Advertisement

ದೇವರಾಜ ಅರಸು ಜಿಲ್ಲೆಯಾಗಿಸುವ ನಿಟ್ಟಿನಲ್ಲಿ ಎಲ್ಲರ ಸಹಕಾರ ಅತ್ಯಗತ್ಯ: ಎಚ್.ವಿಶ್ವನಾಥ್

02:14 PM Jan 24, 2024 | Team Udayavani |

ಹುಣಸೂರು: ಹುಣಸೂರನ್ನು ದೇವರಾಜ ಅರಸು ಜಿಲ್ಲಾ ಕೇಂದ್ರವಾಗಿಸುವ ನಿಟ್ಟಿನಲ್ಲಿ ಅಕ್ಕಪಕ್ಕದ ಶಾಸಕರು ಸೇರಿದಂತೆ ಎಲ್ಲರ ಸಹಕಾರ ಪಡೆದು ಸರಕಾರದ ಮುಂದೆ ಪ್ರಸ್ತಾಪವಿಡುವ ಕುರಿತು ಸಭೆಯಲ್ಲಿ ಭಾಗವಹಿಸಿದ್ದ ಜನಪ್ರತಿನಿಧಿಗಳು ಹಾಗೂ ವಿವಿಧ ಪಕ್ಷಗಳ ಮುಖಂಡರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಒಕ್ಕೋರಲ ನಿರ್ಣಯ ಕೈಗೊಂಡರು.

Advertisement

ನವ ನಿರ್ಮಾಣ ವೇದಿಕೆಯು ನಗರದ ಅಂಬೇಡ್ಕರ್‌ ಭವನದಲ್ಲಿ ಮಂಗಳವಾರ ಹುಣಸೂರನ್ನು ಜಿಲ್ಲೆಯಾಗಿಸುವ ನಿಟ್ಟಿನಲ್ಲಿ ಆಯೋಜಿಸಿದ್ದ ಪೂರ್ವಬಾವಿ ಸಭೆಯಲ್ಲಿ ಎಂ.ಎಲ್.ಸಿ. ಅಡಗೂರು ಎಚ್.ವಿಶ್ವನಾಥ್ ಮಾತನಾಡಿ, ಉಪವಿಭಾಗ ಕೇಂದ್ರವಾದ ಹುಣಸೂರು ಜಿಲ್ಲೆಯಾಗುವ ಎಲ್ಲಾ ಅರ್ಹತೆ ಹೊಂದಿದ್ದು, ಅಕ್ಕ ಪಕ್ಕದ ತಾಲೂಕಿನ ಶಾಸಕರು, ಮಾಜಿ ಶಾಸಕರು, ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು, ಮುಖಂಡರು, ಸಂಘ-ಸಂಸ್ಥೆಗಳವರನ್ನು ವಿಶ್ವಾಸಕ್ಕೆ ಪಡೆಯೋಣ. ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಂಪುಟದ ಸಚಿವರನ್ನು ವಿಶ್ವಾಸಕ್ಕೆ ಪಡೆದು ಮುನ್ನಡೆಯೋಣ, ಮುಂದಿನ ದಿನಗಳಲ್ಲಿ. ಗ್ರಾ.ಪಂ.ಮಟ್ಟದಲ್ಲೂ ಸಭೆಗಳನ್ನು ನಡೆಸಿ ಅಭಿಪ್ರಾಯ ಸಂಗ್ರಹಿಸಿ ಬೆಂಬಲ ಕೇಳೋಣವೆಂದರು.

ವಿಕೇಂದ್ರಿಕರಣ ಅತ್ಯಗತ್ಯ: 

ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಮಾತನಾಡಿ, ಜನಸಂಖ್ಯೆ ಹೆಚ್ಚಿದಂತೆ ಅಭಿವೃದ್ದಿ ಹಾಗೂ ಆಡಳಿತದ ಹಿತದೃಷ್ಟಿಯಿಂದ ಜಿಲ್ಲೆಗಳ ವಿಕೇಂದ್ರಿಕರಣವಾಗಲೇಬೇಕು. ತಮ್ಮ ಅವಧಿಯಲ್ಲಿ ತಾಲೂಕಿನ 30 ಗ್ರಾ.ಪಂ.ಗಳನ್ನು 40 ಪಂಚಾಯ್ತಿಗಳಿಗೆ ಹೆಚ್ಚಿಸಿದ ಪರಿಣಾಮ ಆಡಳಿತಕ್ಕೆ ಅನೂಕೂಲವಾಗಿದೆ. ಹೆಚ್ಚು ಅನುದಾನ ಬರುತ್ತಿದೆ. ಈ ನಿಟ್ಟಿನಲ್ಲಿ ಹುಣಸೂರು ಜಿಲ್ಲೆಯಾಗುವ ಎಲ್ಲ ಅರ್ಹತೆ ಇದೆ ಎಂದರು.

Advertisement

ಸಮಿತಿ ರಚನೆಗೆ ಸಲಹೆ:

ಪ್ರಥಮವಾಗಿ ಜಿಲ್ಲೆಗೆ ಸೇರಿಸಬೇಕೆನ್ನುವ ಅಕ್ಕಪಕ್ಕದ ತಾಲೂಕಿನ ಶಾಸಕರ ವಿಶ್ವಾಸದೊಂದಿಗೆ ರೂಪುರೇಷೆ ತಯಾರಾಗಲಿ.  ಇದು ಜಿಲ್ಲೆಯಾದಲ್ಲಿ ಆಡಳಿತಕ್ಕೆ ವೇಗ ಸಿಗಲಿದೆ. ಜನರಿಗೆ ಶೀಘ್ರ ನ್ಯಾಯ ದೊರೆಯಲಿದೆ. ಈ ಬಗ್ಗೆ ಈಗಾಗಲೇ ಜಿಲ್ಲಾ ಮಂತ್ರಿಯವರೊಂದಿಗೆ ಚರ್ಚಿಸಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯರಿಗೂ ಮನವಿ ಮಾಡೋಣ, ಕಾರ್ಯ ನಿರ್ವಹಣೆಗಾಗಿ ಮೊದಲು ಸಮಿತಿ ರಚಿಸಿಕೊಳ್ಳೋಣವೆಂದು ಸಲಹೆ ನೀಡಿದರು.

ದೇವರಾಜ ಅರಸು ಜಿಲ್ಲೆಯಾಗಲಿ:

ದೇಶದಲ್ಲೇ ಅತ್ಯುತ್ತಮ ಆಡಳಿತ ನಡೆಸಿ, ಶೋಷಿತರು, ದಲಿತರು, ಬಡವರ ಧ್ವನಿಯಾಗಿ, ಅಕ್ಷರ, ಅನ್ನ, ಭೂಮಿ ಕೊಟ್ಟ ದೇವರಾಜ ಅರಸರು ಪ್ರತಿನಿಧಿಸಿದ್ದ ಹುಣಸೂರನ್ನು ದೇವರಾಜ ಅರಸು ಜಿಲ್ಲೆ ಎಂದು ನಾಮಕರಣ ಮಾಡಬೇಕಿದೆ ಎಂದು ಎಂಎಲ್‌ಸಿ ವಿಶ್ವನಾಥ್‌ರ ಪ್ರಸ್ತಾಪಕ್ಕೆ ಮಾಜಿ ಶಾಸಕ ಮಂಜುನಾಥ್ ಸೇರಿದಂತೆ ಸಭೆ ಹಾಗೂ ಸಂದೇಶ ನೀಡಿದ್ದ ಶಾಸಕ ಹರೀಶ್‌ಗೌಡರು ಬೆಂಬಲ ವ್ಯಕ್ತಪಡಿಸಿದರು.

ಅಭಿವೃದ್ದಿಗಾಗಿ ಜಿಲ್ಲೆಯಾಗಲಿ:

ಹೋರಾಟದ ರುವಾರಿ, ನವನಿರ್ಮಾಣ ವೇದಿಕೆಯ ಹರಿಹರಾನಂದಸ್ವಾಮಿ ಮಾತನಾಡಿ ಪ್ರಜಾಪ್ರಭತ್ವ ದೇಶದ ಸಂವಿದಾನ ರಚನೆ ವೇಳೆಯೇ ಚಿಕ್ಕ ಜಿಲ್ಲೆಗಳಾದಲ್ಲಿ ಅಭಿವೃದ್ದಿಯ ಜೊತೆಗೆ ಜನರಿಗೆ ನ್ಯಾಯ ಒದಗಿಸಲು ಸಾಧ್ಯವೆಂದು ಹೇಳಿದ್ದು, ಸಮಾನತೆ, ಪುರೋಭಿವೃದ್ದಿಗಾಗಿ ರಾಜಕೀಯ ಮೀರಿ, ಪಕ್ಷಬೇಧ ಮರೆತು ಹುಣಸೂ ಜಿಲ್ಲೆಯಾಗಿಸಬೇಕಿದೆ  ಎಂದರು. ಸತ್ಯಪೌಂಡೇಶನ್ ಅಧ್ಯಕ್ಷ ಸತ್ಯಪ್ಪ, ಜಿ.ಪಂ.ಮಾಜಿ ಸದಸ್ಯ ನಾಗರಾಜಮಲ್ಲಾಡಿ ಜಿಲೆಯಾದಲ್ಲಿ ಉದ್ಯೋಗ ಸೃಷ್ಟಿಯಾಗಲಿದೆ ಎಂದರು.

ಶಾಸಕರ ಬೆಂಬಲ ಸಂದೇಶ:

ಕಾರ್ಯ ನಿಮಿತ್ತ ಸಭೆಗೆ ಗೈರಾಗಿದ್ದ ಶಾಸಕ ಜಿ.ಡಿ.ಹರೀಶ್‌ಗೌಡರು ತಮ್ಮ ಸಂದೇಶದಲ್ಲಿ ಹುಣಸೂರು ಜಿಲ್ಲೆಯಾಗಿಸುವ ನಿಟ್ಟಿನಲ್ಲಿ ತಮ್ಮ ಸಂಪೂರ್ಣ ಬೆಂಬಲವಿದ್ದು, ಸಭೆಯ ತೀರ್ಮಾನಕ್ಕೆ ಬದ್ದ, ತಾವು ನೇತ್ರತ್ವವಹಿಸಲು ಸಿದ್ದವೆಂದು ತಿಳಿಸಿದ್ದರೆ, ಮತ್ತೋರ್ವ ಎಂ.ಎಲ್.ಸಿ. ಡಾ.ತಿಮ್ಮಯ್ಯನವರು ಸಹ ಜಿಲ್ಲೆಯಾಗಿಸುವ ಎಲ್ಲರ ಪ್ರಯತ್ನಕ್ಕೆ  ಸಂಪೂರ್ಣ ಸಹಕಾರ ನೀಡುವುದಾಗಿ ಸಂದೇಶದಲ್ಲಿ ತಿಳಿಸಿದ್ದಾರೆ.

ಸಭೆಯಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಶಿವಕುಮಾರ್, ಗೀತಾ ನಿಂಗರಾಜು, ಸುನಿತಾ ಜಯರಾಮೇ ಗೌಡ, ಎಚ್.ವೈ.ಮಹದೇವ್, ಹುಡಾ ಮಾಜಿ ಅಧ್ಯಕ್ಷ ಗಣೇಶ ಕುಮಾರ ಸ್ವಾಮಿ, ಜೆಡಿಎಸ್‌ನ ತಾಲೂಕು ಅಧ್ಯಕ್ಷ ದೇವರಾಜಒಡೆಯರ್, ವಕೀಲರ ಸಂಘದ ಅಧ್ಯಕ್ಷ ಶಿವಣ್ಣೇಗೌಡ, ಜಿ.ಪಂ.ಮಾಜಿ ಸದಸ್ಯರಾದ ಫಜಲುಲ್ಲಾ, ಕುನ್ನೇಗೌಡ, ಕಟ್ಟನಾಯ್ಕ, ಕಾಂಗ್ರೆಸ್ ಕಾರ್ಯಾಧ್ಯಕ್ಷ ಪುಟ್ಟರಾಜು, ಅರಸು ವೇದಿಕೆ ಅಧ್ಯಕ್ಷ ಬಿಳಿಕೆರೆರಾಜು, ಮುಖಂಡರಾದ ಹಂದನಹಳ್ಳಿ ಸೋಮಶೇಖರ್, ಒಕ್ಕಲಿಗರ ಸಂಘದ ಅಧ್ಯಕ್ಷ ಗಣೇಶ್‌ಗೌಡ  ಸೇರಿದಂತೆ  ವಿವಿಧ ಪಕ್ಷಗಳ, ಸಂಘ-ಸಂಸ್ಥೆಗಳ ಮುಖಂಡರು ಸೇರಿದಂತೆ ೫೦೦ಕ್ಕೂ ಹೆಚ್ಚು ಮಂದಿ ಬಾಗವಹಿಸಿದ್ದರು.

ಚುನಾವಣೆ ದೃಷ್ಟಿಯಲ್ಲ:

ಹುಣಸೂರನ್ನು ಜಿಲ್ಲೆಯಾಗಿಸುವ ಈ ಸಭೆ ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆ ಎಂದು ಹುಯಿಲೆಬ್ಬಿಸುವವರಿದ್ದಾರೆ, ಇದಕ್ಕೆ ಅಪಾರ್ಥ ಬೇಡ. ಇದು ಅರಸರ ಗರಡಿಯಲ್ಲಿ ಬೆಳೆದವರ ಆಶಯವೆಂದು ವಿಶ್ವನಾಥ್ ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next