Advertisement

ಮನೆ ನೋಂದಣಿಗೆ ಸಿಗುತ್ತಾ ವಿನಾಯ್ತಿ?

03:53 PM Feb 26, 2024 | Team Udayavani |

ಕೆಜಿಎಫ್:  ಚಿನ್ನದ ಗಣಿಯಲ್ಲಿ ಕೆಲಸ ನಿರ್ವಹಿಸಿ ಎಸ್‌ಟಿಬಿಪಿ ಯೋಜನೆಯಡಿ ಸ್ವಯಂ ನಿವೃತ್ತಿಯಾದ 2,800 ಮಂದಿ ಕಾರ್ಮಿಕರ ಪೈಕಿ 1,970 ಮಂದಿಗೆ ಫೆ.27ರಂದು ಕೇಂದ್ರ ಗಣಿ ಸಚಿವ ಪ್ರಹ್ಲಾದ್‌ ಜೋಷಿ ಮನೆಗಳ ಹಕ್ಕುಪತ್ರ ವಿತರಿಸಲಿರುವುದು ಸಂತಸವಾದ್ರೂ ಮನೆಗಳ ನೋಂದಣಿಗೆ ತಗಲುವ ವೆಚ್ಚವನ್ನು ಭರಿಸುವವರು ಯಾರು? ಎಂಬ ಪ್ರಶ್ನೆ ಕಾಡ ತೊಡಗಿದೆ.

Advertisement

ಬಿಜಿಎಂಎಲ್‌ ಕಂಪನಿಗೆ 1854ರಲ್ಲಿ ಲೀಸ್‌ ಆಧಾರದ ಮೇರೆಗೆ ಭೂಮಿಯನ್ನು ನೀಡಲಾಗಿತ್ತು. ಬಳಿಕ ಕಂಪನಿ ರಾಜ್ಯ ಸರ್ಕಾರದಿಂದ ಭೂಮಿಯನ್ನು ಖರೀದಿ ಮಾಡಿತ್ತು. ಆದರೆ, ಕಂದಾಯ ಇಲಾಖೆಯ ದಾಖಲೆಗಳಲ್ಲಿ ಕಂಪನಿ ಹೆಸರು ನಮೂದಿಸುವಲ್ಲಿ ಕೆಲವು ತಾಂತ್ರಿಕ ದೋಷಗಳು ಕಂಡು ಬಂದಿದ್ದರಿಂದ 2,800 ಮಂದಿ ಕಾರ್ಮಿಕರಿಗೆ ಸ್ವಂತ ಮನೆಗಳ ಹಕ್ಕುಪತ್ರ ನೀಡಲು ವಿಳಂಬವಾಗಿದೆ ಎನ್ನಲಾಗಿದೆ.

1,970 ಮಂದಿಗೆ ಹಕ್ಕುಪತ್ರ ವಿತರಣೆ: ವಿವಿಧ ನೌಕ ರರ ಸಂಘಟನೆಗಳು ಹಲವು ವರ್ಷಗಳಿಂದ ನಿರಂತರ ವಾಗಿ ಹೋರಾಟಗಳನ್ನು ನಡೆಸಿ ನ್ಯಾಯಾಲಯದ ಮೊರೆ ಹೋಗಿ ದಾವೆಗಳನ್ನು ಹೂಡಿದ್ದರ ಫಲವಾಗಿ, ನ್ಯಾಯಾಲಯದ ತೀರ್ಪಿನಂತೆ ಕಂದಾಯ ಇಲಾಖೆಯ ದಾಖಲೆಗಳಲ್ಲಿ ಕಂಪನಿ ಹೆಸರಿಗೆ ಭೂಮಿ ಲಭಿಸಿದ್ದು, ಇದೀಗ 2,800 ಕಾರ್ಮಿಕರ ಪೈಕಿ ಮೊದಲ ಹಂತದಲ್ಲಿ 1,970 ಮಂದಿಗೆ ತಾವು ವಾಸಿಸುತ್ತಿರುವ ಮನೆಗಳ ಹಕ್ಕುಪತ್ರಗಳು ದೊರೆಯಲಿವೆ.

ಒಂದೊತ್ತಿನ ಊಟಕ್ಕೂ ಪರದಾಟ: ಗಣಿಗಾರಿಕಾ ಕುಟುಂಬಗಳ ಹಾಲಿಯಿರುವ ಸಾಮಾಜಿಕ, ಆರ್ಥಿಕ ಪರಿಸ್ಥಿತಿಗಳನ್ನು ಅವಲೋಕಿಸಿದಲ್ಲಿ ಎಲ್ಲ ಕಾರ್ಮಿಕರು ತೀರಾ ಬಡತನದಿಂದ ಜೀವನ ನಿರ್ವಹಣೆ ಮಾಡು ತ್ತಿದ್ದು, ಬಹುತೇಕ ಎಲ್ಲರೂ ಒಂದೊತ್ತಿನ ಊಟಕ್ಕೆ ಪರದಾಡುವಂತಹ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಜೀವ ನೋಪಾಯಕ್ಕಾಗಿ ದೂರದ ಬೆಂಗಳೂರು ನಗರಕ್ಕೆ ಪ್ರತಿನಿತ್ಯ ರೈಲುಗಳ ಮೂಲಕ ಸಂಚರಿಸುವಂತಹ ದಯನೀಯ ಸ್ಥಿತಿ ಇದೆ. ಇತ್ತೀಚೆಗೆ ರಾಜ್ಯ ಸರ್ಕಾರ ಆಸ್ತಿಗಳ ಮೌಲ್ಯಾಂಕ ಶುಲ್ಕವನ್ನು ಹೆಚ್ಚಿಸಿದ್ದು, ಇದರಿಂದ ಒಂದೊತ್ತಿನ ಊಟಕ್ಕೂ ಪರದಾಡುವಂತಹ ಗಣಿ ಕಾರ್ಮಿಕರು ಮತ್ತು ಅವಲಂಬಿತರು ಉಚಿತವಾಗಿ ಮನೆಗಳ ಹಕ್ಕು ಪತ್ರಗಳನ್ನು ಪಡೆದುಕೊಂಡರೂ ಸಹ ಸಾವಿರಾರು ರೂ.ಗಳನ್ನು ಖರ್ಚು ಮಾಡಿ ತಮ್ಮ ಹೆಸರಿಗೆ ಉಪ ನೊಂದಣಾಧಿ ಕಾರಿಗಳ ಕಚೇರಿಯಲ್ಲಿ ನೋಂದಣಿ ಮಾಡಿಕೊಳ್ಳಲು ಸಾಧ್ಯವಿಲ್ಲದಂತಹ ಸ್ಥಿತಿಯನ್ನು ಎದುರಿಸುತ್ತಿದ್ದಾರೆ ಎಂದರೆ ತಪ್ಪಾಗದು.

ಕೆಲವು ಸ್ಥಳಗಳಲ್ಲಿ ಮನೆಗಳ ವಿಸ್ತೀರ್ಣ ಕಡಿಮೆ :

Advertisement

ಎಸ್‌ಟಿಬಿಪಿ ಯೋಜನೆಯಡಿಯಲ್ಲಿ ಸ್ವಯಂ ನಿವೃತ್ತಿ ಪಡೆದುಕೊಂಡ ನೌಕರ ರಿಗೆಲ್ಲರಿಗೂ ಒಂದೇ ಅಳತೆಯ ಮನೆಗಳ ಹಕ್ಕುಪತ್ರ ವಿತರಿಸುತ್ತಿಲ್ಲ ಎನ್ನುವು ದಾಗಿದೆ. ನೌಕರರು ಕಾರ್ಯನಿರ್ವಹಿಸುತ್ತಿದ್ದ ದರ್ಜೆ ಮತ್ತು ಅವರಿಂದ ಕಟ್ಟಿಸಿಕೊಳ್ಳುತ್ತಿದ್ದಂತಹ ಮೊತ್ತಕ್ಕೆ ಅನುಗುಣವಾಗಿ ಮನೆಗಳ ಹಕ್ಕುಪತ್ರ ವಿತರಿಸಲಾಗುತ್ತದೆ. ಒಂದು ಸಾವಿರ ಚದರ ಅಡಿಯವರೆಗಿನ ವಿಸ್ತೀರ್ಣಕ್ಕೆ 10 ರೂ. ಮತ್ತು ಒಂದು ಸಾವಿರಕ್ಕಿಂತ ಹೆಚ್ಚು ಚದರ ಅಡಿಗಳ ವಿಸ್ತೀರ್ಣಕ್ಕೆ 20 ರೂ.ಗಳನ್ನು ನೌಕರರಿಂದ ಕಟ್ಟಿಸಿಕೊಳ್ಳಲಾಗಿದೆ. ವಿಪರ್ಯಾಸವೆಂದರೆ, ಕೆಲವು ಸ್ಥಳಗಳಲ್ಲಿ ಈ ಮನೆಗಳ ವಿಸ್ತೀರ್ಣ ಕೇವಲ 150 ಚದರ ಅಡಿ ಮಾತ್ರವಾಗಿದ್ದು, ಇಷ್ಟು ಚಿಕ್ಕದಾದ ಪ್ರದೇಶದಲ್ಲಿ ಹೆಂಡತಿ, ಮಕ್ಕಳೊಂದಿಗೆ ವಾಸಿಸಲು ಹೇಗೆ ತಾನೆ ಸಾಧ್ಯ ಎಂದು ಎಸ್‌ಟಿಬಿಪಿ ಯೋಜನೆಯಡಿಯಲ್ಲಿ ನಿವೃತ್ತರಾದ ಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ.

 ಬಹುತೇಕ ಚರ್ಚ್‌, ಮಸೀದಿ, ದೇಗುಲಕ್ಕೆ ದಾಖಲೆಯೇ ಇಲ್ಲ :

ಎಸ್‌ಟಿಬಿಪಿ ಯೋಜನೆಯಡಿ ಕೇವಲ 2800 ಮಂದಿ ಮಾತ್ರ ಹಕ್ಕುಪತ್ರ ಪಡೆಯಲಿದ್ದಾರೆ. ಆದರೆ, ವಾಸ್ತವವಾಗಿ ಸುಮಾರು 30 ಸಾವಿರಕ್ಕಿಂತಲೂ ಹೆಚ್ಚು ಕುಟುಂಬಗಳು ಚಿನ್ನದ ಗಣಿ ಪ್ರದೇಶದಲ್ಲಿ ವಾಸವಿದ್ದು, ತಲೆ ತಲಾಂತರಗಳಿಂದ ಬಿಜಿಎಂಎಲ್‌ನ್ನೇ ನಂಬಿಕೊಂಡಿದ್ದು, ಈಗ ಇವರ ಪರಿಸ್ಥಿತಿ ಬೀದಿಗೆ ಬಂದು ನಿಲ್ಲುವಂತಾಗಿದೆ. ಬಿಜಿಎಂಎಲ್‌ ಭಾಗದಲ್ಲಿ ಬಹುತೇಕ ಚರ್ಚ್‌, ಮಸೀದಿ ಮತ್ತು ದೇವಾಲ ಯಗಳು ಸ್ಥಾಪನೆಯಾಗಿದ್ದು, ಇವುಗಳ ಸ್ಥಾಪನೆಗೆ ಅ ಧಿಕೃತವಾಗಿ ಯಾವುದೇ ದಾಖಲೆ ಹೊಂದಿಲ್ಲ ಎನ್ನಲಾಗಿದೆ. ಸುಮಾರು ನೂರಾರು ಎಕರೆ ಗಣಿ ಪ್ರದೇಶದಲ್ಲಿ ಇವು ವ್ಯಾಪಿಸಿಕೊಂಡಿದ್ದು, ಇವುಗಳ ಪರಿಸ್ಥಿತಿ ಏನಾಗಲಿದೆ ಮತ್ತು ಈ ಚರ್ಚ್‌ಗಳನ್ನು ಕೇಂದ್ರ ಅಥವಾ ರಾಜ್ಯ ಸರ್ಕಾರ ಕ್ರಮ ಕೈಗೊಂಡು ನೆಲಸಮಗೊಳಿಸಲಿದೆಯೇ ಅಥವಾ ಅವುಗಳಿಗೂ ಹಕ್ಕುಪತ್ರ ನೀಡಲಿದೆಯೇ ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆ ಕೇಳಿಬರುತ್ತಿದೆ.

ಕಾರ್ಮಿಕರ ಮನೆಗಳ ಹಕ್ಕುಪತ್ರ ನೋಂದಣಿ ಮಾಡುವ ಸಮಯದಲ್ಲಿ ರಾಜ್ಯ ಸರ್ಕಾರ ಮುದ್ರಾಂಕ ಶುಲ್ಕದಿಂದ ಸಂಪೂರ್ಣ ವಿನಾಯಿತಿ ನೀಡಬೇಕು. ಗಣಿ ಮುಚ್ಚಿದ ಸಂದರ್ಭದಲ್ಲಿ ಚಿನ್ನದ ಗಣಿಯಲ್ಲಿದ್ದಂತಹ ಚಿನ್ನದ ಪ್ರಮಾಣ, ಆಸ್ತಿಯ ಮೌಲ್ಯ ಮತ್ತಿತರ ವಿಚಾರಗಳನ್ನು ಸಾರ್ವಜನಿಕರ ಮುಂದಿಡಬೇಕು.-ಜಯಕುಮಾರ್‌, ಬಿಜಿಎಂಎಲ್‌ ಕಾರ್ಮಿಕ ಮುಖಂಡ

ಎಸ್‌ಟಿಪಿಬಿ ಯೋಜನೆ ಯಡಿ ನಿವೃತ್ತರಾದ ಗಣಿ ಕಾರ್ಮಿಕರ ಮನೆಗಳ ಹಕ್ಕುಪತ್ರ ವಿತರಣೆಗೆ ಸಂಬಂಧಿ ಸಿದಂತೆ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಅಧಿ ಕಾರಿಗಳಿಗೆ ಎಕರೆಗಟ್ಟಲೇ ಜಮೀನನ್ನು ಮಂಜೂರು ಮಾಡಿ ಹಕ್ಕುಪತ್ರ ವಿತರಿಸಲು ಹೊರಟಿದ್ದರೆ, ತಮ್ಮ ಜೀವದ ಹಂಗನ್ನು ತೊರೆದು ಸಾವಿರಾರು ಅಡಿ ಆಳದ ಗಣಿಯಲ್ಲಿ ಬೆವರು ಸುರಿಸಿ ದುಡಿದಂತಹ ಕಾರ್ಮಿಕರಿಗೆ ಕೇವಲ 10×10 ಅಡಿಗಳ ಜಾಗ ನೀಡಲು ಹೊರಟಿರುವುದು ಎಷ್ಟರ ಮಟ್ಟಿಗೆ ಸರಿ?-ಪುರುಷೋತ್ತಮ್‌, ಚಿನ್ನದ ಗಣಿ ಕಾರ್ಮಿಕ ಮುಖಂಡ

– ನಾಗೇಂದ್ರ ಕೆ.

 

Advertisement

Udayavani is now on Telegram. Click here to join our channel and stay updated with the latest news.

Next