Advertisement

ಪರಿಸರ ಮಿತ್ರ…

04:32 PM Apr 28, 2018 | |

ನಿಜ. ಬೆಂಗಳೂರು ಮೊದಲಿನಂತಿಲ್ಲ. ಗಾರ್ಡನ್‌ ಸಿಟಿ ಗಾರ್ಬೆಜ್‌ ಸಿಟಿಯಾಗಿದೆ. ಹವಾಮಾನ ಬದಲಾಗಿದೆ. ಜೀವಿಗಳ ಸ್ವತ್ಛಂದ ಹಾರಾಟ ಇಲ್ಲವಾಗಿದೆ. ಸ್ವತ್ಛ ಉಸಿರಾಟಕ್ಕೆ ಅಡಚಣೆಯುಂಟಾಗಿದೆ. ಮೂಗು ಮುಚ್ಚಿಕೊಂಡು ಓಡಾಡಬೇಕಾಗಿದೆ. ಕಾರಣ ಕೇಳಿದರೆ- ಪೊಲ್ಯೂಷನ್‌, ಹೊಗೆ, ಧೂಳು ಎನ್ನುವ ಉತ್ತರ ಥಟ್‌ ಅಂತ ಬರುತ್ತದೆ. 

Advertisement

ಭೂಮಿಯ ಮೇಲ್ಮೈಗೆ ರಾಸಾಯನಿಕಗಳು, ಕಸಕಡ್ಡಿಗಳು ಚೆಲ್ಲಿದಾಗ, ಮೋಟಾರು ವಾಹನಗಳು ಹೊಗೆ, ಪೈಂಟ್‌, ಸಿಂಪಡಣೆ, ವಾರ್ನಿಷ್‌ ಇತರ ದ್ರಾವಣಗಳಿಂದ ಹೊರಹೊಮ್ಮುವ ಅನಿಲ, ಮಿಥೇನ್‌, ವಿಷಕಾರಿ ಅನಿಲಗಳು, ರೋಗಾಣು, ಹಬ್ಬ ಹರಿದಿನಗಳಲ್ಲಿ ಸುಡುವ ಪಟಾಕಿ, ಸಿಡಿಮದ್ದುಗಳು ವಾಯು ಮಾಲಿನ್ಯ ಉಂಟುಮಾಡುವ ಪ್ರಮುಖ ಅಸ್ತ್ರಗಳೆನ್ನಬಹುದು. 

ಕೃಷಿ ಸಂಬಂಧಿತ ಚಟುವಟಿಕೆಗಳಲ್ಲಿ ಸೀಸ, ಕ್ಯಾಡ್ಮಿಯಂ ಮತ್ತು ತಾಮ್ರ ವಿಷಕಾರಿ ಲೋಹಗಳು ಕ್ಲೋರೋಫ್ಲೂರೋ ಕಾರ್ಬನ್‌ಗಳು, ಅಮೋನಿಯಾ ಮುಂತಾದವು ಹೊರ­ಬರು­ತ್ತವೆ. ತ್ಯಾಜ್ಯ ವಸ್ತುಗಳು, ಕೊಳೆತದಂತಹ ಸ್ವಾಭಾವಿಕ ಕ್ರಿಯೆಗಳಿಂದ ಉತ್ಪತ್ತಿಯಾ­ಗುವ ವಿಕಿರಣಶೀಲ ಮಾಲಿನ್ಯಕಾರಕಗಳು ಹಾನಿಕಾರಕ­ವಾಗಿವೆ. ಹೀಗಾಗಿ ಪ್ರಾಣಿ, ಪಕ್ಷಿ, ಮನುಷ್ಯ, ಇತರ ಜೀವಿ ಸಂಕುಲಗಳಿಗೆ ಧಕ್ಕೆಯಾಗುತ್ತಿದೆ. ಇಂಥ ಪರಿಸರ ನಾಶವನ್ನು ತಡೆಗಟ್ಟಲು “ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ’ ಹಲವಾರು ಕ್ರಮಗಳನ್ನು ಅನುಸರಿಸುತ್ತಿದೆ.

ಏನದು ಕ್ರಮಗಳು?: ವಾಯು ಗುಣಮಟ್ಟ ಸೂಚ್ಯಂಕವನ್ನು ಪರಿಣಾಮ­ಕಾರಿ­ಯಾಗಿ ತಿಳಿಯಲು ಮಾಪನ ಕೇಂದ್ರಗಳನ್ನು ಸ್ಥಾಪಿಸಿದೆ. ಪ್ರಸ್ತುತ ಇರುವ 36 ಮಾಪನ ಕೇಂದ್ರ­ಗಳೊಂದಿಗೆ ಹೆಚ್ಚುವರಿಯಾಗಿ 29 ವಾಯು ಮಾಲಿನ್ಯ ಮಾಪನ ಕೇಂದ್ರಗಳನ್ನು ತೆರೆಯಲು ಕ್ರಮ ಕೈಗೊಂಡಿದೆ.

ದಿನೇ ದಿನೇ ಹೆಚ್ಚಳವಾಗುತ್ತಿರುವ ವಾಹನಗಳ ಸಂಖ್ಯೆ­ಯಿಂದ ಉಂಟಾಗುತ್ತಿರುವ ವಾಯು ಮಾಲಿನ್ಯ ನಿಯಂತ್ರಣಕ್ಕಾಗಿ ಮಂಡಳಿ ವಾಹನಗಳ ಹೊಗೆ ಮಾಪನ ಉಪಕರಣಗಳನ್ನೊಳಗೊಂಡ 12 ಸುಸಜ್ಜಿತ ವಾಹನಗಳನ್ನು ಖರೀದಿಸಿ ಹೊಗೆ ಮಾಪನ ಕಾರ್ಯದಲ್ಲಿ ನಿರತವಾಗಿದೆ.

Advertisement

ಖರೀದಿಸಿರುವ 12 ವಾಹನಗಳಲ್ಲಿ ಬೆಂಗಳೂರು ಮಾಲಿನ್ಯ ತಪಾಸಣೆಗೆ 6 ವಾಹನಗಳನ್ನು ಹಾಗೂ ರಾಜ್ಯದ ಇತರ ನಗರಗಳಿಗೆ ಆರು ವಾಹನಗಳನ್ನು ಮೀಸಲಿಟ್ಟಿರುವ ಮಂಡಳಿ ಇದುವರೆಗೆ 17 ಸಾವಿರಕ್ಕೂ ಹೆಚ್ಚು ವಾಹನಗಳ ಮಾಲಿನ್ಯ ತಪಾಸಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ಸಾರಿಗೆ ಇಲಾಖೆಗೆ ಸೂಚಿಸಿದೆ. 

ಸಮನ್ವಯ ಸಮಿತಿ ನೇಮಕ: ಬೆಂಗಳೂರು ನಗರದ ವಾಯು ಮಾಲಿನ್ಯ ನಿಯಂತ್ರಿ­ಸುವ ಉದ್ದೇಶದಿಂದ ಬಿಡಬುಎಸ್‌ಎಸ್‌ಬಿ, ಬಿಡಿಎ, ಬಿಬಿಎಂಪಿ, ಸಾರಿಗೆ ಇಲಾಖೆ, ಪೊಲೀಸ್‌ ಇಲಾಖೆ, ನಗರಾಭಿವೃದ್ಧಿ ಇಲಾಖೆ ಹಾಗೂ ಇತರೆ ಸಂಬಂಧಿಸಿದ ಇಲಾಖೆಗಳನ್ನೊಳಗೊಂಡ ಸಮನ್ವಯ ಸಮಿತಿ ರಚನೆ ಮಾಡಿರುವ ಕೆಎಸ್‌ಪಿಸಿಬಿ ಶಬ್ದ ಮಾಲಿನ್ಯ ನಿಯಂತ್ರಣಕ್ಕಾಗಿ ಮಹಾನಗರದ 10 ಸ್ಥಳಗಳಲ್ಲಿ ನಿರಂತರ ಶಬ್ದ ಮಾಪನ ಕೇಂದ್ರಗಳನ್ನು ಸ್ಥಾಪನೆ ಮಾಡಿದೆ. 

ನದಿ, ಕೆರೆ ನೀರಿನ ಗುಣಮಟ್ಟ ಮಾಪನ: ರಾಜ್ಯದ 15 ನದಿಗಳ ಹಾಗೂ 120 ಕೆರೆಗಳ ನೀರಿನ ಗುಣಮಟ್ಟ ವಿಶ್ಲೇಷಣೆಯನ್ನು ಕೆಎಸ್‌ಪಿಸಿಬಿ ಮಾಡು­ತ್ತಿದ್ದು, ರಾಷ್ಟ್ರೀಯ ನದಿ ನೀರು ಗುಣಮಟ್ಟ ಮಾಪನ ಕಾರ್ಯಕ್ರಮದಡಿ ರಾಜ್ಯದ ನದಿಗಳ 84 ಕೇಂದ್ರಗಳಲ್ಲಿ ನದಿ ನೀರಿನ ಗುಣಮಟ್ಟ ಮಾಪನ ಮಾಡುತ್ತಿದೆ. 

ಎಸ್‌ಟಿಪಿ ಘಟಕ ಸ್ಥಾಪನೆ: ಬೆಂಗಳೂರಿನ ಕೆರೆ ಜಲಾನಯನ ಪ್ರದೇಶಗಳಾದ ಬೆಳ್ಳಂದೂರು ಕೆರೆ, ಹಲಸೂರು ಕೆರೆ, ವರ್ತೂರು ಕೆರೆ, ಕೆ.ಆರ್‌. ಪುರಂ ಹಾಗೂ ಹೆಣ್ಣೂರು ಕೆರೆ ಹಾಗೂ ಇತರೆ ಕೆರೆಗಳನ್ನು ಮಾಲಿನ್ಯ ಮುಕ್ತಗೊಳಿಸಲು ಮಂಡಳಿ ನಿರ್ಧರಿಸಿದೆ. ಶುದೀಕರಣ ಘಟಕಗಳನ್ನು (ಎಸ್‌ಟಿಪಿ) ಸ್ಥಾಪಿಸಲು ಬಿಡಬುಎಸ್‌ಎಸ್‌ಬಿಗೆ 100 ಕೋಟಿ ರೂ.ಗಳ ಆರ್ಥಿಕ ಸಹಾಯ ನೀಡಿದೆ.

ರಾಜ್ಯದ ಕಬ್ಬಿಣದ ಅದಿರು ಗಣಿಗಾರಿಕೆ ಜಿಲ್ಲೆಗಳಾದ ತುಮಕೂರು, ಚಿತ್ರದುರ್ಗ, ಬಳ್ಳಾರಿ, ಮತ್ತು ಕೊಪ್ಪಳದಲ್ಲಿ ಒಂಬತ್ತು ನಿರಂತರ ವಾಯು ಮಾಪನ ಕೇಂದ್ರಗಳ ಸ್ಥಾಪನೆಗೆ ಮಂಡಳಿ ಯೋಜನೆ ರೂಪಿಸಿದ್ದು ಬೀದರ್‌ ಜಿಲ್ಲೆಯ ಕೋಳಾರ ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪಿತವಾಗಿರುವ ಔಷಧಿ ಕಾರ್ಖಾನೆಗಳಿಂದ ಉಂಟಾಗು­ತ್ತಿರುವ ಜಲ ಮಾಲಿನ್ಯದ ಅಧ್ಯಯನ ಬಗ್ಗೆ ಕ್ರಮ ಕೈಗೊಂಡಿದೆ. 

ಪರಿಸರ ಮಿತ್ರ ಶಾಲೆ: ಪರಿಸರ ಸಂರಕ್ಷಣೆಯ ಬಗ್ಗೆ ವಿದ್ಯಾರ್ಥಿ ದಿಸೆಯಿಂದಲೇ ಜಾಗೃತಿ ಮೂಡಿಸುವ ಸಲುವಾಗಿ ಹಾಗೂ ಮಕ್ಕಳಲ್ಲಿ ಪರಿಸರ ಜ್ಞಾನದ ಅರಿವು ಮೂಡಿಸುವ ಉದ್ದೇಶದಿಂದ ಮಂಡಳಿ ರಾಜ್ಯಾದ್ಯಂತ “ಪರಿಸರ ಮಿತ್ರ ಶಾಲೆ’ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದರೊಟ್ಟಿಗೆ ಪೋಷಕರಿಗೆ ಹಾಗೂ ಅಧ್ಯಾಪಕ ವರ್ಗದವ‌ರಿಗೆ ಪರಿಸರ ಸಂರಕ್ಷಣೆ ಬಗ್ಗೆ ತಿಳಿವಳಿಕೆ ನೀಡುವ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.

ಆ ಮೂಲಕ, ಪರಿಸರ ಜಾಗೃತಿ ಹಾಗೂ ಪರಿಸರ ಮಿತ್ರ ಶಾಲೆ ಪ್ರಶಸ್ತಿ ಗೆಲ್ಲುವ ಅವಕಾಶವನ್ನು ಶಾಲೆಗಳಿಗೆ ಕಲ್ಪಿಸಲಾಗಿದೆ. ಶಾಲೆಯ ಆವರಣದಲ್ಲಿ ಸುಂದರ ಕೈತೋಟ ಇದೆಯೇ? ಸಸ್ಯಗಳಿಗೆ ಸಾವಯವ ಗೊಬ್ಬರ ಕೊಡುತೀ¤ರಾ? ಮಳೆನೀರಿನ ಸಂಗ್ರಹದ ವ್ಯವಸ್ಥೆ ಇದೆಯೇ? ಸೌರಶಕ್ತಿಯ ಬಳಕೆ ಆಗುತ್ತಿದೆಯೇ? ಘನತ್ಯಾಜ್ಯಗಳ ಸೂಕ್ತ ವಿಲೇವಾರಿ ಆಗುತ್ತಿದೆಯೇ? ನೀರಿನ ಮಿತವ್ಯಯದ ಮಾದರಿ ಇದೆಯೇ?

ವಿದ್ಯುತ್‌ ಉಳಿತಾಯದ ಮಾದರಿಗಳಿವೆಯೇ? ಎಂಬಿತ್ಯಾದಿ ಷರತ್ತುಗಳನ್ನು ಪೂರ್ತಿಗೊಳಿಸಿರುವ ಜಿಲ್ಲಾ ಶಾಲೆಗೆ “ಹಸಿರು ಪ್ರಶಸ್ತಿ’, ಎರಡನೇ ಪ್ರಶಸ್ತಿಯಾಗಿ ಹತ್ತು ಶಾಲೆಗಳಿಗೆ “ಹಳದಿ ಪ್ರಶಸ್ತಿ’ ಹಾಗೂ ಮೂರನೇ ಶ್ರೇಯಾಂಕ ಪಡೆದ 10 ಶಾಲೆಗಳಿಗೆ “ಕಿತ್ತಳೆ ಪ್ರಶಸ್ತಿ’ ನೀಡುವ ಕಾರ್ಯಕ್ರಮ ಇದಾಗಿದೆ. ಇದರಲ್ಲಿ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿ­ರುತ್ತದೆ. ಇಷ್ಟೇ ಅಲ್ಲದೆ, “ವಿಶ್ವ ಪರಿಸರ ದಿನ’ದಂದು ರಾಜ್ಯ ಮಟ್ಟದಲ್ಲಿ ಪ್ರಶಸ್ತಿಯನ್ನೂ ನೀಡುತ್ತಿದೆ.

ಪರಿಸರ ಸಂರಕ್ಷಣೆ ನಮ್ಮ ಹೊಣೆ
ಮಾಲಿನ್ಯ ನಿಯಂತ್ರಣದ ಮೂಲಕ ಪರಿಸರ ಸಂರಕ್ಷಣೆ ನಮ್ಮ ಹೊಣೆ.  ಜಲ, ವಾಯು, ಶಬ್ದ ಮಾಲಿನ್ಯವನ್ನು ಗಂಭೀರ ಸಮಸ್ಯೆಗ ನಿಯಂತ್ರಣಕ್ಕೆ  ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ. ಉದ್ದಿಮೆಗಳ ಪರವಾನಿಗೆ ನವೀಕರಣ ಸಕಾಲ ಹಾಗೂ ಆನ್‌ಲೈನ್‌ನಲ್ಲೂ ಅನುಮತಿ ನೀಡುತ್ತಿದ್ದೇವೆ. ವಾಟರ್‌ ಆ್ಯಕ್ಟ್ ಮತ್ತು ಏರ್‌ ಆ್ಯಕ್ಟ್‌ನಡಿ ಪರಿಸರ ನಾಶಕ್ಕೆ ಕಾರಣವಾಗುತ್ತಿರುವವರ ಮೇಲೆ ಕ್ರಮ ಕೈಗೊಳ್ಳಬೇಕೆಂಬ ಬಗ್ಗೆ ನಮ್ಮ ಎನ್‌ಫೋರ್ಸ್‌ಮೆಂಟ್‌ ಅಧಿಕಾರಿಗಳಿಗೆ ನ್ಯಾಯಮೂರ್ತಿಗಳಿಂದ  ತರಬೇತಿ ಒದಗಿಸುವ ಪದ್ಧತಿಯನ್ನು ಅಳವಡಿಸಿದ್ದೇವೆ. ಮಾಲಿನ್ಯ ನಿಯಂತ್ರಣಕ್ಕಾಗಿ ಸಮಿತಿ ರಚಿಸಿ ಪ್ರತಿ ತಿಂಗಳು ಪುನರ್‌ವಿಮರ್ಶೆ ಮಾಡುತ್ತಿದ್ದೇವೆ. 
-ಲಕ್ಷ್ಮಣ್‌, ಅಧ್ಯಕ್ಷರು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ. 

Advertisement

Udayavani is now on Telegram. Click here to join our channel and stay updated with the latest news.

Next