ಜಗಳೂರು: ಗ್ರಾಮೀಣ ಮಟ್ಟದಿಂದ ಹೋರಾಟವನ್ನು ತೀವ್ರಗೊಳಿಸಲು ತಾಲೂಕಿನ ಪ್ರತಿಯೊಂದು ಗ್ರಾಮಗಳಲ್ಲಿ ಗ್ರಾಮ ಘಟಕ ಸ್ಥಾಪಿಸಲಾಗುತ್ತಿದ್ದು, ಈ ಹೋರಾಟಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಭದ್ರಾ ಮೇಲ್ದಾಂಡೆ ನೀರಾವರಿ ಹೋರಾಟ ಸಮಿತಿ ಸದಸ್ಯ ನಾಗಲಿಂಗಪ್ಪ ಹೇಳಿದರು.
ತಾಲೂಕಿನ ಲಿಂಗಣ್ಣನ ಹಳ್ಳಿಯಲ್ಲಿ ಭದ್ರಾ ಮೇಲ್ದಂಡೆ ನೀರಾವರಿ ಹೋರಾಟ ಸಮಿತಿವತಿಯಿಂದ ಭಾನುವಾರ ಹಮ್ಮಿಕೊಳ್ಳಾಗಿದ್ದ ಜನ ಜಾಗೃತಿ ಸಭೆ ಮತ್ತು ಗ್ರಾಮ ಘಟಕಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮತ ಕೇಳಲು ಬರುವಂತ ಅಭ್ಯರ್ಥಿಗಳಿಗೆ ನೀರು ಕೊಡಿ ಮತ ಪಡೆಯಿರಿ ಎಂದು ಹೇಳಬೇಕು. ಚುನಾವಣೆಯ ಸಂದರ್ಭದಲ್ಲಿ ಮಾತ್ರ ಬೇಡಿಕೆಗಳನ್ನುಈಡೇರಿಸುತ್ತೇವೆ ಎಂಬುದಾಗಿ ಆಶ್ವಾಸನೆ ನೀಡಿ ಗೆದ್ದ ನಂತರ ನಮ್ಮ ಕಡೆ ತಿರುಗಿ ನೋಡುವುದಿಲ್ಲ ಎಂದು ಬೇಸರವ್ಯಕ್ತಪಡಿಸಿದರು.
ಹಲವಾರು ದಿನಗಳ ಹೋರಾಟದ ಫಲವಾಗಿ ಭದ್ರಾ ನೀರಾವರಿ ಯೋಜನೆ ಜಾರಿಯಾಗಿದೆ. ಜಗಳೂರು ಶಾಖಾ ಕಾಲುವೆಗೆ ಕಾತ್ರಳ್ ಕ್ರಾಸ್ ಮೂಲಕ ಬಂದರೆ ನೀರು ಬರುವುದಿಲ್ಲ. ಬರೀ ಕಾಲುವೆ ಮಾತ್ರ ನಿರ್ಮಾಣವಾಗುತ್ತದೆ. ಆದ್ದರಿಂದ ನಮಗೆ ಸಂಗೇನಹಳ್ಳಿಯ ಮಾರ್ಗ ಮೂಲಕ ಶಾಖಾ ಕಾಲುವೆಯಾದರೆ ಮಾತ್ರ ನಮಗೆ ನೀರು ಬರಲಿದೆ ಎಂದರು.
22 ಕೆರೆ ಹೋರಾಟ ಸಮಿತಿ ಅಧ್ಯಕ್ಷರಿದ್ದರು ಸಹ ನಮ್ಮ ತಾಲೂಕಿನ 3 ಕೆರೆಗಳಿಗೆ ನೀರು ಬರಲಿಲ್ಲ. ಹೆಸರಿಗೆ ಮಾತ್ರ ಯೋಜನೆಯ ಮೂರು ಗ್ರಾಮಗಳನ್ನು ಸೇರಿಸಲಾಗಿದೆ. ಆದರೆ, ನೀರು ಮಾತ್ರ ಬರಲಿಲ್ಲ. ಆದ್ದರಿಂದ 53 ಕೆರೆಗೆ ನೀರು ತುಂಬಿಸುವ ಯೋಜನೆ ಮಂಜೂರಾಗಿದ್ದು, ನಮ್ಮ ತಾಲೂಕಿಗೆ ಪ್ರತ್ಯೇಕ ಜಾಕ್ ವೆಲ್ ವ್ಯವಸ್ಥೆ ಮಾಡಬೇಕು. ಆಗ ಮಾತ್ರ ನಮ್ಮ ಕೆರೆಗಳಿಗೆ ನೀರು ಬರಲು ಸಾಧ್ಯವಾಗಲಿದೆ ಎಂದು ಹೇಳಿದರು.
ಹೋರಾಟ ಸಮಿತಿ ಮುಖಂಡ ಆರ್. ಓಬಳೇಶ್ ಮಾತನಾಡಿ, ಯೋಜನೆ ಜಾರಿಯಾದಾಗ 36 ಗ್ರಾಮಗಳು ಮತ್ತು 8 ಕೆರೆಗಳಿಗೆ ನೀರು ತುಂಬಿಸಲಾಗುವುದು ಎಂಬ ಮಾಹಿತಿ ಇತ್ತು. ಈಗ 23 ಗ್ರಾಮಗಳಿಗೆ ಮತ್ತು 5 ಕೆರೆಗಳಿಗೆ ನೀರು ತುಂಬಿಸಲಾಗುವುದು ಎಂದು ಇಲಾಖೆ ಅಧಿಕಾರಿಗಳು
ಹೇಳುತ್ತಾರೆ. ನಾವು ಸುಮ್ಮನಿದ್ದರೆ ನಮ್ಮ ಪಾಲಿ ನೀರು ಸಹ ದೊರೆಯದಂತಾಗುತ್ತಾದೆ ಎಂದರು.
ಸಮಿತಿ ಮುಖಂಡ ಲಿಂಗರಾಜು, ಎಸ್ಎಫ್ಐ ಜಿಲ್ಲಾಧ್ಯಕ್ಷ ಮಹಾಲಿಂಗಪ್ಪ, ಉಪಾಧ್ಯಕ್ಷ ಆನಂತ್, ಲಿಂಗಣ್ಣನ ಹಳ್ಳಿ ಕೃಷ್ಣ ಮೂರ್ತಿ, ಮಂಜಣ್ಣ ಇತರರು ಇದದರು.