Advertisement
ತನ್ನದೇ ನುಡಿಗಟ್ಟು ಪಡೆಯಬೇಕೆನ್ನುವ ಅಭೀಪ್ಸೆ ಕಾವ್ಯವನ್ನು ಅಂತರ್ಮುಖಗೊಳಿಸುವುದು ಅನಿವಾರ್ಯವೆಂದು ತೋರುತ್ತದೆ. ಬೇಂದ್ರೆಯವರು ಮಿಸ್ಟಿಕಲ್ ಒಲವಿನ ಕವಿಯಾದುದರಿಂದ ಮಾತು ಮಂತ್ರವಾಗಬೇಕೆನ್ನುತ್ತಿದ್ದರು. “”ಇದು ಮಂತ್ರ-ಅರ್ಥಕೊಗ್ಗದ ಶಬ್ದಗಳ ಪವಣಿಸುವ ತಂತ್ರ”- ಇದು ಬೇಂದ್ರೆ ನುಡಿ. ಅಡಿಗರು ಹೆಚ್ಚು ಆಧುನಿಕರಾದುದರಿಂದ ಮಾತು ಮನಸ್ಸಿನ ಪ್ರತಿರೂಪವಾಗಬೇಕೆನ್ನುತ್ತಿದ್ದರು. ಮಾತು ಮನಸ್ಸಿನ ಪ್ರತಿಮೆ! ಈ ಪ್ರತಿಸೃಷ್ಟಿ ; ಪ್ರತಿರೂಪ ನಿರ್ಮಿತಿ ಅಡಿಗರ ಒಂದೇ ಕಾಳಜಿಯಾಗಿತ್ತು. ಪ್ರತಿಸೃಷ್ಟಿಯು ಅತಿಸೂಕ್ಷ್ಮವಾದ ತಾಂತ್ರಿಕ ಕೌಶಲವನ್ನು ಬಯಸುವುದರಿಂದ ಕಾವ್ಯಕ್ರಿಯೆ ಎಂದರೆ-ಹೊನ್ನ ಕಾಯಿಸಿ ಹಿಡಿದು ಬಡಿದಷ್ಟ ದೇವತಾವಿಗ್ರಹಕ್ಕೊಗಿಸುವ ಅಸಲು ಕಸುಬು.
Related Articles
Advertisement
ಸಿಗುತ್ತಿದ್ದರೆ, ಕಾಲ ಅಖಂಡವಾಗಿ ತನ್ನನ್ನು ಆವರಿಸಿದಂತೆ, ಭೂಗೋಲವೇ ದಿಗಂತದಂಚಿಗೆ ತನ್ನನ್ನೆತ್ತಿ ತನ್ನೆರಡು ಬದಿಗಳನ್ನೂ ತೆರೆದು ತೋರಿಸಿದಂತೆ, ಮತ್ತು ಈ ಅನುಭವದಿಂದ ತಾನೆ ಇಡಿಯಾದಂತೆ ಭವಭೂತಿಗೆ ಅನುಭವವಾಗುತ್ತಿತ್ತು ಎನಿಸುತ್ತದೆ. ಭವಭೂತಿಯ ಮಾತುಗಳಲ್ಲೇ ಹುದುಗಿದೆ ಈ ಗುಟ್ಟು ! ಅಡಿಗರು, ಚಿಂತಾಮಣಿಯಲ್ಲಿ ಕಂಡಮುಖ ಎಂಬ ತಮ್ಮ ಕವಿತೆಯಲ್ಲಿ ತಮ್ಮ ಸಮಾನಧರ್ಮಿಯನ್ನು ಅನಿರೀಕ್ಷಿತವಾಗಿ ಕಂಡುಕೊಂಡ ಆಳದ ಅನುಭವವನ್ನು ಹೇಳಿದ್ದಾರೆ. ಭವಭೂತಿಗೆ ಆಗಿರಬಹುದಾಗಿದ್ದ ಅನುಭವವದು! ಪದ್ಯ ಹೀಗಿದೆ: ಹೀಗೆ ತೊಡಗುತ್ತದೆ:
ಚಿಂತಾಮಣಿಯ ಸಭಾಂಗಣದಲ್ಲಿ ಭಾಷಣ ಮಗ್ನಮನಸ್ಸು , ಮನಸ್ಸಿನ ಶೇ. ತೊಂಬತ್ತು ಪಾಲು; ಕಣ್ಣು
ಹಾಯುತ್ತಿತ್ತು ಮುಖದಿಂದ ಮುಖಕ್ಕೆ ; ಹುಡುಕುತ್ತಿತ್ತು
ರೇವುಳ್ಳ ನಡುಗಡ್ಡೆಯೊಂದ, ತಂಗಲು ನಿಮಿಷ; ತಂಗಿ
ಅಂತರಂಗದ ಅನಂಗಭಂಗಿಗೆ ತಕ್ಕ ಭಂಗಿ, ದೃಷ್ಟಿಗೆ ದೃಷ್ಟಿ ,
ಬಡಿತಕ್ಕೆ ತಕ್ಕ ಪ್ರತಿಬಡಿತ ಕೊಡುವ ಇನ್ನೊಂದು
ಸಮಹೃದಯದ ನಿಗೂಢ ಸಹಕಂಪನದ ರೋಮಾಂಚ
ಪ್ರತಿಫಲಿಸಬಲ್ಲೊಂದು ಮುಖವ ಕಂಡಂತೆ ಕವಿ ಹೊರಮುಖವಾಗಿದ್ದಾನೆ. ಸಭಾಂಗಣದಲ್ಲಿ ಭಾಷಣಮಗ್ನ. ಆದರೆ, ಭಾಷಣದ ನಡುವೆಯೇ ಅಂತರಂಗದ ಶೇಕಡಾ ಹತ್ತು-ಇದು ಒಳಮುಖ; ಸುಪ್ತಮನ; ಇದು ಉತ್ಕಟ- ಇನ್ನೇನನ್ನೋ ಹುಡುಕುತ್ತಿದೆ! ತನ್ನ ಮಾತು ಯಾರನ್ನು ಮುಟ್ಟಿತು ಎಂಬುದನ್ನಲ್ಲ. ಕೇಳುಗರನ್ನಲ್ಲ. ಕೇಳ್ಮೆಯಲ್ಲಿ ಮಗ್ನರಾಗಿಯೂ ತನ್ನಂತೆ ಇನ್ನೇನನ್ನೋ ಹುಡುಕುತ್ತಿರುವ ಒಂದು ಮುಖವನ್ನು ಹುಡುಕುತ್ತಿದೆ! ಈ ಹುಡುಕಾಟವೇ ಅರ್ಥಪೂರ್ಣ. ಭಾಷಣವೂ ಅಲ್ಲ. ಭಾಷಣದ ಕೇಳ್ಮೆಯೂ ಅಲ್ಲ. ಅಂದರೆ, ಇಲ್ಲಿ ನಡೆಯುತ್ತಿರುವುದು ಭಾಷೆಯ ಮುಖ್ಯಕಾರ್ಯವಾದ ಸಂವಹನವಲ್ಲ. ಆ ಸಂವಹನವೆಲ್ಲ ಹೊರಹೊರಗಿನದು. ಇದು ಅಂತರಂಗದ ಸಮಶ್ರುತಿಯ ಕೇಳ್ಮೆ , ಹಾಗೆ ಸಮಾನಶ್ರುತಿಗೊಂಡವರು ಇದ್ದಾರೆಯೇ ಎಂಬ ಹುಡುಕಾಟ. ಇದ್ದರೆ ಅಂಥ ಸಮಶ್ರುತಿಯ ಕೇಳ್ಮೆಯೇ ಮುಖ್ಯ. ಭಾಷಣವಲ್ಲ. ಯಾಕೋ ಬೇಂದ್ರೆಯವರ ಕಲ್ಪವೃಕ್ಷ ವೃಂದಾವನಂಗಳಲಿ ಎಂಬ ಕವಿತೆ ನೆನಪಾಗುತ್ತದೆ. ಆ ಕವಿತೆಯಲ್ಲಿ ಈ ಕೆಳಗಿನ ಸಾಲುಗಳಿವೆ. ಅಲ್ಲಿ ಎಲ್ಲರಿಗೂ ನಾಲ್ಕು ಕೈಗಳೇ
ಮಾಟ ತಪ್ಪದಿಹವು
ಎರಡು ಒಪ್ಪಿಸಿವೆ ಕುಶಲಕಲೆಗಳಲಿ
ಎರಡು ಅಪ್ಪಿ ಇಹವು
ಎಲ್ಲರಲಿ ತಲ್ಲೀನರಾಗಲೋ
ಜೀವ ಒಪ್ಪಿಸಿಹವು
ಅಲ್ಲಿ ಕುಶಲಕಲೆಗಳಲಿ ಎರಡು ಕೈಗಳು ಒಪ್ಪಿಸಿರುವಂತೆಯೇ ಮತ್ತೆರಡು ಕೈಗಳು ಇನ್ನೊಂದು ಜೀವವನ್ನು ತಬ್ಬಿಕೊಂಡಿವೆ. ಕುಶಲಕಲೆಗೂ ಅಪ್ಪುಗೆಗೂ ಯಾವುದಕ್ಕೂ ಭಂಗ ಬಂದಿಲ್ಲ. ಏಕಕಾಲದಲ್ಲಿ ಎರಡೂ ಕ್ರಿಯೆಗಳು! ಯಾವುದು ನಿಜ? ಎರಡೂ ನಿಜ. ಕುಶಲಕಲೆಯು ಆಯ್ಕೆಯ ಸಂದರ್ಭ ಅಪ್ಪುಗೆಯು ಅಂತರಂಗ ಜೀವನದ ಸಂದರ್ಭ. ಆಯ್ಕೆಯೂ ಜೀವನವೇ. ಅಂತರಂಗವೂ ಜೀವನ. ಆದರೆ ಬೇಂದ್ರೆ ಕವಿತೆಯಲ್ಲಿ ಇಡೀ ಕವಿತೆಯು ಕನಸಿನ ಸಂದರ್ಭದಲ್ಲಿ ನಡೆಯುವಂಥದು. ಅಡಿಗರ ಕವಿತೆಯಲ್ಲಿ ಎಚ್ಚರದ ಸಂದರ್ಭ. ಹುಡುಕುತ್ತಿರುವ ಮುಖ ಕಂಡಿತೇನು? ಕವಿತೆ ಮುನ್ನಡೆಯುತ್ತದೆ: ಹಠಾತ್ತಾಗಿ ಮೂಡಿತ್ತಲ್ಲಿ ಅಗೋ, ಅಗೋ ಸಭಾಮಧ್ಯದಲ್ಲಿ ಪರಮಾಪ್ತ ಮುಖ,
ಮಾತಿನಾಚೆಯ ಸಹಸ್ಪಂದಿ; ಮಾತಿಲ್ಲದೆಯೆ
ಇಂಗಿತವನರಿವ ಸಹಭಾಗಿನಿಯ ಸಹಜ ಮುದ್ರೆ.
ಯಾವ ಮುಖ ಅದು? ಎಲ್ಲಿ, ಯಾವಾಗ, ಯಾವ ಭವದಲ್ಲಿ ,
ಲೋಕದಲ್ಲಿ, ಸಂಭಾವ್ಯತೆಯ ಯಾವ ಆಕಸ್ಮಿಕದ
ಆತ್ಮೀಯತೆಯ ಆಪ್ಯಾಯಮಾನ ಕ್ಷಣದಲ್ಲಿ
ಕಂಡದ್ದು ಅದು?
ಒಳತಳದ ಬೀಗ ಹೇಗೋ ಕಳಚಿ ಬಾಗಿಲು ತೆರೆದು
ಮೇಲಕ್ಕೆ ಚಿಮ್ಮಿ ಮುಖದಲ್ಲಿ ಮೂಡುವ ಕೆಂಪು.
ಮಿಂಚಂತೆ ಬಂದೊಂದು ಬೆರಗು; ನಿಷ್ಕಾಮವಾದೊಂದು ಚೆಲುವಿನ ಕಂಪು;
ಕಣ್ಣಂಚಲ್ಲಿ ಚಕಮಕಿಸುತ್ತಿರುವ ಬೆಳಕಿನ ಗುಳ್ಳೆ ,
ಕೆನ್ನೆಯಲ್ಲವತರಿಸುವ ಅನಾದಿರಾಗದ ಪ್ರತಿಮೆ.
ಅಹಹಾ, ಅಲೌಕಿಕ ಸಖೀಯೆ,
ಮುಂಗೈ ಮೇಲೆಯೇ ಅಮೂರ್ತ ಕುಳಿತ ಓ ಅರಗಿಣಿಯೆ,
ಅಸಂಭಾವ್ಯ ಸಂಭಾವ್ಯವಾದೊಂದು ನಿಮಿಷ, ಅನಿಮೇಷ,
ವೇಷವೆಲ್ಲವ ಕಿತ್ತು ಬಿಸುಟ ಅಂತರ್ಮೂಲದ ಅಮೂಲ್ಯ ಹಾಸ
ಹುಡುಕಿದ್ದರೂ ತಾನು ಹುಡುಕಿದ್ದರಿಂದ ಇದು ಸಿಕ್ಕಿತು ಎನ್ನಲಾಗದ ಮುಖ. ಇದನ್ನು ಹುಡುಕಿ ಪಡೆಯಲು ಸಾಧ್ಯವಿಲ್ಲವೆಂಬಂಥ ಮುಖ, ಎಲ್ಲೋ ಕಂಡಿದ್ದೆ ಆದರೆ ಯಾವ ಜನ್ಮದಲ್ಲಿ ಎಂಬ ಭಾವವನ್ನು ಉದ್ದೀಪಿಸುವ ಮುಖ, ಹಾಗೆ ಉದ್ದೀಪಿಸಿ ಕಾಲವನ್ನು ಅಖಂಡವಾಗಿಸುವ ಮುಖ, ಪರಸ್ಪರ ಮೌನದಲ್ಲೇ ಅರ್ಥವಾಗುವ ಪರಿಗೆ ಮಾತು ನಾಚಿಕೊಳ್ಳುವ ಹಾಗೆ ಮಾಡುವ ಮುಖ, ಶಬ್ದದೊಳಗಣ ಅರ್ಥಕ್ಕಲ್ಲ-ಶಬ್ದದೊಳಗಣ ನಿಃಶಬ್ದಕ್ಕೆ ಕಿವಿಗೊಡುವುದನ್ನು ಹೇಳಿಕೊಡಬಲ್ಲ ಮುಖವಿದು. ಕಣ್ಣಂಚಲ್ಲಿ ಚಕಮಕಿಸುತ್ತಿರುವ ಬೆಳಕಿನ ಗುಳ್ಳೆ ಎನ್ನುತ್ತಾರೆ. ಕೆನ್ನೆಯಲ್ಲವತರಿಸುವ ಅನಾದಿ ರಾಗದ ಪ್ರತಿಮೆ ಎನ್ನುತ್ತಾರೆ. ಮುಂಗೈ ಮೇಲೆಯೇ ಅಮೂರ್ತ ಕುಳಿತ ಓ ಅರಗಿಣಿಯೆ ಎನ್ನುತ್ತಾರೆ. ಎದುರಿಗೆ ಕಾಣುತ್ತಿರುವುದು ಬರಿಯ ದೃಶ್ಯವಲ್ಲ. ಬರಿಯ ಲೌಕಿಕವಲ್ಲ. ಇದೊಂದು ಹೊಳಹು! ಇವಳು ಅಲೌಕಿಕ ಸಖೀ ಎಂದಂತೆ. ದೃಶ್ಯವೇ ಹೊಳಹಾಗಿ ಒದಗಿಬರುವ ಆಕಸ್ಮಿಕವನ್ನು ಹೇಳುತ್ತಿದ್ದಾರೆ. ಮಹಾನ್ ಶಿಲ್ಪಿ ರೋಡಿನ್ ಕವಿ ರಿಲ್ಕೆಗೆ ಹೀಗೆ ಹೇಳಿದ್ದನಂತೆ- ದಿಟ್ಟಿಸಿ ನೋಡು. ನೀ ಹೇಗೆ ದಿಟ್ಟಿಸಬೇಕೆಂದರೆ ನೀನು ನೋಡಿದ್ದು ನಿನಗೆ ಹೊಳಹಾಗಿಯೂ ಒದಗಬೇಕು, ಮುಂಗೈ ಮೇಲೆ ಅಮೂರ್ತ ಕುಳಿತ ಅರಗಿಣಿ- ಈ ಮಾತನ್ನು ನೆನಪಿಸುತ್ತದೆ. ಓ ದೃಶ್ಯವೇ ಹೊಳಹಾಗಿ ಒದಗಿ ಬಾ ಎಂದು ಅಡಿಗರು ಕರೆಯುತ್ತಿದ್ದಾರೇನೋ ಅನ್ನಿಸುತ್ತದೆ. ಮೃಗಶಾಲೆಯಲ್ಲಿ ಸಿಂಹವನ್ನು ನೋಡಿ, ಹಾ! ತಾಯಿದುರ್ಗೆಯ ವಾಹನ ಎನ್ನುತ್ತ ರಾಮಕೃಷ್ಣರು ಭಾವಸಮಾಧಿ ಪಡೆದ ಕಥೆ ನೆನಪಾಗುತ್ತದೆ! ಇಲ್ಲಿಗೆ ವೇಷ ಕಳಚಿತು. ಸಭೆ ಮುಗಿಯಿತು. ಮೌನಕ್ಕೆ ಮೌನದ ಗುರುತು ಹತ್ತಿತು. ಕವಿತೆಯ ಎರಡನೆಯ ಭಾಗದಲ್ಲಿ ಕವಿ-ಮತ್ತೆ ಚಿಂತಿಸುತ್ತಿದ್ದಾನೆ. ನಿಮಿಷ ಕೂತಿದ್ದ ಅರಗಿಣಿ ಹಾರಿಹೋಗಿದೆ. ಹೊಳಹು ಮಿಂಚಿಹೋದ ಮೇಲೆ ಮತ್ತೆ ಆ ಕುರಿತು ಚಿಂತನೆ ಮಾತ್ರ ಸಾಧ್ಯ. ತಾನು ಅರಸುತ್ತಿದ್ದ ಆ ಮುಖ ಅದು ತನ್ನದೇ ಆದ ಹೊಸಮುಖ ಎಂದು ಕವಿ ಅರಿತವನಾದ. ಅದು ಸ್ತ್ರೀ ಮುಖ. ಆದರೂ ತನ್ನದೇ ಮುಖ. ತನ್ನದೇ ಆದರೂ ವಿಚಿತ್ರವೆಂಬಂತೆ ತೀವ್ರವಾದ ವಿರಹವನ್ನು ಉಂಟುಮಾಡುತ್ತಿದೆ! ಏಕೆಂದರೆ ಅದು ತನ್ನ ಇನ್ನೊಂದು ಅರ್ಧ. ಎಲ್ಲಾದರೂ ತನ್ನ ಇನ್ನೊಂದರ್ಧ ಕ್ಷಣಾರ್ಧ
ಸಿಕ್ಕಿದವನೆ ಕೃತಾರ್ಥ, ಭಾಗ್ಯವಂತ
ಮತ್ತೆ ಯಾವಾಗ ಮರು ಭೇಟಿ? ಎಂಬ ಚಿಂತೆಯೊಂದಿಗೇ, ಇನ್ನೊಮ್ಮೆ ಭೇಟಿಯಾದರೂ ಅದು ಹೀಗೇ ಆಗಿರುತ್ತದೆ ಎಂದು ಹೇಳಲಾಗದು ಎಂಬ ಖನ್ನತೆಯೊಂದಿಗೇ ಕವಿತೆ ಮುಗಿಯುವುದು. ಕವಿತೆಯ ಗ್ರಾಫು ಹುಡುಕಾಟದ ಭಾವನೆಯೆ ತಹತಹದಿಂದ ತೊಡಗಿ ಅಪೂರ್ವವಾದುದನ್ನು ಪಡೆದ ಅನುಭವದ ಶಿಖರವನ್ನೇರಿ ಮತ್ತೆ ಪಡೆದುದರ ನೆನವರಿಕೆಯ ವಿಷಾದದಲ್ಲಿ ಮುಗಿಯುತ್ತದೆ. ಈ ವಿಷಾದವು ಹುಡುಕಾಟದ ತಹತಹದ ಇನ್ನೊಂದು ರೂಪವೇ. ನೆನವರಿಕೆಗೆ ಇಂಗ್ಲಿಷಲ್ಲಿ Rememberence ಎನ್ನುವರು. ಈ ಪದ ನಿಜಕ್ಕೂ Re-member ಅಂದರೆ ಅಗಲಿಬಂದ ಹಿಂಡಿಗೆ ಇನ್ನೊಮ್ಮೆ ಸದಸ್ಯನಾಗಿ ಸೇರಿಕೊಳ್ಳುವುದನ್ನು ಸೂಚಿಸುತ್ತದೆ. ಇದು, Ken Wilber ಒಳನೋಟ. ಅಡಿಗರ ಈ ಕವಿತೆಯಲ್ಲಿ ತಾನು ನೆನೆಯುವುದು ತನ್ನದೇ ಸ್ತ್ರೀಮುಖವನ್ನು ಎನ್ನುವುದು ಪುರುಷಾಹಂಕಾರವನ್ನು ಮೀರುವ ಧ್ವನಿಯಾಗಿ ಕೇಳಿಸಿ ಕವಿತೆಯನ್ನು ಇನ್ನಷ್ಟು ಆಪ್ತವಾಗಿಸುತ್ತದೆ. ಲಕ್ಷ್ಮೀಶ ತೋಳ್ಪಾಡಿ