Advertisement
ಜಿಲ್ಲೆಯ ಮಲೆನಾಡು ಭಾಗಗಳಾದ ಶೃಂಗೇರಿ, ನರಸಿಂಹರಾಜಪುರ, ಕೊಪ್ಪ ಮತ್ತು ಮೂಡಿಗೆರೆ ತಾಲೂಕುಗಳಲ್ಲಿ ಭಾನುವಾರ ಬೆಳಗಿನಿಂದ ಮಳೆ ಬಿಡುವು ನೀಡಿದೆ. ಆದರೆ ನಿರಂತರ ಬೀಸುತ್ತಿರುವ ಗಾಳಿಯಿಂದಾಗಿ ಹಲವೆಡೆ ವಿದ್ಯುತ್ ಕಂಬಗಳು, ಮರಗಳು ರಸ್ತೆಗುರುಳಿ ಸಮಸ್ಯೆ ಸೃಷ್ಟಿಸಿದೆ.
ಗಾಳಿಯಿಂದಾಗಿ ನಗರದ ವಿಜಯಪುರ ಬಡಾವಣೆಯಲ್ಲಿ ದೊಡ್ಡ ಮರವೊಂದು ಬುಡಸಹಿತ ಉರುಳಿದ್ದು ಪಕ್ಕದಲ್ಲಿಯೇ ಇದ್ದ ಮನೆಗೆ ಒರಗಿ ನಿಂತುಕೊಂಡಿತ್ತು. ಮರ ಪೂರ್ಣ ಪ್ರಮಾಣದಲ್ಲಿ ಬಿದ್ದಿದ್ದರೆ ಹೆಚ್ಚಿನ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಮರ ವಾಲಿದ್ದನ್ನು ಗಮನಿಸಿದ ಸಾರ್ವಜನಿಕರು ಮರವನ್ನು ಪಕ್ಕಕ್ಕೆ ಎಳೆದು ಬೀಳಿಸಿದರು. ತೊಗರಿಹಂಕಲ್ ವೃತ್ತದಲ್ಲಿಯೂ ಮರವೊಂದು ಬಿದ್ದಿತ್ತು. ಭಾರೀ ಗಾಳಿಯಿಂದ ನಗರದ ಹಲವೆಡೆ ಹಾಕಲಾಗಿದ್ದ ದೊಡ್ಡ ದೊಡ್ಡ ಜಾಹೀರಾತು ಫಲಕಗಳು ಸಂಪೂರ್ಣ ಹರಿದು ಹೋಗಿವೆ. ನಗರದ ವಿವಿಧೆಡೆಗಳಲ್ಲಿ ಭಾನುವಾರ ಬೆಳಗಿನಿಂದಲೂ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಸಂಜೆಯಾದರೂ ವಿದ್ಯುತ್ ಸಂಪರ್ಕ ನೀಡಿರಲಿಲ್ಲ.
Related Articles
Advertisement
ಮೊದಲ ಬಾರಿ 24 ಗಂಟೆ ಮುಳುಗಿದ ಹೆಬ್ಟಾಳೆ: ಮೂಡಿಗೆರೆ ತಾಲೂಕಿನಲ್ಲಿ ಶನಿವಾರ ಸುರಿದ ಭಾರೀ ಮಳೆಯಿಂದಾಗಿ ಮುಳುಗಿದ್ದ ಹೆಬ್ಟಾಳೆ ಸೇತುವೆ ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ನದಿ ನೀರು ಕಡಿಮೆಯಾಗಿದ್ದು, ರಸ್ತೆ ಸಂಚಾರಕ್ಕೆ ತೆರೆದುಕೊಂಡಿದೆ. ಪ್ರಸ್ತುತ ಸಾಲಿನಲ್ಲಿ ಇದೇ ಮೊದಲ ಬಾರಿಗೆ ಹೆಬ್ಟಾಳೆ ಸೇತುವೆ ನೀರಿನಲ್ಲಿ 24 ಗಂಟೆಗೂ ಹೆಚ್ಚು ಕಾಲ ಮುಳುಗಿತ್ತು.
ಮೂಡಿಗೆರೆ ತಾಲೂಕಿನ ಆನೆಗುಂಡಿ ಭೂತಪ್ಪ ದೇವಾಲಯದ ಬಳಿ ಭಾರೀ ಗಾತ್ರದ ಮರವೊಂದು ಬಿದ್ದು, ಕೂವೆ ಹಾಗೂ ಆನೆಗುಂದ ಗ್ರಾಮಕ್ಕೆ ಸಂಪರ್ಕ ಕಡಿತಗೊಂಡಿತ್ತು. ಗೋಣಿಬೀಡು ಹೋಬಳಿಯ ಮರೆಬೈಲ್ ಗ್ರಾಮದಲ್ಲಿ ಮನೆಯೊಂದರ ಮೇಲೆ ಮರ ಬಿದ್ದು ಮನೆಗೆ ಹಾನಿಯಾಗಿರುವುದಲ್ಲದೆ, ಮಹಿಳೆಯೊಬ್ಬರಿಗೆ ಗಾಯವಾಗಿದೆ.