Advertisement

45 ವರ್ಷವಾದರೂ ಡಾಂಬರು ಕಾಣದ ರಸ್ತೆ

02:44 PM Nov 26, 2022 | Team Udayavani |

ಮಾಗಡಿ: 45 ವರ್ಷಗಳಿಂದಲೂ ಡಾಂಬರೇ ಕಾಣದ ಜಲ್ಲಿ ರಸ್ತೆಯಲ್ಲಿಯೇ ನಿತ್ಯ ಸಂಚಾರ ಮಾಡುವಂತ ಪರಿಸ್ಥಿತಿ ಎದುರಿಸುತ್ತಿದ್ದು, ಈ ರಸ್ತೆ ಡಾಂಬರೀಕರಣ ಕಾಣುವುದು ಯಾವಾಗ? ಎಂದು ಆಕ್ರೋಶ ವ್ಯಕ್ತಪಡಿಸಿರುವ ತಿರುಮಲೆಯ ಹೊಸಬಡಾವಣೆ ನಿವಾಸಿಗಳು, ಶೀಘ್ರದಲ್ಲೇ ರಸ್ತೆ ಡಾಂಬರೀಕರಣಕ್ಕೆ ಆಡಳಿತವನ್ನು ಒತ್ತಾಯಿಸಿದ್ದಾರೆ.

Advertisement

ಮುಂದಿನ ವಿಧಾನ ಸಭಾ ಚುನಾವಣೆ ಮುನ್ನ ಡಾಂಬರು ಕಾಣಬಹುದು ಎಂಬ ಆಶಯವನ್ನು ಪುರನಾಗರಿಕರು ವ್ಯಕ್ತಪಡಿಸಿದ್ದಾರೆ. ಮಾಗಡಿ ಪಟ್ಟಣದ ತಿರುಮಲೆ ಹೊಸ ಬಡಾವಣೆ 1972ರಲ್ಲಿ ಪುರಸಭೆ ವತಿಯಿಂದ ಪ್ರಥಮವಾಗಿ ನಿರ್ಮಿಸಿ, ನಿವೇಶನ ಹಂಚಿಕೆ ಮಾಡಿದ್ದರು. ಇತಿಹಾಸ ಪ್ರಸಿದ್ಧ ಮಾಂಡವ್ಯ ಕ್ಷೇತ್ರದ ತಿರುಮಲೆ ರಂಗನಾಥಸ್ವಾಮಿ ಬಡಾವಣೆ ಮೂಲಭೂತ ಸೌಲಭ್ಯಗಳಿಲ್ಲದೆ ವಂಚಿನವಾಗಿದೆ. ಈ ಬಡಾವಣೆಯ ನಾಗರಿಕರು ತುಂಬ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಪುರಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಮಸ್ಯೆಗಳ ನಿವಾರಣೆಗೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಪುರ ನಾಗರಿಕರು ಆರೋಪಿಸಿದ್ದಾರೆ.

ಕಾಂಕ್ರೀಟ್‌ ರಸ್ತೆಯಿಲ್ಲ: ಈ ಬಡಾವಣೆ ನಿರ್ಮಾಣವಾಗಿ 45 ವರ್ಷಗಳು ಕಳೆದರೂ ಸಹ, ಇನ್ನೂ ಮುಖ್ಯರಸ್ತೆಯಾಗಲಿ, ಸಂಪರ್ಕ ರಸ್ತೆಗಳಾಗಲಿ ಕಾಂಕ್ರೀಟ್‌ ರಸ್ತೆ ಕಂಡಿಲ್ಲ. ಕಳೆದ 3 ವರ್ಷಗಳ ಹಿಂದೆ ಮುಖ್ಯರಸ್ತೆ ಡಾಂಬರೀಕರಣಕ್ಕೆ ಜಲ್ಲಿ ತಂದು ಸುರಿದು, ಕಾಮಗಾರಿ ಕೈಗೊಳ್ಳದೆ ಕೈಬಿಟ್ಟು ಹೋದವರು. ಆದರೂ, ಕಾಮಗಾರಿ ಬಿಲ್‌ ಪಾವತಿಯಾಗಿದ್ದರೂ, ಉಳಿದ ಸಂಪರ್ಕ ರಸ್ತೆಗಳು ಸಹ ಡಾಂಬರೀಕರಣಗೊಂಡಿಲ್ಲ. ಜಲ್ಲಿಕಲ್ಲು ಮಣ್ಣಿನ ರಸ್ತೆಯಲ್ಲಿಯೇ ಸಂಚಾರ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಬಹುತೇಕ ಕಡೆ ಚರಂಡಿಗಳೇ ಇಲ್ಲ: ಇಷ್ಟು ವರ್ಷಗಳು ಕಳೆದರೂ ಸಹ ಇನ್ನೂ ಎಷ್ಟೋ ಕಡೆ ಚರಂಡಿಗಳು ನಿರ್ಮಿಸಿಲ್ಲ. ಮಳೆ ನೀರು ರಸ್ತೆ ಮೇಲೆ ಹರಿದು ಹೋಗುವಂತ ಪರಿಸ್ಥಿತಿಯಿದೆ. ಕೆಲವು ಚರಂಡಿ ಬದಿಗಳಲ್ಲಿ ಗಿಡಗಂಟಿಗಳು ಎದೆಯತ್ತರಕ್ಕೆ ಬೆಳೆದಿದ್ದು, ವಿಷ ಜಂತುಗಳ ಆವಾಸ ಸ್ಥಾನವಾಗಿದೆ. ದುರಸ್ತಿ ಕಾಣದ ಇಂಥ ರಸ್ತೆ, ಚರಂಡಿಯ ದುರ್ವಾಸನೆಯ ನಡವೆಯೇ ಮಕ್ಕಳು ಶಾಲೆ, ಕಾಲೇಜಿಗೆ ಹೋಗುವಂತ ದುಸ್ಥಿತಿ ನಿರ್ಮಾಣವಾಗಿದೆ.

ಜಾಣ ಕುರುಡು ಪ್ರದರ್ಶನ: ಬಹುತೇಕ ಕಡೆ ಗಿಡಗಂಟಿಗಳು ಬೆಳೆದುನಿಂತ್ತಿದ್ದರೂ, ಸ್ವತ್ಛಗೊಳಿಸುವ ಗೋಜಿಗೆ ಹೋಗದೆ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ. ಇದರಿಂದ ವಿಷಜಂತುಗಳು ಮನೆಯೊಳಗೆ ಪ್ರವೇಶಿಸುತ್ತವೆ ಎಂಬ ಭಯದಲ್ಲೇ ಮನೆ ಬಾಗಿಲು ಮುಚ್ಚಬೇಕಾದ ಸಮಸ್ಯೆಯನ್ನು ಜನರು ಎದುರಿಸುತ್ತಿದ್ದಾರೆ. ಒಂದೆಡೆ ಚರಂಡಿ ಸ್ವತ್ಛಗೊಳಿಸುತ್ತಿಲ್ಲ, ಮತ್ತೂಂದೆಡೆ ರಸ್ತೆಗಳು ಡಾಂಬರ್‌ ಕಂಡಿಲ್ಲ, ಜೊತೆಗೆ ಬೀದಿದೀಪಗಳು ಉರಿಯುತ್ತಿಲ್ಲ. ರಾತ್ರಿ ವೇಳೆಯಂತು ಈ ರಸ್ತೆಗಳಲ್ಲಿ ಸಂಚಾರ ಅಸಾಧ್ಯವಾಗಿದೆ ಎಂಬ ದೂರುಗಳನ್ನು ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ, ಅಧಿಕಾರಿಗಳು ಮಾತ್ರ ತಮಗೂ ಇದಕ್ಕೂ ಸಂಬಂಧವಿಲ್ಲ ಎಂಬಂತೆ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ.

Advertisement

ನಿತ್ಯ ಈ ರಸ್ತೆಯಲ್ಲಿ ಪ್ರಸಿದ್ಧ ರಂಗನಾಥಸ್ವಾಮಿ ದರ್ಶನಕ್ಕೆ ಭಕ್ತರ ದಂಡೇ ಆಗಮಿಸುತ್ತದೆ. ರಸ್ತೆ ಬದಿಯಲ್ಲಿ ಮುಳ್ಳಿನ ಬೇಲಿ ಬೆಳೆದು ನಿಂತಿದ್ದು, ನಗರದಿಂದ ಬರುವ ಜನರು ಈ ರಸ್ತೆ ಬದಿ ಗಮನಿಸಿ, ಕಾಡಿನಂತೆ ಬಾಸವಾಗುತ್ತಿದೆ ಎಂಬ ನಗೆಪಾಟಿಲಿಗೆ ಪುರಸಭೆ ಒಳಗಾಗಿದೆ. ದೂರದೃಷ್ಟಿಯಿಂದ ನಿರ್ಮಾಣವಾಗಿರುವ ಈ ಬಡಾವಣೆಯ ಸ್ಥಿತಿಯೇ ಹೀಗಾದರೆ, ಉಳಿದ ಬಡಾವಣೆಗಳ ಸ್ಥಿತಿಯೂ ಹೊರತಾಗಿಲ್ಲ. ಅದರಲ್ಲೂ ಖಾಲಿ ನಿವೇಶನಗಳಂತೂ ನಿಜಕ್ಕೂ ವಿಷಜಂತುಗಳ ಆವಾಸ ಸ್ಥಾನವಾಗಿದೆ.

ಮೂಲ ಸೌಲಭ್ಯ ಕಲ್ಪಿಸದಿದ್ದರೆ ಪ್ರತಿಭಟನೆ : ಕಾಲಕಾಲಕ್ಕೆ ಮನೆ, ನೀರು, ಒಳಚರಂಡಿ ಸೇರಿದಂತೆ ಇತರೆ ಕಂದಾಯವನ್ನು ಪುರಸಭೆಗೆ ಜಮಾ ಮಾಡಿಕೊಂಡು ಬರುತ್ತಿದ್ದೇವೆ. ಆದರೂ, ಪುರಸಭೆ ತಮಗೆ ಯಾವುದೇ ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಕಲ್ಪಿಸುತ್ತಿಲ್ಲ. ಹೀಗೆ ಮುಂದುವರಿದರೆ, ಬಡಾವಣೆ ನಾಗರಿಕರಲ್ಲೆರೂ ಸೇರಿ ಪುರಸಭೆ ಮುಂದೆ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದ ನಾಗರಿಕರಾದ ರಮೇಶ್‌, ಶಿವರಾಜು, ರಾಮಣ್ಣ, ನವೀನ್‌ ಎಚ್ಚರಿಕೆ ನೀಡಿದ್ದಾರೆ.

ಈಗಾಗಲೇ ರಸ್ತೆ ಡಾಂಬರೀಕರಣಕ್ಕೆ 40 ಲಕ್ಷ ರೂ. ಹಣ ಮೀಸಲಿಡಲಾಗಿದೆ. ಮುಖ್ಯಾಧಿಕಾರಿಗಳು ವರ್ಗಾವಣೆಯಾಗಿರುವುದರಿಂದ ವಿಳಂಬವಾಗಿದೆ. ನೂತನ ಮುಖ್ಯಾಧಿಕಾರಿಗಳು ಬರಲಿದ್ದಾರೆ. ಅವರು ಅಧಿಕಾರ ವಹಿಸಿಕೊಂಡ ಕೂಡಲೇ  ಸಭೆ ಕರೆದು, ರಸ್ತೆ ಡಾಂಬರೀಕರಣಗೊಳಿಸಲು ಅಗತ್ಯ ಕ್ರಮ ವಹಿಸಲಾಗುವುದು. – ಎ.ಮಂಜುನಾಥ್‌, ಶಾಸಕ, ಮಾಗಡಿ ವಿಧಾನಸಭಾ ಕ್ಷೇತ್ರ

ರಂಗನಾಥಸ್ವಾಮಿ ಬಡಾವಣೆಗೆ ಡಾಂಬರೀಕರಣಕ್ಕೆ ಅನುದಾನ ಮಂಜುರಾಗಿದೆ. ಕೆಲವು ತಾಂತ್ರಿಕತೆ ಸಮಸ್ಯೆಯಿಂದ ಕಾಮಗಾರಿ ಸ್ಥಗಿತಗೊಂಡಿದೆ. ಈ ಕುರಿತು ಸಾಮಾನ್ಯ ಸಭೆಯಲ್ಲಿ ಚರ್ಚಿಸಿ, ಸಮಸ್ಯೆ ಬಗೆಹರಿಸಲಾಗುವುದು. ಖಾಲಿ ನಿವೇಶನದಲ್ಲಿ ಗಿಡಗಂಟಿಗಳು ಬೆಳೆದು ನಿಂತಿದ್ದು, ಪುರಸಭೆ ವತಿಯಿಂದ ನಿವೇಶನ ಮಾಲಿಕರಿಗೆ ನೋಟಿಸ್‌ ಜಾರಿ ಮಾಡಿ, ಗಿಡಗಂಟಿ ತೆರವಿಗೆ ಕ್ರಮ ಕೈಗೊಳ್ಳಲಾಗುವುದು. – ವಿಜಯ ರೂಪೇಶ್‌, ಪುರಸಭಾ ಅಧ್ಯಕ್ಷೆ, ಮಾಗಡಿ

– ತಿರುಮಲೆ ಶ್ರೀನಿವಾಸ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next