ಚಾಮರಾಜನಗರ: ಪ್ರತಿಯೊಬ್ಬರು ಸ್ಥಳೀಯ ಪ್ರದೇಶದ ಇತಿಹಾಸದ ಕುರಿತು ಚಾರಿತ್ರಿಕ ದಾಖಲೆಯ ಮಹತ್ವ ತಿಳಿದುಕೊಂಡಿರಬೇಕು ರಾಜ್ಯ ಪತ್ರಾಗಾರ ಇಲಾಖೆಯ ನಿರ್ದೇಶಕ ಡಾ. ಗವಿಸಿದ್ದಯ್ಯ ಸಲಹೆ ನೀಡಿದರು. ನಗರದ ಜಿಲ್ಲಾಡಳಿತ ಭವನದಲ್ಲಿರುವ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ, ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ ಹಾಗೂ ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸಹಯೋಗಲ್ಲಿ ಗುರುವಾರ ನಡೆದ ಚಾರಿತ್ರಿಕ ದಾಖಲೆಗಳಲ್ಲಿ
ಚಾಮರಾಜನಗರ ಜಿಲ್ಲೆಯ ಇತಿಹಾಸ ವಿಷಯ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಪತ್ರಾಗಾರವು ಸ್ಥಳೀಯ ಇತಿಹಾಸದ ಅಧಿಕೃತ ದಾಖಲೆಗಳನ್ನು ಸಂರಕ್ಷಿಸುತ್ತಾ ಬಂದಿದೆ. ತಮ್ಮ ಸ್ಥಳೀಯ ಪ್ರದೇಶದ ಹಿನ್ನಲೆಯನ್ನು ತಿಳಿದು ಕೊಳ್ಳುವುದು ಅತ್ಯಗತ್ಯವಾಗಿದೆ. ಇಂದಿನ ತಂತ್ರಜ್ಞಾನದಿಂದ ಮಾಹಿತಿಗಳನ್ನು ಇಲಾಖೆ ವೆಬ್ಸೈಟ್ಗಳಲ್ಲಿಯೂ ಸಹ ಅಳವಡಿಸಲಾಗಿದ್ದು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಚಾಮರಾಜನಗರವು ಇತಿಹಾಸವುಳ್ಳ ಪ್ರದೇಶವಾಗಿದ್ದು ಹಲವಾರು ಕಡತಗಳು ಯಳಂದೂರು ಕಚೇರಿಯಲ್ಲಿ ಸಿಕ್ಕಿದ್ದು ಅವು ಮೋಡಿ ಲಿಪಿಯಲ್ಲಿವೆ. ಮೋಡಿ ಲಿಪಿಯನ್ನು ಓದುವವರ ಸಂಖ್ಯೆ ವಿರಳವಾಗಿದ್ದು ಭಾಷೆ ಕೊರತೆಯಿಂದ ಕೆಲವು ಕಡತಗಳ ಅನ್ವೇಷಣೆ ಆಗದೇ ಉಳಿದುಕೊಂಡಿವೆ. ಇದನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸಬೇಕಾಗಿದೆ. ಹಾಗಾಗಿ ಇತಿಹಾಸ ಸಂಶೋಧನೆ ಮಾಡುವ ವಿದ್ಯಾರ್ಥಿಗಳು ಇಂತಹ ವಿಷಯ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಡಾ.
ಗವಿಸಿದ್ದಯ್ಯ ಸಲಹೆ ಮಾಡಿದರು.
ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಎಂ.ಆರ್. ಸುಮತಿ ಮಾತನಾಡಿ, ಜಿಲ್ಲೆಯ ಇತಿಹಾಸ ಕುರಿತ ರಾಜ್ಯ ಮಟ್ಟದ ವಿಚಾರ ಸಂಕಿರಣ ಆಯೋಜಿಸಿರುವುದು ಇದೇ ಪ್ರಥಮವಾಗಿದ್ದು ತುಂಬ ವಿಶೇಷ ವಾಗಿದೆ. ಜಿಲ್ಲೆಯ ಜನತೆ ಇಲ್ಲಿನ ನೆಲ, ಜಲ, ಇತಿಹಾಸವನ್ನು ತಿಳಿದು ಕೊಳ್ಳುವುದು ಕರ್ತವ್ಯವೆಂದೇ ಭಾವಿಸಬೇಕು ಎಂದರು.
Related Articles
ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಬಿ.ಆರ್. ಜಯಣ್ಣ ಮಾತನಾಡಿ ಇತಿಹಾಸದ ದಾಖಲೆ ಗಳನ್ನು ಸಂರಕ್ಷಿಸುವುದು ಪ್ರಮುಖವಾಗಿದೆ. ಇತಿಹಾಸದ ದಾಖಲೆಗಳಿಂದಲೇ ನಮ್ಮ ದೇಶದ ನಾಗರಿಕತೆ ಗಳು, ಅಭಿವೃದ್ಧಿ ಕಾರ್ಯಗಳ ಬಗ್ಗೆ ತಿಳಿಯಬಹುದು. ನಮ್ಮ ಜಿಲ್ಲೆಯ ಇತಿಹಾಸದಿಂದ ಜಿಲ್ಲೆ ಬೆಳೆದು ಬಂದ ದಾರಿ ತಿಳಿದುಕೊಳ್ಳಬಹುದು ಎಂದರು.
ಮೈಸೂರಿನ ಸಿದ್ದಾರ್ಥನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಬೇಬಿ ಬಿ. ಪ್ರೇಮಲತಾ, ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಕಚೇರಿಯ ಜಂಟಿ ನಿರ್ದೇಶಕ ಪೊ›. ಕೆ.ಸಿ. ವೀರಭದ್ರಯ್ಯ, ವಿಭಾಗೀಯ ಪತ್ರಾಗಾರ ಕಚೇರಿಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ, ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಕಚೇರಿಯ ಸಹಾಯಕ ನಿರ್ದೇಶಕ ನಾಗೇಂದ್ರ ಪ್ರಸಾದ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಮಹದೇವ ಶಂಕನಪುರ ಇದ್ದರು.