Advertisement

ಕೋವಿಡ್ ಸುಳ್ಳುಸುದ್ದಿ: ಪ್ರಧಾನಿ ಮೋದಿ ಇಂಟರ್ನೆಟ್‌ ಶಟ್‌ ಡೌನ್‌ ಘೋಷಿಸಿಲ್ಲ

10:17 AM Mar 31, 2020 | Hari Prasad |

ಕೋವಿಡ್ 19 ವೈರಸ್ ವ್ಯಾಪಿಸುತ್ತಿರುವಷ್ಟೇ ವೇಗದಲ್ಲಿ ಅದರ ಕುರಿತಾದ ಸುಳ್ಳು ಸುದ್ದಿಗಳೂ ವ್ಯಾಪಿಸುತ್ತಿವೆ. ಸಾಮಾಜಿಕ ಜಾಲತಾಣಗಳ‌ಲ್ಲಿ ಹಬ್ಬುತ್ತಿರುವ ಸುದ್ದಿಗಳ ಸತ್ಯ ದರ್ಶನ ಇಲ್ಲಿರುತ್ತದೆ.

Advertisement

ಪ್ರಧಾನಿ ನರೇಂದ್ರ ಮೋದಿಯವರು ದೇಶದಲ್ಲಿ ಒಂದು ವಾರ ಕಾಲ ಇಂಟರ್ನೆಟ್‌ ಸ್ಥಗಿತಗೊಳಿಸುವ ಬಗ್ಗೆ ಘೋಷಿಸಿದ್ದಾರೆ ಎಂದು ಹೇಳಲಾದ ನ್ಯೂಸ್‌ ಗ್ರಾಫಿಕ್‌ ವೊಂದು ಸಾಮಾಜಿಕ ಜಾಲತಾಣಗಳಲ್ಲಿ ಕಳೆದೊಂದು ವಾರದಿಂದ ಹರಿದಾಡುತ್ತಿದೆ. ಈ ವೈರಲ್‌ ಗ್ರಾಫಿಕ್‌ ನಲ್ಲಿ ಹಿಂದಿ ನ್ಯೂಸ್‌ ಚಾನೆಲ್‌ ಆಜ್‌ ತಕ್‌ ನ ಲೋಗೋವನ್ನು ಕೂಡ ಹಾಕಲಾಗಿದ್ದು, ಆ ಸುದ್ದಿವಾಹಿನಿಯಲ್ಲೇ ಪ್ರಸಾರವಾದ ಸುದ್ದಿಯಂತೆ ಬಿಂಬಿಸಿ ಇದನ್ನು ಹರಿಬಿಡಲಾಗಿದೆ.

ಆದರೆ, ಇದೊಂದು ಸುಳ್ಳು ಸುದ್ದಿಯಾಗಿದ್ದು, ಪ್ರಧಾನಿ ಮೋದಿ ಅವರು ಅಂಥ ಯಾವುದೇ ಘೋಷಣೆ ಮಾಡಿಲ್ಲ. ವೈರಲ್‌ ಆಗಿರುವಂಥ ಈ ಗ್ರಾಫಿಕ್‌ ಅನ್ನು ಯಾರೋ ಕಿಡಿಗೇಡಿಗಳು ಫೋಟೋಶಾಪ್‌ ಮೂಲಕ ತಯಾರಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.


ಕೋವಿಡ್ 19 ವೈರಸ್ ಗೆ ಬಲಿಯಾದವರ ಮೃತದೇಹಗಳು ಅಲ್ಲ
ಇಟಲಿಯಲ್ಲಿ ಕೋವಿಡ್ 19 ವೈರಸ್ ಗೆ ಬಲಿಯಾದವರ ಮೃತದೇಹಗಳನ್ನು ಶವ ಪೆಟ್ಟಿಗೆಯಲ್ಲಿ ಸಾಲಾಗಿ ಇಟ್ಟಿರುವುದು ಎಂದು ಹೇಳಲಾದ ಫೋಟೋಗಳು ನಿಮ್ಮ ವಾಟ್ಸ್‌ ಆ್ಯಪ್‌ ಬಂದಿರಬಹುದು. ಅದನ್ನು ನೋಡಿ ನೀವು ಹೌಹಾರಿರಬಹುದು. ಆದರೆ, ಅದು ಸತ್ಯ ಸುದ್ದಿಯಲ್ಲ. ಭಾರತ ಮಾತ್ರವಲ್ಲದೆ ಆಸ್ಟ್ರೇಲಿಯಾ, ಪಾಕಿಸ್ತಾನ, ದ.ಆಫ್ರಿಕಾದ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್‌ ಆಗುತ್ತಿರುವ ಈ ಫೋಟೋಗಳು ಈಗಿನದ್ದಲ್ಲವೇ ಅಲ್ಲ.

ಇವು 2013ರಲ್ಲಿ ಇಟಲಿಯ ಲ್ಯಾಂಪೆಡುಸಾ ದ್ವೀಪದ ಬಳಿಕ ದೋಣಿ ದುರಂತ ಸಂಭವಿಸಿ, 360ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದ ಘಟನೆಯ ಫೋಟೋಗಳು. ಸುಮಾರು 500 ಆಫ್ರಿಕಾ ವಲಸಿಗರು ದೋಣಿಯಲ್ಲಿ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿತ್ತು. ಆದರೆ, ಈಗ ಪರಿಸ್ಥಿತಿಯ ಲಾಭ ಪಡೆದ ಕೆಲವರು ಅಂದಿನ ಫೋಟೋವನ್ನು ಈಗ ಕೋವಿಡ್ 19 ವೈರಸ್ ಗೆ ಬಲಿಯಾದವರ ಮೃತದೇಹಗಳೆಂದು ಬಿಂಬಿಸಿ ಹರಿಬಿಟ್ಟಿದ್ದಾರೆ.

Advertisement


ಈ ಫೋಟೋ 3 ವರ್ಷ ಹಳೇದು

21 ದಿನಗಳ ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಮನೆಗಳಿಂದ ಹೊರಬರದಂತೆ ನಾಗರಿಕರನ್ನು ತಡೆಯುತ್ತಿರುವ ಪೊಲೀಸರು, ಕೆಲವು ಕಡೆ ಲಾಠಿ ಪ್ರಹಾರದಂಥ ಕ್ರಮ ಕೈಗೊಂಡಿರುವ ಘಟನೆಗಳನ್ನು ನೀವು ನೋಡಿರಬಹುದು. ಅವುಗಳ ಮಧ್ಯೆಯೇ, ವ್ಯಕ್ತಿಯೊಬ್ಬ ಪೊಲೀಸ್‌ ಸಿಬ್ಬಂದಿಯ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರತ್ಯಕ್ಷವಾಗಿದೆ. ಇದು ಹಲವು ಬಾರಿ ಶೇರ್‌ ಆಗಿದ್ದಲ್ಲದೆ, ಅನೇಕರು ಘಟನೆ ಕುರಿತು ಆಕ್ರೋಶವನ್ನೂ ಹೊರಹಾಕಿದ್ದಾರೆ.

ಆದರೆ, ಇದು ಲಾಕ್‌ ಡೌನ್‌ ಗೆ ಸಂಬಂಧಿಸಿದ ಫೋಟೋ ಅಲ್ಲವೇ ಅಲ್ಲ. 3 ವರ್ಷಗಳ ಹಿಂದೆ, ಅಂದರೆ 2017ರ ಜೂನ್‌ ನಲ್ಲಿ ಉತ್ತರಪ್ರದೇಶದಲ್ಲಿ ನಡೆದ ಘಟನೆಯ ಫೋಟೋ. ಕಾನ್ಪುರದ ಆಸ್ಪತ್ರೆಯಲ್ಲೇ ಶಾಲಾ ಬಾಲಕಿ ಮೇಲೆ ಅತ್ಯಾಚಾರ ನಡೆದಾಗ, ಉದ್ವಿಗ್ನಗೊಂಡ ಗುಂಪೊಂದು ಪೊಲೀಸರ ಮೇಲೆ ದಾಳಿ ನಡೆಸಿದಾಗ ಸೆರೆಯಾದ ಚಿತ್ರವಿದು. ಡೈಲಿ ಮೇಲ್‌ ನಲ್ಲಿ ಪ್ರಕಟವಾಗಿದ್ದ ಈ ಫೋಟೋವನ್ನು ಈಗ ಸುಳ್ಳು ಅಡಿಬರಹ ನೀಡಿ ವೈರಲ್‌ ಮಾಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next