ಬೆಂಗಳೂರು: ಜಾತಿ ಗಣತಿ ಪರವಾಗಿ ಕಾಂಗ್ರೆಸ್ ಪಕ್ಷವಿದ್ದು ಸಿದ್ದರಾಮಯ್ಯ ಇರಲಿ, ಡಿ.ಕೆ.ಶಿವಕುಮಾರ್ ಯಾರೇ ಇರಲಿ ಎಲ್ಲರೂ ಪಕ್ಷದ ನಿರ್ಣಯವನ್ನು ಪಾಲಿಸಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಖಡಕ್ ಸೂಚನೆ ನೀಡಿದರು.
ಎಐಸಿಸಿ ಅಧ್ಯಕ್ಷನಾಗಿ ನಾನು ಈ ಮಾತನ್ನು ಹೇಳುತ್ತಿದ್ದೇನೆ. ಪಕ್ಷದ ಎಲ್ಲರೂ ಪಕ್ಷದ ತೀರ್ಮಾನವನ್ನು ಪಾಲಿಸಬೇಕು ಎಂದು ಖರ್ಗೆ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನೀವು ಕಲಬುರಗಿಯಿಂದ ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ, ರಾಜ್ಯದ ನಾಯಕರು ಈ ಬಗ್ಗೆ ತೀರ್ಮಾನ ಕೈಗೊಳ್ಳಬೇಕು. ನನ್ನ ಸ್ಪರ್ಧೆ ಬಗ್ಗೆ ಇಲ್ಲೇ ಕೇಳಿ ಎಂದು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಅವರನ್ನು ನೋಡಿದರು.
ಗ್ಯಾರಂಟಿ ಎಂಬ ಅಂಶವನ್ನು ಕರ್ನಾಟಕದಲ್ಲಿ ಕಾಂಗ್ರೆಸ್ ಜಾರಿ ಮಾಡಿದ ನಂತರ ಬಿಜೆಪಿಯವರು ಅದನ್ನು ಬಳಸುತ್ತಿದ್ದಾರೆ. ಬಿಜೆಪಿಯವರು ನಮ್ಮ ಕಾರ್ಯಕ್ರಮಗಳನ್ನೇ ಅವರದ್ದು ಎಂದು ಹೇಳಿಕೊಂಡು ಹೋಗುತ್ತಾರೆ. ನಮ್ಮ ಆಲೋಚನೆ ಯೋಜನೆಗಳನ್ನು ಅವರು ಮುಂದುವರಿಸುವುದಾದರೆ ಮುಂದುವರಿಸಲಿ ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳನ್ನು ನಿಗದಿತ ಕಾಲಮಿತಿಯೊಳಗೆ ನಮ್ಮ ಸರ್ಕಾರ ಜಾರಿಗೊಳಿಸಲಿದೆ. ನಾವು ಕೊಟ್ಟಿರುವ ಎಲ್ಲ ಭರವಸೆಗಳನ್ನು ಈಡೇರಿಸುತ್ತೇವೆ. ಅದಕ್ಕೆ ಕರ್ನಾಟಕ ಹಾಗೂ ತೆಲಂಗಾಣ ರಾಜ್ಯಗಳೇ ಸಾಕ್ಷಿ ಎಂದು ಖರ್ಗೆ ತಿಳಿಸಿದರು.
ಮೋದಿ ಅವರು ವರ್ಷಕ್ಕೆ 2 ಕೋಟಿ ಉದ್ಯೋಗ, ರೈತರ ಆದಾಯ ದುಪ್ಪಟ್ಟು, ಬುಲೆಟ್ ರೈಲು, ಖಾತೆಗೆ 15 ಲಕ್ಷ ಎಂದು ಸುಳ್ಳಿನ ಮೇಲೆ ಸುಳ್ಳನ್ನು ಹೇಳುತ್ತಲೇ ಬರುತ್ತಿದ್ದಾರೆ. ಮೋದಿ ಅವರು ಕೊಟ್ಟಿರುವ ಭರವಸೆಗಳಲ್ಲಿ ಶೇ.75 ಬರೀ ಸುಳ್ಳು. ಮೋದಿ ಅವರು ಯಾವುದೇ ಹಿಂಜರಿಕೆ ಇಲ್ಲದೇ ಸುಳ್ಳು ಹೇಳುತ್ತಾರೆ. ಆದರೆ ನಮ್ಮ ನಾಯಕರು ಯಾವುದೇ ಘೋಷಣೆ ಮಾಡುವ ಮುನ್ನ ನಾಲ್ಕು ಬಾರಿ ಆಲೋಚಿಸುತ್ತಾರೆ. ಇದಕ್ಕೆ ಹಣ ಎಲ್ಲಿಂದ ತರುವುದು ಎಂದು ಚಿಂತನೆ ನಡೆಸಿ ನಂತರ ಭರವಸೆಗಳನ್ನು ಘೋಷಿಸುತ್ತಾರೆ ಎಂದು ಹೇಳಿದರು.