ನವದೆಹಲಿ: ಮೂರು ಕೃಷಿ ಸಂಬಂಧಿತ ಕಾಯ್ದೆಗಳನ್ನು ರದ್ದುಗೊಳಿಸಲು ಸರ್ಕಾರ ಒಪ್ಪದಿದ್ದರೆ ಗಣರಾಜ್ಯೋತ್ಸವದಂದು ನಡೆಸಲು ಉದ್ದೇಶಿಸಿರುವ ದೆಹಲಿ ಟ್ರ್ಯಾಕ್ಟರ್ ಜಾಥಕ್ಕೆ, ಕನಿಷ್ಠ ಒಂದು ಕುಟುಂಬ ಸದಸ್ಯರನ್ನಾದರೂ ಕಳುಹಿಸುವಂತೆ ಒತ್ತಾಯಿಸಲು ಹರಿಯಾಣದ ಪ್ರತಿ ಮನೆಗೆ ಭೇಟಿ ನೀಡುವುದಾಗಿ ರೈತ ಮುಖಂಡರು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸ್ವರಾಜ್ ಅಭಿಯಾನ್ ಮುಖ್ಯಸ್ಥ ಯೋಗೇಂದ್ರ ಯಾದವ್, ಜನವರಿ 9 ರಿಂದ ಹರಿಯಾಣದ ರೈತ ಸಂಘಗಳ ಮುಖಂಡರು ರಾಜ್ಯದ ಪ್ರತಿ ಹಳ್ಳಿಗೆ ಭೇಟಿ ನೀಡಿ ಒಬ್ಬ ಸದಸ್ಯರನ್ನು ಕಳುಹಿಸುವಂತೆ ಕೇಳಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.
ಜನವರಿ 4 ರಂದು ಕೇಂದ್ರ ಸರ್ಕಾರದೊಂದಿಗೆ ರೈತ ಮುಖಂಡರು ನಡೆಸಿದ ಮಾತುಕತೆ ವಿಫಲವಾದ ನಂತರ ರೈತರು ತಮ್ಮ ಪ್ರತಿಭಟನೆಯನ್ನು ಇನ್ನೂ ತೀವ್ರಗೊಳಿಸಲು ನಿರ್ಧರಿಸಿದ್ದಾರೆ. ಏತನ್ಮಧ್ಯೆ ಇಂದು (ಜ. 6) ರೈತರು ನಿಗದಿಪಡಿಸಿದ್ದ ಟ್ರ್ಯಾಕ್ಟರ್ ಜಾಥವನ್ನು ಜ.07 ಕ್ಕೆ ಮುಂದೂಡಲಾಗಿದೆ ಸಿಂಘು ಗಡಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ರೈತರ ಒಕ್ಕೂಟಗಳು ಈ ಬಗ್ಗೆ ಮಾಹಿತಿ ನೀಡಿದ್ದು, ಹವಾಮಾನ ವೈಪರಿತ್ಯದ ಕಾರಣದಿಂದಾಗಿ ಟ್ರ್ಯಾಕ್ಟರ್ ಜಾಥಾವನ್ನು ಜ.07 ಕ್ಕೆ ಮುಂದೂಡಿರುವುದಾಗಿ ತಿಳಿಸಿದ್ದಾರೆ.
ಜನವರಿ 7ರಂದು ಬೆಳಿಗ್ಗೆ 11 ಗಂಟೆಗೆ ಮೆರವಣಿಗೆ ಪ್ರಾರಂಭವಾಗಲಿದೆ. ಪಂಜಾಬ್, ಹರಿಯಾಣ, ಉತ್ತರಪ್ರದೇಶ, ರಾಜಸ್ಥಾನ ಮತ್ತು ಇತರ ರಾಜ್ಯಗಳ ರೈತರು ಸಾವಿರಾರು ಟ್ರ್ಯಾಕ್ಟರ್ ಗಳೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಸೇರಲಿದ್ದಾರೆ. ಪ್ರಸ್ತುತ ಯೋಜನೆಯ ಪ್ರಕಾರ ಹರಿಯಾಣದ ಪ್ರತಿ ಹಳ್ಳಿಯಿಂದ ಕನಿಷ್ಠ 10 ಟ್ರ್ಯಾಕ್ಟರ್ ಗಳು ಮೆರವಣಿಗೆಯಲ್ಲಿಭ ಭಾಗಿಯಾಗಲಿವೆ ”ಎಂದು ಸನ್ಯುಕ್ತ್ ಕಿಸಾನ್ ಮೋರ್ಚಾ ಪ್ರತಿನಿಧಿಯೊಬ್ಬರು ತಿಳಿಸಿದ್ದಾರೆ.