Advertisement

ರಸ್ತೆಗಳೆಲ್ಲ ಅಭಿವೃದ್ಧಿ ಹೊಂದಿದರೂ ಸಂಚಾರ ಸಂಕಟ ಹಾಗೇ ಇದೆ !

12:34 AM Oct 06, 2019 | Sriram |

ಮಹಾನಗರ: ನಗರದಿಂದ ಕೇವಲ 7 ಕಿ.ಮೀ. ದೂರದಲ್ಲಿರುವ ಬಜಾಲ್‌ ವಾರ್ಡ್‌ ಗ್ರಾಮಾಂತರ ಭಾಗದ ಸ್ವರೂಪದೊಂದಿಗೆ ಹಚ್ಚ ಹಸುರಿನಲ್ಲಿ ಕಂಗೊಳಿ ಸುತ್ತಿದೆ. ಒಂದೆಡೆ ನೇತ್ರಾವತಿಯ ಮಡಿಲು; ಇನ್ನೊಂದೆಡೆ ಭತ್ತ, ಕಂಗು, ತೆಂಗಿನ ಪ್ರಶಾಂತ ಪರಿಸರ; ಜತೆಗೆ ಗುಡ್ಡದ ಮೇಲೆ ಕಾಣುವ ಮನೆಗಳು!

Advertisement

ಪಡೀಲ್‌ ರೈಲ್ವೇ ಅಂಡರ್‌ ಪಾಸ್‌ನಿಂದ ಎಡಭಾಗಕ್ಕೆ ತೆರಳಿದಾಗ ಪೈಸಲ್‌ನಗರ ಸಹಿತ ಬಜಾಲ್‌ ವಾರ್ಡ್‌ನ ಒಂದೊಂದೇ ಗ್ರಾಮಾಂತರ ಭಾಗಗಳು ಕಾಣಸಿಗುತ್ತವೆ.
ಮಹಾನಗರ ಪಾಲಿಕೆಯಲ್ಲಿ 53ನೇ ವಾರ್ಡ್‌ ಆಗಿರುವ ಬಜಾಲ್‌ನಲ್ಲಿ ರಸ್ತೆಗೆ ಆದ್ಯತೆ ನೀಡಲಾಗಿದೆ ಎಂಬುದು ವಾರ್ಡ್‌ ಸುತ್ತಾಡಿದಾಗ ಅನುಭವಕ್ಕೆ ಬಂದಿದೆ. ರಸ್ತೆ ಸಹಿತ ಮೂಲ ಸೌಕರ್ಯಗಳು ಬಹುತೇಕ ಇಲ್ಲಿ ಆದಂತೆ ಮೇಲ್ನೋಟಕ್ಕೆ ಕಾಣುತ್ತಿದೆ. ಶಾಸಕರ ನಿಧಿಯಿಂದಲೂ ಇಲ್ಲಿಗೆ ಅನುದಾನ ಬಂದಿದ್ದು, ರಸ್ತೆ ಸೇರಿದಂತೆ ಇತರ ಕಾರ್ಯಗಳಿಗೆ ವಿನಿಯೋಗವಾಗಿದೆ. ನಿಕಟಪೂರ್ವ ಪಾಲಿಕೆ ಸದಸ್ಯೆ ಕಾಂಗ್ರೆಸ್‌ನ ಸುಮಯ್ನಾ ಅವರು 10 ಕೋ.ರೂ.ಗಳಿಗೂ ಅಧಿಕ ಹಣವನ್ನು ರಸ್ತೆಗಳ ಕಾಂಕ್ರೀ ಕಾಮಗಾರಿಗೆ ಈ ವಾರ್ಡ್‌ನಲ್ಲಿ ವಿನಿಯೋಗಿಸಿದ್ದಾರೆ ಎನ್ನುತ್ತಾರೆ.

ಆದರೆ ಅಭಿವೃದ್ಧಿಗೊಂಡ ಇಲ್ಲಿನ ಬಹುತೇಕ ರಸ್ತೆಗಳು ಇಕ್ಕಟ್ಟಾಗಿರುವುದರಿಂದ ಮುಂದೆ ಇಲ್ಲಿ ವಾಹನಗಳ ಸರಾಗ ಓಡಾಟಕ್ಕೆ ಸಮಸ್ಯೆ ಎದುರಾಗುವ ಎಲ್ಲ ಲಕ್ಷಣಗಳಿವೆ. ಆದರೆ ಲಕ್ಷಾಂತರ ರೂ. ಖರ್ಚು ಮಾಡಿ ಕಾಂಕ್ರೀಟ್‌ ರಸ್ತೆಗಳನ್ನು ನಿರ್ಮಿಸುವಾಗ, ಅವುಗಳು ಸೂಕ್ತ ಅಗಲದೊಂದಿಗೆ ಫುಟ್‌ಪಾತ್‌ ವ್ಯವಸ್ಥೆಯನ್ನು ಹೊಂದಿದ್ದರೆ ಸಾರ್ವಜನಿಕರಿಗೆ ಹೆಚ್ಚು ಸದುಪಯೋಗವಾಗುತ್ತದೆ.

ಪೈಸಲ್‌ನಗರದಿಂದ ನೇರವಾಗಿ ಹೋದರೆ ನೇತ್ರಾವತಿ ನದಿ ಬದಿಗೆ ತೆರಳಬಹುದು. ಜಲ್ಲಿಗುಡ್ಡದವರೆಗೆ ರಸ್ತೆ ಸಂಪರ್ಕ ಸರಿಯಾಗಿದ್ದರೆ ಆ ಬಳಿಕ ಕೆಲವೆಡೆ ಮಾತ್ರ ರಸ್ತೆ ಇದೆ. ಅದೂ ಕೂಡ 10ರಿಂದ 15 ಅಡಿ ಅಗಲದ ರಸ್ತೆ. ಹೀಗಾಗಿ ಓಣಿಯ ಸ್ವರೂಪ ಇಲ್ಲಿದೆ. ರಸ್ತೆಯೇ ಇಕ್ಕಟ್ಟಾಗಿರುವುದರಿಂದ ಇಲ್ಲಿ ಫುಟ್‌ಪಾತ್‌ ವಿಚಾರವನ್ನು ಪ್ರಸ್ತಾವಿಸುವ ಅಗತ್ಯವಿಲ್ಲ. ಕುಡಿಯುವ ನೀರಿನ ವ್ಯವಸ್ಥೆ ಈ ವಾರ್ಡ್‌ನಲ್ಲಿ ಸಮರ್ಪಕವಾಗಿದ್ದರೂ ಜಲ್ಲಿಗುಡ್ಡೆ ಸಮೀಪ, ನಂತೂರು ಗುಡ್ಡೆ ಸಮೀಪ ಕುಡಿಯುವ ನೀರಿನ ಸಮಸ್ಯೆ ಕೆಲವೊಮ್ಮೆ ಎದುರಾಗುತ್ತದೆ ಎನ್ನುತ್ತಾರೆ ಸ್ಥಳೀಯರಾದ ರಝಾಕ್‌.

ಪ್ರವಾಸೋದ್ಯಮದ ಅಭಿವೃದ್ಧಿಗೆ ಚಿಂತಿಸಿಲ್ಲ
ನೇತ್ರಾವತಿಯ ಮಡಿಲಲ್ಲಿರುವ ವಾರ್ಡ್‌ ಇದು. ಹೀಗಾಗಿ ನದಿ ತೀರ ಪ್ರದೇಶ ಈ ವಾರ್ಡ್‌ನ ಹೈಲೈಟ್ಸ್‌. ನದಿ ತೀರದ ಪ್ರದೇಶವನ್ನು ಪ್ರವಾಸೋದ್ಯಮಕ್ಕೆ ಜೋಡಿಸುವ ಕೆಲಸ ಇಲ್ಲಿ ಆಗುತ್ತಿದ್ದರೆ ಇಲ್ಲಿನ ನೋಟ ಬದಲಾಗುತ್ತಿತ್ತು. ಅಲ್ಲದೆ, ವಾರ್ಡ್‌ ಗೂ ಪ್ರವಾಸೋದ್ಯಮದ ಮನ್ನಣೆಯೂ ಲಭಿಸುತ್ತದೆ. ರಾ.ಹೆ.75ರ ಪಡೀಲ್‌ ಹೆದ್ದಾರಿಯ ಪಕ್ಕದಲ್ಲಿಯೇ ಈ ವಾರ್ಡ್‌ ಇರುವುದರಿಂದ ಪ್ರವಾಸಿಗರ ಆಕರ್ಷಣೆಗೆ ಇಲ್ಲಿ ಆದ್ಯತೆ ನೀಡಬಹುದಿತ್ತು. ಆದರೆ ಪ್ರವಾಸೋದ್ಯಮದ ಅಭಿವೃದ್ಧಿಗೆ ವಿಪುಲ ಅವಕಾಶಗಳಿದ್ದರೂ ಆ ದಿಕ್ಕಿನಲ್ಲಿ ಇನ್ನೂ ಸಂಬಂಧಪಟ್ಟವರು ಚಿಂತನೆ ನಡೆಸಿಲ್ಲ ಎನ್ನುವುದು ವಾಸ್ತವಾಂಶ.

Advertisement

ಬರುತ್ತಿಲ್ಲ ಬಸ್‌; ಬಗೆಹರಿಯುತ್ತಿಲ್ಲ ಸಮಸ್ಯೆ
ನೀರು, ರಸ್ತೆ, ವಿದ್ಯುತ್‌ ನೀಡಿದರೆ ಜನರ ಸಮಸ್ಯೆ ಈಡೇರಿದಂತೆ ಎಂದು ಭಾವಿಸುವುದು ತಪ್ಪು. ಯಾಕೆಂದರೆ ಸುಸಜ್ಜಿತ ರಸ್ತೆ ಇದ್ದರೂ ಅಲ್ಲಿಗೆ ಬಸ್‌ ಸೇವೆ ಇಲ್ಲದಿದ್ದರೆ ರಸ್ತೆ ಮಾಡಿಯೂ ಪ್ರಯೋಜನವೇನು? ಇಂತಹುದೇ ಪರಿಸ್ಥಿತಿ ಇಲ್ಲಿದೆ. ಮಂಗಳೂರು ಜಂಕ್ಷನ್‌ (ಕಂಕನಾಡಿ)ರೈಲು ನಿಲ್ದಾಣದ ಪಕ್ಕದಲ್ಲಿಯೇ ಈ ವಾರ್ಡ್‌ ಇದ್ದರೂ ಇದರ ಕೆಲವು ಭಾಗಗಳಿಗೆ ಬಸ್‌ ಸೌಕರ್ಯ ಇಲ್ಲ ಎನ್ನುವುದೇ ಇಲ್ಲಿನ ಬಹುದೊಡ್ಡ ಸಮಸ್ಯೆ. ಹೀಗಾಗಿ ಪಲ್ಲಕೆರೆ, ಕಲ್ಲಗುಡ್ಡೆ, ಕಲ್ಲಕಟ್ಟೆ, ಕಟ್ಟಪುಣಿ, ರಾಮ್‌ದಾಸ್‌ನಗರ, ಬಜಾಲ್‌ ಶಾಲೆ ಸಹಿತ ಹಲವು ಭಾಗದ ಜನರು ಬಸ್‌ಗಾಗಿ ಹಲವು ದೂರ ನಡೆದುಕೊಂಡೇ ಹೋಗಬೇಕಾಗಿದೆ. ಬಸ್‌ಗಾಗಿ ಇಲ್ಲಿನವರು ಕರ್ಮಾರ್‌ ಮಹಾದೇವಿ ಭಜನ ಮಂದಿರ ಅಥವಾ ಜಲ್ಲಿಗುಡ್ಡೆಯವರೆಗೆ ಹೋಗಬೇಕು.

ಪ್ರಮುಖ ಕಾಮಗಾರಿ
– ಫೈಸಲ್‌ನಗರ-ಬಜಾಲ್‌ ನಂತೂರು ಕಾಂಕ್ರೀಟ್‌ ರಸ್ತೆ
– ಬಜಾಲ್‌ ನಂತೂರುನಿಂದ ಕಲ್ಲಕಟ್ಟೆ ಕಾಂಕ್ರೀಟ್‌ ರಸ್ತೆೆ
– ಕಲ್ಲಕಟ್ಟೆಯಿಂದ ಜಲ್ಲಿಗುಡ್ಡೆ ಹಟ್ಟಿ ಬಳಿ ಕಾಂಕ್ರೀಟ್‌ ರಸ್ತೆ
– ಹಟ್ಟಿ ಬಳಿಯಿಂದ ಎನೆಲ್‌ಮಾರ್‌ ಕಾಂಕ್ರೀಟ್‌ ರಸ್ತೆ
– ಫೈಸೆಲ್‌ನಗರ ಶಾಂತಿನಗರ -ಉಲ್ಲಾಸ್‌ನಗರ ರಸ್ತೆ ಅಭಿವೃದ್ಧಿ
– ಪಾಂಡೇಲುಗುಡ್ಡೆ, ಕಟ್ಟಪುಣಿ ಒಳರಸ್ತೆ ಅಭಿವೃದ್ಧಿ
– ವಿವಿಧ ಕಡೆಗಳಲ್ಲಿ 70 ಲಕ್ಷ ರೂ. ವೆಚ್ಚದಲ್ಲಿ ನೀರಾವರಿಯ ತಡೆಗೋಡೆ
– ಕಲ್ಲಗುಡ್ಡೆವರೆಗೆ ಕಾಂಕ್ರೀಟ್‌-ಡಾಮರು ರಸ್ತೆ ಅಭಿವೃದ್ಧಿ

ಬಜಾಲ್‌ ವಾರ್ಡ್‌
ವಾರ್ಡ್‌ನ ಭೌಗೋಳಿಕ ವ್ಯಾಪ್ತಿ¤: ಪೈಸಲ್‌ನಗರ, ಕೊಪ್ಪಳ ಕಾನೆಕೆರೆ, ಕರ್ಮಾರ್‌ ಕ್ರಾಸ್‌, ಜಲ್ಲಿಗುಡ್ಡೆ, ಜಯನಗರ, ಆದರ್ಶನಗರ, ಶಾಂತಿನಗರ, ಬಜಾಲ್‌ ಪಡು³ ವ್ಯಾಪ್ತಿ , ನೇತ್ರಾವತಿ ತೀರ ಪ್ರದೇಶದಲ್ಲಿ ಬಜಾಲ್‌ ವಾರ್ಡ್‌ ವಿಸ್ತರಿಸಿದೆ. 2 ಸರಕಾರಿ ಶಾಲೆ, 1 ಆಂ.ಮಾ. ಶಾಲೆ, 2 ದೇವಸ್ಥಾನ, 5 ಮಸೀದಿಗಳಿವೆ.

ಅಭಿವೃದ್ಧಿಗೆ ಆದ್ಯತೆ
ಇಲ್ಲಿನ ಎಲ್ಲ ರಸ್ತೆಗಳು ಕಾಂಕ್ರೀಟ್‌ ಕಂಡಿದೆ. ರಸ್ತೆಗಳ ಅಭಿವೃದ್ಧಿಗೆ ಇಲ್ಲಿ ವಿಶೇಷ ಆದ್ಯತೆ ನೀಡಲಾಗಿದೆ. ಸಣ್ಣ ನೀರಾವರಿ ಇಲಾಖೆಯಿಂದ ತಡೆ ಗೋಡೆ ರಚನೆ ಸೇರಿದಂತೆ ಹಲವು ರೀತಿಯ ಮೂಲ ವ್ಯವಸ್ಥೆಗಳ ಸುಧಾರಣೆಗಾಗಿ 5 ವರ್ಷದಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಲಾಗಿದೆ. ವಾರ್ಡ್‌ನ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗಿದೆ.
-ಸುಮಯ್ಯಾ

ಸುದಿನ ನೋಟ
ವಾರ್ಡ್‌ ಸುತ್ತಾಡಿದಾಗ ರಸ್ತೆಗಳಿಗೆಲ್ಲ ಕಾಂಕ್ರೀಟ್‌ ಕಾಮಗಾರಿ ಕೈಗೊಂಡಿರುವುದು ಕಾಣುತ್ತದೆ. ಆದರೆ ಅವುಗಳು ಅಗಲಕಿರಿದಾಗಿದ್ದು, ಸರಾಗ ವಾಹನ ಸಂಚಾರಕ್ಕೆ ತೊಡಕಾಗಿವೆ. ಅಲ್ಲದೆ ಫುಟ್‌ಪಾತ್‌ ನಿರ್ಮಾಣ, ಪ್ರವಾಸೋದ್ಯಮಕ್ಕಿರುವ ಅವಕಾಶಗಳ ಕಡೆ ಗಮನ ಹರಿಸಿದಂತಿಲ್ಲ.

- ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next