ಸವಣೂರು: ಮದ್ಯಪಾನದ ವಿರುದ್ಧ ಮನಸ್ಸಿನಲ್ಲಿ ಯುದ್ದ ಮಾಡಿ ದೃಢ ಚಿತ್ತರಾಗಬೇಕು.ದುಷ್ಟ ಭಾವನೆಗಳು ಬದಲಾವಣೆಯಾದಾಗ ಉತ್ತಮ ನವಜೀವನ ನಡೆಸಲು ಸಾಧ್ಯ ಎಂದು ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅಭಿಪ್ರಾಯ ಪಟ್ಟರು.
ಅವರು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ರಾಜ್ಯ ಮದ್ಯಪಾನ ಸಂಯಮ ಮಂಡ ಲಿಯ ವತಿಯಿಂದ ಪುತ್ತೂರು ವಕೀಲರ ಸಂಘ, ತಾಲೂಕು ಕಾನೂನು ಸೇವೆಗಳ ಸಮಿತಿ, ಅಖೀಲ ಕರ್ನಾಟಕ ಜನಜಾಗೃತಿ ವೇದಿಕೆ ಮತ್ತು ಶ್ರವಣರಂಗ ಪ್ರತಿಷ್ಠಾನ, ಸವಣೂರು ಇವರ ಸಂಯೋಜನೆಯಲ್ಲಿ ಮಾ. 1ರಿಂದ 7ರ ತನಕ ಜಿಲ್ಲೆಯಾದ್ಯಂತ ಮದ್ಯಪಾನ ಮತ್ತು ಮಾದಕ ವಸ್ತುಗಳ ವಿರುದ್ಧ ನಡೆಸಲಾಗುವ ಜನಜಾಗೃತಿ ಜಾಥಾ ಮತ್ತು ಬೀದಿನಾಟಕದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದರು.
ಇಂದು ಪ್ರತಿಯೊಬ್ಬನಿಗೂ ಕುಡಿತವೆಂಬುದು ಜೀವನ ಶೈಲಿ ಯಾಗಿರುವುದು ದುರದೃಷ್ಟಕರ. ಇದನ್ನು ಹೋಗಲಾಡಿಸಲು ವಕೀಲರ ಸಂಘ ಕಾರ್ಯೋನ್ಮುಖರಾಗಿರುವುದು ಶ್ಲಾಘನೀಯ. ಇಂತಹ ಒಳ್ಳೆಯ ಕೆಲಸಗಳಿಗೆ ಕ್ಷೇತ್ರವು ಸಹಕಾರ ನೀಡಲಿದೆ. ಜನಜಾಗೃತಿ ವೇದಿಕೆಯಿಂದ ಸಂಪೂರ್ಣ ಸಹಕಾರವನ್ನು ನೀಡು ವುದು ಮಾತ್ರವಲ್ಲ ಕ್ಷೇತ್ರದಲ್ಲೂ ಈ ನಾಟಕ ಆಯೋಜಿಸಿ ಮದ್ಯಪಾನದ ವಿರುದ್ಧ ಜಾಗೃತಿ ಮೂಡಿಸಲಾಗುವುದು ಎಂದು ಶುಭ ಹಾರೈಸಿದರು.
ಮದ್ಯಪಾನ ಸಂಯಮ ಮಂಡ ಲಿಯ ನಿರ್ದೇಶಕ, ವಕೀಲರ ಸಂಘದ ಅಧ್ಯಕ್ಷ ಭಾಸ್ಕರ ಕೋಡಿಂಬಾಳ, ಕಾರ್ಯದರ್ಶಿ ಕೃಷ್ಣಪ್ರಸಾದ್ ರೈ, ಉಪಾಧ್ಯಕ್ಷ ಮಹಾಬಲ ಗೌಡ ಎ., ಜತೆ ಕಾರ್ಯದರ್ಶಿ ದೀಪಕ್ ಬೊಳು ವಾರು, ನ್ಯಾಯವಾದಿ ಮಹೇಶ್ ಕೆ. ಸವಣೂರು, ಅಖೀಲ ಕರ್ನಾಟಕ ಜನ ಜಾಗೃತಿ ವೇದಿಕೆ ತಾಲೂಕು ಅಧ್ಯಕ್ಷ ಪದ್ಮನಾಭ ಶೆಟ್ಟಿ, ಕ್ಷೇತ್ರ ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಸೀತಾರಾಮ ಶೆಟ್ಟಿ, ತಾಲೂಕು ಯೋಜನಾಧಿಕಾರಿ ಧರ್ಣಪ್ಪ ಮೂಲ್ಯ, ಶ್ರವಣರಂಗ ಸವಣೂರು ಇದರ ಸಂಚಾಲಕ ಹಾಗೂ ಬೀದಿ ನಾಟಕದ ನಿರ್ದೇಶಕ ತಾರಾನಾಥ ಸವಣೂರು, ಸಾಮಾಜಿಕ ಕಾರ್ಯಕರ್ತ ರಾಮಕೃಷ್ಣ ಪ್ರಭು ಸವಣೂರು, ಬೆಳ್ತಂಗಡಿ ಜನ ಜಾಗೃತಿಯ ವೇದಿಕೆಯ ನಿರ್ದೇಶಕ ದೇವಿಪ್ರಸಾದ್ ಉಪಸ್ಥಿತರಿದ್ದರು.