Advertisement

ಬಿಜೆಪಿಯ ಮಾಜಿ V/S ಹಾಲಿ ಅಭ್ಯರ್ಥಿಗಳ ಕದನ

12:45 AM Jun 27, 2022 | Team Udayavani |

ರಾಷ್ಟ್ರಪತಿ ಚುನಾವಣ ಕಣಕ್ಕೆ ಧುಮುಕಲು ಇದೇ 28 ಕಡೆಯ ದಿನ. ಎನ್‌ಡಿಎ ಮತ್ತು ಯುಪಿಎ ಕಡೆಯಿಂದ ಸ್ಪರ್ಧಿಸುವವರು ಯಾರು ಎಂಬುದು ಈಗಾಗಲೇ ಖಚಿತವಾಗಿದೆ. ಆಡಳಿತ ಮತ್ತು ವಿಪಕ್ಷಗಳ ನಡುವೆ ದೊಡ್ಡ ಮಟ್ಟದ ಕದನವೇ ನಡೆಯಬಹುದು ಎಂಬ ಲೆಕ್ಕಾಚಾರಗಳು ತಲೆಕೆಳಗಾಗಿ, ಈಗ ಎನ್‌ಡಿಎ ಅಭ್ಯರ್ಥಿ ಸಲೀಸಾಗಿ ಗೆಲ್ಲಬಹುದು ಎಂಬ ಲೆಕ್ಕಾಚಾರಗಳು ಶುರುವಾಗಿವೆ. ಇದೆಲ್ಲ ಸಾಧ್ಯವಾಗಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ ತನ್ನ ಅಭ್ಯರ್ಥಿಯನ್ನು ಅಖೈರುಗೊಳಿಸಿದ ಮೇಲೆ.

Advertisement

ಹೌದು, ಆರಂಭದಿಂದಲೂ ರಾಷ್ಟ್ರಪತಿ ಚುನಾವಣೆಯನ್ನು ವಿಪಕ್ಷಗಳನ್ನು ಒಂದುಗೂಡಿಸುವ ವೇದಿಕೆ ಮಾಡಿಕೊಳ್ಳಬೇಕು ಎಂದು ಹೊರಟಿದ್ದ ತೆಲಂಗಾಣದ ತೆಲಂಗಾಣ ರಾಷ್ಟ್ರ ಸಮಿತಿಯ ಅಧ್ಯಕ್ಷ ಕೆ.ಸಿ. ಚಂದ್ರಶೇಖರ ರಾವ್‌, ಕೊಂಚ ಹಿನ್ನಡೆ ಅನುಭವಿಸಿ¨ªಾರೆ. ಕಾಂಗ್ರೆಸ್‌ ಮತ್ತು ಬಿಜೆಪಿಯಿಂದ ಅಂತರ ಕಾಯ್ದುಕೊಂಡು, ಪರ್ಯಾಯ ವೇದಿಕೆ ನಿರ್ಮಾಣ ಮಾಡಿ ಈ ಮೂಲಕ ಅಭ್ಯರ್ಥಿಯನ್ನು ಹಾಕಬೇಕು ಎಂಬುದು ಅವರ ಮನದಾಸೆಯಾಗಿತ್ತು. ಆದರೆ ಪಶ್ಚಿಮ ಬಂಗಾಲದ ತೃಣಮೂಲ ಕಾಂಗ್ರೆಸ್‌ನ ಮಮತಾ ಬ್ಯಾನರ್ಜಿ ಅವರಿಂದಾಗಿ ಎಲ್ಲ ಲೆಕ್ಕಾಚಾರಗಳು ತಲೆಕೆಳಗಾದವು. ಕಡೆಗೆ ಅಳೆದು ತೂಗಿ, ವಿಪಕ್ಷಗಳ ಅಭ್ಯರ್ಥಿಯಾಗಿ 85 ವರ್ಷ ವಯಸ್ಸಿನ, ಒಂದು ಕಾಲದಲ್ಲಿ ಬಿಜೆಪಿಯ ಉನ್ನತ ನಾಯಕರಾಗಿದ್ದ, ಈಗ ಟಿಎಂಸಿ ಸದಸ್ಯರಾಗಿರುವ ಯಶವಂತ ಸಿನ್ಹಾ ಅವರನ್ನು ಕಣಕ್ಕಿಳಿಸಿದೆ. ಎಲ್ಲವೂ ಅಂದು ಕೊಂಡಂತಾದರೆ, ಸೋಮವಾರವೇ ಇವರು ನಾಮಪತ್ರ ಸಲ್ಲಿಸ‌ಲಿ¨ªಾರೆ.

ಇನ್ನು ಎನ್‌ಡಿಎ ಕಡೆಯಿಂದ ಅಭ್ಯರ್ಥಿಯ ಆಯ್ಕೆ ಎಂಬುದು ಒಂದು ರೀತಿಯಲ್ಲಿ ವಿಪಕ್ಷಗಳಿಗೆ ಮಾಸ್ಟರ್‌ ಸ್ಟ್ರೋಕ್‌ನಂತಾಗಿದೆ. ವಿಪಕ್ಷಗಳು ಅಭ್ಯರ್ಥಿ ಘೋಷಣೆ ಮಾಡಿದ ಅನಂತರವೇ ಬಿಜೆಪಿ ತನ್ನ ಅಭ್ಯರ್ಥಿ ಅಖೈರುಗೊಳಿಸಿರುವುದು ಅವುಗಳಿಗೆ ನುಂಗಲಾರದ ತುತ್ತಾಗಿದೆ. ಇದಕ್ಕೆ ಕಾರಣವೂ ಇದೆ. ಬಿಜೆಪಿ ತನ್ನ ಅಭ್ಯರ್ಥಿಯಾಗಿ ಆದಿವಾಸಿ ಮಹಿಳೆ ದ್ರೌಪದಿ ಮುರ್ಮು ಅವರನ್ನು ಆಯ್ಕೆ ಮಾಡಿದೆ. ಈ ಹಿಂದೆ ಝಾರ್ಖಂಡ್‌ನ‌ ರಾಜ್ಯಪಾಲೆಯಾಗಿದ್ದ ಇವರು, ಈ ಹು¨ªೆಗೇರಿದ್ದ ಮೊದಲ ಆದಿವಾಸಿ ಎಂಬ ಮಹಿಳೆ ಎಂಬ ಖ್ಯಾತಿಯನ್ನೂ ಗಳಿಸಿಕೊಂಡಿದ್ದರು. ಈಗ ಇವರನ್ನು ಆಯ್ಕೆ ಮಾಡಿರುವುದು ಹಲವಾರು ರಾಜಕೀಯ ಪಕ್ಷಗಳಿಗೆ ಗೊಂದಲ ತಂದಿಟ್ಟಿದೆ ಎಂದರೆ ಸುಳ್ಳಲ್ಲ.

ಇವೆಲ್ಲದರ ನಡುವೆ ಈ ಬಾರಿಯ ರಾಷ್ಟ್ರಪತಿ ಚುನಾವಣೆ ಬಿಜೆಪಿಯ ಮಾಜಿ ಮತ್ತು ಹಾಲಿ ನಾಯಕರ ನಡುವೆ ನಡೆಯುತ್ತಿದೆ ಎಂಬುದು ವಿಶೇಷ.

ಈ ಮಧ್ಯೆ ಬಿಜೆಪಿಯ ದ್ರೌಪದಿ ಮುರ್ಮು ಅವರ ಆಯ್ಕೆ ಹಿಂದಿನ ಲೆಕ್ಕಾಚಾರ ಗಮನಿಸುವುದಾದರೆ, ಮೊದಲೇ ಹೇಳಿದ ಹಾಗೆ ಮಾಸ್ಟರ್‌ ಸ್ಟ್ರೋಕ್‌. ಅಂದರೆ 2017ರಲ್ಲೇ ದ್ರೌಪದಿ ಮುರ್ಮು ಅವರ ಹೆಸರು ಕೇಳಿಬಂದಿತ್ತು. ಆದರೆ ಅವರಿಗೆ ಆಗ ಇನ್ನೂ 59 ವರ್ಷ ವಯಸ್ಸಾಗಿತ್ತು. ಇಷ್ಟು ಬೇಗ ರಾಷ್ಟ್ರಪತಿ ಹುದ್ದೆಗೆ ಕಳಿಸುವುದು ಬೇಡ ಮತ್ತು ಇನ್ನೂ ವಯಸ್ಸಿದೆ ಎಂಬ ಕಾರಣಕ್ಕಾಗಿ ಆಗ ಬಿಹಾರದ ರಾಜ್ಯಪಾಲರಾಗಿದ್ದ ರಾಮನಾಥ್‌ ಕೋವಿಂದ್‌ ಅವರನ್ನು ಆಯ್ಕೆ ಮಾಡಲಾಗಿತ್ತು. ಜತೆಗೆ ದಲಿತ ಸಮುದಾಯದ ವ್ಯಕ್ತಿಯೊಬ್ಬರಿಗೆ ಅತ್ಯುನ್ನತ ಹುದ್ದೆ ನೀಡುತ್ತಿದ್ದೇವೆ ಎಂಬ ಸಂದೇಶವನ್ನು ಆಗ ಬಿಜೆಪಿ ನಾಯಕರು ನೀಡಿದ್ದರು.

Advertisement

ಈಗ ಅದೇ ಫಾರ್ಮುಲಾ ಬಳಕೆ ಮಾಡಿದ್ದಾರೆ. ದ್ರೌಪದಿ ಮುರ್ಮು ಅವರ ಆಯ್ಕೆ ವಿಚಾರದಲ್ಲಿಯೂ ಅಳೆದು ತೂಗಿ ಅಂತಿಮ ಮಾಡಲಾಗಿದೆ. ಅಂದರೆ ದೇಶದ ಒಟ್ಟಾರೆ ಜನಸಂಖ್ಯೆಯಲ್ಲಿ ಪರಿಶಿಷ್ಟ ಪಂಗಡದ ಪ್ರಮಾಣ ಶೇ.8.6 ಇದೆ. ಹಲವಾರು ರಾಜ್ಯಗಳಲ್ಲಿ ಇವರ ಮತಗಳೇ ನಿರ್ಣಾಯಕವಾಗಿವೆ. ಅದರಲ್ಲೂ ಉತ್ತರ ಭಾರತದ ಝಾರ್ಖಂಡ್‌, ಛತ್ತೀಸ್‌ಗಢ ಸೇರಿ ಪ್ರಮುಖ ರಾಜ್ಯಗಳಲ್ಲಿ ಇವರ ಪ್ರಮಾಣ ಹೆಚ್ಚೇ ಆಗಿದೆ. ಇತ್ತ ದಕ್ಷಿಣದ ರಾಜ್ಯಗಳಲ್ಲಿಯೂ ಹಲವಾರು ಕ್ಷೇತ್ರಗಳಲ್ಲಿ ಇವರೇ ನಿರ್ಣಾಯಕರಾಗಿದ್ದಾರೆ. ಜನಸಂಖ್ಯೆ ಆಧಾರದಲ್ಲಿ ಹೇಳುವು ದಾದರೆ, ಒಟ್ಟಾರೆ 10.4 ಕೋಟಿ ಜನರಿದ್ದಾರೆ. ಇದೆಲ್ಲವೂ 2011ರ ಜನಗಣತಿ ಆಧಾರದ ಲೆಕ್ಕಾಚಾರಗಳು.

ಮುಂದಿನ ಯಾವುದೇ ಚುನಾವಣೆಗಳು ಎದುರಾದರೂ ಬಿಜೆಪಿಗೆ ಇದೊಂದು ಅಸ್ತ್ರ ಸಿಕ್ಕಂತಾಗುತ್ತದೆ. ನಾವು ಎಸ್ಟಿ ಪಂಗಡಕ್ಕೆ ಸೇರಿದ ನಾಯಕರೊಬ್ಬರನ್ನು ರಾಷ್ಟ್ರಪತಿ ಮಾಡಿದ್ದೇವೆ ಎಂದು ಹೇಳಿಕೊಳ್ಳಲು ಅವಕಾಶವೂ ಸಿಕ್ಕಂತಾಗುತ್ತದೆ. ಹೀಗಾಗಿಯೇ ವಿಪಕ್ಷಗಳಿಗೆ ಇದೊಂದು ಮಾಸ್ಟರ್‌ ಸ್ಟ್ರೋಕ್‌ ಎಂದಿದ್ದು.

ಸದ್ಯ ಬಿಜೆಪಿಗೆ ತನ್ನ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಬೇಕಾದ ಅಗತ್ಯ ಮತಗಳು ಸಿಕ್ಕಂತಾಗಿದೆ. ದ್ರೌಪದಿ ಮುರ್ಮು ಅವರು ಮೂಲತಃ ಒಡಿಶಾದವರಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು, ಮೊದಲಿಗೆ ಒಡಿಶಾ ಸಿಎಂ ನವೀನ್‌ ಪಾಟ್ನಾಯಕ್‌ ಅವರ ಜತೆಗೆ ಚರ್ಚಿಸಿಯೇ ಅಭ್ಯರ್ಥಿ ಅಖೈರು ಮಾಡಿದ್ದಾರೆ. ಈ ಬಗ್ಗೆ ನವೀನ್‌ ಪಾಟ್ನಾಯಕ್‌ ಅವರೇ ಟ್ವೀಟ್‌ ಮಾಡಿದ್ದನ್ನು ಗಮನಿಸಬಹುದು. ಅಲ್ಲಿಗೆ ಬಿಜೆಪಿಗೆ ನವೀನ್‌ ಪಾಟ್ನಾಯಕ್‌ ಅವರ ಪಕ್ಷದ ಬೆಂಬಲ ಸಿಕ್ಕಿದಂತಾಯಿತು.

ಇನ್ನು ಆಂಧ್ರ ಪ್ರದೇಶದ ವೈಎಸ್‌ಆರ್‌ ಕಾಂಗ್ರೆಸ್‌ನ ಜಗನ್‌ ಮೋಹನ್‌ ರೆಡ್ಡಿ ಅವರೂ ಬಿಜೆಪಿ ಅಭ್ಯರ್ಥಿಗೇ ಬೆಂಬಲ ಘೋಷಿಸುವು ದಾಗಿ ಹೇಳಿದ್ದಾರೆ. ತಮಿಳುನಾಡಿನಲ್ಲಿ ಎಐಎಡಿಎಂಕೆ ಕೂಡ ಬಿಜೆಪಿ ಅಭ್ಯರ್ಥಿ ಬೆಂಬಲಿಸಲಿದೆ. ಈ ಪಕ್ಷಗಳ ಬೆಂಬಲದಿಂದಲೇ ಬಿಜೆಪಿಗೆ ಸಿಗುವ ಮತಗಳ ಮೌಲ್ಯ ಶೇ. 50 ದಾಟುತ್ತದೆ. ಇನ್ನು ಉತ್ತರ ಪ್ರದೇಶದ ಮಾಯಾವತಿ ಕೂಡ ದ್ರೌಪದಿ ಮುರ್ಮು ಅವರನ್ನು ಬೆಂಬಲಿ ಸುವ ಬಗ್ಗೆ ಘೋಷಣೆ ಮಾಡಿದ್ದಾರೆ. ಕರ್ನಾಟಕದಲ್ಲಿಯೂ ದೇವೇಗೌಡರು, ದ್ರೌಪದಿ ಮುರ್ಮು ಅವರ ಬಗ್ಗೆ ಕೊಂಚ ಮೃದುವಾಗಿಯೇ ಮಾತುಗಳನ್ನಾಡಿದ್ದಾರೆ.

ಇದರ ಜತೆಗೆ ಅತ್ತ ಝಾರ್ಖಂಡ್‌ ಮುಕ್ತಿ ಮೋರ್ಚಾದ ಮತಗಳು ಸಿಗುವ ಸಾಧ್ಯತೆಗಳು ಹೆಚ್ಚಾಗಿವೆ. ಸದ್ಯಕ್ಕೆ ಝಾರ್ಖಂಡ್‌ ಮುಕ್ತಿ ಮೋರ್ಚಾದ ನಾಯಕ ಹೇಮಂತ್‌ ಸೊರೇನ್‌ ಅವರು ಗೊಂದಲಕ್ಕೆ ಬಿದ್ದಿರುವುದು ಸಹಜ. ವಿಪಕ್ಷದ ಅಭ್ಯರ್ಥಿ ಆಯ್ಕೆ ವೇಳೆ ಇವರೂ ಹಾಜರಾಗಿದ್ದು, ಯಶವಂತ ಸಿನ್ಹಾ ಅವರಿಗೆ ಬೆಂಬಲ ಘೋಷಿಸಿದ್ದರು. ಬದಲಾದ ಸನ್ನಿವೇಶದಲ್ಲಿ ಬಿಜೆಪಿ ದ್ರೌಪದಿ ಮುರ್ಮು ಅವರನ್ನು ಕಣಕ್ಕಿಳಿಸಿರುವುದು ಈಗ ಗಂಟಲಲ್ಲಿ ತುಪ್ಪವನ್ನು ಸಿಕ್ಕಿಸಿಕೊಂಡಂತಾಗಿದೆ.

ಇದಕ್ಕೆ ಕಾರಣವೂ ಇದೆ. ದ್ರೌಪದಿ ಮುರ್ಮು ಅವರು, ಝಾರ್ಖಂಡ್‌ನ‌ ರಾಜ್ಯಪಾಲರಾಗಿದ್ದ ವೇಳೆ, ಹೇಮಂತ್‌ ಸೊರೇನ್‌ ಅವರ ಜತೆಗೆ ಉತ್ತಮ ಸಂಬಂಧ ಹೊಂದಿದ್ದರು. ಅಲ್ಲದೆ ಹಿಂದಿನ ಬಿಜೆಪಿ ಸರಕಾರ, ಆದಿವಾಸಿಗಳ ಜಮೀನನ್ನು ಬದಲಿಸುವ ಸಲುವಾಗಿ ತಂದಿದ್ದ ಎರಡು ಕಾಯ್ದೆಗಳನ್ನು ದ್ರೌಪದಿ ಮುರ್ಮು ಅವರು ನಿರಾಕರಿಸಿದ್ದರು. ಆ ಸಂದರ್ಭದಲ್ಲಿ ವಿಪಕ್ಷದಲ್ಲಿದ್ದ ಸೊರೇನ್‌ ದ್ರೌಪದಿ ಮುರ್ಮು ಅವರ ಕ್ರಮಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದರು. ಹೀಗಾಗಿ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸುವುದೋ ಅಥವಾ ಮೊದಲೇ ನಿರ್ಧರಿಸಿದ್ದ ಹಾಗೆ ಯಶವಂತ ಸಿನ್ಹಾ ಅವರನ್ನು ಬೆಂಬಲಿಸುವುದೋ ಅವರಿಗೆ ಗೊತ್ತಾಗುತ್ತಿಲ್ಲ. ಆದರೂ ಈ ಬಗ್ಗೆ ಶೀಘ್ರವೇ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ.

ಇದರ ಜತೆಗೆ ಝಾರ್ಖಂಡ್‌ನ‌ 3.29 ಕೋಟಿ ಜನಸಂಖ್ಯೆ ಇದ್ದು, ಇದರಲ್ಲಿ 86 ಲಕ್ಷ ಮಂದಿ ಎಸ್ಟಿ ಸಮುದಾಯದವರೇ ಇದ್ದಾರೆ. ಒಡಿಶಾದಲ್ಲಿ 4.19 ಕೋಟಿ ಜನಸಂಖ್ಯೆಯಲ್ಲಿ 95 ಲಕ್ಷ, ಛತ್ತೀಸ್‌ಗಢದಲ್ಲಿ 2.55 ಕೋಟಿಯಲ್ಲಿ 78 ಲಕ್ಷ ಮಂದಿ ಎಸ್ಟಿ ಸಮುದಾಯದವರೇ ಇದ್ದಾರೆ. ಮಧ್ಯಪ್ರದೇಶದಲ್ಲಿ 7.26 ಕೋಟಿ ಜನಸಂಖ್ಯೆಯಲ್ಲಿ 1.53 ಕೋಟಿ ಮಂದಿ ಎಸ್ಟಿಯವರೇ ಇದ್ದಾರೆ. ಮಧ್ಯಪ್ರದೇಶದಲ್ಲೇ ಅತ್ಯಂತ ಹೆಚ್ಚು ಎಸ್ಟಿ ಸಮುದಾಯಕ್ಕೆ ಸೇರಿದವರು ಇದ್ದಾರೆ. ಹಾಗೆಯೇ ಗೋವಾ ಹೊರತು ಪಡಿಸಿ ಉಳಿದೆಲ್ಲ ರಾಜ್ಯಗಳಲ್ಲೂ ಎಸ್ಟಿ ಸಮುದಾಯದವರ ಜನಸಂಖ್ಯೆ ಸಾಕಷ್ಟು ಪ್ರಮಾಣದಲ್ಲಿ ಇದೆ.

ಹೀಗಾಗಿ ರಾಜಕೀಯವಾಗಿ ಹೇಳುವುದಾದರೆ, ಯಾವ ಪಕ್ಷಕ್ಕೂ ದ್ರೌಪದಿ ಮುರ್ಮು ಅವರ ಅಭ್ಯರ್ಥಿತನವನ್ನು ತಿರಸ್ಕಾರ ಮಾಡುವ ಧೈರ್ಯ ಕೊಂಚ ಕಡಿಮೆಯೇ. ಆದರೂ ಸೈದ್ಧಾಂತಿಕವಾಗಿಯಾದರೂ ನಾವು ಬಿಜೆಪಿ ಎಂಬ ಕಾರಣಕ್ಕಾಗಿ ವಿರೋಧ ಮಾಡುತ್ತಿದ್ದೇವೆ ಎಂದು ಮನವರಿಕೆ ಮಾಡಿ, ವಿಪಕ್ಷಗಳ ಅಭ್ಯರ್ಥಿ ಬೆನ್ನಿಗೆ ನಿಲ್ಲುವ ಅನಿವಾರ್ಯತೆ ನಾಯಕರಿಗೆ ಇದೆ. ಹೀಗಾಗಿಯೇ, ಈಗಾಗಲೇ ವಿಪಕ್ಷ ಪಾಳಯದಲ್ಲಿರುವ ಹಲವಾರು ಪಕ್ಷಗಳು ಅಳೆದುತೂಗಿ ಮುನ್ನಡಿ ಇಡಲು ನೋಡುತ್ತಿವೆ ಎಂಬುದು ಮಾತ್ರ ಸುಳ್ಳಲ್ಲ.

– ಸೋಮಶೇಖರ ಸಿ.ಜೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next