Advertisement

ಸಮಗ್ರ ಕೃಷಿಯಿಂದ ರೈತರ ಆದಾಯ ದ್ವಿಗುಣ: ಪಾಟೀಲ್‌

01:21 PM Jan 13, 2022 | Team Udayavani |

ಶಹಾಪುರ: ಹಳೇ ಕೃಷಿ ಪದ್ಧತಿಗೆ ಜೋತು ಬೀಳದೆ ರೈತರು ಭೂಮಿಯ ಹಿತ ಕಾಯುವ ಮತ್ತು ಆದಾಯ ದ್ವಿಗುಣಗೊಳಿಸುವ ಸಮಗ್ರ ಕೃಷಿ ಪದ್ಧತಿ ಅನುಸರಿಸಬೇಕು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್‌ ತಿಳಿಸಿದರು.

Advertisement

ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯದಲ್ಲಿ 4.11 ಕೋಟಿ ರೂ. ವೆಚ್ಚದಲ್ಲಿ ವಿದ್ಯಾರ್ಥಿನಿಯರಿಗಾಗಿ ವಸತಿ ನಿಲಯ ನಿರ್ಮಾಣದ ಶಂಕುಸ್ಥಾಪನೆ ಕಾರ್ಯ ನೆರವೇರಿಸಿ ಅವರು ಮಾತನಾಡಿದರು.

ಹಲವಾರು ವರ್ಷಗಳಿಂದ ಒಂದೇ ಬೆಳೆ ಬೆಳೆಯುವದರಿಂದ ಭೂಮಿ ಮೇಲೆ ಪರಿಣಾಮ ಬೀರಲಿದೆ. ಸವಳು-ಜವಳಾಗಿ ಮಾರ್ಪಾಡಾಗುವ ಸಾಧ್ಯತೆ ಇದೆ. ಭೂಮಿಯಲ್ಲಿನ ಲವಣಾಂಶಗಳು ಕಡಿಮೆಯಾಗಲಿದೆ. ಈ ಕುರಿತು ರೈತರು ಗಮನ ಹರಿಸುವ ಅಗತ್ಯವಿದೆ. ಕೃಷ್ಣಾ ಭಾಗ್ಯ ಜಲ ನಿಗಮದ ನೀರಾವರಿ ಯೋಜನೆ ಈ ಭಾಗಕ್ಕೆ ವರದಾನವಾಗಿದ್ದು, ರೈತರು ಕೇವಲ ಭತ್ತಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡದೆ, ನೀರಾವರಿ ಸದ್ಭಳಕೆ ಮಾಡಿಕೊಳ್ಳಬೇಕು. ಕೃಷಿ ವಿಜ್ಞಾನಿಗಳ ಸಹಕಾರ ಪಡೆದು ರೈತರು ಶ್ರೇಯೋಭಿವೃದ್ಧಿಗೆ ಕೃಷಿಯ ಜತೆಗೆ ಪೂರಕವಾದ ಉಪ ಕಸುಬುಗಳ ಬಗ್ಗೆ ಗಮನ ಹರಿಸಬೇಕು. ಅಲ್ಲದೆ ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆಯಾದ ಆತ್ಮ ನಿರ್ಭರದಡಿ ಆಹಾರ ಸಂಸ್ಕರಣಾ ಘಟಕಗಳಿಗೆ ಪ್ರೋತ್ಸಾಹ ದೊರೆಯಲಿದೆ. ಪ್ರಸ್ತುತ ತಾಂತ್ರಿಕ ಶಿಕ್ಷಣಕ್ಕಿಂತಲೂ ಕೃಷಿ ಪದವಿ ಪಡೆಯಲು ಪೈಪೋಟಿ ನಡೆಯುತ್ತಿದೆ. ರೈತರ ಮಕ್ಕಳಿಗಾಗಿ ಶೇ.10ರಷ್ಟು ಸೀಟುಗಳನ್ನು ಹೆಚ್ಚಿಸಲಾಗಿದೆ. ಅಲ್ಲದೆ ಎಲ್ಲ ವರ್ಗದ ಮಕ್ಕಳಿಗೂ 11,500 ವಿದ್ಯಾನಿ (ಸ್ಕಾಲರ್‌ಶಿಪ್‌) ವ್ಯವಸ್ಥೆ ಕಲ್ಪಿಸಲಾಗಿದೆ. ಕಳೆದ ವರ್ಷ ಕೋವಿಡ್‌ ಸಂದರ್ಭದಲ್ಲಿ ಕೃಷಿ ವಿದ್ಯಾರ್ಥಿಗಳಿಗೆ ಕೃಷಿ ದರ್ಶನ ಶೈಕ್ಷಣಿಕ ಪ್ರವಾಸಕ್ಕೆ ಹೋಗುವುದು ಸಾಧ್ಯವಾಗಿಲ್ಲ. ವಿದ್ಯಾರ್ಥಿಗಳ ಹೆಸರಲ್ಲಿ ಉಳಿದಿರುವ ಹಣವನ್ನು ವಿದ್ಯಾರ್ಥಿಗಳಿಗೆ ಮರಳಿ ಕೊಡಬೇಕು. ಈ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಮಾತನಾಡಿ, ರೈತರ ಹೊಲಗಳಿಗೆ ಸಮರ್ಪಕ ನೀರು, ವಿದ್ಯುತ್‌ ಸೌಕರ್ಯ, ಬೆಳೆಗೆ ಉತ್ತಮ ಬೆಲೆ ಇವು ರೈತರ ಪ್ರಮುಖ ಬೇಡಿಕೆ. ಯಾವುದೇ ಸರ್ಕಾರ ಬಂದರೂ ಈ ಬೇಡಿಕೆ ಸಮರ್ಪಕವಾಗಿ ಈಡೇರಿಸಲು ಆಗಿಲ್ಲ. ರಾಷ್ಟ್ರೀಕೃತ ಬ್ಯಾಂಕುಗಳು ಉದ್ಯಮಿಗಳಿಗೆ ನಿರೀಕ್ಷೆ ಮೀರಿ ಸಾಲ ಸೌಲಭ್ಯ ಒದಗಿಸುತ್ತದೆ. ಆದರೆ, ರೈತರಿಗೆ ಎಕರೆಗೆ 1 ಲಕ್ಷ ಕೊಡಲು ನಿರಾಕರಿಸುತ್ತಾರೆ. ಬ್ಯಾಂಕ್‌ಗಳಿಂದ ರೈತರಿಗೆ ಅನ್ಯಯವಾಗುತ್ತಿದೆ. ಕೃಷಿ ಸಚಿವರು ಇದನ್ನು ಗಂಭೀರವಾಗಿ ಪರಿಗಣಿಸಿ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಬೇಕು ಎಂದರು.

ವೇದಿಕೆ ಮೇಲೆ ಕೃಷ್ಣಾಕಾಡಾ ಅಧ್ಯಕ್ಷ ಶರಣಪ್ಪ ತಳವಾರ, ರಾಯಚೂರು ಕೃಷಿ ಮಹಾವಿದ್ಯಾಲಯದ ಕುಲಪತಿ ಡಾ| ಕೆ.ಎಂ.ಕಟ್ಟಿಮನಿ, ಜಿಲ್ಲಾಧಿಕಾರಿ ಡಾ| ರಾಗಪ್ರಿಯ.ಆರ್‌, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ, ವ್ಯವಸ್ಥಾಪಕ ಮಂಡಳಿ ಸದಸ್ಯ ಕೊಟ್ರೆಪ್ಪ.ಬಿ.ಕೆ. ತ್ರಿವಿಕ್ರಮ ಜೋಶಿ, ಮಹಾಂತೇಶ ಗೌಡ, ಸುನೀಲಕುಮಾರ, ಜಿ. ಶ್ರೀಧರ, ಶಿಕ್ಷಣ ನಿರ್ದೇಶಕ ಡಾ| ಎಂ.ಬಿ.ಪಾಟೀಲ, ಭೀ.ಗುಡಿ ಕೃಷಿ ಮಹಾವಿದ್ಯಾಲಯದ ಡೀನ್‌ ಚನ್ನಬಸವಣ್ಣ ಮತ್ತು ಕೃಷಿ ಸಂಶೋಧನಾ ಕೇಂದ್ರ ಕೃಷಿ ಮಹಾವಿದ್ಯಾಲಯ ರಾಯಚೂರಿನ ಅಧಿಕಾರಿಗಳು, ಕೃಷಿ ವಿಸ್ತರಣಾ ಕೇಂದ್ರದ ಸಮಸ್ತ ಶಿಕ್ಷಕರು ಇದ್ದರು. ಇದೇ ಸಂದರ್ಭದಲ್ಲಿ ವಿವಿಧ ರೈತಪರ ಸಂಘಟನೆಗಳು, ರೈತ ಪ್ರತಿನಿಧಿಗಳು, ಈ ಭಾಗದಲ್ಲಿನ ರೈತಾಪಿ ವರ್ಗ ಅನುಭವಿಸುತ್ತಿರುವ ಜ್ವಲಂತ ಸಮಸ್ಯೆಗಳ ಪರಿಹಾರದ ಪ್ರಯತ್ನಕ್ಕೆ ಮನವಿ ಸಲ್ಲಿಸಿದರು.

Advertisement

ಕೋವಿಡ್‌ ರೂಪಾಂತರಿ ವೈರಸ್‌ ಹಾವಳಿ ಕಡಿಮೆಯಾದ ನಂತರ, ಯಾದಗಿರಿ ಜಿಲ್ಲೆಯ ರೈತರೊಂದಿಗೆ ಗ್ರಾಮ ವಾಸ್ತವ್ಯದ ಮೂಲಕ ಈ ಭಾಗದಲ್ಲಿನ ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಯತ್ನ ಮಾಡುವೆ. ಬಾಕಿ ಉಳಿದಿರುವ ಬೆಳೆ ಪರಿಹಾರದ ಹಣವನ್ನು ತಕ್ಷಣವೇ ನೀಡುವ ವ್ಯವಸ್ಥೆ ಮಾಡಲಾಗುವದು. – ಬಿ.ಸಿ.ಪಾಟೀಲ್‌, ಕೃಷಿ ಸಚಿವ

ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀರಾವರಿ ಯೋಜನೆಗೆ ಕೊಡುವ ಹಣ ಸದ್ಭಳಿಕೆಯಾಗಬೇಕು. ಫಸಲ್‌ ಯೋಜನೆ, ಕಿಸಾನ್‌ ಸಮ್ಮಾನ್‌ ಯೋಜನೆ ಅತ್ಯಂತ ಮಹತ್ವದ್ದಾಗಿದೆ. ಈ ಭಾಗದ ಡಿಸ್ಟ್ರಿಬೂಟರ್‌, ಲ್ಯಾಟರಲ್‌ ಕೆಲಸಗಳು ಸುಸ್ಥಿರವಾಗಿ ನಡೆದಾಗ ಕೊನೆ ಭಾಗದ ರೈತರ ಹೊಲಗಳಿಗೆ ನೀರು ತಲುಪಲಿದೆ. ರೈತ ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಸಿಗುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವೆ. -ರಾಜಾ ಅಮರೇಶ್ವರ ನಾಯಕ, ಸಂಸದ

Advertisement

Udayavani is now on Telegram. Click here to join our channel and stay updated with the latest news.

Next