Advertisement

ಗಡಿಯಲ್ಲಿ ಚೀನದ ಹೊಸ ಕಾನೂನಿನ ಮೊಂಡಾಟ

12:36 AM Jan 05, 2022 | Team Udayavani |

ಚೀನ ಜತೆಗೆ ಭಾರತ ಹಂಚಿಕೊಂಡಿರುವ ವಾಸ್ತವ ನಿಯಂತ್ರಣ ರೇಖೆಯಲ್ಲಿ ಹುಂಬತನ ಮುಂದುವರಿಸಿರುವ ಚೀನ, ಹೊಸ ವರ್ಷದಂದೇ ಗಡಿಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಈ ಹೊಸ ನಿಯಮಗಳು ಭಾರತ ಸೇರಿದಂತೆ ಇತರ ದೇಶಗಳಿಗೆ ಕಂಟಕವಾಗಬಲ್ಲದು ಎಂದೇ ವಿಶ್ಲೇಷಿಸಲಾಗುತ್ತಿದೆ. 

Advertisement

ಏನಿದು ಹೊಸ ಕಾನೂನು?
1. ಹೊಸ ಕಾನೂನಿನ ಪ್ರಕಾರ, ಚೀನದ ಸೌರ್ವಭೌಮತ್ವ ಮತ್ತು ಸಮಗ್ರತೆ ಅತ್ಯಂತ ಪವಿತ್ರದ್ದು ಮತ್ತು ಉಲ್ಲಂಘಿಸಲಾಗದ್ದು.

2. ಸರಕಾರವು ದೇಶದ ಆಂತರಿಕ ಸಮಗ್ರತೆ ಮತ್ತು ಭೂ ಗಡಿರೇಖೆಗಳು ಹಾಗೂ ಇವುಗಳಿಗೆ ಧಕ್ಕೆ ತರುವಂಥ ಯಾವುದೇ ಯುದ್ಧಗಳನ್ನು ನಡೆಸುವ ಅಧಿಕಾರ ಹೊಂದಿದೆ.

3. ಗಡಿಭಾಗದಲ್ಲಿರುವ ಹಳ್ಳಿಗಳ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಈ ಕಾನೂನಿಂದ ಸಹಕಾರಿ.

4. ಈ ಕಾನೂನಿನ ಪ್ರಕಾರ ಸರಕಾರವು ನೆರೆ ದೇಶಗಳ ಜತೆಗೆ ಗಡಿ ವಿವಾದಗಳನ್ನು ಬಗೆಹರಿಸಲು ಸಮಾನತೆ, ಪರಸ್ಪರ ನಂಬಿಕೆ, ಸ್ನೇಹಪೂರ್ವಕ ಮಾತುಕತೆಯಂಥ ನಿಯಮಗಳನ್ನು ಪಾಲಿಸಬೇಕು.

Advertisement

5. ಒಂದು ವೇಳೆ ವಿಷಮ ಪರಿಸ್ಥಿತಿ ಎದುರಾದರೆ, ತುರ್ತು ಕ್ರಮಗಳ ಮೂಲಕ ಗಡಿಯನ್ನೇ ಮುಚ್ಚುವ ಅಧಿಕಾರ ಸರಕಾರಕ್ಕಿದೆ.

ಭಾರತ-ಚೀನದ ಸಂಬಂಧಕ್ಕೆ ಧಕ್ಕೆ?
ಈಗ ಅಲ್ಲಿರುವ ಕಾನೂನಿನ ರೀತಿಯಲ್ಲೇ ಚೀನ, ತನ್ನ ಮೊಂಡಾಟ ಪ್ರದರ್ಶಿಸುತ್ತ ಬಂದಿದೆ. ಇನ್ನು ಮುಂದೆ ಈ ಮೊಂಡಾಟಕ್ಕೆ ಕಾನೂನಿನ ಒಪ್ಪಿಗೆ ಸಿಕ್ಕಂತಾಗುತ್ತದೆ ಅಷ್ಟೇ. ಕೆಲವು ತಜ್ಞರು ಹೇಳುವ ಪ್ರಕಾರ, ಚೀನ ಗಡಿ ವಿವಾದಗಳ ವಿಚಾರದಲ್ಲಿ ಮತ್ತೊಂದಿಷ್ಟು ಆಕ್ರಮಣಕಾರಿ ಆಗಬಹುದು. ಇನ್ನೂ ಕೆಲವರು ಹೇಳುವ ಪ್ರಕಾರ, ಚೀನ ತನ್ನ ಜನರ ಕಣ್ಣೊರೆಸುವ ತಂತ್ರವಾಗಿ ಈ ಕಾನೂನು ಜಾರಿಗೆ ತಂದಿದೆ. ಇದರಿಂದ ಭಾರತಕ್ಕೆ ಯಾವುದೇ ರೀತಿಯಲ್ಲೂ ಅಪಾಯವಿಲ್ಲ. ಆದರೂ ಒಂದು ಆತಂಕದ ಸಂಗತಿ ಎಂದರೆ ಭಾರತ ಮತ್ತು ಭೂತಾನ್‌ ಜತೆಗೆ ಚೀನ ತನ್ನ ಗಡಿ ಕಿರಿಕ್‌ ಬುದ್ಧಿಯನ್ನು ವ್ಯವಸ್ಥಿತವಾಗಿ ನಡೆಸಿಕೊಂಡು ಹೋಗುವುದಕ್ಕೆ ಒಂದು ಅಸ್ತ್ರ ಸಿಕ್ಕಂತಾಗಿದೆ ಎಂದೇ ಹೇಳಲಾಗುತ್ತಿದೆ.

ಭಾರತಕ್ಕೆ ಇದರಿಂದ ತೊಂದರೆ ಏನಾದರೂ ಇದೆಯೇ?
ಸದ್ಯ ಲಡಾಖ್‌, ಅರುಣಾಚಲ ಪ್ರದೇಶ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಚೀನ ತನ್ನ ಹುಚ್ಚುತನ ಪ್ರದರ್ಶಿಸುತ್ತಲೇ ಬಂದಿದೆ. ಅರುಣಾಚಲ ಪ್ರದೇಶವು ಪುರಾತನ ಕಾಲದಿಂದಲೂ ಚೀನದ ವಶದಲ್ಲೇ ಇತ್ತು ಎಂದು ಹೇಳುವ ಮೂಲಕ ಹೊಸ ತಗಾದೆಯನ್ನೂ ತೆಗೆದಿದೆ. ಲಡಾಖ್‌ನ ಹಲವಾರು ಭಾಗಗಳಲ್ಲಿ ಅದು ಅಕ್ರಮವಾಗಿ ಅಭಿವೃದ್ದಿ ಕಾರ್ಯಗಳನ್ನೂ ಮಾಡುತ್ತಿದೆ. ಒಂದು ವೇಳೆ ಹೊಸ ಕಾನೂನು ಜಾರಿಗೆ ಬಂದರೆ ಈ ಎಲ್ಲ ಅಕ್ರಮ ಕಾರ್ಯಗಳಿಗೆ ಸಕ್ರಮದ ಮುದ್ರೆ ಸಿಗುತ್ತದೆ.

1. ಭಾರತ ಮತ್ತು ಚೀನ ಸುಮಾರು 3,488 ಕಿ.ಮೀ. ಗಡಿಯನ್ನು ಹಂಚಿಕೊಂಡಿವೆ.

2.ಚೀನ ಒಟ್ಟು 14 ದೇಶಗಳ ಜತೆಗೆ ಗಡಿ ಹಂಚಿಕೊಂಡಿದ್ದು, ಭಾರತದ ಜತೆಗಿನ ಗಡಿ 3ನೇ ದೊಡ್ಡದು.

3.ಚೀನವು ಮಂಗೋಲಿಯಾ ಮತ್ತು ರಷ್ಯಾದ ಜತೆಗೆ ಹೆಚ್ಚು ಉದ್ದದ ಗಡಿ ಹಂಚಿಕೊಂಡಿದೆ.

4.ಕಳೆದ ಅಕ್ಟೋಬರ್‌ನಲ್ಲಿ ಭಾರತ ಮತ್ತು ಚೀನದ ಕಾರ್ಪ್‌ ಕಮಾಂಡರ್‌ಗಳ ಸಭೆ ನಡೆದಿತ್ತು. ಈಗ ಇದು ಸ್ಥಗಿತವಾಗಿದೆ.

5.ಹೊಸ ವರ್ಷದಂದು ಹೊಸ ಕಾನೂನು ಜಾರಿಗೆ ಬಂದಿದ್ದು, ಇನ್ನು ಬೇರೆ ರೀತಿಯಲ್ಲಿ ಮಾತುಕತೆಗೆ ಬರಬಹುದು.

6.ಇನ್ನು ಮುಂದೆ ಗಡಿಯಲ್ಲಿ ಚೀನದ ಒಪ್ಪಿಗೆಯನ್ನು ಪಡೆದೇ ಅಭಿವೃದ್ಧಿ ಕೆಲಸ ನಡೆಸಬೇಕಾಗಿ ಬರಬಹುದು. ವಿಚಿತ್ರವೆಂದರೆ ಇದುವರೆಗೆ ಭಾರತ, ಗಡಿಯಲ್ಲಿ ನಡೆಸಿರುವ ಎಲ್ಲ ಅಭಿವೃದ್ಧಿ ಕಾರ್ಯಗಳಿಗೂ ಆಕ್ಷೇಪ ಎತ್ತುತ್ತಲೇ ಬಂದಿದೆ. ಹಾಗಾಗಿ ಹೊಸದಾಗಿ ಚೀನ ಏನೂ ಮಾಡಲು ಸಾಧ್ಯವಿಲ್ಲ.

ಗಾಲ್ವಾನ್‌ ವೀಡಿಯೋ ವಿವಾದ
ಹೊಸ ವರ್ಷದಂದು ಹೊಸ ಕಾನೂನು ಜಾರಿಗೆ ಬರುವ ದಿನವೇ ಗಾಲ್ವಾನ್‌ನಲ್ಲಿಯದು ಎಂದು ಹೇಳಿಕೊಂಡ ವಿವಾದಾಸ್ಪದ ವೀಡಿಯೊಧೀವೊಂದನ್ನು ಚೀನ ಬಹಿರಂಗಪಡಿಸಿದೆ. ಇದು ಚೀನದ ಕೀಳು ಪ್ರಚಾರ ಎಂದು ತಜ್ಞರು ಹೇಳಿದ್ದಾರೆ. ಈ ವೀಡಿಯೋದಲ್ಲಿ ಗಾಲ್ವಾನ್‌ ನಮ್ಮ ಸ್ವಾಧೀನದಲ್ಲಿದೆ. ನಮ್ಮ ಭೂಭಾಗವನ್ನು ಯಾರಿಗೂ ಬಿಟ್ಟುಕೊಡುವುದಿಲ್ಲ ಎಂದು ಚೀನ ಹೇಳಿತ್ತು. ಇದಕ್ಕೆ ಪ್ರತಿಯಾಗಿ ಭಾರತ, ಗಾಲ್ವಾನ್‌ನಲ್ಲಿ ನಮ್ಮ ಯೋಧರು ಹೊಸ ವರ್ಷಾಚರಣೆ ಮಾಡಿರುವ ಫೋಟೋವೊಂದನ್ನು ಬಿಡುಗಡೆ ಮಾಡಿ ತಿರುಗೇಟು ನೀಡಿದೆ.

ಚೀನದ ಹೆಸರು ಬದಲಿನಾಟ
ಡಿ.29ರಂದು ಚೀನ ಅರುಣಾಚಲ ಪ್ರದೇಶ ಮತ್ತು ಉತ್ತರಾಖಂಡದ ಒಂದು ಸೇರಿದಂತೆ ಒಟ್ಟು 15 ಸ್ಥಳಗಳಿಗೆ ತನ್ನದೇ ಹೆಸರು ನೀಡಿದೆ. ಅದರ ಪ್ರಕಾರ ಇಲ್ಲಿನ 90 ಸಾವಿರ ಚದರ ಕಿ.ಮೀ. ಭೂಮಿ ಚೀನಕ್ಕೆ ಸೇರಿದ್ದು ಅಂತೆ. ಅಲ್ಲದೆ, ಈ ಹೆಸರು ಬದಲಿಸುವ ಆಟ ಇದೇ ಮೊದಲನೆಯದ್ದಲ್ಲ. 2017ರಲ್ಲಿಯೂ ಆರು ಪ್ರದೇಶಗಳ ಹೆಸರನ್ನು ಚೀನ ಬದಲಾವಣೆ ಮಾಡಿತ್ತು. ಈಗ ಎರಡನೇ ಬಾರಿಗೆ ಇಂಥ ಕೆಲಸ ಮಾಡಿದೆ.

ಅರುಣಾಚಲ ಪ್ರದೇಶದ ಮೇಲೆ ಕಣ್ಣು
ಕಳೆದ ತಿಂಗಳ ಅಂತ್ಯದಲ್ಲಿ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು, ಟಿಬೆಟಿಯನ್‌ ಧರ್ಮಗುರು ದಲಾೖ ಲಾಮಾ ಅವರನ್ನು ಧರ್ಮಶಾಲಾದಲ್ಲಿ ಭೇಟಿ ಮಾಡಿದ್ದರು. ಇದು ಚೀನದ ಕಣ್ಣು ಉರಿಸಿತ್ತು. ಹೀಗಾಗಿಯೇ ಸೇಡು ತೀರಿಸಿಕೊಳ್ಳುವ ಸಲುವಾಗಿ ಅರುಣಾಚಲ ಪ್ರದೇಶದ 15 ಪ್ರದೇಶಗಳಿಗೆ ಹೊಸ ಹೆಸರನ್ನು ನೀಡಿತು. ಅಷ್ಟೇ ಅಲ್ಲ, ಜ.1ರಂದು ಬಂದ ಹೊಸ ಕಾನೂನಿನಂತೆ ಇವೆಲ್ಲವೂ ಚೀನಕ್ಕೆ ಸೇರಿವೆಯಂತೆ.  ವಿಚಿತ್ರವೆಂದರೆ, ಚೀನದ ಈ ಕೆಲಸ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಭಾರತ, ಈ ಸಂಬಂಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಹರಿಸುವಂತೆ ಮಾಡಿದೆ. ಅಲ್ಲದೆ ವಿಶ್ವಸಂಸ್ಥೆಯಲ್ಲೂ ಚರ್ಚೆಗೆ ಒತ್ತಾಯಿಸಿದೆ.

ಚೀನದ ಹುಚ್ಚುಬುದ್ಧಿ
ಚೀನದ ಈ ವರ್ತನೆ ಬಹು ಹಿಂದಿನಿಂದಲೂ ಇದೆ. ಇದಕ್ಕೆ ಹೊಸ ಕಾನೂನಿನ ಬಲ ಸಿಕ್ಕಿದೆಯಷ್ಟೇ. ಸದ್ಯದ ಮಾಹಿತಿ ಪ್ರಕಾರ, ಚೀನಕ್ಕೆ ಭಾರತದ ಜತೆಗೆ ಸ್ನೇಹಪೂರ್ವಕ ಸಂಬಂಧ ಬೇಡ. ಇದಕ್ಕಾಗಿಯೇ ಇಂಥ ಹುಚ್ಚುತನದ ಹೊಸ ಕಾನೂನುಗಳನ್ನು ತಂದಿದೆ. ಈ ಮಧ್ಯೆ, ಚೀನ ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶಕ್ಕೆ ಹೊಂದಿಕೊಂಡಿರುವ ಗಡಿಗಳಲ್ಲಿ ಹೊಸ ಗ್ರಾಮಗಳನ್ನು ನಿರ್ಮಾಣ ಮಾಡಿದೆ. ಇದರ ಮುಖ್ಯ ಉದ್ದೇಶ, ಈ ಗ್ರಾಮಗಳನ್ನು ಸೇನಾ ಮತ್ತು ನಾಗರಿಕ ಸೇವೆಗೆ ಬಳಸಿಕೊಳ್ಳುವುದು. ಅಂದರೆ ಗಡಿಯಲ್ಲಿ ಮಾದರಿ ಗ್ರಾಮಗಳು ಸಿದ್ಧವಾಗಿದ್ದರೆ, ಯುದ್ಧದಂಥ ಸಂದರ್ಭದಲ್ಲಿ ಇಲ್ಲಿನ ಜನರನ್ನು ಬೇರೆ ಕಡೆಗೆ ಸ್ಥಳಾಂತರಿಸಿ, ಇಲ್ಲಿ ಸೈನಿಕರಿಗೆ ಆಶ್ರಯ ನೀಡಬಹುದು. ಇಂಥ ಕುತ್ಸಿತ ಬುದ್ಧಿ ಇರಿಸಿಕೊಂಡೇ ತನ್ನ ಭಾಗದಲ್ಲಿ ಮಾದರಿ ಗ್ರಾಮಗಳನ್ನು ಅಭಿವೃದ್ಧಿ ಪಡಿಸಿದೆ ಎಂದು ರಕ್ಷಣ ತಜ್ಞರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next