Advertisement

ಹುಸಿ ಸುದ್ದಿಗಳ ಹರಿದಾಟ ಎಚ್ಚರಿಕೆ ಇರಲಿ

09:13 AM Apr 03, 2020 | sudhir |

ಜಗತ್ತಿನಾದ್ಯಂತ ಈಗ ಕೋವಿಡ್ 19 ವೈರಸ್‌ನದ್ದೇ ಸುದ್ದಿ. ಈ ಚಿಕ್ಕ ವೈರಸ್‌ ಜಗತ್ತಿನ ಆರ್ಥಿಕತೆಯ ಮೇಲೆ, ಜನಜೀವನದ ಮೇಲೆ ಬೀರಿರುವ ಪರಿಣಾಮ ಅಷ್ಟಿಷ್ಟಲ್ಲ. ಅತ್ಯಂತ ವೇಗವಾಗಿ ಹರಡಬಲ್ಲ ಈ ಸೋಂಕಿನ ಕುರಿತು ಮುಖ್ಯ ವಾಹಿನಿ ಮಾಧ್ಯಮಗಳಲ್ಲಷ್ಟೇ ಅಲ್ಲದೇ, ಸೋಷಿಯಲ್‌ ಮೀಡಿಯಾಗಳಲ್ಲೂ ಅತೀವ ಚರ್ಚೆಯಾಗುತ್ತಲೇ ಇದೆ. ಅದರಲ್ಲೂ 4ಜಿ ಫೋನ್‌ಗಳು-ಅಂತರ್ಜಾಲ ಸಂಪರ್ಕದ ನಿಲುಕು ಅಧಿಕವಿರುವ ಭಾರತದಂಥ ರಾಷ್ಟ್ರಗಳಲ್ಲಿ ಸಾಮಾಜಿಕ ಮಾಧ್ಯಮಗಳ ಬಳಕೆದಾರರ ಸಂಖ್ಯೆ ಅಧಿಕವಿದೆ. ಇದೊಂದು ರೀತಿಯಲ್ಲಿ ವರವೂ ಹೌದು – ಶಾಪವೂ ಹೌದು. ಇಂಥ ಆಪತ್ತಿನ ಸಮಯದಲ್ಲಿ ಜನರೆಡೆಗೆ ಬೇಗನೇ ಸಂದೇಶಗಳನ್ನು ತಲುಪಿಸಲು ಸರಕಾರಗಳಿಗೆ ಸುಲಭವಾಗುತ್ತಿದೆ.

Advertisement

ಆದರೆ ಇದೇ ವೇಳೆಯಲ್ಲೇ ಹುಸಿ ಸುದ್ದಿಗಳ ಹಾವಳಿಯೂ ವಿಪರೀತವಾಗುತ್ತಿದೆ. ಎಲ್ಲರೂ ಈಗ ಮನೆಯಲ್ಲೇ ಇರುವುದರಿಂದ ಹಾಗೂ ಅನಿಶ್ಚಿತತೆ ಎದುರಾಗಿರುವುದರಿಂದ ಆತಂಕ ಎದುರಾಗುವುದು ಸಹಜವೇ. ಜನರ ಈ ಆತಂಕ, ಅಸಹಾಯಕತೆಯನ್ನೇ ಕೆಲವು ಕಿಡಿಗೇಡಿಗಳು ದುರ್ಬಳಕೆ ಮಾಡಿ ಕೊಳ್ಳುತ್ತಿದ್ದಾರೆ.

ಅದರಲ್ಲೂ ಲಾಕ್‌ಡೌನ್‌ ಅನಂತರದಿಂದ ಭಾರತೀಯರ ಅಂತರ್ಜಾಲ ನಿತ್ಯ ಬಳಕೆ ಪ್ರಮಾಣ 3 ಗಂಟೆ ಅಧಿಕವಾಗಿದೆ ಎನ್ನುತ್ತಿವೆ ಕೆಲವು ವರದಿಗಳು. ಈಗಿನ ಸ್ಥಿತಿಯಲ್ಲಿ ಜನರು ಸಾಮಾಜಿಕ ಮಾಧ್ಯಮಗಳಿಗೆ ತೆರೆದುಕೊಳ್ಳುವುದು ಸಹಜವೇ ಆಗಿರುತ್ತದೆ. ಇದರಿಂದಾಗಿ ಪ್ರತಿಯೊಬ್ಬರ ಡಿವೈಸ್‌ಗಳಲ್ಲೂ ದಿನನಿತ್ಯ ಹಲವಾರು ವದಂತಿಗಳು, ಸುಳ್ಳು ಸುದ್ದಿಗಳು ಬಂದು ಕೂರಲಾರಂಭಿಸಿವೆ.

ಫೇಸ್‌ಬುಕ್‌, ವಾಟ್ಸ್‌ ಆÂಪ್‌ ಮತ್ತು ಟ್ವಿಟರ್‌ಗಳಲ್ಲಿ ಕೋವಿಡ್ 19 ಹರಡುವಿಕೆಯ ಕುರಿತು ಕೆಲ ದಿನಗಳಿಂದ ಸುಳ್ಳು ಸಂಗತಿಗಳು ಹರಿದಾಡಲಾರಂಭಿಸಿವೆ. ಉದಾಹರಣೆ- ಈ ವೈರಾಣು ಸೊಳ್ಳೆಗಳಿಂದ ಹಾಗೂ ಸಾಕು ಪ್ರಾಣಿಗಳಿಂದ ಹರಡುತ್ತದೆ ಎನ್ನುವುದು. ಇದು ಶುದ್ಧ ಸುಳ್ಳು ಎಂದು ವಿಶ್ವ ಆರೋಗ್ಯ ಸಂಸ್ಥೆಯೇ ಸಾರಿ ಸಾರಿ ಹೇಳುತ್ತಿದೆ. ಗಮನಿಸಬೇಕಾದ ಸಂಗತಿಯೆಂದರೆ, ಈ ರೀತಿಯ ಸಂದೇಶಗಳ ಕೊನೆಗೆ ದೇಶದ ಹೆಸರಾಂತ ವೈದ್ಯರ, ತಜ್ಞರ, ಸಂಸ್ಥೆಗಳ, ರಾಜಕಾರಣಿಗಳ, ಸರಕಾರಗಳ ಹೆಸರುಗಳನ್ನು ಸೇರಿಸಲಾಗುತ್ತಿದೆ. ಈ ಕಾರಣಕ್ಕಾಗಿ ಜನ ಈ ಸುಳ್ಳನ್ನು ಸತ್ಯವೆಂದು ಭಾವಿಸುವ ಅಪಾಯವಿದೆ.

ಕೋವಿಡ್ 19 ಹೇಗೆ ಹರಡುತ್ತದೆ, ಅದನ್ನು ಹೇಗೆ ತಡೆಯಬೇಕು ಎನ್ನುವ ಬಗ್ಗೆ ಸರಕಾರ, ಆರೋಗ್ಯ ಇಲಾಖೆಗಳು, ಆರಂಭದಿಂದಲೇ ಜಾಗೃತಿ ಮೂಡಿಸುತ್ತಾ
ಬರುತ್ತಿವೆ. ಸ್ವ-ದಿಗ್ಬಂಧನ , ಆರೋಗ್ಯಯುತ ಜೀವನ ಶೈಲಿ, ಸ್ವತ್ಛತೆ ಕಾಪಾಡಿಕೊಳ್ಳುವುದಕ್ಕೆ ಆದ್ಯತೆ ನೀಡಬೇಕು. ಸದ್ಯಕ್ಕೆ ಈ ವೈರಸ್‌ ವಿರುದ್ಧ ಲಸಿಕೆ ಇಲ್ಲ, ಹೀಗಿದ್ದರೂ, ಮನೆಮದ್ದುಗಳಿಂದ ವೈರಸ್‌ ನಾಶವಾಗುತ್ತದೆ ಎಂಬ ಸುದ್ದಿ ಹರಡಲಾಗುತ್ತಿದೆ.

Advertisement

ನಿಮ್ಮಲ್ಲಿ ಚಿಂತೆ ಮೂಡಿಸುವ ಲಕ್ಷಣಗಳು ಕಾಣಿಸಿಕೊಂಡರೆ ವೈದ್ಯರೊಂದಿಗೆ
ಮಾತನಾಡಿ, ಅವರ ಸಲಹೆ ಪಡೆಯಿರಿ. ಅವರು ಹೇಳುವ ಕ್ರಮಗಳನ್ನು
ಪಾಲಿಸಿರಿ. ಎಲ್ಲಕ್ಕಿಂತ ಮುಖ್ಯವಾಗಿ, ಹೀಗೆ ಹರಿದಾಡುತ್ತಿರುವ ಸುಳ್ಳು
ಸುದ್ದಿಗಳು, ವದಂತಿಗಳ ಬಗ್ಗೆ ಪತ್ರಿಕೆಗಳು, ಸರಕಾರ, ವಿಶ್ವ ಆರೋಗ್ಯ ಸಂಸ್ಥೆ
ಹಾಗೂ ಹಲವಾರು ಫ್ಯಾಕ್ಟ್ ಚೆಕ್‌ ಜಾಲತಾಣಗಳು ನಿತ್ಯವೂ ಜಾಗೃತಿ
ಮೂಡಿಸುತ್ತಿದ್ದು, ಅವುಗಳ ಮೊರೆ ಹೋಗಿ. ವಾಟ್ಸ್‌ ಆಪ್‌, ಫೇಸ್‌ಬುಕ್‌ನ‌
ಸುಳ್ಳು ಸುದ್ದಿಗಳು ಸೃಷ್ಟಿಸುತ್ತಿರುವ ಆತಂಕವು ಅನಗತ್ಯ ಪ್ರಯೋಗಗಳಿಗೆ,
ತನ್ಮೂಲಕ ಅಪಾಯಕಾರಿ ಫ‌ಲಿತಾಂಶಗಳಿಗೆ ಕಾರಣವಾಗದಿರಲಿ.

Advertisement

Udayavani is now on Telegram. Click here to join our channel and stay updated with the latest news.

Next