Advertisement

ನಕಲಿ ಗೊಬ್ಬರ ಮಾರಾಟ ಪ್ರಕರಣ ಸಿಒಡಿಗೆ: ಬಿ.ಸಿ.ಪಾಟೀಲ್‌

08:14 PM Aug 15, 2022 | Team Udayavani |

ಚಿತ್ರದುರ್ಗ: ರಾಜ್ಯದಲ್ಲಿ ಪತ್ತೆಯಾಗಿರುವ ನಕಲಿ ಗೊಬ್ಬರ ಮಾರಾಟ ಪ್ರಕರಣದಲ್ಲಿ ಅಂತಾರಾಜ್ಯ ಕೈವಾಡ ಇರುವುದರಿಂದ ಪ್ರಕರಣವನ್ನು ಸಿಒಡಿ ತನಿಖೆಗೆ ಒಪ್ಪಿಸಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್‌ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿತ್ರದುರ್ಗ ಜಿಲ್ಲೆಯಲ್ಲಿ ನಕಲಿ ಗೊಬ್ಬರ ಮಾರಾಟಕ್ಕೆ ಸಂಬಂ ಧಿಸಿದಂತೆ ಎರಡು ಪ್ರಕರಣಗಳು ದಾಖಲಾಗಿವೆ. ಮೈಸೂರು, ಮಡಿಕೇರಿ, ಕೊಡಗು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಈ ಬಗ್ಗೆ ದೂರುಗಳಿವೆ. ತಮಿಳುನಾಡಿನ ಸೇಲಂನ ವೆಂಕಟೇಶ್ವರ ಫರ್ಟಿಲೈಜರ್ಸ್‌ ಕಂಪನಿ ಇದರ ಹಿಂದೆ ಇರುವುದು ತನಿಖೆಯಲ್ಲಿ ತಿಳಿದು ಬಂದಿದೆ.

ರಾಜ್ಯದಲ್ಲಿ 28 ಕೋಟಿ ರೂ. ಮೌಲ್ಯದ ನಕಲಿ ರಸಗೊಬ್ಬರ ವಶಪಡಿಸಿಕೊಂಡಿದ್ದು, 144 ಫರ್ಟಿಲೈಜರ್ಸ್‌ ಪರವಾನಗಿ ರದ್ದು ಮಾಡಲಾಗಿವೆ. 500ಕ್ಕೂ ಹೆಚ್ಚು ಪ್ರಕರಣ ದಾಖಲಿಸಿದ್ದು, 15 ಲಕ್ಷ ರೂ. ದಂಡ ವಸೂಲು ಮಾಡಲಾಗಿದೆ. ಇದೇ ಮೊದಲ ಬಾರಿಗೆ ಇಷ್ಟು ಪ್ರಮಾಣದ ದೂರು ದಾಖಲಾಗಿವೆ ಎಂದರು.

ನೆಹರೂ ಭಾವಚಿತ್ರದ ಬಗ್ಗೆ ವಾರ್ತಾ ಇಲಾಖೆ ಕೇಳಿ:
ಸರ್ಕಾರದ ಜಾಹೀರಾತಿನಲ್ಲಿ ನೆಹರೂ ಭಾವಚಿತ್ರ ಇಲ್ಲದಿರುವ ಬಗ್ಗೆ ವಾರ್ತಾ ಇಲಾಖೆಯವರನ್ನು ಕೇಳಬೇಕು. ಜಾಹೀರಾತಿನಲ್ಲಿ ನೆಹರೂ ಭಾವಚಿತ್ರ ಇರಬೇಕಾಗಿತ್ತು. ಸ್ವಾತಂತ್ರ್ಯ ಬಂದಾಗ ಇದ್ದ ಕಾಂಗ್ರೆಸ್ಸೇ ಬೇರೆ. ಈಗ ಇರುವ ಕಾಂಗ್ರೆಸ್ಸೇ ಬೇರೆ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಸಿದ್ದರಾಮಯ್ಯನೂ ಇರಲಿಲ್ಲ, ನಾನೂ ಇರಲಿಲ್ಲ. ಬಿಜೆಪಿ, ಜನಸಂಘ ಯಾವ ಪಕ್ಷವೂ ಇರಲಿಲ್ಲ. ಹೀಗಿರುವಾಗ ಸಿದ್ದರಾಮಯ್ಯ ಯಾಕೆ ಪದೇ ಪದೇ ನಮ್ಮ ದೇಶಭಕ್ತಿ ಬಗ್ಗೆ ಮಾತನಾಡುತ್ತಾರೆ, ನಮಗೆ ದೇಶಭಕ್ತಿ ಇರುವ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಪ್ರತಿ ಮನೆ ಮೇಲೆ ರಾಷ್ಟ್ರಧ್ವಜಾರೋಹಣ ಮಾಡುವಂತೆ ಕರೆ ನೀಡಿದರು. ರಾಜ್ಯದಲ್ಲಿ 1.30 ಕೋಟಿ ಧ್ವಜಗಳನ್ನು ಸರ್ಕಾರದಿಂದ ವಿತರಿಸಲಾಗಿದೆ ಎಂದರು.

ನಮ್ಮದು ಸುಭದ್ರ ಸರ್ಕಾರ:
ನಾವು ಸರ್ಕಾರವನ್ನು ನಡೆಸುತ್ತಿದ್ದೇವೆ. ದಕ್ಷ, ಪ್ರಾಮಾಣಿಕ, ಸುಭದ್ರ ಸರ್ಕಾರ ಇದೆ. ಮಾಧುಸ್ವಾಮಿ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ, ನಾನು ಅವರ ನಾಲಗೆ ಅಲ್ಲ. ಕಾಂಗ್ರೆಸ್ಸಿನವರಿಗೆ ಮಾಡಲು ಕೆಲಸ ಇಲ್ಲ. ಈ ಕಾರಣಕ್ಕೆ ಬೆಳಗಿನಿಂದ ಸಂಜೆವರೆಗೆ ಟೀಕೆ ಮಾಡುತ್ತಾ ಮಾಧ್ಯಮಗಳಿಗೆ ಆಹಾರವಾಗಿ ಸುದ್ದಿ ಕೊಡುತ್ತಿದ್ದಾರೆ. ಹೀಗೆ ಸುದ್ದಿ ಕೊಡುವುದರಲ್ಲಿ ಅವರು ನಿಪುಣರು ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next