Advertisement

ಪ್ರಜಾಪ್ರಭುತ್ವದಲ್ಲಿ ಜನಸಾಮಾನ್ಯರ ನಿರೀಕ್ಷೆಗಳು

11:49 PM Aug 16, 2022 | Team Udayavani |

ಕೊನೆಯ ಸ್ತರದ ಪ್ರಜೆಯ ಆಶೋತ್ತರಗಳಿಗೆ ಸ್ಪಂದಿಸುವಂತದ್ದು ಉತ್ತಮ ಪ್ರಭುತ್ವ ಎಂಬ ಒಂದು ಮಾತಿದೆ. ರಾಜಕೀಯ ಶಾಸ್ತ್ರವನ್ನು ಅವಲೋಕಿಸಿದರೆ ಜಗತ್ತು ಪ್ರಭುತ್ವದ ಹಲವು ಮಾದರಿ(model)ಗಳನ್ನು ಬೆಳೆಸಿಕೊಂಡಿದೆ ಎಂದು ತಿಳಿದು ಬರುತ್ತದೆ. ರಾಜಾಡಳಿತ, ವಸಾಹತುಶಾಹಿ ಆಡಳಿತ, ಮಿಲಿಟರಿ ಆಡಳಿತ, ಪ್ರಜಾಪ್ರಭುತ್ವ, ಏಕಾಧಿಪತ್ಯ ಇವೆಲ್ಲ ಜಗತ್ತು ಕಂಡ ಪ್ರಯೋಗಗಳಾಗಿವೆ. ಕಳೆದ ಒಂದು ಶತಮಾನದಿಂದ ಪ್ರಜಾಪ್ರಭುತ್ವಕ್ಕೆ ಹೆಚ್ಚಿನ ಮನ್ನಣೆ ಸಿಕ್ಕಿದಂತಿದೆ.

Advertisement

ಪ್ರಜಾಪ್ರಭುತ್ವವೆಂದರೆ ಪ್ರಜೆಗಳಿಂದ ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಕಾರ್ಯವೆಸಗುವ ಆಡಳಿತ ವ್ಯವಸ್ಥೆ. ಇಲ್ಲಿ ದುರ್ಬಲರೂ ಪ್ರಬಲರಷ್ಟೇ ಸಮಾನತೆಯನ್ನು ಹೊಂದಿ¨ªಾರೆ. ಈ ಚಿಂತನೆ ತಾತ್ವಿಕವಾಗಿ ಜನಸಾಮಾನ್ಯ ಕೇಂದ್ರಿತ ಎಂದು ಪ್ರತ್ಯೇಕವಾಗಿ ಹೇಳಬೇಕಾ ಗಿಲ್ಲವಷ್ಟೇ?

ಪ್ರಜಾಪ್ರಭುತ್ವದಲ್ಲಿ ಮತದಾನ ಒಂದು ಮುಖ್ಯ ಅಂಶ. ಪ್ರತ್ಯಕ್ಷ ಮತದಾನವಾದರೆ ಅತೀ ಹೆಚ್ಚು ಮತ ಪಡೆದ ಪಕ್ಷ ಸರಕಾರ ಸ್ಥಾಪಿಸಿ ಆಡಳಿತ ಮಾಡುವ ಅವಕಾಶ ಪಡೆಯುತ್ತದೆ. ಪರೋಕ್ಷ ಪ್ರತಿನಿಧಿ ಆಡಳಿತವಾದರೆ ಬಹುಮತ ಪಡೆದ ಪಕ್ಷ ಆಡಳಿತದ ಚುಕ್ಕಾಣಿ ಹಿಡಿಯುತ್ತದೆ. ಆದ್ದರಿಂದ ಮತದಾನದ ವ್ಯವಸ್ಥೆ ಪ್ರಜಾಪ್ರಭುತ್ವದಲ್ಲಿ ನಿರ್ಧಾರಕವಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನವು ವಿವಿಧ ಪಕ್ಷಗಳ ವಿಚಾರ ಧಾರೆಗಳ ಆಧಾರದಲ್ಲಿ ನಡೆಯುತ್ತದೆ. ಎಡ, ಬಲ ಮತ್ತು ಮಧ್ಯಮಾರ್ಗ ಮುಖ್ಯ ವಿಚಾರ ಧಾರೆಗಳೆನ್ನಬಹುದು. ಭಾರತದಲ್ಲಿ ಜನ ಪ್ರತಿನಿಧಿಗಳ ಮೂಲಕ ರಾಜ್ಯ ಮತ್ತು ಕೇಂದ್ರ ಸರಕಾರಗಳು ಆಡಳಿತ ನಡೆಸುತ್ತವೆ.

ಜನಸಾಮಾನ್ಯರ ನಿರೀಕ್ಷೆಗಳು
ಭಾರತದ ಮಟ್ಟಿಗೆ ಹೇಳುವುದಾದರೆ, ವಿವಿಧ ಸ್ತರದ ಪ್ರಜೆಗಳು ಮತದಾರರು. ಸಾಮಾಜಿಕವಾಗಿ ಜಾತಿ, ಧರ್ಮದ ಆಧಾರದ ಮೇಲೆ ವೈವಿಧ್ಯವೇ ಇಲ್ಲಿ ಮುಖ್ಯ ಅಂಶ. ಇಲ್ಲಿ ಜನಸಾಮಾನ್ಯರ ಬಾಹುಳ್ಯ ಗಮನಾರ್ಹ ಅಂಶ. ಇಲ್ಲಿ ಸಾಮಾನ್ಯ ಜನರ ಏಳಿಗೆಯಾಗಬೇಕಾದರೆ ಆಡಳಿತ ಮಾಡುವ ಸರಕಾರ ಜನಸಾಮಾನ್ಯರ ನಿರೀಕ್ಷೆಗಳನ್ನು ತಿಳಿದಿರಬೇಕು ಮತ್ತು ಸ್ಪಂದಿಸಬೇಕು.

ಜನಸಾಮಾನ್ಯರ ನಿರೀಕ್ಷೆಗಳಲ್ಲಿ ಸರಕಾರ ನಡೆಸುವ ಮುಖ್ಯ ಸ್ಥಾನದಲ್ಲಿರುವವರು ಪ್ರಾಮಾಣಿಕರಾಗಿರ ಬೇಕೆಂಬುದು ಮೊದಲ ನಿರೀಕ್ಷೆ. ಅವರು ನಿಸ್ವಾರ್ಥಿ ಗಳಾಗಿದ್ದು ದೇಶಕ್ಕಾಗಿ, ಜನರಿಗಾಗಿ ಬದ್ಧರಾಗಿದ್ದರೆ ಉತ್ತಮ ಆಡಳಿತವನ್ನು ನಿರೀಕ್ಷಿಸಬಹುದು. ಅವರು ಧರ್ಮನಿರಪೇಕ್ಷತೆಯನ್ನು ಹೊಂದಿ ಪ್ರಜಾಪ್ರಭುತ್ವ ತತ್ತÌಗಳನ್ನು ಪಾಲಿಸಬೇಕು. ದೇಶ ಘಾತುಕ ಕೃತ್ಯಗಳ ಬಗ್ಗೆ ನಿರ್ದಾಕ್ಷಿಣ್ಯವಾಗಿ ಕಾರ್ಯವೆಸಗು ವಂತವರಾಗಿರ ಬೇಕು. ಜನಸಾಮಾನ್ಯರು ನಿರ್ಭಯರಾಗಿ ಬದುಕು ವಂತಾಗಬೇಕು. ಜನರು ಇನ್ನೊಂದು ಧರ್ಮ, ಜಾತಿ ಅಥವಾ ಪಕ್ಷದಿಂದ ಆತಂಕಿತರಾಗದಂತೆ ರಕ್ಷಣೆ ಒದಗಿಸಬೇಕು. ಹಾಗಾಗಬೇಕಾದರೆ ಇಂದು ನಾವು ಎದುರಿಸುತ್ತಿರುವ ಭಯೋತ್ಪಾದನೆಯನ್ನು ತಡೆಯಲೇ ಬೇಕು. ಅನ್ಯಾಯದ ಬಗ್ಗೆ ಪ್ರಭುತ್ವ ಅಸಡ್ಡೆ ವಹಿಸಿದರೆ ಅಂತಹ ಶಕ್ತಿಗಳು ತಲೆ ಎತ್ತುವುದು ವಿವಿಧ ದೇಶಗಳ ಅನುಭವ.

Advertisement

ಇನ್ನೊಂದು ಮುಖ್ಯ ಆದ್ಯತೆ ಸಾರ್ವಜನಿಕ ಜೀವನದಲ್ಲಿ ಭ್ರಷ್ಟಾಚಾರದ ನಿರ್ಮೂಲನೆ. ಭೃಷ್ಟಾಚಾರ ಅಬುìದ ರೋಗವಿದ್ದಂತೆ. ಅದು ಆಡಳಿತದ ಪ್ರಯೋಜನ ತಳ ಸ್ತರದ ಜನರಿಗೆ ತಲುಪದಂತೆ ತಡೆ ಮಾಡುವ ವಿದ್ಯಮಾನ. ನಡವಳಿಕೆಗಳ ತೀವ್ರತೆಯಿರುವ ನಮ್ಮಂತಹ ಜನನಿಬಿಡ ದೇಶದಲ್ಲಿ ತಮ್ಮ ಸರಕಾರಿ ಕೆಲಸಗಳು ದುರ್ಭರವಾಗುವ ಸ್ಥಿತಿಗೆ ತಲುಪಿದ್ದೇವೆ. ಇದರಿಂದ ಜನಸಾಮಾನ್ಯರು ಮುಕ್ತವಾಗಬೇಕಾದರೆ ಭ್ರಷ್ಟಾಚಾರ ಕೊನೆಗೊಳ್ಳಬೇಕು. ಕೃಷಿ ವೃತ್ತಿಯನ್ನು ಅವಲಂಬಸಿದ ಜನಸಾಮಾನ್ಯರು ತಮ್ಮ ಉತ್ಪನ್ನಗಳನ್ನು ಅಸಹಾಯಕ ಸ್ಥಿತಿಯಲ್ಲಿ ಮಾರಬೇಕಾದ ಪರಿಸ್ಥಿತಿಯನ್ನು ಎದುರಿಸುತ್ತಿರುವುದು ಇದಕ್ಕೆ ಒಂದು ಉದಾಹರಣೆ ಮಾತ್ರ. ಸರಕಾರವೆಂದರೆ ಭ್ರಷ್ಟಾಚಾರದ ಅಡ್ಡೆ ಎನ್ನುವ ಅನಿಸಿಕೆಯಿಂದ ಸರಕಾರಿ ಯಂತ್ರ ಹೊರಬರಬೇಕಾಗಿದೆ.

ಜನಸಾಮಾನ್ಯರ ಮೇಲೆ ಇತರ ವರ್ಗಗಳು ಸವಾರಿ ಮಾಡುವುದರಿಂದ ಮುಕ್ತಗೊಳಿಸಲು ಇರುವ ಒಂದು ಸಾಂಸ್ಥಿಕ ವ್ಯವಸ್ಥೆ ನ್ಯಾಯಾಂಗ. ಇತ್ತೀಚಿನ ದಿನಗಳಲ್ಲಿ ಅದು ಕೂಡ ನಿಷ್ಪಕ್ಷವಾಗಿಲ್ಲ ಎಂಬ ಕೂಗು ಕೇಳಿ ಬರುತ್ತಿರುವುದು ಜನಸಾಮಾನ್ಯರ ಆತಂಕಕ್ಕೆ ಕಾರಣ ವಾಗಿದೆ. ಸ್ಥಿತಿ ಹೀಗಾದರೆ ತಾವೆಲ್ಲಿ ಹೋಗಬೇಕು ಎಂಬುವುದೇ ಅವರ ಮುಂದಿರುವ ಪ್ರಶ್ನೆ. ನಡೆಯುವ ಅಪರಾಧ, ಹಕ್ಕು ಹರಣಗಳಿಗೆ ವಿಳಂಬವಿಲ್ಲದೆ ನ್ಯಾಯ ಒದಗಿದರೆ ಮಾತ್ರ ಸಮಾಜದಲ್ಲಿ ನೆಮ್ಮದಿ ಉಳಿ ಯುತ್ತದೆ. ಜೀವನವಿಡೀ ನ್ಯಾಯಕ್ಕಾಗಿ ಓಡಾಡಲು ಎಷ್ಟು ಮಂದಿಗೆ ಶಕ್ತಿ ಇರುತ್ತದೆ. ತಪ್ಪಿತಸ್ಥರೆಂದು ಸಾಬೀತಾದರೂ ತಪ್ಪಿಸಿಕೊಂಡು ಓಡಾಡುವಂತಿದ್ದರೆ ಯಾರಿಗೆ ನ್ಯಾಯಾಂಗದ ಭಯ ಇದ್ದೀತು? ಪೊಲೀಸ್‌ ವ್ಯವಸ್ಥೆ ಜನಸಾಮಾನ್ಯರ ರಕ್ಷಣೆಗೆ ನ್ಯಾಯಾಂಗ ಕೊಟ್ಟ ಸ್ಥಳೀಯ ಬಲ. ಈ ವ್ಯವಸ್ಥೆ ತೃಣಮೂಲ ಸ್ತರದಲ್ಲಿ ಅನ್ಯಾಯ, ಅತ್ಯಾಚಾರಗಳನ್ನು ತಡೆಯಬೇಕಾಗಿದೆ. ಅನ್ಯಾಯ ಎಸಗಿದವರು ಶಿಕ್ಷೆಗೊಳಗಾಗದಿದ್ದರೆ ಎಲ್ಲರೂ ತಮ್ಮ ಮೃಗೀಯತೆಯನ್ನು ನಿರ್ಭಯವಾಗಿ ಮಾಡಲು ಪ್ರೇರಿತರಾಗುವುದು ಸಹಜವಲ್ಲವೇ? ಜನಸಾಮಾನ್ಯರ ಇನ್ನೊಂದು ನಿರೀಕ್ಷೆ ನೆಮ್ಮದಿಯ ಬದುಕು. ಅನ್ಯಾಯಕ್ಕೆ ಸರಿಯಾದ ಶಿಕ್ಷೆಯಾಗದಿದ್ದರೆ ಭಯದ ನೆರಳಿನಲ್ಲಿ ಬದುಕುವ ಸ್ಥಿತಿ ಕ್ರಮೇಣ ನುಸು ಳುತ್ತಿದೆ. ಆಡಳಿತದ ಶಿಥಿಲತೆಯೇ ಇದಕ್ಕೆ ಕಾರಣ.

ಧರ್ಮ ಅಸಹಿಷ್ಣುತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರ ಪರಿಣಾಮವಾಗಿ ಪರಸ್ಪರ ಅಪನಂಬಿಕೆ, ದೂಷಣೆ, ವೈಷಮ್ಯಗಳು ಬೆಳೆಯುತ್ತಿದೆ. ಇಂತಹ ವಿಚಾರಗಳನ್ನು ನಿಯಂತ್ರಿಸಲು ನಾಗರಿಕ ನಿಯಮ ಸಂಹಿತೆಗೆ ಇದು ಸಕಾಲ. ಇದನ್ನು ಅನುಷ್ಠಾನ ಮಾಡುವುದರಿಂದ ಇತರ ಸಂಬಂಧಿತ ಇಲಾಖೆಗಳು ಜ್ವಲಂತ ಸಮಸ್ಯೆಗಳತ್ತ ಗಮನ ಹರಿಸಲು ಸಾಧ್ಯವಾದೀತು.!

ದೇಶದ ಸರ್ವತೋಮುಖ ಪ್ರಗತಿಗೆ ಬೇಕಾಗಿ ಹಲವು ಸಂಘ ಸಂಸ್ಥೆಗಳು ಅಸ್ಥಿತ್ವಕ್ಕೆ ಬಂದಿವೆ. ಅವುಗಳಲ್ಲಿ ಬ್ಯಾಂಕಿಂಗ್‌, ಬಂಡವಾಳ ಮಾರುಕಟ್ಟೆ, ಹಣಕಾಸು ಸಂಸ್ಥೆಗಳು ಮುಖ್ಯವಾದುವು. ಇವುಗಳಲ್ಲಿ ಉತ್ತಮ ನಿಯತ್ತು ಇತ್ತೀಚಿನವರೆಗೆ ಇತ್ತು. ಇಲ್ಲಿ ಬೆಳೆದ ಅಶಿಸ್ತಿಗೆ ರಾಜಕೀಯ ಇಚ್ಛಾಶಕ್ತಿಯ ಅಭಾವವೇ ಕಾರಣವೆಂದು ಹೇಳದೆ ವಿಧಿಯಿಲ್ಲ. ವಿದೇಶಕ್ಕೆ ಹಾರಿಹೋಗುವ ಮೋಸಗಾರ ಸಾಲಗಾರರ ಮೇಲೆ, ಹಣ ದುರುಪಯೋಗ ಮಾಡಿ ಸಾರ್ವಜನಿಕ ಸಂಪತ್ತನ್ನು ಅಪಹರಿಸುವವರ ಮೇಲೆ ದೃಷ್ಟಾಂತಕ ರೂಪವುಳ್ಳವರ (Illustrative) ಮೇಲೆ ಕ್ರಮ ತೆಗೆದುಕೊಳ್ಳದೆ ನುಣುಚಿಕೊಳ್ಳುವ ಅವಕಾಶ ನೀಡಿದೆ. ಇದು ಚಾಳಿಯಂತೆ ಬೆಳೆದು ಹಣಕಾಸು ಶಿಸ್ತು ಹಳಿ ತಪ್ಪಿ ಆರ್ಥಿಕ ವಲಯವೇ ಸಂಕಟದ ಹೊಸ್ತಿಲಿಗೆ ಬಂದು ನಿಂತಿದೆ. ತಮ್ಮ ತೆರಿಗೆಯಿಂದ ಸಂಗ್ರಹವಾದ ಹಣ ಈ ರೀತಿ ಪೋಲಾಗುತ್ತಿದೆ ಎಂಬ ಖೇದ ಜನ ಸಾಮಾನ್ಯನದು. ಇದು ಆರ್ಥಿಕ ಪ್ರಗತಿಯ ವಾಹಕಗಳನ್ನು ಕಲುಷಿತಗೊಳಿಸಿ ವ್ಯವಸ್ಥೆಯನ್ನು ದುರ್ಬಲಗೊಳಿಸಿದೆ.ಜನಸಾಮಾನ್ಯರನ್ನು ಬಾಧಿಸುವ ಇನ್ನೊಂದು ಮುಖ್ಯ ದುರಿತ ರಾಜಕೀಯ ಪ್ರೇರಿತ ಪ್ರತಿಭಟನೆಗಳ ಕುರಿತಾದದ್ದು.

ಪ್ರಜಾಪ್ರಭುತ್ವದಲ್ಲಿ ಎಲ್ಲ ತರದ ಪ್ರತಿಭಟನೆಗಳಿಗೆ ಅವಕಾಶವಿದೆ ಎಂಬುದೇನೋ ಸತ್ಯ. ಇದು ಹಕ್ಕೂ ಕೂಡ ಹೌದು. ಅದಕ್ಕೆ ಸಂವಿಧಾನ ವಿಧಿವಿಧಾನಗಳನ್ನು ತಿಳಿಸಲಾಗಿದೆ. ಇಂದಿನ ಪ್ರತಿ ಭಟನೆಗಳು ರಾಜಕೀಯ ಶಕ್ತಿ ಪ್ರದರ್ಶನಗಳಾಗಿ ಪರಿಣ ಮಿಸಿವೆ. ಇಂತಹ ಸಂದರ್ಭಗಳಲ್ಲಿ ಸಾರ್ವಜನಿಕ ಆಸ್ತಿ ಪಾಸ್ತಿಗಳು ಹಾನಿಗೀಡಾಗುತ್ತವೆ; ಖಾಸಗಿ ವಾಹನಗಳು, ಮನೆ, ಕಚೇರಿಗಳು ಹಾನಿಗೊಳಗಾಗುತ್ತಿವೆ. ಇವುಗಳೆಲ್ಲ ಜನವಿರೋಧಿ ಪ್ರವೃತ್ತಿಗಳು. ಇಂತಹ ಪ್ರವೃತ್ತಿಗಳಿಂದ ದೇಶದ ಪ್ರಗತಿ ಕುಂಟಿತವಾಗುವುದಲ್ಲದೆ, ಶ್ರಮ ಸಂಸ್ಕೃತಿಯಲ್ಲಿ ಬದುಕುವವರ ತುತ್ತಿಗೆ ಬಾಧೆ ತಟ್ಟುತ್ತದೆ ಎಂಬುದು ಮುಖ್ಯ. ಆಸ್ತಿಗಳು ಸರಕಾರಿಯಾಗಲಿ, ಖಾಸಗಿಯಾಗಲಿ ಅವುಗಳು ಜನರ ದುಡಿತದ ಸವಲತ್ತು ಗಳಲ್ಲವೇ? ಬಸ್‌ಗಳು ಬೆಂಕಿಗಾಹುತಿ ಯಾದರೆ ಅದರ ಅಂತಿಮ ಪರಿಣಾಮ ಬೀಳುವುದು ಅವುಗಳನ್ನು ಅವಲಂಬಿಸಿದ ಆರ್ಥಿಕ ದುರ್ಬಲರ ಮೇಲೆ ಅಲ್ಲವೇ?ಪ್ರಜಾಪ್ರಭುತ್ವವನ್ನು ನಂಬಿರುವ ಜನಸಾಮಾನ್ಯರು ಭ್ರಮನಿರಸರಾಗದೆ ಉಳಿಯಬೇಕಾದರೆ ಪ್ರಭುತ್ವ ನಿರೀಕ್ಷೆಗಳನ್ನು ಸಾಕಾರಗೊಳಿಸುವುದು ಪ್ರಜಾ
ಪ್ರಭುತ್ವದ ಉಳಿವಿಗೆ ಮತ್ತು ದೇಶದ ಪ್ರಗತಿಗೆ ಅತೀ ಅಗತ್ಯ. ನಮ್ಮ ಸರಕಾರ, ಸ್ಥಳೀಯಾಡಳಿತಗಳು ಇದಕ್ಕೆ ಸ್ಪಂದಿಸಬೇಕು ಎನ್ನುವುದು ಆಶಯ.

– ಡಾ| ಕೊಳ್ಚಪ್ಪೆ ಗೋವಿಂದ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next