Advertisement

Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!

12:00 AM May 01, 2024 | Shreeram Nayak |

ಶಿವಮೊಗ್ಗ: 2009ರಿಂದಲೂ ಮಾಜಿ ಸಿಎಂ ಕುಟುಂಬಗಳ ನಡುವೆ ಹಣಾಹಣಿಗೆ ಸಾಕ್ಷಿಯಾಗಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರ ಈ ಬಾರಿ ಮತ್ತಷ್ಟು ರೋಚಕತೆಗೆ ಸಾಕ್ಷಿಯಾಗಿದೆ. ಬಿಜೆಪಿ ಶಿಸ್ತಿನ ಸಿಪಾಯಿ ಕೆ.ಎಸ್‌.ಈಶ್ವರಪ್ಪ ರಾಜ್ಯ ನಾಯಕರ ವಿರುದ್ಧ ತೊಡೆತಟ್ಟುವ ಮೂಲಕ ರಾಷ್ಟ್ರಮಟ್ಟದ ಗಮನ ಸೆಳೆದಿದ್ದಾರೆ.

Advertisement

2009ರಿಂದ ಬಿಜೆಪಿ ಹಿಡಿತದಲ್ಲಿರುವ ಕ್ಷೇತ್ರದ ಮರುವಶಕ್ಕೆ ಕಾಂಗ್ರೆಸ್‌ ಪಣ ತೊಟ್ಟಿದೆ. ಮಾಜಿ ಸಿಎಂ ಬಂಗಾರಪ್ಪ ಅವರನ್ನು ಸೋಲಿಸುವ ಮೂಲಕ ಲೋಕಸಭೆ ಪ್ರವೇಶಿಸಿದ್ದ ಹಾಲಿ ಸಂಸದ, ಬಿ.ವೈ.ರಾಘವೇಂದ್ರ ನಾಲ್ಕನೇ ಬಾರಿ ಸ್ಪರ್ಧೆ ಮಾಡುತ್ತಿದ್ದಾರೆ. ಬಿ.ಎಸ್‌.ಯಡಿಯೂರಪ್ಪ ಸಿಎಂ ಆಗಿದ್ದ ವೇಳೆ ಕ್ಷೇತ್ರಕ್ಕೆ ಸಾವಿರಾರು ಕೋಟಿ ರೂ. ಮೊತ್ತದ ಯೋಜನೆಗಳನ್ನು ತಂದ ಕೀರ್ತಿ ಅವರಿಗಿದೆ. ಅಭಿವೃದ್ಧಿ ಕಾರ್ಯಗಳನ್ನೇ ಶ್ರೀರಕ್ಷೆಯಾಗಿಸಿಕೊಂಡು ನಾಲ್ಕನೇ ಬಾರಿ ಗೆಲುವಿನ ಗುರಿ ಇಟ್ಟುಕೊಂಡಿದ್ದಾರೆ. ಇತ್ತ ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್‌ ಮೊದಲ ಬಾರಿ ಕಾಂಗ್ರೆಸ್‌ ಚಿಹ್ನೆ ಅಡಿ ಸ್ಪರ್ಧೆ ಮಾಡುತ್ತಿದ್ದಾರೆ. ಎರಡನೇ ಬಾರಿ ಯಡಿಯೂರಪ್ಪ ಕುಟುಂಬದ ವಿರುದ್ಧ ಸೆಣಸುತ್ತಿದ್ದಾರೆ. 2009ರಲ್ಲಿ ಬಂಗಾರಪ್ಪ ಸೋಲಿನ ಸೇಡನ್ನು ತೀರಿಸಿಕೊಳ್ಳುವ ತವಕ ಕೂಡ ಅವರಲ್ಲಿದೆ.

ನಿದ್ದೆಗೆಡಿಸಿದ ಈಶ್ವರಪ್ಪ: ಇವರ ನಡುವೆ ಪಕ್ಷ ತಾಯಿ ಇದ್ದಂತೆ ಎನ್ನುತ್ತಿದ್ದ ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಮಗನಿಗೆ ಹಾವೇರಿ ಕ್ಷೇತ್ರದ ಟಿಕೆಟ್‌ ನಿರಾಕರಿಸಿದ್ದರಿಂದ ಮುನಿಸಿಕೊಂಡು ರಾಜ್ಯದಲ್ಲಿ ಪಕ್ಷವನ್ನು ಶುದ್ಧೀಕರಣ ಮಾಡುತ್ತೇನೆ ಎಂಬ ಹಠದೊಂದಿಗೆ ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ. ಈ ಮೂಲಕ ಕಣದ ಲೆಕ್ಕಾಚಾರಗಳು ಸ್ವಲ್ಪ ಏರುಪೇರಾಗಿವೆ. ಈಶ್ವರಪ್ಪ ಬಂಡಾಯ ಬಿಜೆಪಿ ಪಾಳಯವನ್ನು ನಿದ್ದೆಗೆಡಿಸಿದೆ. ಈಶ್ವರಪ್ಪ ಹೋದಲ್ಲಿ ಬಂದಲ್ಲಿ ಯಡಿಯೂರಪ್ಪ ಹಾಗೂ ಮಕ್ಕಳ ವಿರುದ್ಧ ಹರಿಹಾಯುತ್ತಿದ್ದಾರೆ. ಬಿಜೆಪಿಯಲ್ಲಿನ ಕೆಲವು ಮುಖಂಡರಿಗೆ ಈ ಬಂಡಾಯ ಬಿಸಿ ತುಪ್ಪವಾಗಿದೆ. ಇತ್ತ ಬಿ.ವೈ.ರಾಘವೇಂದ್ರ ಪರವಾಗಿಯೂ ಹೋಗಲಾಗದೆ, ಅತ್ತ ಈಶ್ವರಪ್ಪ ಪರ ನಿಲ್ಲಲಾಗದೆ ಅತಂತ್ರರಾಗಿದ್ದಾರೆ.

ಬಿಜೆಪಿ ಮತಗಳು ಛಿದ್ರವಾಗದಂತೆ ತಡೆಯಲು ವಿಶೇಷ ಪ್ರಯತ್ನ ಹಾಕಲಾಗುತ್ತಿದೆ. ಈಶ್ವರಪ್ಪ ಯಾರ ಮತ ಬುಟ್ಟಿಗೆ ಕೈ ಹಾಕುತ್ತಾರೆ ಎಂಬ ಲೆಕ್ಕಾಚಾರಗಳು ನಡೆಯುತ್ತಿವೆ. ಮೇಲ್ನೋಟಕ್ಕೆ ಬಿಜೆಪಿ-ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ಎಂದು ಕಾಣಿಸುತ್ತಿದ್ದರೂ ಈಶ್ವರಪ್ಪ ಬಂಡಾಯದಿಂದ ಒಂದಷ್ಟು ಮತಗಳು ಛಿದ್ರಗೊಳ್ಳಲಿವೆ. ಈ ಮತಗಳಿಂದ ಯಾರಿಗೆ ಅನುಕೂಲ, ಅನಾನುಕೂಲ ಎಂಬುದು ನಿರ್ಣಾಯಕವಾಗಲಿದೆ.

2019ರ ಲೋಕಸಭಾ ಚುನಾವಣೆ ವೇಳೆ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಏಳರಲ್ಲಿ ಬಿಜೆಪಿ ಶಾಸಕರಿದ್ದರು. ಒಂದರಲ್ಲಿ ಕಾಂಗ್ರೆಸ್‌ ಇತ್ತು. 2024ರಲ್ಲಿ ನಾಲ್ಕರಲ್ಲಿ ಬಿಜೆಪಿ, ಮೂರರಲ್ಲಿ ಕಾಂಗ್ರೆಸ್‌, ಒಂದರಲ್ಲಿ ಜೆಡಿಎಸ್‌ ಶಾಸಕರಿದ್ದಾರೆ. ಜೆಡಿಎಸ್‌ ಜತೆ ಮೈತ್ರಿ ಮಾಡಿಕೊಂಡಿರುವುದರಿಂದ ಶಿವಮೊಗ್ಗ ಗ್ರಾಮಾಂತರ, ಭದ್ರಾವತಿ ಕ್ಷೇತ್ರದಲ್ಲಿ ಜೆಡಿಎಸ್‌ ಮತಗಳು ಹೆಚ್ಚಿರುವುದರಿಂದ ಬಿಜೆಪಿಗೆ ಅನುಕೂಲವಿದೆ. 2014ರಲ್ಲಿ ಬಿಜೆಪಿ ಒಂದು ಕ್ಷೇತ್ರದಲ್ಲಿ ಮಾತ್ರ ಗೆದ್ದಿತ್ತು. ಆದರೂ ಬಿ.ಎಸ್‌. ಯಡಿಯೂರಪ್ಪ ಭಾರೀ ಅಂತರದ ಗೆಲುವು ಸಾಧಿಸಿದ್ದರು. 2018ರ ಉಪ ಚುನಾವಣೆಯಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿಗೆ ಭರವಸೆ ಮತಗಳು ಬಂದವು. 2019ರ ಸಾರ್ವತ್ರಿಕ ಚುನಾವಣೆಯಲ್ಲೂ ಮೈತ್ರಿ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ಅವರಿಗೆ ಮ್ಯಾಜಿಕ್‌ ಮಾಡಲಾಗಲಿಲ್ಲ. ಈ ಬಾರಿ ಮೂವರು ಶಾಸಕರು, ಸರಕಾರ ಕೂಡ ಅವರದ್ದೇ ಆಗಿರುವುದರಿಂದ ಕಾಂಗ್ರೆಸ್‌ಗೆ ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸ ಬಂದಿದೆ.

Advertisement

ತಾರಕಕ್ಕೇರಿದ ಆರೋಪ-ಪ್ರತ್ಯಾರೋಪ: ಕ್ಷೇತ್ರದಲ್ಲಿ ಅಪಪ್ರಚಾರದ್ದೇ ದೊಡ್ಡ ಸದ್ದು. ಆರೋಪ, ಪ್ರತ್ಯಾರೋಪಗಳು ಕೀಳುಮಟ್ಟಕ್ಕೂ ಸಹ ತಲುಪಿವೆ. ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್‌ ಅವರು ಬಂಗಾರಪ್ಪ ಹೆಸರಿನೊಂದಿಗೆ ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳು, ಅಧಿ ಕಾರಕ್ಕೆ ಬಂದರೆ ಹೊಸ ಗ್ಯಾರಂಟಿ ಯೋಜನೆಗಳನ್ನು ಕೊಡುತ್ತೇವೆ, ಶರಾವತಿ ಸಂತ್ರಸ್ತರಿಗೆ, ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವ ಭರವಸೆಯೊಂದಿಗೆ ಕಣಕ್ಕೆ ಇಳಿದಿದ್ದಾರೆ. ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಕ್ಷೇತ್ರದಲ್ಲಿನ ಅಭಿವೃದ್ಧಿ ಕೆಲಸಗಳು, ಮೋದಿ ಸಾಧನೆಗಳನ್ನು ಹೇಳಿ ಮತ ಕೇಳುತ್ತಿದ್ದಾರೆ. ಶರಾವತಿ ಸಂತ್ರಸ್ತರಿಗೆ ಹಕ್ಕುಪತ್ರ ಪ್ರತೀ ಚುನಾವಣೆ ವಿಷಯವಾಗಿದ್ದು ಎರಡೂ ಪಕ್ಷಗಳಲ್ಲಿ ಆರೋಪ, ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಕೆ.ಎಸ್‌.ಈಶ್ವರಪ್ಪ ಅಪ್ಪ-ಮಕ್ಕಳಿಂದ ಪಕ್ಷ ಉಳಿಸುವ, ಪಕ್ಷ ಶುದ್ಧೀಕರಣ ಎಂಬ ವಿಚಾರದೊಂದಿಗೆ ಕಾದಾಟ ನಡೆಸಿದ್ದಾರೆ. ಹಿಂದುತ್ವದ ವಿಚಾರದಲ್ಲಿ ಬಿಜೆಪಿ, ಕೆ.ಎಸ್‌.ಈಶ್ವರಪ್ಪ ನಡುವೆ ಪೈಪೋಟಿ ಏರ್ಪಟ್ಟಿದೆ.

ಈ ಕ್ಷೇತ್ರದಲ್ಲಿ 17.29 ಲಕ್ಷ ಮತದಾರರಿದ್ದು ಈಡಿಗ ಸಮುದಾಯದ ಮತಗಳು ಹೆಚ್ಚಿವೆ. ಉಳಿದಂತೆ ಲಿಂಗಾಯತ, ಮುಸ್ಲಿಂ, ಒಕ್ಕಲಿಗ, ಬ್ರಾಹ್ಮಣ, ಬಂಜಾರ, ತಮಿಳು, ಭೋವಿ ಸಮಾಜದ ಮತಗಳು ಅನಂತರದ ಸ್ಥಾನದಲ್ಲಿವೆ. ಈಡಿಗ ಮತದಾರರು ಹೆಚ್ಚಿದ್ದರೂ ಅವು ಪಕ್ಷದ ಕಡೆ ಇಲ್ಲ. ಲಿಂಗಾಯತ ಮತಗಳು ಲಿಂಗಾಯತ ಅಭ್ಯರ್ಥಿ ಅಥವಾ ಬಿಜೆಪಿಗೆ ಮೀಸಲಾಗಿವೆ. ಒಕ್ಕಲಿಗ ಮತಗಳು ಚದುರಿ ಹೋಗಿವೆ. ಶಿವಮೊಗ್ಗ, ಭದ್ರಾವತಿಯಲ್ಲಿ ಹೆಚ್ಚಿರುವ ತಮಿಳು ಸಮುದಾಯದ ಮತಗಳಿಗೆ ಮೂವರು ಪ್ರಬಲ ಅಭ್ಯರ್ಥಿಗಳಲ್ಲಿ ಫೈಟ್‌ ನಡೆಯುತ್ತಿದೆ. ಕಳೆದ ಎರಡೂ¾ರು ಚುನಾವಣೆಗಳಲ್ಲಿ ಶಿವಮೊಗ್ಗದಲ್ಲಿ ಜಾತಿ ಲೆಕ್ಕಾಚಾರ ಸಕ್ಸಸ್‌ ಆಗಿಲ್ಲ. ಈ ಚುನಾವಣೆಯಲ್ಲಿ ಪ್ರಬಲ ಜಾತಿಗಳ ಮತಗಳನ್ನು ಒಂದೆಡೆ ಕ್ರೋಡೀಕರಿಸುವ ಪ್ರಯತ್ನ ಮಾಡಲಾಗುತ್ತಿದೆ. ಇದರಲ್ಲಿ ಯಾರಿಗೆ ಜಯ ಸಿಗುತ್ತದೆ ಕಾದು ನೋಡಬೇಕಿದೆ.

ಬೂತ್‌ ಮಟ್ಟದಲ್ಲಿ ನಮ್ಮ ಕಾರ್ಯಕರ್ತರು ಯಶಸ್ವಿ ಯಾಗಿ ಕೆಲಸ ಮಾಡು ತ್ತಿದ್ದಾರೆ. ನಾವು ಭರವಸೆ ಜಾರಿಗೆ ತಂದಿದ್ದೇವೆ. ನಾವು ಮಾಡಿದ ಅಭಿವೃದ್ಧಿಯನ್ನು ಜನರಿಗೆ ತಲುಪಿಸಿದ್ದೇವೆ. ಮೋದಿಯನ್ನು ಮತ್ತೂಮ್ಮೆ ಪ್ರಧಾನಿ ಮಾಡಲು ಜನ ಉತ್ಸುಕರಾಗಿದ್ದಾರೆ.
-ಬಿ.ವೈ.ರಾಘವೇಂದ್ರ, ಬಿಜೆಪಿ ಅಭ್ಯರ್ಥಿ

ಅಧಿಕಾರ ಕೈಲಿದ್ದಾಗ ಕ್ಷೇತ್ರದ ಅಭಿವೃದ್ಧಿ ವಿಚಾರದ ಕುರಿತು ಧ್ವನಿ ಎತ್ತದ ಕೆಲವರು ನನ್ನ ಬಗ್ಗೆ ಟೀಕಿಸುತ್ತಿದ್ದಾರೆ. ಇದೆಲ್ಲದಕ್ಕೂ ಮುಂದಿನ ದಿನದಲ್ಲಿ ಉತ್ತರ ನೀಡುತ್ತೇನೆ. ಅದಕ್ಕೆ, ಮತದಾರರು ನನಗೆ ಬೆಂಬಲ ನೀಡಬೇಕು.
-ಗೀತಾ ಶಿವರಾಜ್‌ಕುಮಾರ್‌, ಕಾಂಗ್ರೆಸ್‌ ಅಭ್ಯರ್ಥಿ

ಯಡಿಯೂರಪ್ಪ ಅವರು ತಮ್ಮ ಸ್ವಾರ್ಥ ರಾಜಕಾರ ಣಕ್ಕೆ ಹಿಂದುತ್ವವಾದಿ ಗಳನ್ನು ಮೂಲೆಗುಂಪು ಮಾಡಿದ್ದಾರೆ. ರಾಘವೇಂದ್ರ ಅವರನ್ನು ಸೋಲಿಸಿ ಕುಟುಂಬ ರಾಜಕಾರಣಕ್ಕೆ ಅಂತ್ಯ ಕಾಣಿಸುವೆ.
-ಕೆ.ಎಸ್‌.ಈಶ್ವರಪ್ಪ, ಬಂಡಾಯ ಅಭ್ಯರ್ಥಿ

-ಶರತ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next