Advertisement

ಮನೆಗೊಂದು ಮರ ಊರಿಗೊಂದು ವನ…

04:25 PM Jul 06, 2021 | Team Udayavani |

ಮತ್ತೂಂದು ಮಳೆಗಾಲ ಬಂದಿದೆ. ಪರಿಸರಕ್ಕೆ ನಮ್ಮಿಂದಾದ ಕೊಡುಗೆ ಸಲ್ಲಿಸಲು ಇದೊಂದು ಉತ್ತಮ ಅವಕಾಶವೂ ಹೌದು. ಖಾಲಿ ಸ್ಥಳಗಳಲ್ಲಿ ಗಿಡ ನೆಡುವುದು, ನೆಟ್ಟ ಗಿಡವನ್ನು ಪೋಷಿಸುವುದು, ಸೀಡ್‌ಬಾಲ್‌ ತಯಾರಿ, ನೀರು ಇಂಗಿಸುವುದು, ಪರಿಸರ ಸಂರಕ್ಷಣೆಯ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು…ಹೀಗೆ  ಹತ್ತಾರು ರೀತಿಯಲ್ಲಿ ನಾವು ಪ್ರಕೃತಿಗೆ ನಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಲಿರುವ ಸಮಯ ಇದಾಗಿದೆ. ಹೀಗೆ ಪ್ರಕೃತಿ ಸಂರಕ್ಷಣೆಗೆ ಮುಂದಾದವರ ಅನುಭವಗಳ ಅಕ್ಷರ ರೂಪ ಇಲ್ಲಿದೆ…

Advertisement

ಮನೆಗೊಂದು ಮರ ಊರಿಗೊಂದು ವನ…

ಪ್ರಕೃತಿಗೆ ಸೊಬಗು ನೀಡುವ ಗಿಡಮರಗಳ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಹೀಗಿರುವಾಗ ನಮ್ಮ ಪರಿಸರವನ್ನು ಕಾಪಾಡುವುದು ನಮ್ಮ ಕೈಯಲ್ಲಿದೆ. ಮಳೆಗಾಲದಲ್ಲಿ  ನಮ್ಮ  ಮನೆಯ ಸುತ್ತಮುತ್ತ, ತೋಟಗಳ ಬದಿಯಲ್ಲಿ ಗಿಡಗಳನ್ನು ನೆಡುವುದು, ನಮ್ಮ ಸ್ನೇಹಿತರಿಗೆ,ಬಂಧುಗಳಿಗೆ  ಪಕ್ಕದ ಮನೆಯವರಿಗೆ ಗಿಡಗಳನ್ನು ನೆಟ್ಟು ಅದನ್ನು ಸಂರಕ್ಷಣೆ ಮಾಡಿ ಎಂದು ತಿಳಿ ಹೇಳುವುದರ ಜತೆಗೆ ಪರಿಸರ ರಕ್ಷಣೆ ಕುರಿತು ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಮಾಡುವುದು ಅಗತ್ಯ. ಸಾಮಾಜಿಕ ಜಾಲತಾಣಗಳನ್ನೂ ಈ ನಿಟ್ಟಿನಲ್ಲಿ ಬಳಸಿಕೊಂಡು ಪರಿಸರದ ಬಗ್ಗೆ ಜಾಗೃತಿ ಮೂಡಿಸಬೇಕೆಂದಿದ್ದೇನೆ. ಹೀಗೆ ಈ ಮೂಲಕ ಪರಿಸರವನ್ನು ನಾವು ಉಳಿಸಿಕೊಳ್ಳಬಹುದು.-ಕಾಶೀಬಾಯಿ ಗು ಬಿರಾದಾರ, ಎಸ್‌.ಬಿ. ಕಲಾ ಮತ್ತು ಕೆ.ಸಿ.ಪಿ. ವಿಜ್ಞಾನ ಮಹಾವಿದ್ಯಾಲಯ, ವಿಜಯಪುರ

ಹಸುರು-ಉಸಿರು :

ಮಳೆಗಾಲದ ಸಮಯದಲ್ಲಿ ಪ್ರಕೃತಿಯನ್ನು ನೋಡುವುದೇ ಕಣ್ಣಿಗೆ ಒಂದು ರೀತಿಯ ಹಬ್ಬ. ಈ ಬಾರಿ ನಾವು ನಮ್ಮ  ಮನೆಯಲ್ಲಿ ನಾವು ಹಲವಾರು ವಿಧದ ಗಿಡಗಳನ್ನು ಬೆಳೆಸಿದ್ದೇವೆ. ಬದನೆ, ಬೆಂಡೆ, ಹೀರೇಕಾಯಿ, ಸೋರೆಕಾಯಿ, ಟೊಮೆಟೊ, ಹಸಿ ಮೆಣಸು ಮುಂತಾದ ಗಿಡಗಳಿವೆ. ಹೊರಗಿನ ಪದಾರ್ಥಗಳನ್ನು ಸೇವಿಸುವುದಕ್ಕಿಂತ ಮನೆಯಲ್ಲಿಯೇ ಬೆಳೆದ ತರಕಾರಿಗಳು ಆರೋಗ್ಯಕ್ಕೆ ಒಳ್ಳೆಯದು. ಹಾಗಾಗಿ ನಾವು ಮನೆಯಲ್ಲಿಯೇ ಒಂದು ಸಣ್ಣ ರೀತಿಯ ತೋಟಗಾರಿಕೆ ಮಾಡಿದ್ದೇವೆ. ಇದಲ್ಲದೆ ಈಗ ವಾತಾವರಣದಲ್ಲಿ ಆಮ್ಲಜನಕದ ಪ್ರಮಾಣವು ಕ್ಷೀಣಿಸುತ್ತಿರುವುದರಿಂದ ನಾವು ಅನೇಕ ತುಳಸಿ ಗಿಡಗಳನ್ನು ಬೆಳೆಸಿದ್ದೇವೆ. ಜತೆಗೆ ತೆಂಗು, ಅಡಿಕೆ,ಬಾಳೆ ಗಿಡಗಳನ್ನು, ಕೆಲವು ಹೂ ಗಿಡಗಳನ್ನು ನೆಟ್ಟು ಮನೆಯ ಸುತ್ತಮುತ್ತ ಸಂಪೂರ್ಣ ಹಸುರಾಗಿಸಿದ್ದೇವೆ. ಪ್ರತಿ ದಿನ ಹಸುರಿನ ಜತೆಗೆ ಬದುಕುವುದರಿಂದ ಮನಸ್ಸಿಗೆ ಒಂದು ರೀತಿ ಸಂತೋಷ ವಾಗುತ್ತದೆ. ಗಿಡ ಮರಗಳು ಹೆಚ್ಚಿರುವ ಕಡೆಗಳಲ್ಲಿ ಪಕ್ಷಿಗಳು, ಪತಂಗಗಳು ಬರುತ್ತವೆ ಅವುಗಳನ್ನು ನೋಡುವುದೇ ಖುಷಿ.  – ರಮ್ಯಾ ಬಿ., ತೆಂಕನಿಡಿಯೂರು ಕಾಲೇಜು,ಉಡುಪಿ

Advertisement

ಪಾಲನೆ ಪ್ರಧಾನ:

ಮಳೆಗಾಲ ಸಮೃದ್ಧಿಯ ಕಾಲ. ಹಸುರು ಎಲ್ಲೆಡೆ ಹಬ್ಬುವ ಸಮಯ. ವಿಶ್ವ ಪರಿಸರ ದಿನದಂದು ಎಲ್ಲರೂ ವಾಟ್ಸ್‌ಆ್ಯಪ್‌ ಸ್ಟೇಟಸ್‌ಗಳಲ್ಲಿ ಗಿಡ ನೆಟ್ಟು ಬೆಳೆಸುವ ಕಾಲ ಬಂದಿದೆ. ಗಿಡ ನೆಡುವುದು ಮತ್ತು ಕಿತ್ತು ಹಾಕುವುದು ಸುಲಭ. ಯಾಕೆಂದರೆ ಒಂದು ಕ್ಷಣ ಸಾಕು. ಆದರೆ ಸುದೀರ್ಘ‌ ಕಾಲ ಪಾಲನೆ ಮಾಡುವುದು ತುಂಬಾ ಕಷ್ಟ. ಆ ನಿಟ್ಟಿನಲ್ಲಿ ನಮ್ಮ ಎಣಿಯಾರ್ಪು ಗ್ರಾಮದ ಶ್ರದ್ಧಾ ಕೇಂದ್ರವಾಗಿರುವ

ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆಯ ಯುವಕರು ಸೇರಿಕೊಂಡು 5 ವರ್ಷಗಳಿಂದ ನೆಟ್ಟ ಗಿಡಗಳಿಗೆ ಮುಳ್ಳಿನ ಬೇಲಿಯನ್ನು ಹಾಕುವ ಮೂಲಕ ಭದ್ರತೆಯನ್ನು ನೀಡಿದ್ದೇವೆ. ದೈವಿಕ ಭಾವನೆ ಇರುವ ಅಶ್ವತ್ಥ ಗಿಡವನ್ನು ಮಧ್ಯ ಭಾಗದಲ್ಲಿ ನೆಟ್ಟು  ಸುತ್ತಲೂ ಹತ್ತು ಹಲವಾರು ಫ‌ಲವೃಕ್ಷಗಳ ಗಿಡವನ್ನು  ನೆಡಲಾಗಿದೆ. ಇವೆಲ್ಲ ಆಕಾಶದೆತ್ತರಕ್ಕೆ ವಿಶಾಲವಾಗಿ ಬೆಳೆದು ನಿಂತಾಗ ನಾವಿಲ್ಲದಿದ್ದರೂ ನಮ್ಮ ಮುಂದಿನ ಪೀಳಿಗೆಗೆ ಉಪಯುಕ್ತವಾದೀತು.– ಪವನ್‌  ಕುಮಾರ್‌ಆಚಾರ್ಯ,  ವಿ.ವಿ. ಮಂಗಳೂರು

ಮರಗಳನ್ನು ಬೆಳೆಸೋಣ:

ಮಳೆಗಾಲ ಆರಂಭವಾಗಿದೆ. ಒಂದಿಷ್ಟು ಬಿಡುವುವಿಲ್ಲದೆ ಮಳೆ ಸುರಿತಾನೇ ಇದೆ. ಪ್ರಕೃತಿಗೆ ನಾವು ಕೊಡುಗೆ ಕೊಡಲು  ಇದು ಸರಿಯಾದ ಸಮಯ. ಗಿಡ-ಮರಗಳನ್ನ ಬೆಳೆಸಲು ನಾವು ಶ್ರಮಿಸಬೇಕಾಗಿದೆ. ನಾನೂ ಕೂಡ ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದೇನೆ. ಏಕೆಂದರೆ ಕೊರೊನಾ ಎಂಬ ಮಹಾಮಾರಿ ಬಂದ ಅನಂತರ ಎಷ್ಟೋ ಜನರು ಆಮ್ಲಜನಕ ಸಿಗದೇ ಮರಣ ಹೊಂದಿದ್ದಾರೆ. ನಾವು ಮರಗಳನ್ನು ಕಡಿದ ಪರಿಣಾಮ ಇದು. ಅಂದು ಮರಗಳನ್ನು ಕಡಿಯದಿದ್ದರೆ ಇಂದು ಆಮ್ಲಜನಕ ಸಿಗದೇ ಜನರು ಸಾಯುತ್ತಿರಲಿಲ್ಲ. ಮನೆ ಮುಂದೆ  ಗಿಡಗಳನ್ನು ನೆಟ್ಟು ಬೆಳೆಸುತ್ತೇನೆ. ಜತೆಗೆ ಈ ಬಗ್ಗೆ ಸ್ನೇಹಿತರಿಗೆ ಹಾಗೂ ಇತರಿಗೆ ಮಾಹಿತಿ ನೀಡುತ್ತೇನೆ. ನಮ್ಮಿಂದ ಚಿಕ್ಕದಾಗಿ ಪ್ರಕೃತಿಗೆ ಒಂದು ಕೊಡುಗೆ ನೀಡೋಣ. ಮರಗಳನ್ನು ಬೆಳೆಸೋಣ. – ಸದಾಶಿವ ಬಿ.ಎನ್‌. ಎಂಜಿಎಂ ಕಾಲೇಜು, ಉಡುಪಿ

ಹಣ್ಣಿನ ಗಿಡಗಳನ್ನು ಬೆಳೆಸೋಣ:

ಮಳೆಗಾಲವೆಂದಾಗ ಎಲ್ಲರಿಗೂ ಸಂತಸದ ಸಂಗತಿ. ಮಳೆ ಸುರಿಯುವಾಗ ಕುಣಿದು ಕುಪ್ಪಳಿಸಬೇಕೆಂಬ ಆಸೆ ಎಲ್ಲರಲ್ಲೂ ಇರುತ್ತದೆ. ಅದರ ಜತೆಗೆ ಪ್ರಕೃತಿ ಸಂರಕ್ಷಣೆಯತ್ತ ದೃಷ್ಟಿಹರಿಸುವುದು ಕೂಡ ಅಗತ್ಯ. ನಾವು ಇಂದು ಸ್ವಲ್ಪವಾದರೂ ತಂಪಿನ ನೆರಳಿನಲ್ಲಿ ಬದುಕುತ್ತಿದ್ದೇವೆಯೆಂದರೆ ಅದಕ್ಕೆ ನಮ್ಮ ಹಿರಿಯರು ನೆಟ್ಟ ಮರಗಳು ಕಾರಣ. ಇಂದು ನಾವು ಮತ್ತೆ ಆ ಕಾರ್ಯದತ್ತ  ಸಾಗುವ ಅಗತ್ಯವಿದೆ. ಹಣ್ಣು, ನೆರಳು ನೀಡುವ ಗಿಡ ನೆಡುವ ಬಗ್ಗೆ ಚಿಂತಿಸುತ್ತಿದ್ದೇನೆ. ಇದರ ಜತೆಗೆ ಗೆಳತಿಯರಿಗೂ ಈ ಬಗ್ಗೆ ಮಾಹಿತಿ ನೀಡಬೇಕು ಎಂದುಕೊಂಡಿರುವೆ.– ಸೌಮ್ಯಶ್ರೀ ಪಿಲಿಕೂಡ್ಲು, ಸರಕಾರಿ ಕಾಲೇಜು, ಕಾಸರಗೋಡು

ಪರಿಸರಕ್ಕೆ ನಮ್ಮಿಂದ ಕೊಡುಗೆ ನೀಡೋಣ :

ನಾನು ನಮ್ಮ ಊರಿನ ಗ್ರಾಮಗಳಲ್ಲಿ.  ಪರಿಸರ ದಿನಾಚರಣೆ ದಿನದಂದು ಗ್ರಾಮಗಳ ಸದಸ್ಯರನ್ನು, ಪಂಚಾಯತ್‌ ಅಧ್ಯಕ್ಷರ ಮತ್ತು  ಆಡಳಿತ ಅಧಿಕಾರಿಯ ಸಹಾಯದಿಂದ  ಪತ್ರವನ್ನು ತೆಗೆದುಕೊಂಡು ನಮಗೆ ಸಮೀಪದ ಅರಣ್ಯಕ್ಕೆ ತೆರಳಿದೆ. ಅಲ್ಲಿಂದ ವಿಭಿನ್ನ ರೀತಿಯ  200 ಗಿಡಗಳನ್ನು ತಂದು   ಶಾಲೆಗಳ ಆವರಣಗಳಲ್ಲಿ, ರಸ್ತೆ ಬದಿಯಲ್ಲಿ ಗಿಡ ನೆಡುವ ಕಾರ್ಯಕ್ರಮ ಮಾಡಿದೆ.  ಉಳಿದ ಗಿಡಗಳನ್ನು ಗ್ರಾಮದ ಜನರಿಗೆ ನೀಡಿದೆ.  ಮಕ್ಕಳಿಗೆ ಈ ಬಗ್ಗೆ ಅರಿವು ಕೂಡ ಮೂಡಿಸಿದೆ. ನೀವು ಕೂಡ ನಿಮ್ಮ ಗ್ರಾಮಗಳಲ್ಲಿ ಊರುಗಳಲ್ಲಿ ಪಂಚಾಯತ್‌ನ ಸಹಾಯ ಪಡೆದುಕೊಂಡು ಗಿಡ ನೆಡುವ ಮೂಲಕ ಪರಿಸರದ ಬಗ್ಗೆ ಜನರಿಗೆ ಅರಿವು ಮೂಡಿಸಿ. – ಸಚಿನ್‌ ಚೌವಾಣ ಎಸ್ಪಿ ಕಲಾ ಹಾಗೂ ಕೆ.ಸಿ.ಪಿ. ವಿಜ್ಞಾನ ವಿಶ್ವವಿದ್ಯಾನಿಲಯ ವಿಜಯಪುರ

ಅರಿವು ಮೂಡಿಸುವುದು ಜವಾಬ್ದಾರಿ:

ಪ್ರಕೃತಿಗೂ ಮಾನವನಿಗೂ ಸಂಬಂಧವಿದೆ. ಮಾನವನು ಪ್ರಕೃತಿಯಿಂದಲೇ ತನಗೆ ಬೇಕಾದ ಎಲ್ಲವನ್ನು ಪಡೆಯುತ್ತಾನೆ. ಆದರೆ ಮಹತ್ವಾಕಾಂಕ್ಷಿಯಾದ ಮನುಷ್ಯನಿಂದ ಇಂದು ಗ್ರಾಮ,ನಗರ ಸೇರಿದಂತೆ ಸಂಪೂರ್ಣ ಪರಿಸರ ಮಲಿನವಾಗಿ ಪ್ರಾಣಿ ಹಾಗೂ ಸಸ್ಯ ಸಂಕುಲದ ವಿನಾಶ ಕಾಲ ಸನ್ನಿಹಿತವಾಗಿದೆ. ಆದ್ದರಿಂದ ಪರಿಸರ ಸಂರಕ್ಷಣೆ ಮಾಡುವುದು ನಮ್ಮ ಆದ್ಯ ಕರ್ತವ್ಯ ಪರಿಸರ ಸಂರಕ್ಷಣೆಯ ಕೆಲಸ ನಮ್ಮಿಂದಲೇ ಆರಂಭವಾಗಬೇಕಿದೆ. ಈ ಮಳೆಗಾಲ ಅದಕ್ಕೆ ಉತ್ತಮ ವಾತಾವರಣವಾಗಿದೆ. ನಾನು ನನ್ನ ಗೆಳೆಯರ ಬಳಗ ಮನೆಮನೆಗೆ ತೆರಳಿ ಜನರಲ್ಲಿ ಪರಿಸರ ಸಂರಕ್ಷಣೆಯ ಅರಿವನ್ನು ಮೂಡಿಸಬೇಕೆಂದಿದ್ದೇನೆ. ಅಲ್ಲದೆ ನಮ್ಮ ಊರಿನ ರೈತರಿಗೆ ಬೆಳೆಗಳಿಗೆ ರಾಸಾಯನಿಕ ಗೊಬ್ಬರದ ಬದಲಾಗಿ ಸಾವಯವ ಗೊಬ್ಬರ ಬಳಸುವಂತೆ ಸಲಹೆ ತಿಳಿ ಹೇಳಬೇಕೆಂದಿರುವೆ. ಮಾರುಕಟ್ಟೆಯ ವ್ಯಾಪಾರಿಗಳಲ್ಲಿ ರಾಸಾಯನಿಕಯುಕ್ತ ಅಂಶಗಳನ್ನು ಆಹಾರ ವಸ್ತುಗಳಿಗೆ ಸಿಂಪಡಿಸದಂತೆ ಹೇಳುತ್ತೇನೆ.  – ಶರತ್‌ ರೈ, ಆಳ್ವಾಸ್‌ ಕಾಲೇಜು, ಮೂಡುಬಿದಿರೆ

ನಾಟಿ ಜತೆಗೆ ಪೋಷಣೆ:

ಎರಡು ವರ್ಷಗಳಿಂದ ನಾನು ಮತ್ತು ನಮ್ಮ ತಂಡ ಮಳೆಗಾಲದ ಮುಂಚಿತವಾಗಿ  ಹುಣಸೆ, ಹೊಂಗೆ ಮುಂತಾದ ವೃಕ್ಷಗಳ ಬಿತ್ತನೆ ಬೀಜಗಳನ್ನು ಹೊಂದಿಸಿ ಜೂನ್‌  ಆರಂಭದಲ್ಲಿ ಸುಮಾರು 10 ಲಕ್ಷ ಬೀಜಗಳನ್ನು ಖಾಲಿ ಅರಣ್ಯ ಪ್ರದೇಶಗಳಲ್ಲಿ ಹಾಕಿದ್ದೇವೆ.  ಇಂದು ಅವು ಎತ್ತರಕ್ಕೆ ಬೆಳೆಯುವುದನ್ನು ನೋಡಿದಾಗ ತುಂಬಾ ಖುಷಿಯಾಗುತ್ತದೆ. ಲಕ್ಷಾಂತರ ಬೀಜಗಳು ಹೆಮ್ಮರವಾಗಿ ನಾಡಿನ ಸಂಪತ್ತು ಹೆಚ್ಚಿಸುವುದಷ್ಟೇ ಅಲ್ಲದೇ ನಮಗೆ ಶುದ್ಧವಾದ  ಗಾಳಿ ಕೊಟ್ಟು ಆರೋಗ್ಯ ಕಾಪಾಡುತ್ತಿವೆ. ನಾವು ಈ ವರ್ಷ ಅರಣ್ಯ ವಲಯದಿಂದ ಸಸಿಗಳನ್ನು ತಂದು ದೇವಸ್ಥಾನ, ಮಠ ಮಂದಿರ ಆವರಣಗಳಲ್ಲಿ ನೆಟ್ಟಿದ್ದೇವೆ. ಸಸಿಗಳನ್ನು ನೆಡುವ ಜತೆಗೆ ಪೋಷಣೆಯೂ ಮುಖ್ಯ. ಹೀಗಾಗಿ ಪ್ರತಿನಿತ್ಯ ನೀರು ಹಾಕಿ ಗಿಡ ಪೋಷಿಸುತ್ತಿದ್ದೇವೆ. ನಮ್ಮ ಕೆಲಸಗಳ ಜೊತೆಗೆ ಪರಿಸರವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅಲ್ಪ ಸಮಯವನ್ನು ಈ ಇದಕ್ಕಾಗಿ ನೀಡುತ್ತಿದ್ದೇವೆ. ಜೋಗೂರ ಗ್ರಾಮದ ಸಿದ್ದಲಿಂಗೇಶ್ವರ ಸಿದ್ದಸಂಸ್ಥಾನ ಮಠದ ಸ್ವಾಮೀಜಿಗಳ ಹುಟ್ಟುಹಬ್ಬದ ನಿಮಿತ್ತ 101 ಸಸಿಗಳನ್ನು ಶ್ರೀಮಠದಲ್ಲಿ ನೆಟ್ಟು ಪೋಷಿಸುವ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದೇವೆ.  -ಶಿವಶರಣ ಪರಪ್ಪಗೋಳ, ಜೋಗೂರ, ಕಲಬುರಗಿ

Advertisement

Udayavani is now on Telegram. Click here to join our channel and stay updated with the latest news.

Next