಹಳ್ಳಿ ಗೋವಿಂದ ಗೌಡ ಹೇಳಿದರು. 10 ಗ್ರಾಂನವರೆಗೂ ಚಿನ್ನಾಭರಣವನ್ನು ಶೂನ್ಯ ಬಡ್ಡಿದರದಲ್ಲಿ ಸುಲಭ ಕಂತುಗಳಲ್ಲಿ ನೀಡಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next