Advertisement

ಶಿಕ್ಷಣದ ಕೊರತೆ ನೀಗಿಸುವ ಸಂಧ್ಯಾ ಕಾಲೇಜು

10:20 PM Jun 18, 2019 | mahesh |

ಅನೇಕರು ಯಾವುದೋ ಕಾರಣಕ್ಕೆ ಶಿಕ್ಷಣದಿಂದ ವಿಮುಖರಾಗಿರುತ್ತಾರೆ. ಅದಕ್ಕೆ ಬಡತನ ಕಾರಣವಾಗಿರಬಹುದು, ಇಲ್ಲವೇ ಇನ್ನಿತರ ಕಾರಣಗಳು ಅಡ್ಡಿಯುಂಟು ಮಾಡಬಹುದು. ಅಂಥವರಿಗೆ ಸಂಧ್ಯಾ ಕಾಲೇಜುಗಳು ವರದಾನವಾಗಿವೆೆ. ಹಗಲು ಪಾರ್ಟ್‌ ಟೈಮ್‌ ಕೆಲಸ ಮಾಡಿ ಸಂಜೆ ಕಾಲೇಜಿಗೆ ಹೋಗುವ ಅನೇಕ ಯುವಕ, ಯುವತಿಯರಿಂದು ಸಮಾಜದಲ್ಲಿ ಕಾಣಸಿಗುತ್ತಾರೆ. ಅಂಥವರ ಶಿಕ್ಷಣದ ಕೊರತೆಯನ್ನು ನೀಗಿಸಿ ಸಮಾಜದಲ್ಲಿ ತಲೆ ಎತ್ತಿ ನಿಲ್ಲುವಂತೆ ಮಾಡಿದ್ದು ಇವೇ ಸಂಧ್ಯಾ ಕಾಲೇಜುಗಳು.

Advertisement

ಹಿಂದೆ ಹೀಗಿತ್ತು…
ಆರಂಭದ ದಿನಗಳಲ್ಲಿ, ಹಳ್ಳಿಗಳು ಮತ್ತು ಸಣ್ಣ ನಗರಗಳಿಂದ ಬಂದ ಯುವಕರು, ಶಾಲೆಯನ್ನು (10ನೇ) ಪೂರ್ಣಗೊಳಿಸಿದ ಅನಂತರ ಮತ್ತು ಉದ್ಯೋಗ ಹುಡುಕುವಲ್ಲಿ ದೊಡ್ಡ ನಗರಕ್ಕೆ ಹೋಗಲು ಟೈಪ್‌ರೈಟಿಂಗ್‌ ಅನ್ನು ಕಲಿಯುತ್ತಿದ್ದರು. ಕೆಲಸವನ್ನು ಪಡೆದ ಅನಂತರ ಅವರು ಸಂಜೆ ಕಾಲೇಜುಗಳಿಗೆ ಸೇರಿ ಪದವಿಯನ್ನು ಪೂರ್ಣಗೊಳಿಸಲು ಪ್ರಯತ್ನಿಸುತ್ತಿದ್ದರು.

ಹಿಂದೆಯಾದರೆ ಮನೆಯಲ್ಲಿ ಬಡತನ, ಕಾಲೇಜು ಫೀಸು ಕಟ್ಟೋಕೂ ದುಡ್ಡಿಲ್ಲ ಅಂತ ಅನೇಕರು ಶಿಕ್ಷಣಕ್ಕೆ ತಿಲಾಂಜಲಿ ಇಡುತ್ತಿದ್ದರು. ಈಗ ಹಾಗಿಲ್ಲ. ಹಗಲು ಮಾರ್ಕೆಟಿಂಗ್‌ನಲ್ಲೋ, ಫ‌ುಡ್‌ ಡೆಲಿವರಿ ಬಾಯ್‌ ಆಗಿಯೋ ಕೆಲಸ ಮಾಡಿ ರಾತ್ರಿ ಕಾಲೇಜಿಗೆ ಹೋಗಬಹುದು. ದುಡಿಮೆಯೂ ಆಗುತ್ತೆ, ಶಿಕ್ಷಣ ಸಂಪೂರ್ಣವಾಗುತ್ತದೆ.

ಮೌಲ್ಯಯುತ ಶಿಕ್ಷಣ
ಸಂಜೆ ಕಾಲೇಜು ಬೆಳಗ್ಗೆ ಕಾಲೇಜಿಗೆ ಸಮನಾಗಿದ್ದು, ಪಠ್ಯಕ್ರಮ ಒಂದೇ ರೀತಿ ಇರುತ್ತದೆ. ಯಾವುದೇ ಕಾಲೇಜು ಮತ್ತು ಕಾಲೇಜು ಒದಗಿಸಿದ ಪದವಿ ಅಥವಾ ಪ್ರಮಾಣಪತ್ರಗಳಂತೆ ಸಂಜೆಯ ಕಾಲೇಜು ನೀಡುವ ಪ್ರಮಾಣಪತ್ರ ಉಳಿದ ಕಾಲೇಜುಗಳಷ್ಟೇ ಮೌಲ್ಯಯುತವಾಗಿರುತ್ತದೆ. ಇವುಗಳ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಆದರೆ ಸಂಜೆ ಕಾಲೇಜುಗಳು ಸ್ವಾತಂತ್ರ್ಯದ ಆರಂಭಿಕ ವರ್ಷಗಳಿಂದಲೂ ಇವೆೆ. ಈ ಕಾಲೇಜುಗಳು ಕೆಲಸದ ಸ್ವರೂಪದ ಕಾರಣದಿಂದಾಗಿ ಅಧ್ಯಯನ ಮಾಡಲು ಸಾಧ್ಯವಾಗದವರಿಗೆ ಅವಕಾಶ ನೀಡಲು ಪ್ರಾರಂಭವಾದವು.

ಯಾಕೆ ಸೇರಬಹುದು?
ಎಷ್ಟೋ ಜನರಿಗೆ ಶಿಕ್ಷಣ ಪಡೆಯುವ ಆಸೆಯಿದ್ದರೂ ಬಡತನ ಉದ್ಯೋಗ ಮಾಡುವಂತೆ ದೂಡುತ್ತದೆ. ಅಂಥವ‌ರಿಗೆ ಉದ್ಯೋಗದ ಜತೆಗೆ ಸಂಜೆ ಕಾಲೇಜು ಸೇರಿಕೊಂಡು ತಮ್ಮ ಶಿಕ್ಷಣ ಮುಂದುವರಿಸಬಹುದು. ಇಲ್ಲಿನ ಶಿಕ್ಷಣ ಮೌಲ್ಯಯುತವಾಗಿರುವುದರಿಂದ ಸಂಜೆ ಕಾಲೇಜಿಗೆ ಹೋಗಲೂ ಯಾವುದೇ ಹಿಂಜರಿಕೆಯ ಅಗತ್ಯವಿಲ್ಲ. ಮನೆ ಜವಾಬ್ದಾರಿಯಿಂದ ಕಲಿಕೆಗೆ ಬ್ರೇಕ್‌ ಹೇಳಿದ ಅದೆಷ್ಟೋ ಜನರು ಈ ಕಾಲೇಜುಗಳಲ್ಲಿ ಕಲಿಯುತ್ತಾರೆ.

Advertisement

-  ಹಿರಣ್ಮಯಿ

Advertisement

Udayavani is now on Telegram. Click here to join our channel and stay updated with the latest news.

Next