Advertisement

ಅಧಿಕಾರಿಗಳಿಂದ ಸಭೆಗೆ ಸುಳ್ಳು ಮಾಹಿತಿ: ಪದ್ಮನಾಭ ರೆಡ್ಡಿ ಆರೋಪ

04:54 PM Aug 14, 2018 | Team Udayavani |

ಇತ್ತೀಚೆಗೆ ಹೈಕೋರ್ಟ್‌ ವಿಚಾರಣೆ ವೇಳೆ ಪಾಲಿಕೆಯ ಅಧಿಕಾರಿಗಳು ನಗರದಲ್ಲಿ 10 ಸಾವಿರಕ್ಕೂ ಹೆಚ್ಚಿನ ಜಾಹೀರಾತು ಫ‌ಲಕಗಳಿವೆ ಎಂದಿದ್ದಾರೆ. ಆದರೆ, ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿರುವ ಅಧಿಕಾರಿಗಳು ನಗರದಲ್ಲಿ 3,166 ಜಾಹೀರಾತು ಫ‌ಲಕಗಳಿವೆ ಎಂದು ಸುಳ್ಳು ಮಾಹಿತಿ ನೀಡಿದ್ದಾರೆಂದು ವಿಪಕ್ಷ ನಾಯಕ ಪದ್ಮನಾಭರೆಡ್ಡಿ ಆರೋಪಿಸಿದರು.

Advertisement

ಪಾಲಿಕೆಯ ಅಧಿಕಾರಿಗಳು 2008-09ನೇ ಸಾಲಿನಲ್ಲಿ 1,963 ಜಾಹೀರಾತು ಫ‌ಲಕಗಳಿಂದ 18.93 ಕೋಟಿ ರೂ. ತೆರಿಗೆ ಸಂಗ್ರಹ ಮಾಡಿದ್ದು, 2009-10ನೇ ಸಾಲಿನಲ್ಲಿ 18.24 ಕೋಟಿ ರೂ. ತೆರಿಗೆ ಸಂಗ್ರಹಿಸಿದ್ದಾರೆ. ಆದರೆ, ಮುಂದಿನ 2015ರವರೆಗೆ ವರ್ಷಕ್ಕೆ ಕೇವಲ 10 ಕೋಟಿಯಂತೆ ಮೂರು ವರ್ಷಕ್ಕೆ 31 ಕೋಟಿ ರೂ. ಸಂಗ್ರಹವಾಗಿದ್ದು, ಉಳಿದ ಬಾಕಿ ಶುಲ್ಕ ಎಲ್ಲಿಗೆ ಹೋಗಿದೆ? ಪಾಲಿಕೆಯ ವ್ಯಾಪ್ತಿಯಲ್ಲಿ ವಾರ್ಷಿಕ 192 ಕೋಟಿ ರೂ. ಜಾಹೀರಾತು ಶುಲ್ಕ ಸಂಗ್ರಹಿಸಲು ಅವಕಾಶವಿದ್ದರೂ, ಅಧಿಕಾರಿಗಳ ಬೇಜವಾಬ್ದಾರಿಯಿಂದ ನಷ್ಟ ಅನುಭವಿಸುವಂತಾಗಿದೆ ಎಂದರು.

ಜಾಹೀರಾತು ವಿಭಾಗದಿಂದ ಪಾಲಿಕೆಗೆ 2 ಸಾವಿರ ಕೋಟಿ ರೂ. ಆದಾಯ ನಷ್ಟವಾಗಿದೆ ಎಂದು ಆರೋಪದ ಮೇಲೆ 2016ರ ಸರ್ಕಾರ ಪ್ರಕರಣವನ್ನು ಸಿಐಡಿಗೆ ವಹಿಸಿತ್ತು. ಜತೆಗೆ ಕೇವಲ 1 ಸಾವಿರ ಜಾಹಿರಾತು ಫ‌ಲಕಗಳಿಗೆ 300 ಕೋಟಿ ರೂ. ಡಿಮ್ಯಾಂಡ್‌ ನೋಟಿಸ್‌ ನೀಡಲಾಗಿತ್ತು. ಸಿಐಡಿ ತನಿಖೆ ಸ್ಥಿತಿಗತಿ ಹಾಗೂ ಬಾಕಿ ಶುಲ್ಕ ಯಾವಾಗ ವಸೂಲಿ ಮಾಡುತ್ತೀರಾ ಎಂದು ಪ್ರಶ್ನಿಸಿದರು.

ಪಾಲಿಕೆಯಿಂದ ಜಾಹೀರಾತು ಫ‌ಲಕಗಳನ್ನು ಬುಡಸಮೇತ ತೆರವುಗೊಳಿಸಲು 2016ರಲ್ಲಿ ಅಧಿಕಾರಿಗಳು 63 ಲಕ್ಷ ರೂ. ವೆಚ್ಚ ಮಾಡಿದ್ದಾರೆ. ಆದರೆ, ಅನಧಿಕೃತ ಜಾಹೀರಾತು ಫ‌ಲಕಗಳಿಂದ ಸಂಗ್ರಹಿಸುವ ದಂಡ ಕೇವಲ 2.66 ಲಕ್ಷ ರೂ. ಆಗಿದೆ. ಜತೆಗೆ ತೆರವುಗೊಳಿಸಿದ ಜಾಹೀರಾತು ಫ‌ಲಕಗಳನ್ನು ಹರಾಜಿನಲ್ಲಿ 12.33 ಲಕ್ಷಕ್ಕೆ ಮಾರಾಟ ಮಾಡಿರುವುದಾಗಿ ತಿಳಿಸಿದ್ದು, ಇದರಲ್ಲಿಯೂ ಅವ್ಯವಹಾರ ನಡೆದಿದೆ ಎಂದು ಪದ್ಮನಾಭರೆಡ್ಡಿ ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next