Advertisement

Famous Goddess Temple: ಗುಹಾಲಯ ಶ್ರೀಮಾತಾ ವೈಷ್ಣೋದೇವಿ ದೇಗುಲ, ಜಮ್ಮು-ಕಾಶ್ಮೀರ

11:29 PM Oct 05, 2024 | Team Udayavani |

ನಾಡಿನೆಲ್ಲೆಡೆ ಈಗ ನವರಾತ್ರಿಯ ಸಂಭ್ರಮ. ಈ ಹಬ್ಬವನ್ನು ದೇಶದೆಲ್ಲೆಡೆ ಅತ್ಯಂತ ವೈಭವ, ಸಡಗರಗಳಿಂದ ಆಚರಿಸಲಾಗುತ್ತಿದೆ. ದೇಶಾದ್ಯಂತ ಇರುವ ದುರ್ಗಾದೇವಿಯ ದೇವಾಲಯಗಳಲ್ಲಿ ಭಕ್ತರು ವಿಶೇಷ ಶ್ರದ್ಧಾಭಕ್ತಿಯಿಂದ ಶಕ್ತಿಮಾತೆಯ ಆರಾಧನೆಯಲ್ಲಿ ತೊಡಗಿದ್ದಾರೆ. ನವರಾತ್ರಿಯ ಈ ಸಂದರ್ಭದಲ್ಲಿ ದೇಶದ ಒಂಬತ್ತು ಪ್ರಸಿದ್ಧ ದೇವಿ ದೇವಾಲಯಗಳನ್ನು ಸಂಕ್ಷಿಪ್ತವಾಗಿ ಪರಿಚಯಿಸುವ “ನವರಾತ್ರಿ- ನವದೇವಿ’ ಲೇಖನ ಮಾಲಿಕೆಯಲ್ಲಿ ಈ ದಿನ ಜಮ್ಮು -ಕಾಶ್ಮೀರದ
ಶ್ರೀ ಮಾತಾ ವೈಷ್ಣೋದೇವಿ ದೇಗುಲ.

Advertisement

ದುರ್ಗೆಯ ರೂಪ ಎಂದು ಹೇಳಲಾಗುವ ಶ್ರೀ ವೈಷ್ಣೋದೇವಿಯ ಈ ಮಂದಿರ ಹಿಂದೂಗಳ ಪವಿತ್ರ ಕ್ಷೇತ್ರಗಳಲ್ಲಿ ಒಂದು. ಜಮ್ಮು-ಕಾಶ್ಮೀರದ ಕತ್ರಾದಲ್ಲಿರುವ ಈ ದೇಗುಲ 1,500 ಅಡಿಗಳಷ್ಟು ಎತ್ತರದಲ್ಲಿರುವ ತ್ರಿಕೂಟ ಪರ್ವತದಲ್ಲಿದೆ. ಇದು ಶಕ್ತಿಪೀಠಗಳಲ್ಲಿ ಒಂದು ಎಂದು ಗುರುತಿಸಲ್ಪಟ್ಟಿದೆ.
ಪುರಾಣ ಪ್ರಸಿದ್ಧವಾಗಿರುವ ಶ್ರೀ ವೈಷ್ಣೋದೇವಿ ದೇಗುಲದ ಉಲ್ಲೇಖ ಮಹಾ ಭಾರತದಲ್ಲಿಯೂ ಇದೆ. ಪಾಂಡವರು ವೈಷ್ಣೋದೇವಿಯನ್ನು ಪೂಜಿಸುತ್ತಿದ್ದರು.

ತ್ರಿಕೂಟ ಪರ್ವತದ ಗುಹೆಯಲ್ಲಿರುವ ಐದು ಬಂಡೆಗಳು ಪಂಚ ಪಾಂಡವರನ್ನು ಹೋಲುತ್ತದೆ ಎಂಬ ಪ್ರತೀತಿ ಇದ್ದು ಇದನ್ನು ಹಿಂದೂ ಬಾಂಧವರು ಇಂದಿಗೂ ನಂಬಿ ಕೊಂಡು ಬಂದಿದ್ದಾರೆ. ಅಷ್ಟು ಮಾತ್ರವಲ್ಲದೆ ಶ್ರೀ ವೈಷ್ಣೋದೇವಿ ನೆಲೆನಿಂತ ತ್ರಿಕೂಟ ಪರ್ವತದ ಉಲ್ಲೇಖವನ್ನು ಋಗ್ವೇದದಲ್ಲಿಯೂ ಕಾಣಬಹುದಾಗಿದೆ. ವೇದಗಳ ಕಾಲ ದಿಂದಲೂ ಪ್ರಸಿದ್ಧವಾಗಿರುವ ಈ ಗುಹಾ ದೇಗುಲ ಇಂದಿಗೂ ಹಿಂದೂಗಳ ಅತ್ಯಂತ ಪ್ರವಿತ್ರ ಶ್ರದ್ಧಾ ಮತ್ತು ಯಾತ್ರಾ ಕೇಂದ್ರವಾಗಿದೆ.

ಈ ದೇವಾಲಯದಲ್ಲಿ ಶಕ್ತಿಯ ವಿವಿಧ ರೂಪಗಳಾದ ಮಹಾಕಾಳಿ, ಮಹಾಲಕ್ಷ್ಮೀ ಹಾಗೂ ಮಹಾಸರಸ್ವತಿಯನ್ನು ಪೂಜಿಸಲಾಗುತ್ತದೆ. ಇಲ್ಲಿ ಹರಿಯುವ ಬಾಣಗಂಗಾ ನದಿಯ ನೀರಿನಿಂದ ದೇವಿಯನ್ನು ಶುದ್ಧಗೊಳಿಸಲಾಗುತ್ತದೆ. ಪುರಾಣ ತಜ್ಞರ ಪ್ರಕಾರ ದೇವಿಯ ರೂಪವಾಗಿರುವ ವೈಷ್ಣೋದೇವಿಯು ಮಹಾದೇವಿ ಸ್ವರೂಪ ರಚನೆಯಲ್ಲಿ ಅಡಗಿರುವ ಎಲ್ಲ ಶಕ್ತಿಗಳನ್ನು ಹೊಂದಿದ್ದಾಳೆ. ಇನ್ನು ಕೆಲವರ ಪ್ರಕಾರ ಭೈರವನಾಥ್‌ ಎಂಬ ತಾಂತ್ರಿಕನು ಬಾಲಕಿ ವೈಷ್ಣೋದೇವಿಯನ್ನು ಕೃಷಿ ಜಾತ್ರೆಯಲ್ಲಿ ನೋಡಿ ಅವಳಿಗೆ ಮಾರುಹೋಗುತ್ತಾನೆ. ಅವನಿಂದ ತಪ್ಪಿಸಿಕೊಳ್ಳಲು ವೈಷ್ಣೋದೇವಿ ತ್ರಿಕೂಟ ಪರ್ವತವನ್ನೇರುತ್ತಾಳೆ.

ಭೈರವನಾಥ ಆಕೆಯ ಬೆನ್ನು ಬಿಡದೆ ಹಿಂಬಾಲಿಸಿದಾಗ ವೈಷ್ಣೋದೇವಿ ತನ್ನ ಉಗ್ರ ಸ್ವರೂಪವಾದ ದುರ್ಗಾಮಾತೆಯ ಅವತಾರವನ್ನು ತಾಳಿ ಅವನನ್ನು ಸಂಹರಿಸುತ್ತಾಳೆ ಎಂಬ ಕಥೆಯೂ ಇದೆ. ಇನ್ನು ಮಹಾಭಾರತದ ಪ್ರಕಾರ ಕುರುಕ್ಷೇತ್ರ ಯುದ್ಧದ ವೇಳೆ ಅರ್ಜುನನು ದುರ್ಗೆಯನ್ನು ಆರಾಧಿಸಿ ಶತ್ರುಗಳನ್ನೆಲ್ಲ ಹಿಮ್ಮೆಟ್ಟಿಸಿದನು ಎಂಬ ಪ್ರತೀತಿ ಇದೆ. ರಾಮಾಯಣದಲ್ಲೂ ಶ್ರೀ ವೈಷ್ಣೋದೇವಿಗೆ ಸಂಬಂಧಿಸಿ ಕಥೆ ಇದ್ದು ರಾಮನ ಸಲಹೆಯಂತೆ ಆಕೆ ತ್ರಿಕೂಟ ಪರ್ವತದಲ್ಲಿ ನೆಲೆ ನಿಂತು ಭಕ್ತರನ್ನು ಹರಸುತ್ತಿದ್ದಾಳೆ.

Advertisement

ದೇಶದಲ್ಲಿನ ಶಕ್ತಿಮಾತೆಯ ದೇವಾಲಯಗಳಲ್ಲಿ ಅತ್ಯುಚ್ಚ ಸ್ಥಾನವನ್ನು ಪಡೆದಿರುವ ಶ್ರೀ ಮಾತಾ ವೈಷ್ಣೋದೇವಿಯ ದರುಶನಕ್ಕಾಗಿ ಪ್ರತೀ ವರ್ಷ ಲಕ್ಷಾಂತರ ಸಂಖ್ಯೆಯಲ್ಲಿ ಇಲ್ಲಿಗೆ ಭೇಟಿ ನೀಡುತ್ತಾರೆ. ನವರಾತ್ರಿ ಹಾಗೂ ದೀಪಾವಳಿ ಯನ್ನು ಬಹಳ ವಿಜೃಂಭಣೆಯಿಂದ ಇಲ್ಲಿ ಆಚರಿಸಲಾಗುತ್ತದೆ. ಪ್ರತೀ ವರ್ಷದ ಆರಂಭ ದಲ್ಲಿ ಸಾವಿರಾರು ಮಂದಿ ದೇಗುಲಕ್ಕೆ ಪಾದಯಾತ್ರೆ ಮೂಲಕ ಆಗಮಿಸಿ ಶ್ರೀ ಮಾತಾ ವೈಷ್ಣೋದೇವಿಯ ದರುಶನ ಪಡೆದು ಪ್ರಾರ್ಥನೆ ಸಲ್ಲಿಸುವ ವಾಡಿಕೆ ಬೆಳೆದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next