Advertisement

ಶಿರಸಿಯಲ್ಲಿ ಪ್ರಥಮ ಪರಿಸರ ವಿವಿ ಸ್ಥಾಪನೆ: ಸಿಎಂ ಬೊಮ್ಮಾಯಿ

11:20 PM Jan 15, 2023 | Team Udayavani |

ಶಿರಸಿ: ಹವಾಮಾನ ವೈಪರೀತ್ಯ, ಜಾಗತಿಕ ಪರಿಸರ ಸೂಕ್ಷ್ಮತೆಯ ಕಾರಣಗಳಿಂದ ಪರಿಸರ ಸಮಗ್ರ ಅಧ್ಯಯನಕ್ಕಾಗಿ ಸರಕಾರ ಇದೇ ಪ್ರಥಮ ಬಾರಿಗೆ ಪರಿಸರ ವಿಶ್ವ ವಿದ್ಯಾಲಯದ ಸ್ಥಾಪನೆಗೆ ತೀರ್ಮಾನ ಕೈಗೊಂಡಿದ್ದು, ಶಿರಸಿಯಲ್ಲಿ ಇದನ್ನು ಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ರವಿವಾರ ಉತ್ತರ ಕನ್ನಡ ಜಿಲ್ಲೆ ಶಿರಸಿಯಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದ ಅನೇಕ ರಾಜ್ಯದಲ್ಲಿ ಇಲ್ಲದ ಪರಿಸರ ವಿಶ್ವ ವಿದ್ಯಾಲಯ ಇದಾಗಲಿದ್ದು, ನೂತನ ವಿವಿಯನ್ನು ಶಿರಸಿಯ ಅರಣ್ಯ, ತೋಟಗಾರಿಕಾ ವಿದ್ಯಾಲಯಗಳ ಸಹಕಾರ ಪಡೆದು ಆರಂಭಿಸಲಾಗುತ್ತದೆ. ಸಮಗ್ರವಾಗಿ ಪರಿಸರ ಅಧ್ಯಯನ ಮಾಡುವ ವಿಶ್ವವಿದ್ಯಾನಿಲಯ ಇದಾಗಲಿದೆ. ಇಲ್ಲಿ ಕಲಾ, ವಿಜ್ಞಾನ, ವಾಣಿಜ್ಯ, ಕಂಪ್ಯೂಟರ್‌ ಪದವಿಗಳ ಜತೆಗೆ ಪರಿಸರ, ವನ್ಯಜೀವಿಗಳಿಗೆ ಸಂಬಂಧಿಸಿ ಅಧ್ಯಯನಕ್ಕೆ ಅವಕಾಶ ಮಾಡಿಕೊಡಲಾಗುವುದು.

ಸಾಮಾನ್ಯ ವಿಷಯ ಅಭ್ಯಾಸಕ್ಕೂ ಅನುಕೂಲ ಮಾಡಿಕೊಡುವ ಉದ್ದೇಶವಿದೆ ಎಂದರು.
ಹವಾಮಾನ ವೈಪರೀತ್ಯಗಳ ಅಧ್ಯಯನ ಅಗತ್ಯವಿದೆ. ಹಾಗಾಗಿ ಈ ವಿವಿ ಮಹತ್ವ ಪಡೆದುಕೊಳ್ಳಲಿದೆ. ಈ ಹೊಸ ವಿವಿಯಿಂದ ಜನರ ಆದಾಯ ಹೆಚ್ಚಳಕ್ಕೂ ಸಹಾಯಕವಾಗಿರಬೇಕು ಎಂಬ ಉದ್ದೇಶವೂ ಇದೆ. ಅದರ ರೂಪುರೇಷೆ ಮಾಡಿ ಪ್ರಾರಂಭಿಕ ಹಣ ನೀಡಲಾಗುವುದು. ಶೀಘ್ರದಲ್ಲೇ ವಿವಿ ಸ್ಥಾಪನಗೆ ಅಡಿಗಲ್ಲು ಹಾಕಲಾಗುವುದು. ಬರುವ ಬಜೆಟ್‌ನಲ್ಲಿ ಅನುದಾನ ಮೀಸಲಿಡಲಾಗುತ್ತದೆ ಎಂದರು.

ಒಕ್ಕಲೆಬ್ಬಿಸುವುದಿಲ್ಲ
ಅರಣ್ಯ ಅತಿಕ್ರಮಣ ಸಮಸ್ಯೆ ಕೇವಲ ಉತ್ತರ ಕನ್ನಡ ಜಿಲ್ಲೆ, ರಾಜ್ಯದ ಸಮಸ್ಯೆಯಲ್ಲ. ಇದು ಎಷ್ಟೋ ವರ್ಷಗಳಿಂದ ಇದೆ. ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಲಾಗುವುದು. ಯಾರನ್ನೂ ಒಕ್ಕಲೆಬ್ಬಿಸುವುದಿಲ್ಲ.

ಅರಣ್ಯಾಧಿಕಾರಿಗಳು ಕೂಡ ಈ ವಿಚಾರದಲ್ಲಿ ನನ್ನ ಗಮನಕ್ಕೆ ತರದೆ ಏನೂ ಮಾಡಬಾರದು. ಅರಣ್ಯ ಹಕ್ಕು ಕೊಡುವ ಕಾನೂನಿನಲ್ಲಿ ಹತ್ತಾರು ಸಮಸ್ಯೆಯಿದೆ. ಸುಪ್ರೀಂ ಕೋರ್ಟ್‌ ಕೂಡ ವರದಿ ಕೇಳಿದೆ. ಒಂದೇ ತಲೆಮಾರಿನ ಮಾಹಿತಿ ಪಡೆದು ಅರಣ್ಯ ವಾಸಿಗಳೆಂದು ನಿರ್ಣಯಿಸಿ ಹಕ್ಕುಪತ್ರ ವಿತರಿಸುವಂತೆ ಆಗಬೇಕು ಎಂಬ ಮನವಿ ನೀಡಿದ್ದೇವೆ. ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‌ಗೆ ವಿಷಯ ನೀಡಲಿದೆ. ಕಾನೂನು ತಜ್ಞರ ಸಲಹೆ ಪಡೆದು ಇನ್ನೊಮ್ಮೆ ಅಫಿಡವಿಟ್‌ ಸಲ್ಲಿಸಲೂ ಸರಕಾರ ಸಿದ್ಧವಿದೆ ಎಂದರು.

Advertisement

ಶಿರಸಿ ಭಾಗ ಅರಣ್ಯ ಪ್ರದೇಶದಿಂದ ಕೂಡಿದೆ. ಅರಣ್ಯ ರಕ್ಷಣೆ, ಅಭಿವೃದ್ಧಿ ನಾಗರಿಕತೆ ಒಟ್ಟಿಗೆ ಹೋಗಬೇಕು. ಹಾಗಾಗಿ ಹಲವು ಸಂದರ್ಭಗಳಲ್ಲಿ ಸವಾಲುಗಳು ಎದುರಾಗುತ್ತದೆ. ಅದನ್ನು ಅರ್ಥೈಸಿ ಪರಿಹಾರ ನೀಡುತ್ತಾ ಬರಲಾಗಿದೆ. ಈ ಭಾಗಗಳೆಲ್ಲ ದಟ್ಟ ಅರಣ್ಯ ಪ್ರದೇಶ ಪಶ್ಚಿಮ ಘಟ್ಟದಿಂದ ಕೂಡಿದೆ. ಜೀವ ವೈವಿಧ್ಯ ಸಂಕುಲದಿಂದ ಕೂಡಿದೆ. ಇನ್ನಷ್ಟು ಯೋಜನಾ ಬದ್ಧ ಅಭಿವೃದ್ಧಿ ಆಗಬೇಕಿದೆ ಎಂದರು.

ಪ್ರತ್ಯೇಕ ಜಿಲ್ಲೆ ಬಗ್ಗೆ ಶೀಘ್ರ ತೀರ್ಮಾನ
ಸಚಿವ ಸಂಪುಟ ವಿಸ್ತರಣೆಗೆ ಆಯಾ ಕಾಲದಲ್ಲಿ ತೀರ್ಮಾನ ಕೈಗೊಳ್ಳುತ್ತೇವೆ. ಆದಷ್ಟು ಬೇಗ ಖಾಲಿ ಇರುವ ಅಕಾಡೆಮಿಗಳಿಗೆ ನೇಮಕಾತಿ ಮಾಡಲಾಗುತ್ತದೆ. ಶಿರಸಿ ಪ್ರತ್ಯೇಕ ಜಿಲ್ಲೆ ಕುರಿತು ಮನವಿ ಬಂದಿದೆ. ಮನವರಿಕೆ ಕೂಡ ಮಾಡಿದ್ದಾರೆ. ಇಡೀ ರಾಜ್ಯದಲ್ಲಿ ಹಲವು ಬೇಡಿಕೆ ಇದೆ. ಸಚಿವ ಸಂಪುಟದಲ್ಲಿ ಚರ್ಚೆ ಮಾಡಬೇಕಿದ್ದು, ಸಾಧಕ-ಬಾಧಕ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಅತಿವೃಷ್ಟಿಯಿಂದ ಭೂ ಕುಸಿತವಾಗಿರುವ ಯಲ್ಲಾಪುರ ತಾಲೂಕಿನ ಕಳಚೆಯ ಸಮಸ್ಯೆ ಸರಿಪಡಿಸಲು ವಿಶೇಷ ಯೋಜನೆ ರೂಪಿಸಲಾಗಿದೆ. ಪುನರ್‌ ವಸತಿ ಬಗ್ಗೆ ಚರ್ಚೆ ನಡೆದಿದೆ. ಸಮಗ್ರ ಪುನರ್‌ ವಸತಿ ಬಗ್ಗೆ ಹಣ ನೀಡಲಾಗಿದೆ. ಹೆಚ್ಚಿನ ಅನುದಾನ ನೀಡಲಾಗಿತ್ತದೆ. ಅರಣ್ಯ ರಕ್ಷಣೆ, ಅಭಿವೃದ್ಧಿ ನಾಗರಿಕತೆ ಒಟ್ಟಿಗೆ ಹೋಗಬೇಕು. ಹಾಗಾಗಿ ಹಲವು ಸಂದರ್ಭಗಳಲ್ಲಿ ಸವಾಲುಗಳು ಎದುರಾಗುತ್ತದೆ. ಅದನ್ನು ಅರ್ಥೈಸಿಕೊಂಡು ಪರಿಹಾರ ನೀಡುತ್ತಾ ಬರಲಾಗಿದೆ ಎಂದರು.

ಕವಿವಿಯಲ್ಲಿ ರಾಮಕೃಷ್ಣ ಹೆಗಡೆ ಅಧ್ಯಯನ ಪೀಠ ಸ್ಥಾಪನೆಗೆ ಕ್ರಮ
ರಾಮಕೃಷ್ಣ ಹೆಗಡೆ ಅಧ್ಯಯನ ಪೀಠವನ್ನು ಕವಿವಿಯಲ್ಲಿ ಆರಂಭಿಸುವ ಕುರಿತು ಚಿಂತಿಸಲಾಗುವುದು. ಪಂಚಮಸಾಲಿ ಸಂಗತಿ ಚರ್ಚೆ ಬೇಡ, ನ್ಯಾಯಾಲಯದಲ್ಲಿದೆ. ಕಳಸಾ ಬಂಡೂರಿ ವಿಚಾರವಾಗಿ ಪ್ರಾಥಮಿಕ ವಿಸ್ತೃತ ವರದಿ ಒಪ್ಪಿಗೆ ಸುಪ್ರೀಂ ಕೋರ್ಟ್‌ ಆದೇಶಕ್ಕೆ ಬದ್ಧವಾಗಿ ಟ್ರಿಬ್ಯುನಲ್‌ ಒಪ್ಪಿಗೆ ಸಿಕ್ಕಿದೆ. ಆ ಕಾಮಗಾರಿ ಮಾಡುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕಾಗೇರಿ ಎಂದರೆ ಕರ್ನಾಟಕದ ಅಜಾತಶತ್ರು. ಅವರಿಗೆ ಪûಾತೀತ ಅಭಿನಂದನೆ ಸಲ್ಲಿಸಿರುವುದು ಖುಷಿಯಾಗಿದೆ. ಸಭಾಧ್ಯಕ್ಷರು ಬದ್ಧತೆಯಿಂದ ಕಾರ್ಯನಿರ್ವಹಿಸುವ ಪ್ರಾಮಾಣಿಕ ವ್ಯಕ್ತಿ .
– ಬಸವರಾಜ ಬೊಮ್ಮಾಯಿ, ಸಿಎಂ

ಗಂಗಾಮತಸ್ಥರಿಗೆ ಶೀಘ್ರವೇ ಮೀಸಲು: ಸಿಎಂ
ಹಾವೇರಿ: ಗಂಗಾಮತ ಸಮಾಜಕ್ಕೆ ಪರಿಶಿಷ್ಟ ವರ್ಗದ ಮೀಸಲಾತಿ ನೀಡುವ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಸಮಾಜದ ಬೇಡಿಕೆ ಈಡೇರಿಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ತಾಲೂಕಿನ ನರಸೀಪುರದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದಲ್ಲಿ ನಡೆದ 5ನೇ ಶರಣ ಸಂಸ್ಕೃತಿ ಉತ್ಸವ ಹಾಗೂ 903ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪರಿಶಿಷ್ಟ ವರ್ಗದ ಮೀಸಲಾತಿಯಡಿ ಪರಿಗಣಿಸಲು ಈಗಾಗಲೇ ಪ್ರಕ್ರಿಯೆಗಳು ಅಂತಿಮ ಹಂತದಲ್ಲಿವೆ. ಪೂರ್ಣ ಪ್ರಕ್ರಿಯೆ ಮಾಡಲು ಪ್ರಯತ್ನಿಸಲಾಗುತ್ತಿದ್ದು, ಸಂಬಂಧಿಸಿದ ಕೇಂದ್ರ ಸಚಿವರನ್ನು ಭೇಟಿ ಮಾಡಿ ಚರ್ಚಿಸಲಾಗಿದೆ.

ಕೇಂದ್ರದ ಕಾನೂನು ಇಲಾಖೆ ಕೆಲವು ಸ್ಪಷ್ಟೀಕರಣ ಕೇಳಿದ್ದು, ರಾಜ್ಯದಿಂದ ಒದಗಿಸಲಾಗಿದೆ. ಎಲ್ಲ ಪ್ರಕ್ರಿಯೆಗಳು ಅಂತಿಮ ಹಂತದಲ್ಲಿವೆ ಎಂದರು.

ಕಟುಸತ್ಯ ನುಡಿಯುವ ಶರಣ
ಅಂಬಿಗರ ಚೌಡಯ್ಯ ಎಂದರೆ ಕಟುಸತ್ಯ ನುಡಿಯುವ ಶರಣ. ಕಲ್ಯಾಣದಲ್ಲಿ ವೈಚಾರಿಕ ಕ್ರಾಂತಿ ಆಗುತ್ತದೆ. ಆಗ ವಚನಗಳನ್ನು ರಕ್ಷಣೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಚೌಡಯ್ಯನವರು ಭವಿಷ್ಯ ನುಡಿದಿದ್ದರು. ಹೀಗಾಗಿ, ಬಸವಣ್ಣನವರು ಅಂಬಿಗರ ಚೌಡಯ್ಯನವರನ್ನು ನಿಜಶರಣ ಎಂದು ಕರೆದಿದ್ದರು. 12ನೇ ಶತಮಾನದಲ್ಲಿ ವಚನ ಸಾಹಿತ್ಯವನ್ನು ಸುಡುವ ಪ್ರಯತ್ನವನ್ನು ದುಷ್ಟಶಕ್ತಿಗಳು ಮಾಡಿದಾಗ ಚೌಡಯ್ಯನವರು ಅವುಗಳನ್ನು ದೋಣಿಯಲ್ಲಿಟ್ಟುಕೊಂಡು ವಚನಗಳನ್ನು ದಡಕ್ಕೆ ಸೇರಿಸಿದರು. ಹೀಗಾಗಿ, ವಚನಗಳು ಇಂದಿಗೂ ಜೀವಂತವಾಗಿವೆ. ಇದಕ್ಕೆ ನಿಜಶರಣ ಅಂಬಿಗರ ಚೌಡಯ್ಯನವರು ಕಾರಣರಾಗಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next